Previous ಅಂಗಜಂಗುಳಿಗಳೆಲ್ಲಾ ಅಶನಕ್ಕೆ ನೆರೆದರು ಬ್ರಹ್ಮ, ವಿಷ್ಣು, ಮಹೇಶ್ವರರ ಬಗ್ಗೆ Next

ಅಂಗಜಂಗುಳಿಗಳೆಲ್ಲಾ ಅಶನಕ್ಕೆ ನೆರೆದರು

*

✍ ಶ್ರೀಮತಿ ರುದ್ರಮ್ಮ ಅಮರೇಶ
ಹಾಸಿನಾಳ ಗಂಗಾವತಿ, ವಿಶ್ವಲಿಂಗಾಯತ ಸಮಿತಿ.

ಆದಯ್ಯ ವಚನ

|| ಓ೦ ಶ್ರೀಗುರು ಬಸವಲಿಂಗಾಯ ನಮಃ ||

ಕಡಲೊಳಗಣ ವಡಬ ಹೊದ್ದಿಯೂ ಹೊದ್ದದಂತೆ,
ಇಂದುಕಾಂತದೊಳಗೆ ಬಿಂದುವಿದ್ದಿಲ್ಲದಂತೆ,
ದರ್ಪಣದೊಳಗಣ ಪ್ರತಿಬಿಂಬ ಮುಟ್ಟಿಯೂ ಮುಟ್ಟದಂತೆ,
ಸರ್ವಸಾಕ್ಷಿಕನಾದ ಸೌರಾಷ್ಟ್ರ ಸೋಮೇಶ್ವರನು
ಪಿಂಡದೊಳಗಡಗಿ ಇಲ್ಲದಂತಿಪ್ಪನಯ್ಯಾ. - ಆದಯ್ಯ

ಭಾವಾರ್ಥ:ಆದಯ್ಯ ಶರಣರು ತಮ್ಮ ಅನೇಕ ವಚನಗಳಲ್ಲಿ ನಮ್ಮ ಶರೀರದಲ್ಲಿ ಆ ಪರಮಾತ್ಮನು ಅಂದರೆ ಆವೊಂದು ಚೈತನ್ಯಶಕ್ತಿ ಯಾವ ರೀತಿ ಬೆರೆತು ಹೋಗಿದೆ ಎಂಬುದನ್ನ ತಿಳಿಸಿ ಹೇಳಿದ್ದಾರೆ. ಅದೆ ರೀತಿ ಈವೊಂದು ವಚನದಲ್ಲಿಯೂ ಸಹ ವೈಜ್ಞಾನಿಕವಾಗಿ ಮತ್ತು ವೈಚಾರಿಕವಾದ ರೀತಿಯಲ್ಲಿ ಉದಾಹರಿಸಿ ತಿಳಿಸಿಕೊಟ್ಟಿದ್ದಾರೆ ನಮಗಿಲ್ಲಿ ಈ ಶರಣರು.

ಕಡಲೊಳಗಣ ವಡಬ ಹೊದ್ದಿಯೂ ಹೊದ್ದದಂತೆ,

ಸಮುದ್ರದೊಳಗೆ ಅಗ್ನಿ ಇದೆ, ಆದರೆ ಅದು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಅದು ಕಾಣಬೇಕೆಂದರೆ ಅಲ್ಲಿ ಜ್ವಾಲಮುಖಿ ಸಂಭವಿಸಿ, ಸಮುದ್ರ ಉಕ್ಕಿ, ಸೋನಾಮಿ ಅಲೆಗಳು ಅಪ್ಪಳಿಸಿ ಬಂದು ಜಲಪ್ರಳಯವಾದ ಮೇಲೆ ತನ್ನ ನಿಜಸ್ವರೂಪವನ್ನ ಬಿಟ್ಟುಕೊಡುತ್ತದೆ ಆ ಅಗ್ನಿ ತನ್ನ ಸ್ವರೂಪ ತೋರಿದಾಗ ಮಾತ್ರ ನಮ್ಮ ಅರಿವಿಗೆ ಬರುತ್ತದೆ, ಅಲ್ಲಿಯವರೆಗೆ ನಮಗೆ ಅದು ಏನೆಂಬೆದು ತಿಳಿದಿರುವುದಿಲ್ಲ ಎನ್ನುವ ವಿಚಾರ ಇಲ್ಲಿ ವ್ಯಕ್ತವಾಗಿದೆ.

ಇಂದುಕಾಂತದೊಳಗೆ ಬಿಂದುವಿದ್ದಿಲ್ಲದಂತೆ,

ಇಂದುಕಾಂತ ಅಂದರೆ ಚಂದ್ರಕಾಂತವೆಂಬ ಒಂದು ಶಿಲೆ ಅಥವಾ ಕಲ್ಲು, ಈವೊಂದು ಶಿಲೆಯ ಗುಣಧರ್ಮ ಸದಕಾಲ ತಂಪಾಗಿದ್ದು ಮುಟ್ಟಿದರೆ ಮಂಜುಗಡ್ಡೆಯಂತೆ ಗೋಚರಿಸಿ ಅದು ನೀರೊಡೆದು ನಮ್ಮ ಕೈಗಳಿಗೆ ಹನಿ ಹನಿಯಾಗಿ ಮೆತ್ತಿಕೊಳ್ಳುತ್ತದೆ. ಅಂದರೆ ಆ ಚಂದ್ರಕಾಂತ ಶಿಲೆಯನ್ನು ಸ್ಪರ್ಶಿದರೆ ಮಾತ್ರ ಅದರಲ್ಲಿ ಬಿಂದುಗಳಿವೆ ಹನಿಗಳಿವೆ ಎಂಬುದು ನಮ್ಮ ಅನುಭವಕ್ಕೆ ಬರುತ್ತದೆ ಎಂಬುದು ಆದಯ್ಯನವರ ವೈಜ್ಞಾನಿಕ ವಿಚಾರವಾಗಿ ಇಲ್ಲಿ.

