Back to Top
Previous ವೀರ ಗೊಲ್ಲಾಳ-ಕಾಟಕೋಟ ಮಲ್ಲಿಕಾರ್ಜುನ ಪಂಡಿತಾರಾಧ್ಯ Next

ನಿಜಗುಣಯೋಗಿ ವಚನಗಳು

ವಚನ ಆಯ್ಕೆ ಮಾಡಿ:

ಆಯ್ಕೆ ಮಾಡಿದ ವಚನ
*
ಅಗ ಲಿಂಗವೆಂಬನ್ನಕ್ಕ
ಯೋಗಪೂಜೆ ಪುಂಣ್ಯಕ್ಕೆ ಬೀಜ.
ಆತ್ಮನನರಿದೆಹೆನೆಂಬನ್ನಕ್ಕ ಉಭಯದೊಡಲಾಯಿತ್ತು.
ಉಭಯದ ಗಿಡಬಜೆಯಲ್ಲಿ ಸಿಲುಕದೆ ನಿಂದ
ನಿಜಗುಣಯೋಗಿ. || /1
ಅರಿಬಿರಿದಿನಾಲಯದೊಳಗೆ ದೊರೆ (ಯದೆ)
ತಿರಿತಿರಿಗಿ ಬರುವ ದುರದಿಕ್ಕಿಗಳನೊಲ್ಲ.
ಕರುಕರತ ತಾಳತೋರಿ ಎನ್ನನಿಂಬುಗೊಂಡೆಯಲ್ಲಾ
ನಿಜಗುಣಯೋಗಿ./2
ಆನು ನೀನೆಂಬ ಸಂದೇಹ ಗಗನಕ್ಕೆ ಕೈಯನಿಟ್ಟಂತೆ!
ಕೈ ಗಗನವ ನುಂಗಿತ್ತೊ, ಗಗನ ಕೈಯ ನುಂಗಿತ್ತೊ ಎಂಬುದ
ನಿನ್ನ ನೀ ತಿಳಿದು ತಿಳಿವಿನ ಕಣ್ಣಿಂದ ನೋಡಯ್ಯಾ.
ನಿಜಗುಣವೆಂಬ ಆನಂದರತ್ನವ
ನುಂಗಿದ ರುಚಿಯನು ಏನೆಂದು ಉಪಮಿಸುವೆ?/3
ಆನುಳ್ಳನ್ನಕ್ಕ ನೀನುಂಟೆಲೆ ಮಾಯೆ
ಆನಿಲ್ಲದಿರ್ದಡೆ ನೀನಿಲ್ಲ.
ಆನು ನೀನೆಂಬುಭಯವಳಿಯಲು
ಆನಂದ ನಿಜಗುಣಯೋಗ./4
ಆರರ ಅಂತ್ಯವು ಮೂರರ ಅಂತ್ಯವು ಒಂದೆ,
ಭಾವ ಅವು ಆವಾವವಯ್ಯ ಎಂದಡೆ;
ಕಕ್ಷೆ, ಕಂಠ, ಕರಸ್ಥಲ, ಉರಸಜ್ಜೆ, ಉತ್ತಮಾಂಗ, ಅಮಳೋಕ್ಯ
ಇಂತೀ ಆರು ಸ್ಥನ ಬಾಹ್ಯವೆಂಬೆ.
ನಾಸಿಕಾಗ್ರ, ಭೂಮಧ್ಯ, ಬ್ರಹ್ಮರಂಧ್ರ
ಇಂತೀ ಮೂರರ ತೂಯ ಚೌಕಮಧ್ಯವೆನಿಸುವದು.
ಅದರ ಕ್ರಮವೆಂತೆಂದಡೆ: ಇಂತೀ ಮೂರು ಸ್ಥಾನದ ಮೇಲಣ
ಸಹಸ್ರದಳಕಮಲದೊಳಗೆ ತೋರುವ
ನಾಲ್ಕು ಕೋಣೆಯ ಚೌಕಮಧ್ಯ
ಅದರೊಳಗಿಪ್ಪ ಅಮೃತಮಯಲಿಂಗವ ಕಂಡು
ನೋಡುತ್ತ ನೋಡುತ್ತ ನಿಬ್ಬೆರಗಾದ ನಿಜಗುಣಾ./5
ಕಕ್ಷೆ ಮೊದಲಾಗಿ ಅಮಳೋಕ್ಯ ಕಡೆಯಾಗಿ
ಆರು ಸ್ಥಾನ ಬಾಹ್ಯವೆಂಬೆ.
ನಾಸಿಕಾಗ್ರ ಭ್ರೂಮಧ್ಯ ಬ್ರಹ್ಮರಂಧ್ರ ಚೌಕಮಧ್ಯವೆಂದು
ಈ ನಾಲ್ಕು ಸ್ಥಾನಗಳು ಅಭ್ಯಂತವಾಗಿಹವು.
