Previous *ಲಿಂಗದೇವ* ಲಿಂಗಾಯತರ ದೇವರ ಹೆಸರು. ಲಿಂಗಾಯತರಲ್ಲಿ ದೇಹವೇ ದೇವಾಲಯ Next

ಲಿಂಗಾಯತರು "ಲಿಂಗವಂತ"ರು

*

ಲಿಂಗಾಯತರು "ಲಿಂಗವಂತ"ರು ಎಂದು ವಚನಸಾಹಿತ್ಯ ತುಂಬಾ ಸ್ಪಷ್ಟವಾಗಿ, ಗುರು ಬಸವಣ್ಣ ಹಾಗೂ ಶರಣರು ತಮ್ಮ ವಚನಗಳಲ್ಲಿ ಹೆಳಿದ್ದಾರೆ.

ಲಿಂಗಾಯತರು "ಲಿಂಗವಂತ"ರು ಎಂದು ವಚನಸಾಹಿತ್ಯ ತುಂಬಾ ಸ್ಪಷ್ಟವಾಗಿ, ಗುರು ಬಸವಣ್ಣ ಹಾಗೂ ಶರಣರು ತಮ್ಮ ವಚನಗಳಲ್ಲಿ ಹೆಳಿದ್ದಾರೆ. ಕೆಲವರು ಶರಣರು ಎಲ್ಲಿಯೂ ಲಿಂಗವಂತ ಎಂದು ಹೇಳಿಲ್ಲ ಎಂದು ವಾದಿಸುವವರು. ಅವರಿಗಾಗಿ ಇಲ್ಲಿ ಶರಣರ ವಚನಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಈ ಎಲ್ಲಾ ವಚನಗಳನ್ನು ಕರ್ನಾಟಕ ಸರಕಾರ ಪ್ರಕಟಿತ ಸಮಗ್ರ ವಚನ ಸಾಹಿತ್ಯ ಪುಸ್ತಕಗಳಿಂದ ಆರಿಸಿಕೊಳ್ಳಲಾಗಿದೆ.

ವಿಶ್ವ ಗುರು ಬಸವಣ್ಣನವರ ವಚನಗಳು

ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ
ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ,
ಲಿಂಗವಂತನು ಲಿಂಗವಂತರಿಗೆ ಬುದ್ಧಿಯ ಹೇಳುವಲ್ಲಿ
ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ,
ಲಿಂಗಭಕ್ತನು ಲಿಂಗಪಥವ ಹೇಳಿದಡೆ
ಮಚ್ಚಿರಿಸುವರ ಮೆಚ್ಚ ಕೂಡಲಸಂಗಮದೇವ.-೧/೬೫೩ [1]

ಲಿಂಗವಶದಿಂದ ಬಂದ ನಡೆಗಳು, ಲಿಂಗವಶದಿಂದ ಬಂದ ನುಡಿಗಳು,
ಲಿಂಗವಂತರು ತಾವು ಅಂಜಲದೇಕೆ?
ಲಿಂಗವಿರಿಸಿದಂತಿಪ್ಪುದಲ್ಲದೆ,
ಕೂಡಲಸಂಗಮದೇವ ಭಕ್ತರಭಿಮಾನ ತನ್ನದೆಂಬನಾಗಿ.-೧/೬೮೫ [1]

ಅಂಗಲಿಂಗಸಂಗಸುಖಸಾರಾಯದನುಭಾವ
ಲಿಂಗವಂತಗಲ್ಲದೆ ಸಾಧ್ಯವಾಗದು ನೋಡಾ,
ಏಕಲಿಂಗಶರಿಗ್ರಾಹಕನಾದ ಬಳಿಕ,
ಆ ಲಿಂಗನಿಷ್ಠೆ ಗಟ್ಟಿಗೊಂಡು,
ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದಭೋಗಿಯಾಗಿ,
ವೀರಶೈವ ಸಂಪನ್ನನೆನಿಸಿ ಲಿಂಗವಂತನಾದ ಬಳಿಕ
ತನ್ನಂಗ ಲಿಂಗ ಸಂಬಂಧಕ್ಕನ್ಯರಾದ ಜಡಭೌತಿಕ ಪ್ರತಿಷ್ಠೆಯನುಳ್ಳ
ಭವಿ ಶೈವದೈವಕ್ಷೇತ್ರತೀರ್ಥಂಗಳಾದಿಯಾದ ಹಲವು ಲಿಂಗಾರ್ಚನೆಯ
ಮನದಲ್ಲಿ ನೆನೆಯಿಲಿಲ್ಲ, ಮಾಡಲೆಂತೂ ಬಾರದು,
ಇಷ್ಟೂ ಗುಣವಳವಟ್ಟಿತ್ತಾದಡೆ
ಆತನೀಗ ಏಕಲಿಂಗನಿಷ್ಠಾಚಾರಯುಕ್ತನಾದ
ವೀರಮಾಹೇಶ್ವರನು,
ಇದರೊಳಗೆ ಅನುಸರಿಸಿಕೊಂಡು ನಡೆದನಾದಡೆ
ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಸದ್ಭಕ್ತಿಯುಕ್ತವಾದ
ವೀರಶೈವ ಷಡುಸ್ಥಲಕ್ಕೆ ಹೊರಗಾಗಿ ನರಕಕ್ಕಿಳಿವನು ಕಾಣಾ,
ಕೂಡಲಸಂಗಮದೇವ. -೧/೯೬೬ [1] ಹೆಂಗೂಸಿನಂಗವ ನೋಡಿರೆ ಪುರಾತನರು,
ಬಾಲತನದಂಗವ ನೋಡಿರೆ ಪುರಾತನರು,
ಬ್ರಹ್ಮವನಾಚರಿಸಿ ತನ್ನ ಮರೆದಿಪ್ಪುದ ನೋಡಿರೆ ಲಿಂಗವಂತರು.
ತನ್ನಲ್ಲಿ ತಾನು ನಿಶ್ಚಯವಾಗಿ ಭಾಷೆ ಬೀಸರವೋಗದೆಯಿಪ್ಪಇರವು
ಕೂಡಲಸಂಗಮದೇವರಲ್ಲಿ ನಮ್ಮ ಮಹದೇವಿಯಕ್ಕಂಗಾಯಿತ್ತು. -೧/೧೪೧೨[1]

ಕಾಯದ ಕಳವಳದಲ್ಲಿ ಹುಟ್ಟಿ ಲಿಂಗವನರಿಯದಂತವರಿರಲಿ,
ಷಡು ಮಹಾದೇವ ಶಾಸ್ತ್ರಾಗಮಪುರಾಣದರ್ಥವನೋದಿ
ಲಿಂಗ ಉಂಟು ಇಲ್ಲೆಂಬ ಅಜ್ಞಾನಿಗಳಂತಿರಲಿ,
ಷಡು ಶೈವರು ಹಂಚಾಗಿ ಹೋದರು,
ಎಂತು ನಿಜಲಿಂಗವಂತರಿಗೆ ಸರಿಯೆಂಬೆ?
ಅದ್ವೈತಿಗಳೆಲ್ಲಾ ಲಿಂಗಾರಾಧನೆ ಹುಸಿಯೆಂದು
ಬುದ್ಧಿತಪ್ಪಿ ಕ್ರಮಗೆಟ್ಟು ಹೋದರು,
ಬ್ರಹ್ಮ ನಾನೆಂದು ಶಿರವ ಹೋಗಾಡಿಕೊಂಡನು,
ಬ್ರಹ್ಮಾದಿ ದೇವತೆಗಳು ಮಹಾಲಿಂಗಕ್ಕೆ ದೂರವಾಗಿ ಹೋದರು,
ಹಮ್ಮಿಲ್ಲದ ಕಾರಣ
ಕೂಡಲಸಂಗನ ಶರಣರು ಜಗವಂದ್ಯರಾದರು.-೧/೧೧೪೮ [1]

ಲಿಂಗವಿದ್ದಲ್ಲಿ ನಿಂದೆಯಿರದು, ನಿಂದೆಯಿದ್ದಲ್ಲಿ ಲಿಂಗವಿರದು,
ಅವರೆಂತಿದ್ದಡೇನು? ಹೇಗಿದ್ದರೇನು? ಲಿಂಗವಂತರವರು,
ಉಪಮಿಸಬಾರದ ಮಹಾಘನವು ಕೂಡಲಸಂಗನ ಶರಣರು.-೧/೧೩೫೦[1]

ಗಿರಿಗಳ ಮೆಲೆ ಹಲವು ತರುಮರಾದಿಗಳಿದ್ದು
ಶ್ರೀ ಗಂಧದ ಸನ್ನಿಧಿಯೊಳು ಪರಿಮಳವಾಗದೆ?
ಲಿಂಗವಂತನ ಸನ್ನಿಧಿಯಿಂದ ಹಿಂದಣ ದುಸ್ಸಂಗ ಕೆಡುವುದು,
ಕೂಡಲಸಂಗಮದೇವಯ್ಯಾ,
ಸಿರಿಯಾಳನ ಸಾರಿರ್ದ ನರರೆಲ್ಲಾ ಸುರರಾಗರೆ? -೧/೧೫೧[1]

ಅಲ್ಲಮಪ್ರಭುದೇವರು

ಲಿಂಗವಂತಂಗೆ ಲಿಂಗದ ವಾರ್ತೆಯ ನುಡಿವುದೆ ಭಂಗ.
ಹಂಗು ನೋಡಾ ಹಂಗಿನ ಶಬ್ದ ನೋಡಾ !
ಕೊಡನ ತುಂಬಿದ ಹಾಲನೊಡೆಯ ಹಾಯ್ಕಿ
ಇನ್ನು ಉಡಿಗಿಹೆನೆಂದಡೆ ಉಂಟೆ ? ಗುಹೇಶ್ವರಾ ? -2/1503 [1]

ಲಿಂಗವಂತನ ನಡೆ ನುಡಿ ಚಾರಿತ್ರ ನಿಂದಕವನಾಡಿದಡೆ
ಆ ಲಿಂಗ ನಿಮ್ಮ ಹಲ್ಲ ಕಳೆವ; ಆ ಲಿಂಗ ನಿಮ್ಮ ನರಕಕ್ಕಿಕ್ಕುವ.
ಲಿಂಗವಂತ ಲಿಂಗ ಪ್ರಾಣಿಯಾಗಿಪ್ಪ.
ಇದು ಸತ್ಯ ವಚನ.
ಇದ ಕೇಳಿ ಲಿಂಗವಂತನ ನಾಸ್ತಿಕವನಾಡಿದಡೆ
ರೌರವನರಕದಲ್ಲಿಕ್ಕುವ ಕಾಣಾ
ಗುಹೇಶ್ವರಾ. -3/1504 [1]