ದರ್ಪಣದೊಳಗಣ ಪ್ರತಿಬಿಂಬ ಮುಟ್ಟಿಯೂ ಮುಟ್ಟದಂತೆ,

ಕನ್ನಡಿಯ ಮುಂದೆ ನಾವು ನಿಂತಾಗ ನಮ್ಮ ಪ್ರತಿಬಿಂಬವನ್ನ ಸ್ವತಹ ನಾವೆ ಕಾಣುತ್ತೇವೆ. ಆದರೆ ನಮ್ಮ ಪ್ರತಿಬಿಂಬವು ಅಲ್ಲಿದ್ದರೂ ಸಹಿತ ಆ ಕನ್ನಡಿಯು ಮುಟ್ಟಿಯೂ ಮುಟ್ಟದಂತೆ ಇರುತ್ತದೆ ಏಕೆಂದರೆ ಆ ಕನ್ನಡಿಯ ಗುಣಧರ್ಮವೆ ಅದಾಗಿದೆ ಎಂಬುದು ಈ ಶರಣರ ಅನುಭವದ ನುಡಿಯಾಗಿದೆ ಇಲ್ಲಿ.

ಸರ್ವಸಾಕ್ಷಿಕನಾದ ಸೌರಾಷ್ಟ್ರ ಸೋಮೇಶ್ವರನು ಪಿಂಡದೊಳಗಡಗಿ ಇಲ್ಲದಂತಿಪ್ಪನಯ್ಯಾ.

ಈ ಜಗತ್ತಿನ ಸಕಲ ಜೀವರಾಶಿಗಳಲ್ಲಿ ಬೆರೆತು ಆ ಜೀವರಾಶಿಗಳ ಬದುಕಿಗೆ ಕಾರಣ ಕರ್ತನಾದ ಎಲ್ಲವಕ್ಕೂ ಸಾಕ್ಷಿಪ್ರಜ್ಞೆಯಾಗಿರುವ ಆ ಸೌರಾಷ್ಟ್ರ ಸೋಮೇಶ್ವರನು ಅಥವಾ ಸೃಷ್ಟಿಕರ್ತನು ಅಂದರೆ ಆ ಪರಮಾತ್ಮನು ನಮ್ಮ ಈ ಶರೀರದೊಳಗಡೆನೆ ಹುದುಗಿಯು ಸಹ ತಾನು ಇದ್ದು ಇಲ್ಲದಂತೆ ಅಗಮ್ಯನಾಗಿ ಅಗೋಚರನಾಗಿ ಅಪ್ರತಿಮನಾಗಿ ಬೆರೆತು ತನ್ನ ನಿಜ ಇರುವಿಕೆಯನ್ನ ಮರೆಮಾಚಿರುತ್ತಾನೆ, ಎಂಬುದನ್ನ ಆದಯ್ಯನವರು ಅನುಭವಿಸಿ ಹೇಳಿದ್ದಾರೆ ಇಲ್ಲಿ. ಒಟ್ಟಾರೆ ಈ ವಚನವು ಆ ಪರಮ ಚೈತನ್ಯವು ಯಾವ ರೀತಿಯಾಗಿ ಪ್ರತಿಯೊಂದು ಜೀವರಾಶಿಗಳಲ್ಲಿ ಬೆರೆತಿದೆ ಎಂಬುದನ್ನ ಇಲ್ಲಿ ತಿಳಿಸಿಕೊಡಲಾಗಿದೆ. ಆದರೆ ನಮ್ಮ ಬಸವಾದಿ ಶರಣರು ತಮ್ಮನ್ನು ತಾವು ಅರಿಯುವ ಮುಖಾಂತರ ಆ ಪರಮಾತ್ಮನ ನಿಜ ಇರುವಿಕೆಯನ್ನು ಕಂಡುಕೊಂಡು ನಾ ಬೇರೆಯಲ್ಲ ಆ ಪರಮಾತ್ಮನು ಬೇರೆಯಲ್ಲ, ಆ ಸಾಕ್ಷಾತ್ ಶಿವನ ಸ್ವರೂಪವೆ ನಾನಾಗಿದ್ದೇನೆ, ಮಣ್ಣು ಬಿಟ್ಟು ಮಡಿಕೆಯಿಲ್ಲ ನನ್ನ ಬಿಟ್ಟು ದೇವರಿಲ್ಲ ಹಾಗಾಗಿ ಈ ಶರೀರವೆ ಪರಮಾತ್ಮನ ಸಾಕರ ರೂಪವೆಂದುಕೊಂಡು ನಮ್ಮ ಶರಣರು ಸಹಿತ ಅಂಗಸೋಂಕದೆ ಲಿಂಗಿಯಾಗಿ ಬಟ್ಟಬಯಲಾಗಿದ್ದರು ಎಂಬುದನ್ನ ಈ ಮೂಲಕ ನಾವಿಲ್ಲಿ ಅರ್ಥೈಸಿ ಕೊಳ್ಳಬೇಕಾಗಿದೆ.

ಪರಿವಿಡಿ (index)
*
Previous ಅಂಗಜಂಗುಳಿಗಳೆಲ್ಲಾ ಅಶನಕ್ಕೆ ನೆರೆದರು ಬ್ರಹ್ಮ, ವಿಷ್ಣು, ಮಹೇಶ್ವರರ ಬಗ್ಗೆ Next