ನಾಸಿಕಾಗ್ರದ ಗುರು ಭ್ರೂಮಧ್ಯವನೆಯ್ದಿದಡೆ
ಭ್ರೂಮಧ್ಯಕ್ಕೆ ಲಿಂಗವಾಯಿತ್ತು.
ಭ್ರೂಮಧ್ಯದ ಲಿಂಗವನರಿತಡೆ
ಬ್ರಹ್ಮರಂಧ್ರಕ್ಕೆ ಜಂಗಮವಾಯಿತ್ತು.
ಇಂತೀ ತ್ರಿವಿಧದರಿವೆ ಗದ್ಗುಗೆ.
ಅದಕ್ಕೆ ಶ್ರುತಿ: ``ಗುರುಲಿಂಗ ಜಂಗಮಾಖ್ಯಾತ್ಯಂ ಮಹಾಲಿಂಗ ಚತುವರ್ಿಧಂ
ಯಥಾ ಚತುವರ್ಿಧಂ ಪೀಠಂ ಚಿತ್ಕಲಾ ಪರಿಪೂಜಿತಂ||'
ಇಂತೆಂಬ ಚೌಕಮಧ್ಯದಲ್ಲಿ ಮಹಾಘನವ ನೋಡುತ್ತ
ನಿಬ್ಬೆರಗಾದ ನಿಜಗುಣಾ./6
ಕಲ್ಲಿನ ಹುಳ್ಳಿಯ ನೀರಲ್ಲಿ ಹುಟ್ಟಿದ ಕಿಚ್ಚು
ತ್ರಿವಿಧಕ್ಕೂ ಅಲ್ಲಲ್ಲಿಯ ಗುಣವಲ್ಲಿಯದೆ,
ಬೇರೊಂದಕ್ಕೆಲ್ಲಿಯೂ ತೆರಪಿಲ್ಲ.
ಕಾಯಗುಣದಿಂದ ಕಲ್ಪಿತಕ್ಕೊಳಗಾಗಿ
ಜೀವಗುಣದಿಂದ ಭವಕ್ಕೆ ಬೀಜವಾಗಿ
ಅರಿದಿಹೆ ಗುಣದಿಂದ ಮರವೆಗೆ ಒಳಾಗಾಗಿ.
ಅರಿದಿಹೆನೆಂಬ ಅರಿವು ಕುರುಹುಗೊಳ್ಳದೆ ನಿಂದುದು
ನಿಜಗುಣ ಯೋಗಿಯ ಯೋಗಕ್ಕೆ
ಭಾವವಿಲ್ಲದ ಸೂತ್ರದ ಬಿಂಬ./7
ಜಡ ಅಜಡವೆಂಬುಭಯ ಕೂಟ ಉಳ್ಳನ್ನಕ್ಕ
ನಾನೆಂಬುದದೇನು? ವಿಚಾರಕ್ಕೆ ನೀನೆಂಬುದದೇನು?
ಗೆಲ್ಲ ಸೋಲಕ್ಕೆ ಹೋರಿ ಒಳ್ಳಿದನಾದನೆಂಬಲ್ಲಿಯೆ
ಕಳ್ಳ ಕದ್ದ ಗಜವಲ್ಲಿ ಅಡಗಿ ಮಾರೂದು ಹೇಳಾ.
ಬಲ್ಲವನಾದೆನೆಂಬಲ್ಲಿಯೆ ಉಳಿಯಿತ್ತು
ನಿಜಗುಣಯೋಗಿಯ ಯೋಗಕ್ಕೆ ಸಲ್ಲದ ಗುಣ./8
ದೊರೆಯವನ... ವನ್ನ ಬರವ,
ದೊರೆಯವೆ ಇರಲಿಕೆ ಕಾಯ ಬವರಕ್ಕೆ ಗುರಿಯಹುದು.
ಕುರುಹಿಗೆ ಬಾರದೆ ಆಲಿನಿಂದ ಠಾವಿನಲ್ಲಿ
ನಿಜಗುಣನಿಹನು./9
ನಿಜ ಹೃದಯಾಂಬುಜದಲ್ಲಿ
ನಿರಾಳ ಪ್ರಣಮ ಪೀಠವಾಗಿರ್ಪನೊರ್ವ
ಆಗೋಚರ ಶಿವಯೋಗಿಯು.
ಆತನೆರಡು ಗುಂಡು ಹೊಸೆದಡೆ
ಗೋಚರನಪ್ಪ ಕಾಣಾ,
ನಿಜಗುಣಲಿಂಗ ಸಾಕ್ಷಿಯಾಗಿ, ಸಿದ್ಧರಾಮಯ್ಯ./10

ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001

*
Previous ವೀರ ಗೊಲ್ಲಾಳ-ಕಾಟಕೋಟ ಮಲ್ಲಿಕಾರ್ಜುನ ಪಂಡಿತಾರಾಧ್ಯ Next