ಅರೂಪು ಕಾಣಬಾರದು, ಪೂಜಿಸುವ ಪರಿ ಇನ್ನೆಂತೊ ?
ರೂಪಿಂಗೆ ಕೇಡುಂಟು ಪೂಜಿಸುವ ಪರಿ ಇನ್ನೆಂತೊ ?
ಸಕಲ ನಿಷ್ಕಲ ಪೂಜೆಗೆ ಕಾರಣವಲ್ಲ !
ಇನ್ನೆಂತಯ್ಯಾ ಲಿಂಗವಂತರಿಗೆ ಪೂಜಿಸುವ ಪರಿ ?
ಲಿಂಗದ ಪರಿ ಇನ್ನೆಂತಯ್ಯಾ ?
ಅರಿಯಬಾರದ ಲಿಂಗವನು ಅರಿವಂತೆ ಮಾಡಿಕೊಟ್ಟನು ಶ್ರೀಗುರು.
ಈ ಎರಡುವನರಿದು ಪೂಜಿಸಬೇಕು ಗುಹೇಶ್ವರಾ. -೨/೮೪೩

ಅಹುದಹುದು ಕಿಂಕುರ್ವಾಣ ! ಮಝ ಭಾಪು !
ಬಲ್ಲವರು ಬಲ್ಲೆವೆಂದೆಂಬರೆ ?
ಲಿಂಗವಂತರ ಮಹಿಮೆ ಈ ಹೀಂಗಿರಬೇಡಾ ?
ಗುಹೇಶ್ವರನ ಅಪ್ಯಾಯನವಡಗಿಸುವ ಅನುವನು
ನೀನಲ್ಲದೆ ಮಹೀತಳದೊಳು ಮತ್ತೆ ಬಲ್ಲವರಾರು ?
ಹೇಳಾ ಸಂಗನಬಸವಣ್ಣಾ. -೨/೮೫೩

ಮಝ ಭಾಪು = ಮೆಚ್ಚುಗೆಯನ್ನು ಸೂಚಿಸುವ ಶಬ್ದಗಳ ಕೂಡುನುಡಿ

ಇದಿರ ಭ್ರಮಿತನು ಭಕ್ತನಲ್ಲ, ಲೋಕೋಪಚಾರಿ ಜಂಗಮವಲ್ಲ.
ಹೇಳಿಹೆನು ಕೇಳಿರಣ್ಣಾ:
ಜಂಗಮ ಪ್ರೇಮಿಯಾದರೆ ಭಸಿತ ರುದ್ರಾಕ್ಷೆ ಸಹ ಶಿವಸ್ವರೂಪ ಕಾಣುತ್ತ,
ನಮಸ್ಕರಿಸಿ ಬಿಜಯಂ ಮಾಡಿಕೊಂಡು ಬಂದು
ಮನಹರುಷದಲ್ಲಿ ಭೋಜನವ ಮಾಡಿಸೂದೀಗ ಭಕ್ತಂಗೆ ಲಕ್ಷಣ.
ಕಾಡೊಳಗಿರಲಿ ಊರೊಳಗಿರಲಿ ಮಠದಲ್ಲಿರಲಿ ಮನೆಯಲ್ಲಿರಲಿ
ಲಿಂಗವಂತರು ಕರೆಯಬಂದರೆ, ಹೋಗಬೇಕೆಂಬ ಅಬಿಲಾಷೆಯುಳ್ಳಡೆ,
ತಾನಿದ್ದಲ್ಲಿ ತಾ ಮಾಡುವಂಥ ಅಷ್ಟವಿಧಾರ್ಚನೆ ಷೋಡಶೋಪಚಾರ
ಲಿಂಗಕ್ರಿಯೆಗಳು ನಿತ್ಯನೇಮವು ಆದ ಬಳಿಕ
ಮತ್ತೆ ತಾ ಹೋಗಿ ತನ್ನ ಗುಂಪ ತೋರದೆ, ಭಕ್ತರಾಶ್ರಯದಲ್ಲಿ
ಭೋಜನವ ಮಾಡುವುದೀಗ ಜಂಗಮಕ್ಕೆ ಲಕ್ಷಣ.
ಅಂತಲ್ಲದೆ ಗ್ರಹಸ್ಥಾಶ್ರಮದಲ್ಲಿ ಕ್ರಿಯೆ ಮಾಡಿದರೆ
ಜಂಗಮಕ್ಕೆ ಹೇಳುವ ಅರಿವು ಕೊರಮಜೀವಿಯಂತಾಯಿತ್ತಾಗಿ-
ಇದು ಕಾರಣ ಲೋಕೋಪಚಾರಿಗಳಾಗಿ ಒಡಲ ಹೊರೆವವರ
ನಮ್ಮ ಗುಹೇಶ್ವರಲಿಂಗವು ಬಲ್ಲನಾಗಿ ಅವರ ಒಲ್ಲನಯ್ಯಾ. -೨/೯೨೮

ಒಡಲಡಗ ಮಚ್ಚಿದಾತನ ಅಚ್ಚಶರಣನೆಂಬೆ.
ಮಡಿಲಡಗ ಮಚ್ಚಿದಾತನ ಅಚ್ಚಲಿಂಗವಂತನೆಂಬೆ.
ಈ ಒಡಲಡಗು ಮಡಿಲಡಗಿನೊಳಗೆ ಒಂದ ಮಚ್ಚದಿದ್ದರೆ ?
ಉತ್ಪತ್ತಿ ಪ್ರಳಯ ತಪ್ಪದು.
ಶ್ರೀಗುರು ಮಹಾಲಿಂಗದಲ್ಲಿ ಒಡಲಡಗ ಮಚ್ಚಿ
ಅಚ್ಚಭವಿಯಾದ ಶರಣನೊಬ್ಬನೆ-ಗುಹೇಶ್ವರ. -೨/೧೦೨೧

ಪರುಷವ ತಂದು ಕಬ್ಬುನಕ್ಕೆ ಮುಟ್ಟಿಸಲು
ಚಿನ್ನವಪ್ಪುದಲ್ಲದೆ ಪರುಷವಾಗಬಲ್ಲುದೆ ?
ಈ ಲೋಕದ ಮನುಜರು ಶಿವಲಿಂಗವ ಕಟ್ಟಿದರೇನು,
ಲಿಂಗವಂತರಲ್ಲದೆ ಪ್ರಾಣಲಿಂಗಸಂಬಂದಿಗಳಾಗಬಲ್ಲರೆ ?
ಶರಣ ಆವ ಕುಲದಲ್ಲಿ ಹುಟ್ಟಿದರೇನು ಆತನು,
ಆಚಾರ ವೀರಶೈವಸಂಪನ್ನಸಿದ್ಧಾಂತ
ಕ್ರಿಯಾ ಜ್ಞಾನ ಅನುಭಾವಯುಕ್ತವಾದ ಪ್ರಾಣಲಿಂಗಸಂಪನ್ನ.
ಆದಿ ಅನಾದಿಯಿಲ್ಲದಂದಿನ ನಿಃಕಲ ನಿಶ್ಶೂನ್ಯ ನಿರ್ಭೆದ್ಯ
ನಿರಾಳ ನಿರಂಜನ ಪರಾತ್ಪರತರನು ತಾನೆ ನೋಡಾ.
ಅಂತಪ್ಪ ಮಹಾತ್ಮನ ಕುಲಜನಕುಲಜನೆಂದು ಸಂದೇಹ ಸಂಕಲ್ಪದಿಂದ ದೂಷಿಸಿ
ಜರೆವ ದುರಾಚಾರಿ [ಗಳ] ಬಾಯಲ್ಲಿ
ಬಾಲಹುಳ ಸುರಿಯದೆ ಮಾಣ್ಬುದೆ ಗುಹೇಶ್ವರಾ. -೨/೧೩೪೭

ಪೌರ್ಣಮಿ ಬಪ್ಪನ್ನಕ್ಕ,
ಬಾಯಿಬಂಧನದಲ್ಲಿದ್ದ ಚಕೋರನಂತಿದ್ದೆನಯ್ಯಾ.
ಉಣಲಾಗದೆಂಬ ಶಾಸ್ತ್ರವಿಡಿದು ಇದ್ದವನಲ್ಲ.
ಉಣಲಾಗದೆಂಬ ಶಾಸ್ತ್ರವುಂಟೆ ಲಿಂಗವಂತಂಗೆ?
ಅಹೋರಾತ್ರಿ ಅಷ್ಟಭೋಗಂಗಳ ಲಿಂಗಕ್ಕೆ ಕೊಟ್ಟು ಕೊಳಬೇಕು.
ಮಾಡುವ ನೀಡುವ ನಿಜಭಕ್ತರಿಲ್ಲದ ಕಾರಣ, ಬಾಯ್ದೆರೆಯದಿದ್ದೆನು.
ಮಾಡಿಹೆ ನೀಡಿಹೆನೆಂಬ ಸಂತೋಷದ ಆಪ್ಯಾಯನ ಹಿರಿದಾಯಿತ್ತು.
ನೀಡಯ್ಯಾ ಸಂಗನಬಸವಣ್ಣಾ ಗುಹೇಶ್ವರಂಗೆ ! -೨/೧೩೬೧

ಚೆನ್ನಬಸವಣ್ಣ

ಉದಯಮುಖದಲ್ಲಿ ಲಿಂಗದರುಶನ,
ಹಗಲಿನ ಮುಖದಲ್ಲಿ ಜಂಗಮ ದರುಶನ,
ಲೇಸು, ಲೇಸು, ಲಿಂಗವಂತಂಗೆ ಇದೇ ಪಥವು, ಸದ್ಭಕ್ತಂಗೆ ಇದೇ ಪಥವು.
ಲೇಸು ಲೇಸು ಕೂಡಲಚೆನ್ನಸಂಗಯ್ಯನಲ್ಲಿ,
ಅಚ್ಚ ಲಿಂಗೈಕ್ಯಂಗೆ! -೩/೫೮

ಲಿಂಗಸಾರಾಯಸುಖಸಂಗಿಗಳನುಭಾವ
ಲಿಂಗವಂತಂಗಲ್ಲದೆ ಕಾಣಬಾರದು.
ಏಕೋ ಲಿಂಗ ಪ್ರತಿಗ್ರಾಹಕನಾದರೆ, ಅನ್ಯಲಿಂಗವ ಮುಟ್ಟಲಾಗದು.
ದೃಷ್ಟಲಿಂಗವಲ್ಲದೆ ಬಹುಲಿಂಗದ ಅರ್ಪಿತ ಕಿಲ್ಬಿಷವೆಂದುದು.
ಅನರ್ಪಿತವ ಮುಟ್ಟಲಾಗದು ಲಿಂಗಸಜ್ಜನರಿಗೆ
ಅನುಭಾವದಿಂದಲ್ಲದೆ ಲಿಂಗಜಂಗಮ ಪ್ರಸಾದವರಿಯಬಾರದು.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣಸಂಬಂಧವಪೂರ್ವ. -೩/೨೪೯

ರೂಹಿಲ್ಲದ ನೆಳಲಿಂಗೆ ಮಳಲ ಬೊಂಬೆಯ ಮಾಡಿ,
ನಾದ ಬಿಂದುವಿನಲ್ಲಿ ಪುದಿಸಿ, ಆರಿಗೂ ಮೈದೋರದೆ
ಏಡಿಸಿ ಕಾಡಿತ್ತು ಶಿವನ ಮಾಯೆ.
ಕಾಯದ ಕಳವಳಕ್ಕೆ ಮುಂದೆ ರೂಪಾಗಿ ತೋರಿತ್ತಲ್ಲದೆ,
ಅದು ತನ್ನ ಗುಣವಲ್ಲದೆ [ಬೇರೆ] ತೋರುತ್ತಿಲ್ಲ.
ಅಂಗಭೋಗವನೆ ಕುಂದಿಸಿ ಪ್ರಸಾದವ ರುಚಿಸಿಹೆನೆಂಬ
ಲಿಂಗವಂತರೆಲ್ಲರೂ ಅರಿವೆಣಗಳಾಗಿ ಹೋದರು.
ಅಂಗಭೋಗವೆ ಲಿಂಗಭೋಗ, ಲಿಂಗಭೋಗವೆ ಅರ್ಪಿತ.
ಸ್ವಕೀಯಃ ಪಾಕಸಂಬಂದಿ ಭೋಗೋ ಜಂಗಮವರ್ಜಿತಃ
ನಾಸ್ತಿ ಲಿಂಗಾರ್ಚನಂ ಚೈವ ಪ್ರಸಾದೋ ನಿಷ್ಫಲೋ ಭವೇತ್
ಲಿಂಗಕ್ಕೆಂದು ಬಂದ ರುಚಿ ಜಂಗಮಕ್ಕೆ ಬಾರದಿದ್ದಡೆ,
ಜಂಗಮಕ್ಕೆಂದು ಬಂದ ರುಚಿ ಲಿಂಗಕ್ಕೆ ಬಾರದಿದ್ದಡೆ.
[ಲಿಂಗಜಂಗಮಭರಿತವರಿಲ್ಲ.]
ಇದು ಕಾರಣ, ಕೂಡಲಚೆನ್ನಸಂಗಯ್ಯಾ
ಪಾಕಸಂಬಂದಿಗೆ ಪ್ರಸಾದ ದೂರ. -೩/೨೫೨

(ಲಿಂಗಾಂಗಿಗಳೆಂಬರು) ತ್ರಿಪುರಮರ್ದನವರಿಯರು.
ಲಿಂಗವಂತರೆಂಬರು ಕಾಮದಹನವ ಮಾಡಲರಿಯರು.
ಪ್ರಾಣಲಿಂಗಿಗಳೆಂಬರು ಹರಿಯ ನಷ್ಟವನರಿಯರು.
ಲಿಂಗಪ್ರಾಣಿಗಳೆಂಬರು ಬ್ರಹ್ಮನ ಕೊಲಲರಿಯರು.
ಇಂತಪ್ಪ ಶಬ್ದಸೂತಕಿಗಳ ಕಂಡು ಕೂಡಲಚೆನ್ನಸಂಗನಲ್ಲಿ
ನಾಚಿತ್ತೆನ್ನ ಮನವು. -೩/೪೦೨

ಲಿಂಗಭಾಜನದಲ್ಲಿ ಸಹಭೋಜನವ ಮಾಡಿಹೆವೆಂದೆಂಬರು,
ಲಿಂಗಭಾಜನದಲ್ಲಿ ಸಹಭೋಜನವ ಮಾಡುವವರ ನೋಡಿರೇ.
ಲಿಂಗವಂತರೆಲ್ಲಾ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಆಸೆವುಳ್ಳನ್ನಕ್ಕ
ಲಿಂಗಭಾಜನದಲ್ಲಿ ಸಹಭೋಜನವ ಮಾಡುವ ಪರಿಯೆಂತೊ ?
ಹಸಿವು ತೃಷೆ ನಿದ್ರೆ ಆಲಸ್ಯ ವ್ಯಸನವುಳ್ಳನ್ನಕ್ಕ,
(ಲಿಂಗಭಾಜನದಲ್ಲಿ ಸಹಭೋಜನವ ಮಾಡುವ ಪರಿಯೆಂತೊ ?)
ಗುರುಲಿಂಗಜಂಗಮತ್ರಿವಿಧಸಂಪನ್ನತೆವುಳ್ಳನ್ನಕ್ಕ,
ಲಿಂಗಭಾಜನದಲ್ಲಿ ಸಹಭೋಜನವ ಮಾಡುವಜ್ಞಾನಿಗಳು
ತಾವೇ ಲಿಂಗವೆಂಬರು, ಲಿಂಗವೇ ತಾವೆಂಬರು.
ತಾವೆ ಲಿಂಗವಾದರೆ ಜನನ ಮರಣ ರುಜೆ ತಾಗು ನಿರೋಧವಿಲ್ಲದಿರಬೇಡಾ?
ಮಹಾಜ್ಞಾನವ ಬಲ್ಲೆವೆಂದು ತಮ್ಮ ಭಾಜನದಲ್ಲಿ ಲಿಂಗಕ್ಕೆ ನೀಡುವ
ಪಾತಕರ ತೋರದಿರು ಕೂಡಲಚೆನ್ನಸಂಗಮದೇವಾ. -೩/೫೭೩

ಶೀಲವಂತರು ಶೀಲವಂತರೆಂದೆಂಬರು,
ಶೀಲ ಸಂಬಂಧದ ಹೊಲಬನರಿಯದ ಭ್ರಮಿತ ಪ್ರಾಣಿಗಳು ನೀವು ಕೇಳಿ ಭೋ
ಕಾಮವೆಂಬುದೊಂದು ಪಾಪಿ, ಮದವೆಂಬುದೊಂದು ದ್ರೋಹಿ,
ಮತ್ಸರವೆಂಬುದೊಂದು ಹೊಲೆಯ,
ಕ್ರೋಧವೆಂಬುದೊಂದು ಕೈಸೂನೆಗಾರ,
ಮನವ್ಯಾಪಕಂಗಳು ಭವಿ.
ಇಂತಿವನರಿದು ಮರೆದು ಹರವಸಂಬೋಗಿ ಹೊಯಿ ಹಡೆದಂತಿದ್ದರೆ
ಕೂಡಲಚೆನ್ನಸಂಗನಲ್ಲಿ ಅವರ ಲಿಂಗವಂತರೆಂಬೆ. -೩/೫೮೫

ಅರ್ಪಿತ ಆನರ್ಪಿತವೆಂಬ ಉಭಯಕುಳದ ಶಂಕೆವುಳ್ಳನ್ನಕ್ಕ ಅಚ್ಚಸಂಸಾರಿಯೆಂಬೆ.
ಅರ್ಪಿತ ಅನರ್ಪಿತವೆಂಬೆರಡ ಕಳೆದು ನಿಂದಾತನ ಅಚ್ಚಲಿಂಗವಂತನೆಂಬೆ.
ಅರ್ಪಿತ ಅನರ್ಪಿತವನರ್ಪಿಸಿ ಪ್ರಸಾದ ಸ್ವೀಕರಿಸಬಲ್ಲಡಾತನ
ವಾಙ್ಮನಾತೀತನೆಂಬೆ.
ಅರ್ಪಿತವಿಲ್ಲ, ಅನರ್ಪಿತವಿಲ್ಲ, ಅಕಲ್ಪಿತವಯ್ಯಾ, ಕೂಡಲಚೆನ್ನಸಂಗಮದೇವಾ. -೩/೬೦೫

ಅಂಗಭೋಗವನೆ ಕುಂದಿಸಿ ಪ್ರಸಾದವನು ರುಚಿಸುವೆವೆಂಬ
ಲಿಂಗವಂತರೆಲ್ಲ ಅರಿವುಗೇಡಿಗಳಾಗಿ ಹೋದರು.
ಅಂಗಭೋಗವೆ ಲಿಂಗಭೋಗ, ಅಂಗಭೋಗವು [ಲಿಂಗಕ್ಕೆ] ಅರ್ಪಿತವಾಗಿ.
ಸ್ವಕೀಯ ಪಾಕಸಂಬಂಧಭೋಗೋ ಜಂಗಮವರ್ಜಿತಃ
ನಾಸ್ತಿ ಲಿಂಗಾರ್ಚನಂ ಚೈವ ಪ್ರಸಾದೋ ನಿಷ್ಫಲೋ ಭವೇತ್
ಅಂಗಕ್ಕೆ ಬಂದ ರುಚಿ, ಲಿಂಗಕ್ಕೆ ಬಾರದೆ ?
ಇದು ಕಾರಣ-ಕೂಡಲಚೆನ್ನಸಂಗಯ್ಯಾ
ಪಾಕಸಂಬಂದಿಗೆ ಪ್ರಸಾದ ದೂರ. -೩/೮೬೨

ಅನ್ಯದೈವವ ಬಿಟ್ಟುದಕ್ಕೆ ಆವುದು ಕ್ರಮವೆಂದರೆ:
ಅನ್ಯದೈವವ ಮನದಲ್ಲಿ ನೆನೆಯಲಾಗದು, ಅನ್ಯದೈವವ ಮಾತನಾಡಲಾಗದು.
ಅನ್ಯದೈವದ ಪೂಜೆಯ ಮಾಡಲಾಗದು.
ಸ್ಥಾವರಲಿಂಗಕ್ಕೆರಗಲಾಗದು.
ಆ ಲಿಂಗ ಪ್ರಸಾದವ ಕೊಳಲೆಂತೂ ಬಾರದು.
ಇಷ್ಟು ನಾಸ್ತಿಯಾದರೆ ಆತ ಅನ್ಯದೈವವ ಬಿಟ್ಟು ಲಿಂಗವಂತನೆನಿಸಿಕೊಂಬನು.
ಇವರೊಳಗೆ ಅನುಸರಣೆಯ ಮಾಡಿಕೊಂಡು
ನಡೆದನಾದೊಡೆ ಅವಂಗೆ ಕುಂಬಿಪಾತಕ
ನಾಯಕನರಕ ತಪ್ಪದು ಕಾಣಾ ಕೂಡಲಚೆನ್ನಸಂಗಯ್ಯ. -೩/೯೦೩ [1]

ಕರಸ್ಥಲದಲ್ಲಿ ಲಿಂಗವ ಧರಿಸಿ
ಅನ್ಯದೈವಕ್ಕೆ ತಲೆವಾಗದಾತನ ಲಿಂಗವಂತನೆಂಬೆನಯ್ಯಾ.
ಕರಸ್ಥಲದಲ್ಲಿ ಲಿಂಗವ ಧರಿಸಿ ಭವಿಸಂಗವ ಮಾಡದಾತನ ಲಿಂಗವಂತನೆಂಬೆನಯ್ಯಾ.
ಕರಸ್ಥಲದಲ್ಲಿ ಲಿಂಗವ ಧರಿಸಿದಾತ ಜಡಶೈವರ ಹೊದ್ದಲಾಗದು,
ಶೈವರು ಹೇಳಿದ ಶಾಸ್ತ್ರವ ಓದಲಾಗದು,
ಅನ್ಯಮಂತ್ರ ಅನ್ಯಜಪಮಾಲಿಕೆಯ ಮಾಡಲಾಗದು,
ಲಿಂಗಬಾಹ್ಯ ಸತಿಸುತರ ಸೋಂಕಲಾಗದು.
ಕರಸ್ಥಲದಲ್ಲಿ ಲಿಂಗವ ಧರಿಸಿದಾತ ಉದಯಾಸ್ತಮಾನವೆನ್ನದೆ
ಶಿವಪೂಜೆ ಶಿವಮಂತ್ರ ಶಿವಾರ್ಪಣ ಶಿವಶಾಸ್ತ್ರ
ಶಿವಯೋಗದಲ್ಲಿರುವಾತನೆ ಲಿಂಗವಂತನೆಂಬೆನಯ್ಯಾ.
ಇದಮೀರಿ; ಕರಸ್ಥಲದಲ್ಲಿ ಲಿಂಗವ ಧರಿಸಿ
ತನ್ನ ಮನೆಯಲ್ಲಿ ಅನ್ಯದೈವ ಭವಿಮಿಶ್ರ ಅನ್ಯಬೋಧೆ
ಭವಿಶಾಸ್ತ್ರವುಳ್ಳಾತನ ಶುದ್ಧಭವಿಯೆಂಬೆನಯ್ಯಾ.
ಅದೆಂತೆಂದಡೆ;
``ಅಭಕ್ತಜನಸಂಗಶ್ಚ ಆಮಂತ್ರಂಚ ಅನಾಗಮಃ
ಅನ್ಯದೈವಪರಿತ್ಯಾಗೋ ಲಿಂಗಭಕ್ತಸ್ಯ ಲಕ್ಷಣಂ
ಶಿವಸ್ಯ ಶಿವಮಂತ್ರಸ್ಯ ಶಿವಾಗಮಸ್ಯ ಪೂಜನಂ
ಶಿವಶೇಷಶೀಲಸಂಬಂಧೋ ಲಿಂಗಭಕ್ತಸ್ಯ ಲಕ್ಷಣಂ
ಲಿಂಗಧಾರೀ ಸುಭಕ್ತಶ್ಚ ಲಿಂಗಬಾಹ್ಯಸತೀಸುತಃ
ಅಲಿಂಗಿನೀ ಚುಂಬಕಶ್ಚ ರೌರವಂ ನರಕಂ ವ್ರಜೇತ್ ಎಂದುದಾಗಿ
ಗುರುವಾಕ್ಯವ ಮೀರಿ ನಡೆವ ಮಹಾಪಾತಕರ ಮುಖವ ತೋರದಿರಾ,
ಸೆರೆಗೊಡ್ಡಿ ಬೇಡಿಕೊಂಬೆ, ದಯದಿಂದ ನೋಡಿ ರಕ್ಷಿಸು
ಕೂಡಲಚೆನ್ನಸಂಗಮದೇವಾ. -೩/೧೦೯೩

ಪೂರ್ವಜಾತವಳಿದು ಪುನರ್ಜಾತರೆನಿಸಿ, ಅಂಗದ ಮೇಲೆ ಲಿಂಗವ ಧರಿಸಿ
ಲಿಂಗವಂತರೆನಿಸಿದ ಮೇಲೆ;
ಮತ್ತೆ ಜಾತಿಸೂತಕ ಜನನಸೂತಕ ಪ್ರೇತಸೂತಕ ರಜಸ್ಸೂತಕ,
ಎಂಜಲಸೂತಕ ಬಿಡದನ್ನಕ್ಕರ ಇವರನೆಂತು ಭಕ್ತರೆಂಬೆನಯ್ಯಾ ?
ಇವರನೆಂತು ಯುಕ್ತರೆಂಬೆನಯ್ಯಾ ? ಇವರನೆಂತು ಮುಕ್ತರೆಂಬೆನಯ್ಯಾ ?
ಶ್ರೀಗುರುಸ್ವಾಮಿ ಶಿಷ್ಯನ ಪೂರ್ವಾಶ್ರಯಮಂ ಕಳೆದು,
ಹಸ್ತಮಸ್ತಕಸಂಯೋಗವಂ ಮಾಡಿ, ಕರ್ಣಮಂತ್ರಮಂ ತುಂಬಿ,
ಕರಸ್ಥಲಕೆ ಶಿವಲಿಂಗಮಂ ಬಿಜಯಂಗೈಸಿ ಕೊಟ್ಟ ಬಳಿಕ
ಕಾಡ್ಗಿಚ್ಚಿನ ಕೈಯಲ್ಲಿ ಕರಡವ ಕೊಯ್ಸಿದಂತಿರಬೇಕು ಭಕ್ತನು !
ಹಿಂದೆ ಮೆದೆಯಿಲ್ಲ ಮುಂದೆ ನಿಲವಿಲ್ಲ-ಇದು ಕಾರಣ
ಕೂಡಲಚೆನ್ನಸಂಗಯ್ಯಾ, ನಿಮ್ಮ ಸದ್ಭಕ್ತರು ಸೂತಕವ ಮಾಡಲಿಲ್ಲ -೩/೧೩೪೮ [1]

ಬಸವಣ್ಣನುದ್ಧರಿಸಿದ ಭಕ್ತಿವಿಡಿದು, ಅಂಗದ ಮೇಲೆ ಲಿಂಗವ ಧರಿಸಿ
ಗುರುಲಿಂಗಜಂಗಮವನಾರಾದಿಸಿ, ಅವರೊಕ್ಕುದ ಕೊಂಡು ಮುಕ್ತರಾಗಲರಿಯದೆ,
ಬೇರೆ ಇದಿರಿಟ್ಟು ನಂದಿ ವೀರಭದ್ರ ಮತ್ತೆ ಕೆಲವು ಲಿಂಗಂಗಳೆಂದು ಪೂಜಿಸುವ
ಲಿಂಗದ್ರೋಹಿಯ ಮುಖವ ನೋಡಲಾಗದು. ಅದೇನು ಕಾರಣವೆಂದಡೆ:
ಗಂಡನುಳ್ಳ ಸತಿ ಅನ್ಯಪುರುಷನನಪ್ಪುವಲ್ಲಿ ಪಾಣ್ಬರಪ್ಪರಲ್ಲದೆ ಸತ್ಯರಪ್ಪರೆರಿ
ಅದು ಕಾರಣ - ಲಿಂಗವಂತನ ಕೈಯಲ್ಲಿ ಪೂಜಿಸಿಕೊಂಬ ಅನ್ಯಲಿಂಗಂಗಳೆಲ್ಲವು
ಹಾದರಕ್ಕೆ ಹೊಕ್ಕ ಹೊಲೆಗೆಟ್ಟವಪ್ಪುವಲ್ಲದೆ ಅವು ಲಿಂಗಗಳಲ್ಲ.
ತನ್ನ ಲಿಂಗದಲ್ಲಿ ಅವಿಶ್ವಾಸವ ಮಾಡಿ ಅನ್ಯಲಿಂಗಂಗಳ ಭಜಿಸುವಲ್ಲಿ
ಲಿಂಗವಂತ ಕೆರ್ಪ ಕಚ್ಚಿದ ಶ್ವಾನನಪ್ಪನಲ್ಲದೆ ಭಕ್ತನಲ್ಲ. ಅದೆಂತೆಂದಡೆ:
ಲಿಂಗದೇಹೀ ಶಿವಾತ್ಮಾಚ ಸ್ವಗೃಹಂ ಪ್ರತಿಪೂಜನಾತ್ (ಪೂಜನಂರಿ)
ಉಭಯಂ ಪಾಪಸಂಬಂಧಂ ಶ್ವಾನಶ್ವಪಚಪಾದುಕೈಃ - ಎಂದುದಾಗಿ
ಇದುಕಾರಣ, ಈ ಉಭಯವನು ಕೂಡಲಚೆನ್ನಸಂಗಯ್ಯ ಛಿದ್ರಿಸಿ
ಚಿನಿಖಂಡವನಾಯ್ದು ದಿಗ್ಬಲಿ ಕೊಟ್ಟುಅಘೋರ ನರಕದಲ್ಲಿಕ್ಕುವನು -೩/೧೩೮೩

ಹಸಿವು ತೃಷೆ ವಿಷಯವೆಂಬ ಮರಂಗಳನೆ ಕಂಡು,
ಪರಿಣಾಮವೆಂಬ ಕೊಡಲಿಯಲ್ಲಿ ತತ್ತರಿದರಿದು,
ಕಾಮ ಕ್ರೋಧ ಲೋಭ ಮೋಹ ಮದಮತ್ಸರಂಗಳ ತರಿದೊಟ್ಟಿದನೊಂದೆಡೆಯಲ್ಲಿ.
ಪಂಚೇಂದ್ರಿಯ, ಷಡುವರ್ಗ, ಸಪ್ತಧಾತು, ಅಷ್ಟಮದವೆಂಬ ಬಳ್ಳಿಯ ಸೀಳಿ,
ಏಳು ಕಟ್ಟಿನ ಮೋಳಿಗೆಯನೆ ಹೊತ್ತು ನಡೆದನಯ್ಯಾ.
ಆಶೆ ಆಮಿಷ ತಾಮಸವೆಂಬ ತುರಗವನೇರಿ
ಆತುರದ ತುರವನೆ ಕಳೆದನಯ್ಯಾ-ಈ ಮಹಾಮಹಿಮಂಗೆ,
ಜಗದ ಜತ್ತಿಗೆಯ, ಹಾದರಗಿತ್ತಿಯ,
ಹದಿನೆಂಟು ಜಾತಿಯ ಮನೆಯಲ್ಲಿ ತೊತ್ತಾಗಿಹ
ಶಿವದ್ರೋಹಿಯ ಲಿಂಗವಂತರ ಮನೆಯಲ್ಲಿ ಹೊಗಿಸುವರೆ ?
ಎಲೆ ಲಿಂಗತಂದೆ, ಜಡವಿಡಿದು ಕೆಟ್ಟೆನಯ್ಯಾ, ಭಕ್ತಿಯ ಕುಲವನರಿಯದೆ.
ಎಲೆ ಲಿಂಗದಾಜ್ಞಾಧಾರಕಾ, ಎಲೆ ಲಿಂಗಸನುಮತಾ, ಎಲೆ ಲಿಂಗೈಕಪ್ರತಿಗ್ರಾಹಕಾ.
ಕೂಡಲಚೆನ್ನಸಂಗಯ್ಯನಲ್ಲಿ, ಮೋಳಿಗೆಯ ಮಾರಿತಂದೆಗಳ ಶ್ರೀಪಾದಕ್ಕೆ
ನಮೋ ನಮೋ ಜಯ ಜಯತು. -೩/೧೬೮೩

ಲಿಂಗವಂತ ಲಿಂಗಪ್ರಾಣಿ ಸರ್ವಾಂಗಲಿಂಗಿ ಎಂಬಿರಿ.
ಭಂಗವಾಯಿತ್ತಲ್ಲಾ ಈ ಮಾತನಾಡಿದಡೆ !
ಕೊಂಬುದು ಪಾದೋದಕ ಪ್ರಸಾದ, ಕಳಚುವುದು ಮಲಮೂತ್ರ.
ಅಂಗ ಸೋಂಕಿದ ಪಾದೋದಕಕ್ಕೀ ವಿದಿ
ಕೂಡಲಚೆನ್ನಸಂಗಯ್ಯನಲ್ಲಿ ಸಂಗಸುಖದ ಪರಿ ಬೇರೆ.-3/1539 [1]

ಲಿಂಗವಂತನ ಲಿಂಗವೆಂಬುದೆ ಶೀಲ.
ಲಿಂಗವಂತನ ರಾಣಿವಾಸವ ಲಿಂಗದ ರಾಣಿವಾಸವೆಂಬುದೆ ಶೀಲ.
ಲಿಂಗವಂತನ ಅರ್ಥ-ಪ್ರಾಣ-ಅಬಿಮಾನಕ್ಕೆ ತಪ್ಪದಿಪ್ಪುದೆ ಶೀಲ.
ಲಿಂಗವಂತನ ಪಾದೋದಕ-ಪ್ರಸಾದಸೇವೆಯ ಮಾಡುವುದೆ ಶೀಲ.
ಇಂತಪ್ಪ ಶೀಲವೇ ಶೀಲ.
ಉಳಿದ ಶೀಲಕ್ಕೆ ಮೆಚ್ಚುವನೆ ಕೂಡಲಚೆನ್ನಸಂಗಮದೇವ ? 3/1538 [1]

ಶೀಲವಂತರೆಲ್ಲಾ ಶೀಲವಂತರಯ್ಯಾ
ಭಾಷೆವಂತರೆಲ್ಲಾ ಭಾಷೆವಂತರಯ್ಯಾ
ವ್ರತವಂತರೆಲ್ಲಾ ವ್ರತವಂತರಯ್ಯಾ
ಸತ್ಯವಂತರೆಲ್ಲಾ ಸತ್ಯವಂತರಯ್ಯಾ
ನೇಮವಂತರೆಲ್ಲಾ ನೇಮವಂತರಯ್ಯಾ
ಕೂಡಲಚೆನ್ನಸಂಗಮದೇವಯ್ಯಾ
ಸಂಗನಬಸವಣ್ಣನೊಬ್ಬನೆ ಲಿಂಗವಂತ. -3/589 [1]

ಸಿದ್ಧರಾಮೇಶ್ವರ

ಲಿಂಗವಂತರು ತಾವಾದ ಬಳಿಕ,
ಅಂಗನೆಯರ ನಡೆನುಡಿಗೊಮ್ಮೆ
ಲಿಂಗದ ರಾಣಿಯರೆಂದು ಭಾವಿಸಬೇಕು.
ಲಿಂಗವಂತರು ತಾವಾದ ಬಳಿಕ,
ಅನುಭವ ವಚನಗಳ ಹಾಡಿ
ಸುಖದುಃಖಗಳಿಗಭೇದ್ಯವಾಗಿರಬೇಕು.
ಲಿಂಗವಂತರು ತಾವಾದ ಬಳಿಕ,
ಜಂಗಮವ ಪೂಜಿಸಿ ಸದಾ ಲಿಂಗೈಕ್ಯಸುಖಿಗಳಾಗಿರಬೇಕು
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ. -4/1890 [1]

ಸರ್ವರು ಲಿಂಗವಂತರೆಂದು ಮನದಲ್ಲಿ ಭಾವಿಸಿ
ನಡೆಯಬೇಕಲ್ಲದೆ,
ನಡೆನುಡಿಯಲ್ಲಿ ಭಾವಿಸಿ ನಡೆಯಬಾರದು ನೋಡಯ್ಯಾ.
ಸರ್ವರು ಲಿಂಗವಂತರೆಂದು ಭಾವಿಸಿದಲ್ಲಿ ಪೂರೈಸಿಕೊಳ್ಳಬೇಕಲ್ಲದೆ,
ಪುರಹರ ಕಪಿಲಸಿದ್ಧಮಲ್ಲಿಕಾರ್ಜುನನ ಮಂರವಾಸಿಗಳೆಂದು
ಭಾವಿಸಬಾರದು ನೋಡಯ್ಯಾ. -4/1891 [1]

ಅಮುಗೆ ರಾಯಮ್ಮ

ಅಂಗದ ಮೇಲೆ ಲಿಂಗವಿಲ್ಲದವರಲ್ಲಿ ಲಿಂಗಾರ್ಪಿತವ ಬೇಡಲೇಕೆ ?
ಅಂಗದ ಮೇಲೆ ಲಿಂಗವುಳ್ಳ ಲಿಂಗವಂತರಲ್ಲಿ ಲಿಂಗಾರ್ಪಿತವ ಬಿಡಲೇತಕ್ಕೆ ?
ಜಾತಿಗೋತ್ರವನೆತ್ತಿ ನುಡಿಯಲೇಕೆ ?
ಸಹಜ ಶಿವಭಕ್ತರೆಂದು, ಶೀಲವಂತರೆಂದು, ವ್ರತಾಚಾರಿಗಳೆಂದು,
ವ್ರತಭ್ರಷ್ಟರೆಂದು ಅವರ ಕುಲಛಲವ ಕೇಳಿಕೊಂಡು
ಆಚಾರವುಳ್ಳವರು ಅನಾಚಾರಿಗಳು ಎಂದು ಬೇಡುವ ಭಿಕ್ಷವ ಬಿಡಲೇತಕ್ಕೆ ?
ಮದ್ಯಮಾಂಸವ ಭುಂಜಿಸುವವರು ಅನಾಚಾರಿಗಳು.
ಆವ ಕುಲವಾದಡೇನು, ಅಂಗದ ಮೇಲೆ ಲಿಂಗವುಳ್ಳವರೆಲ್ಲರು
ಆಚಾರವುಳ್ಳವರೆಂಬೆನಯ್ಯಾ ; ಅಮುಗೇಶ್ವರಲಿಂಗಕ್ಕೆ ಅವರೆ ಸದ್ಭಕ್ತರೆಂಬೆನಯ್ಯಾ. -೫/೫೯೧

ನೊಸಲಿನಲ್ಲಿ ಮೂರು ಕಣ್ಣುಳ್ಳ ಪಶುಪತಿಯಾದಡೂ ಆಗಲಿ,
ಆದ್ಯರ ವಚನಂಗಳಲ್ಲಿ,
ಹೊನ್ನ ಹಿಡಿದವರು ಗುರುದ್ರೋಹಿಗಳು
ಹೆಣ್ಣ ಹಿಡಿದವರು ಲಿಂಗದ್ರೋಹಿಗಳು
ಮಣ್ಣ ಹಿಡಿದವರು ಜಂಗಮದ್ರೋಹಿಗಳು
ಹೀಗೆಂದು ಸಾರುತ್ತವೆ ವೇದ.
ಹಿಡಿದ ಆಚರಣೆ ಅನುಸರಣೆಯಾಗಿ, ತ್ರಿವಿಧವ ಹಿಡಿದು,
ನಾನೆ ಬ್ರಹ್ಮವೆಂದು ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿಗಳು
ಎಂಬ ಭವಕರ್ಮಿಗಳಿಗೆ ನರಕವೆ ಪ್ರಾಪ್ತಿ ನೋಡಾ ?
ಲಿಂಗವಂತನೆಂಬೆನೆ ಜಂಗಮವೆಂಬೆನೆ ?
ಹಿಡಿದ ಆಚರಣೆ ಅನುಸರಣೆಯಾದ ಬಳಿಕ ಜಂಗಮವೆನಲಿಲ್ಲ.
ಜಗದಲ್ಲಿ ನಡೆವ ಜಂಗುಳಿಗಳು ಭವಭವದಲ್ಲಿ ಬಳಲುತಿಪ್ಪರು ಅಮುಗೇಶ್ವರಾ. -೫/೬೬೩

ಅಕ್ಕಮ್ಮ

ಎನ್ನ ವ್ರತದ ನೇಮ ಅಡಿ ಆಕಾಶದೊಳಗಾದ ವ್ರತಸ್ಥರು ಕೇಳಿರೆ.
ನಮ್ಮ ನಿಮ್ಮ ವ್ರತಕ್ಕೆ ಸಂಬಂಧವೇನು ?
ಲೆಕ್ಕವಿಲ್ಲದ ವ್ರತ, ಕಟ್ಟಳೆಯಿಲ್ಲದ ನೇಮ, ಇವನೆಷ್ಟು ಮಾಡಿದಡೆ ಏನು ?
ತನ್ನ ಮನೆಗೆ ಕಟ್ಟಳೆ ಇರಬೇಕು.
ಎನ್ನ ಲಿಂಗವಂತೆಗೆ ಸೂತಕಮಾಸ ತಡೆದಲ್ಲಿ,
ಗರ್ಭವೆಂಬುದು ತಲೆದೋರಿದಲ್ಲಿಯೆ ಆತ್ಮ ಚೇತನಿಸುವನ್ನಕ್ಕ
ಆಕೆಯ ಉದರದ ಮೇಲೆ ನಿಹಿತ ಲಿಂಗವಿರಬೇಕು.
ನವಮಾಸ ತುಂಬಿ ಆಕೆಯ ಗರ್ಭದಿಂದ ಉಭಯಜಾತತ್ವವಾಗಲಾಗಿ
ಚೇತನ ಬೇರಾದಲ್ಲಿ ಗುರುಕರಜಾತನಮಾಡಬೇಕು.
ಇಂತೀ ಇಷ್ಟರ ಕ್ರೀಯಲ್ಲಿ ಸತತ ವ್ರತ ಇರಬೇಕು.
ಕಂಥೆಯ ಬಿಡುವನ್ನಕ್ಕ ಶರಣರ ಕೈಯಲ್ಲಿ ಅಂತಿಂತೆಂಬ ಶಂಕೆಯ ಹೊರಲಿಲ್ಲ.
ಇಂತೀ ವ್ರತದಲ್ಲಿ ನಿಶ್ಶಂಕನಾಗಬಲ್ಲಡೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಸಮಶೀಲವಂತನೆಂಬೆ. -೫/೪೫೬

ಚತುಷ್ಪಾದಿ ಮುಂತಾದ, ನರ ವಿಹಂಗ ಕೀಟಕ ಮುಂತಾದ ಜೀವಂಗಳೆಲ್ಲವು
ತಮ್ಮ ತಮ್ಮ ಸ್ವಜಾತಿಯ ಕೂಡುವುದೆ ಶೀಲ.
ತಮ್ಮ ತಮ್ಮ ವ್ಯವಹಾರಂಗಳಲ್ಲಿ ಕೊಡುವ ಕೊಂಬುದೆ ಶೀಲ.
ಇಂತೀ ಜಾತಿವರ್ತಕದಲ್ಲಿ ನಡೆವ ಶೀಲವಂ ಬಿಟ್ಟು,
ಲಿಂಗವಂತ ಲಿಂಗ ಮುಂತಾಗಿ ನಡೆವ ಶೀಲವೆಂತುಟೆಂದಡೆ;
ಅಸಿ, ಕೃಷಿ, ವಾಣಿಜ್ಯ, ವಾಚಕ ಮುಂತಾದ ಕಾಯಕಂಗಳ ವಿವರವನರಿತು
ಪಾಪ ಪುಣ್ಯ ಬಹುಕಾಯಕಮಂ ಕಂಡು, ತನ್ನ ವಂಶದ ಸ್ವಜಾತಿಯಂ ಬಿಟ್ಟು,
ಶಿವಭಕ್ತರೆ ಬಂಧುಗಳಾಗಿ ಶಿವಾಧಿಕ್ಯವೆ ದಿಕ್ಕಾಗಿ ಕೊಂಡು ಗಮನಕ್ಕೆ
ಕಾಯಲಿಂಗ ಮನವರಿಕೆಯಾಗಿ, ತ್ರಿಕರಣ ಶುದ್ಧಾತ್ಮನಾಗಿ,
ಅಂಗಕ್ಕೆ ಆಚಾರ, ಮನಕ್ಕೆ ಅರಿವು, ಅರಿವಿಂಗೆ ಜ್ಞಾನ
ನಿರ್ಧಾರವಾಗಿ ಕರಿಗೊಂಡುದೆ ವ್ರತ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಎಡೆದೆರಪಿಲ್ಲದ ನೇಮ. -೫/೪೮೩

ಮಡಿವಾಳ ಮಾಚಿದೇವ

ಆ ಮಹಾಲಿಂಗವಂತನೊಬ್ಬನುಂಡನೆನಬೇಡ.
ಆತನ ದಂತಂಗಳೆಲ್ಲ ಪಂತಿಕಾರರು.
ಆತನ ನಡುವಿಪ್ಪ ಕಾಂತಿರೂಪ ನೀನು ಕಾಣಾ, ಕಲಿದೇವಯ್ಯ. -8/503

ಅಂಗದ ಮೇಲೆ ಲಿಂಗವ ಧರಿಸಿ
ಲಿಂಗವಂತರೆನಿಸಿಕೊಂಬ ಮಹಾಲಿಂಗವಂತರು ನೀವು ಕೇಳಿರೊ.
ಮನೆಗೊಂದು ದೈವ, ನಿಮಗೊಂದು ದೈವ.
ನಿಮ್ಮಂಗನೆ ಅನ್ಯದೈವಕ್ಕೆಂದು ನಿಯಾಮಿಸಿ ಮಾಡಿದ ಪಾಕವ,
ನಿಮ್ಮ ಇಷ್ಟಲಿಂಗಕ್ಕೆ ಕೊಟ್ಟು ಭುಂಜಿಸುತ್ತಿರ್ದು,
ಮತ್ತೆ ಮರಳಿ ಲಿಂಗವಂತರೆನಿಸಿಕೊಂಬ ಲಿಂಗದ್ರೋಹಿಗಳಿಗೆ
ಕುಂಭೀಪಾತಕ, ನಾಯಕನರಕ ತಪ್ಪದೆಂದ ಕಲಿದೇವಯ್ಯ. -೮/೪೩೯[1]

ಅಕ್ಕರ ಗಣಿತ ಗಾಂಧರ್ವ ಜ್ಯೋತಿಷ ಆತ್ಮವಿದ್ಯೆ ತರ್ಕ ವ್ಯಾಕರಣ
ಅಮರಸಿಂಹ ಛಂದಸ್ಸು ನಿಘಂಟು ಶಾಲಿಹೋತ್ರ ಗ್ರಹವಾದ ಗಾರುಡ
ದ್ಯೂತ ವೈದಿಕಶಾಸ್ತ್ರ ಸಾಮುದ್ರಿಕಶಾಸ್ತ್ರ ಲಕ್ಷಣಶಾಸ್ತ್ರ ಅಶ್ವಶಿಕ್ಷೆ
ಗಜಶಿಕ್ಷೆ ಗೋಕರ್ಣ ದಾಡಾಬಂಧ ಮೂಲಿಕಾಸಿದ್ಧಿ ಭೂಚರತ್ವ
ಖೇಚರತ್ವ ಅತೀತ ಅನಾಗತ ವರ್ತಮಾನ ಸ್ಥೂಲ ಸೂಕ್ಷ್ಮ
ಇಂದ್ರಜಾಲ ಮಹೇಂದ್ರಜಾಲ ವಡ್ಯಾನಚೇಷ್ಟೆ ಪರಕಾಯಪ್ರವೇಶ
ದೂರದೃಷ್ಟಿ ದೂರಶ್ರವಣ ಋಗ್ಯಜುಃಸಾಮಾಥರ್ವಣ ಶ್ರುತಿಸ್ಮೃತಿ
ಆಯುರ್ದಾಯ ನಷ್ಟಿಕಾಮುಷ್ಟಿಚಿಂತನೆ ಚೋರವಿದ್ಯೆ ಅಮೃತೋದಯ
ಭಾಷಾಪರೀಕ್ಷೆ ವೀಣಾವಿದ್ಯೆ ಭೃಂಗಿವಿದ್ಯೆ ಮಲ್ಲವಿದ್ಯೆ ಶಸ್ತ್ರವಿದ್ಯೆ
ಧನುರ್ವಿದ್ಯೆ ಅಗ್ನಿಸ್ತಂಭ ಜಲಸ್ತಂಭ ವಾಯುಸ್ತಂಭ ವಾದವಶ್ಯ
ಅಂಜನಾಸಿದ್ಧಿ ಫುಟಿಕಾಸಿದ್ಧಿ ಮಂತ್ರತಂತ್ರಸಿದ್ಧಿ
ಇವೆಲ್ಲವ ಕಲಿತಡೇನು ಅರುವತ್ನಾಲ್ಕು ವಿದ್ಯಾಪ್ರವೀಣನೆನಿಸಿಕೊಂಬನಲ್ಲದೆ
ಲಿಂಗವಂತನೆನಿಸಿಕೊಂಬುದಿಲ್ಲ. ಲಿಂಗವುಳ್ಳ ಶಿವಭಕ್ತಂಗೆ
ಇವರೆಲ್ಲರೂ ಕೂಡಿ ಸರಿಬಾರದೆಂದ ನಮ್ಮ ಕಲಿದೇವರದೇವ. -೮/೪೪೯

ಈರೇಳುಭುವನಕ್ಕೆ ಕರ್ತನೊಬ್ಬನೆಂಬ ಆದಿಯನರಿಯದೆ,
ಲಿಂಗವಂತಂಗೆ ಸೂತಕವೆಂಬ ನುಡಿಯ ಕೇಳಲಾಗದು.
ಸತ್ತ ಕೋಣ ಕುರಿ ಕೋಳಿ ತಿಂಬ
ಭೂತಪ್ರೇತ ದೈವದೆಂಜಲು ಭುಂಜಿಸುವವಗೆ,
ಏಳೇಳುಜನ್ಮ ನರಕ ತಪ್ಪದೆಂದ ಕಲಿದೇವರದೇವಯ್ಯ. -೮/೫೧೪

ನಮಗೆ ಲಿಂಗವುಂಟು,
ನಾವು ಲಿಂಗವಂತರೆಂದು ನುಡಿವರು.
ಮತ್ತೆ ಮರಳಿ ಭವಿಶೈವದೈವಂಗಳಿಗೆರಗುವ
ಈ ಮಂಗಮಾನವರನೇನೆಂಬೆನಯ್ಯಾ,
ಕಲಿದೇವಯ್ಯ. -೮/೬೩೭

ಮೋಳಿಗೆ ಮಾರಯ್ಯ

ಗುರುಸ್ಥಲ ಮೂರಾಗಿ ನಡೆವ ಭೇದವನಾರೂ ಅರಿಯರಲ್ಲಾ.
ಭವಿಗೆ ಲಿಂಗವ ಕೊಡುವಲ್ಲಿ, ಲಿಂಗವಂತಂಗೆ ಹರರೂಪ ಮಾಡುವಲ್ಲಿ,
ಹರರೂಪಿಂಗೆ ಅರಿವ ಹೇಳುವಲ್ಲಿ, ತ್ರಿವಿಧ ಗುರುರೂಪಾಯಿತ್ತು.
ಅಂಗಕ್ಕೆ ಲಿಂಗವ ಕೊಡುವಲ್ಲಿ, ಜಂಗಮಸ್ಥಲವ ಮಾಡುವಲ್ಲಿ,
ಆತ್ಮಬೋಧನೆಯ ಹೇಳುವಲ್ಲಿ, ಲಿಂಗಕ್ಕೆ ಆಚಾರ,
ಸಮಯಕ್ಕೆ ದರಿಸಿನ, ಆತ್ಮಕ್ಕೆ ಬೋಧೆ,
ಇಂತಿವನಾಧರಿಸಿ ಮಾಡಬೇಕು, ನಿಃಕಳಂಕ ಮಲ್ಲಿಕಾರ್ಜುನಾ. /೧೭೪೪

ಆಕಾಶ ಸತ್ತಿತ್ತು, ಬಯಲು ಅತ್ತಿತ್ತು, ವಾಯು ಹೊತ್ತಿತ್ತು,
ಬೆಂಕಿ ಸತ್ತ ಠಾವಿನಲ್ಲಿ ಸುಟ್ಟಿತ್ತು.
ಕೈಯಿಲ್ಲದ ಮೋಟ ಹಿಡಿ ಖಂಡವ ಕೊಯ್ದ.
ನಾಲಗೆಯಿಲ್ಲದೆ ಬಾಯಲ್ಲಿ ಮೆದ್ದು,
ಪರಿಣಾಮವಿಲ್ಲದ ಸಂತೋಷಿಯಾದನಯ್ಯಾ, ಆ ಶರಣ.
ಆತನ ಇರವು, ಇಹದಲ್ಲಿ ಅಜ್ಞಾನಿ, ಪರದಲ್ಲಿ ಸುಜ್ಞಾನಿ.
ಇಹಪರವೆಂಬ ಸಂದನಳಿದಲ್ಲದೆ ಲಿಂಗವಂತನಲ್ಲ.
ಲಿಂಗ ಪ್ರಾಣದ ಮೇಲೆ ನಿಂದುದಕ್ಕೆ ಸಾಕ್ಷಿ
ಉರಿ ಕೊಂಡ ಕರ್ಪುರದಂತೆ, ವಿಷ ಕೊಂಡ ಘಟದಂತೆ
ಘಟ ಕೊಂಡ ಸೂತ್ರದಂತೆ, ಶೌರ್ಯ ಕೊಂಡ ಪ್ರತಾಪದಂತೆ.
ಹಾಂಗಿರಬೇಕು ಮನ.
ಲಿಂಗ ಕೊಂಡ ಮನಕ್ಕೆ ಇದೇ ದೃಷ್ಟ,
ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸ್ವಾನುಭಾವಿಗೆ. ಮೋಳಿಗೆ ಮಾರಯ್ಯ /೧೪೯೩

ಅಂಗ ಲಿಂಗವಂತವಾದ ಮತ್ತೆ
ಮುಟ್ಟುವ ತಟ್ಟುವ, ಸೋಂಕಿನಲ್ಲಿ ಸುಳಿವ,
ಇದಿರಿಟ್ಟು ಬಂದ ಪದಾರ್ಥವ
ಅಂಗಲಿಂಗಕ್ಕೆ ಕೊಟ್ಟುಕೊಳಬೇಕು.
ಪ್ರಾಣಲಿಂಗವಾದ ಮತ್ತೆ ಕರಣಂಗಳಿಗಿಂಬುಗೊಡದಿರಬೇಕು.
ತನ್ನನರಿದುದಕ್ಕೆ ಉಭಯಾರೂಢನಾಗಿರಬೇಕು.
ಉಭಯವೇಕವಾದ ಮತ್ತೆ ಸಾಕು ಸತ್ಕ್ರೀ, ನಿಃಕಳಂಕ ಮಲ್ಲಿಕಾರ್ಜುನಾ /1424[1]

ಗಜೇಶ ಮಸಣಯ್ಯ

ಈ ಸಕಲದೊಳಗೆ ಒಂದು ಸಯವಿಲ್ಲದೆ
ನಾವು ಹಿರಿಯರು ನಾವು ಲಿಂಗವಂತರೆಂಬರು.
ಇದಿರ ಕೈಯಲ್ಲಿ ಎನಿಸಿಕೊಳ್ಳುತ್ತಿಹರು ಮನ ನಾಚದೆ.
ಇಂಥ ಮೂಗುನಾಚಿಗಳ ಮೆಚ್ಚುವನೆ
ಮಹಾಲಿಂಗ ಗಜೇಶ್ವರನಲ್ಲಿ
ಎನ್ನ ಹೆತ್ತ ತಂದೆ ಪೂರ್ವಾಚಾರ್ಯ ಸಂಗನಬಸವಣ್ಣ -/ ೨೦೮

ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ

ಲಿಂಗವಂತರ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ
ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು.
ಅದೆಂತೆಂದಡೆ:
'ಬಿಕ್ಷಲಿಂಗಾರ್ಪಿತಂ ಗತ್ವಾ | ಭಕ್ತಸ್ಯ ಮಂದಿರಂ ತಥಾ |
ಜಾತಿ ಜನ್ಮ ರಜೋಚ್ಫಿಷ್ಟಂ | ಪ್ರೇತಸ್ಯ ವಿವರ್ಜಿತಃ || '
ಇಂತೆಂದುದಾಗಿ, ಕಾಣದುದನೆ ಚರಿಸದೆ, ಕಂಡುದನು ನುಡಿಯದೆ.
ಕಾಣದುದನು ಕಂಡುದನು ಒಂದೆಸಮವೆಂದು ಅರಿಯಬಲ್ಲರೆ
ಕುಂಭೇಶ್ವರಲಿಂಗವೆಂಬೆನು. -5/773 [1]

ಹೊಡೆಹುಲ್ಲ ಬಂಕಣ್ಣ

ಲಿಂಗವಂತರು, ಲಿಂಗಾಚಾರಿಗಳಂಗಣಕ್ಕೆ.
ಲಿಂಗಾರ್ಪಿತ ಭಿಕ್ಷಕ್ಕೆ ಹೋದಲ್ಲಿ, ಲಿಂಗಾರ್ಪಿತವ ಮಾಡುವಲ್ಲಿ,
ಸಂದೇಹವಿಲ್ಲದೆ ಕಾಣದುದನೆಚ್ಚರಿಸದೆ,
ಕಂಡುದ ನುಡಿಯದೆ, ಕಂಡುದನು ಕಾಣದುದನು,
ಒಂದೆಸಮವೆಂದುತಿಳಿಯಬಲ್ಲಡೆ, ಕುಂಭೇಶ್ವರಲಿಂಗವೆಂಬೆನು. /1213 [1]

ಮರುಳಶಂಕರದೇವ

ಲಿಂಗವಂತನ ನಿಲವು ಸಂಗಸೂತಕಿಯಲ್ಲ.
ಕಂಗಳ ಕಳೆಯ ಬೆಳಗಳಿದು ಉಳಿದಾತ ಅಂಗಲಿಂಗೈಕ್ಯ ಕಾಣಾ,
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ.
ನಿಮ್ಮ ಲಿಂಗವಂತನ ನಿಲುವಿನ ಪರಿಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ. /1115

ಆಯತದಲ್ಲಿ ಅಂಗಭೋಗಿಯಾಗಿರಬೇಕು.
ಸ್ವಾಯತದಲ್ಲಿ ಸನ್ನಹಿತನಾಗಿರಬೇಕು.
ಸನ್ನಹಿತದಲ್ಲಿ ಸದಾಚಾರಿಯಾಗಿರಬೇಕು.
ಇಂತೀ ತ್ರಿವಿಧದಲ್ಲಿ ಏಕವಾಗಿರಬಲ್ಲಡೆ,
ಅದು ವರ್ಮ, ಅದು ಸಂಬಂಧ, ಅದು ನಿಯತಾಚಾರವೆಂದೆಂಬೆನು.
ಅದಲ್ಲದೆ ಲಿಂಗವ ಮರೆದು, ಅಂಗ[ವ]ಭೋಗಿಸಿ,
ಅಂಗಸಂಗದಲ್ಲಿರ್ದು, ಅಂಗವೆ ಪ್ರಾಣವಾಗಿಹರಿಗೆಲ್ಲರಿಗೆಯೂ
ಲಿಂಗದ ಶುದ್ಧಿ ನಿಮಗೇಕೆ ಕೇಳಿರಣ್ಣಾ.
ಲಿಂಗವಂತನು ಅಂಗಸೂತಕಿಯಲ್ಲ.
ಅಲಗಿನ ಕೊನೆಯ ಮೊನೆಯ ಮೇಲಣ ಸಿಂಹಾಸನದ ಮೇಲೆ
ಲಿಂಗದ ಪ್ರಾಣವ ತನ್ನಲ್ಲಿ ಕೂಡಿಕೊಂಡು,
ತನ್ನ ಪ್ರಾಣವ ಲಿಂಗದಲ್ಲಿ ಕೂಡಿಕೊಂಡು,
ಏಕಪ್ರಾಣವ ಮಾಡಿಕೊಂಡಿಪ್ಪ ಶರಣನ ಜ್ಯೋತಿರ್ಮಯನೆಂಬೆನು,
ಜಗದ ಕರ್ತನೆಂಬೆನು, ಜಗದಾರಾಧ್ಯನೆಂದೆಂಬೆನು ಕಾಣಾ,
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ.
ನಿಮ್ಮ ಸಂಗಿಯ ನಿಲವಿನ ಪರಿಯ ನೀವೇ ಬಲ್ಲಿರಲ್ಲದೆ,
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ. /೧೦೯೩

ಇಷ್ಟಲಿಂಗಕ್ಕೊಂದು ಕಷ್ಟ ಬಂದಿತ್ತೆಂದು ಮುಟ್ಟಲಾಗದು.
ಇನ್ನು ಕೆಟ್ಟೆನೆಂಬ ಪಾಪಿಗಳು ನೀವು ಕೇಳಿರೆ.
ಇಷ್ಟಲಿಂಗ, ಪ್ರಾಣಲಿಂಗದ ಆದಿ ಅಂತುವನಾರುಬಲ್ಲರು ?
ಹೃದಯಕಮಲ ಭ್ರೂಮಧ್ಯದಲ್ಲಿ[ಯ] ಸ್ವಯಂಜ್ಯೋತಿಯ ಪ್ರಕಾಶ[ನು]
ಆದಿ ಮಧ್ಯಸ್ಥಾನದಲ್ಲಿ ಚಿನ್ಮಯ ಚಿದ್ರೂಪನಾಗಿಹ.
ಇಂತಪ್ಪ ಮಹಾಘನವ ಬಲ್ಲ ಶರಣನ ಪರಿ ಬೇರೆ.
ಇಷ್ಟಲಿಂಗ ಹೋದ ಬಟ್ಟೆಯ ಹೊಗಲಾಗದು.
ಈ ಕಷ್ಟದ ನುಡಿಯ ಕೇಳಲಾಗದು.
ಕೆಟ್ಟಿತ್ತು ಜ್ಯೋತಿಯ ಬೆಳಗು, ಅಟ್ಟಾಟಿಕೆಯಲ್ಲಿ ಅರಿವುದೇನೊ ?
ಆಲಿ ನುಂಗಿದ ನೋಟದಂತೆ, ಪುಷ್ಪ ನುಂಗಿದ ಪರಿಮಳದಂತೆ,
ಜಲ ನುಂಗಿದ ಮುತ್ತಿನಂತೆ, ಅಪ್ಪುವಿನೊಳಗಿಪ್ಪ ಉಪ್ಪಿನಂತೆ,
ಬೀಜದೊಳಗಿಪ್ಪ ವೃಕ್ಷದಂತೆ, ಶಬ್ದದೊಳಗಿನ ನಿಃಶಬ್ದದಂತೆ,
ಬಯಲ ನುಂಗಿದ ಬ್ರಹ್ಮಾಂಡದಂತೆ, ಉರಿವುಂಡ ಕರ್ಪುರದಂತೆ.
ಇಂತಪ್ಪ ಮಹಾಘನ ತೇಜೋಮೂರ್ತಿಯ ನಿಲವ ಬಲ್ಲ
ಮಹಾಶರಣನ ಮನೆಯ ಎತ್ತು ತೊತ್ತು ಮುಕ್ಕಳಿಸಿ
ಉಗುಳುವ ಪಡುಗ, ಮೆಟ್ಟುವ ಚಮ್ಮಾವುಗೆಯಾಗಿ ಬದುಕಿದೆನಯ್ಯಾ.
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಲಿಂಗವಂತನ ನಿಲವಿನ ಪರಿಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ. /೧೦೯೫

ಇಷ್ಟಲಿಂಗಾರ್ಪಿತಂ ಪ್ರಾಣಂ ತೃಪ್ತಿಲಿಂಗಾರ್ಪಿತಾ ಭವೇತ್
ಅಂಗಾಂಕಿತ ಲಿಂಗಾಂಗಿನಾಂ ತ್ರಿವಿಧಂ ಲಿಂಗಮುಚ್ಯತೇ
ಇಂತೆಂದುದಾಗಿ,
ಲಿಂಗಕ್ಕೂ ತನಗೂ ಎಡೆದೆರಹಿಲ್ಲದಿಪ್ಪ,
ಲಿಂಗಸಹಿತವಾಗಿಯೆ ಕೇಳುವ,
ಲಿಂಗಸಹಿತವಾಗಿಯೆ ನೋಡುವ,
ಲಿಂಗಸಹಿತವಾಗಿಯೆ ರುಚಿಸುವ,
ಲಿಂಗಸಹಿತವಾಗಿಯೆ ಸಂಗವ ಮಾಡುವ,
ಲಿಂಗಸಹಿತವಾಗಿಯೆ ಅಳಲುವ,
ಲಿಂಗಸಹಿತವಾಗಿಯೆ ಬಳಲುವ,
ಲಿಂಗಸಹಿತವಾಗಿಯೆ ತೊಳಲುವ.
ಇಂತಪ್ಪ ಮಹಾಮಹಿಮ ಲಿಂಗವಂತ
ಅಂಗಕ್ರಿಯೆಗಳಲ್ಲಿ ಲಿಂಗಕ್ರಿಯೆಗಳಾದವು.
ಅಂಗಸಂಗವೆಲ್ಲ ಲಿಂಗಸಂಗವಾದವು.
ಅಂಗಭೋಗವೆಲ್ಲ ಲಿಂಗಭೋಗವಾದವು.
ಇಂತಪ್ಪ ಮಹಾಮಹಿಮ ಲಿಂಗವಂತನ ಚರಣಕ್ಕೆ
ಎನ್ನ ಶಿರವನರಿದು ಪೂಜಿಸುವೆ ಕಾಣಾ,
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ.
ನಿಮ್ಮ ಲಿಂಗವಂತನ ನಿಲವಿನ ಪರಿಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ. /೧೦೯೬

ಲಿಂಗವಂತನ ನಿಲವು ಸಂಗಸೂತಕಿಯಲ್ಲ.
ಕಂಗಳ ಕಳೆಯ ಬೆಳಗಳಿದು ಉಳಿದಾತ ಅಂಗಲಿಂಗೈಕ್ಯ ಕಾಣಾ,
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ.
ನಿಮ್ಮ ಲಿಂಗವಂತನ ನಿಲುವಿನ ಪರಿಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ. /೧೧೧೫ [1]

ಲಿಂಗವಂತ ಲಿಂಗಭಕ್ತ ಲಿಂಗಾಚಾರಿಯೆನಿಸಿಕೊಂಡ ಬಳಿಕ,
ಲಿಂಗದ ನಚ್ಚು, ಲಿಂಗದ ಮಚ್ಚು, ಲಿಂಗವೇ ಪ್ರಾಣವಾಗಿರಬೇಕಲ್ಲದೆ,
ಮತ್ತೆ ತಪ್ಪಿ ನಡೆದು, ತಪ್ಪಿ ನುಡಿದು, ಪರಧನ ಪರಸ್ತ್ರೀಯರ ಸಂಗವ ಮಾಡಿ,
ದುರ್ಗುಣ ದುರಾಚಾರದಲ್ಲಿ ನಡೆದು,
ಮತ್ತೆ ತಾವು ಲಿಂಗವಂತರೆನಿಸಿಕೊಂಬ ಪರಿಯ ನೋಡಾ.
ಇದು ಲಿಂಗದ ನಡೆಯಲ್ಲ, ಲಿಂಗದ ನುಡಿಯಲ್ಲ.
ಇದ ನಮ್ಮ ಶಿವಶರಣರು ಮೆಚ್ಚರು.
ಲಿಂಗವಂತನ ಪರಿ ಬೇರೆ ಕಾಣಿರೆ.
ಲಿಂಗಕ್ಕೆ ಲಿಂಗವೆ ಪ್ರಾಣವಾಗಿರಲು ಬಲ್ಲ.
ಲಿಂಗಕ್ಕೆ ಲಿಂಗವೆ ಭೋಗವಾಗಿರಲು ಬಲ್ಲ.
ಲಿಂಗಕ್ಕೆ ಲಿಂಗವೆ ಸಂಗವಾಗಿ[ರಲು]ಬಲ್ಲ,
ಇಂತಪ್ಪ ಲಿಂಗವಂತನ ಸದಾಚಾರಿಯೆಂಬೆನು.
ಇಂತಪ್ಪ ಲಿಂಗವಂತನ ಸರ್ವಾಂಗಲಿಂಗಿಯೆಂಬೆನು.
ಇಂತಪ್ಪ ಲಿಂಗವಂತನ ಸರ್ವಕರಣ ನಿರ್ಮುಕ್ತನ
ಸರ್ವನಿರ್ವಾಣಿಕಾಯೆಂಬೆನು.
ಇಂತಪ್ಪ ಮಹಾಮಹಿಮನ ನಿಲವು ಎಲಗಳೆದ ವೃಕ್ಷದಂತೆ,
ಉಲುಹಡಗಿಪ್ಪ ಶರಣನ ಪರಿಯ ನೀವೇ ಬಲ್ಲಿರಲ್ಲದೆ,
ಮತ್ತೆ ಉಳಿದಾದ ಅಜ್ಞಾನ ಸಂದೇಹಿಮಾನವರೆತ್ತ ಬಲ್ಲರಯ್ಯಾ.
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ
ನಿಮ್ಮ ಲಿಂಗಾವಧಾನಿಯ ಪರಿಯ ನೀವೇ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ. /1116 [1]

ಕಾಡಸಿದ್ಧೇಶ್ವರ

ಲಿಂಗವಂತರಿಗೆ ಮುಹೂರ್ತವ ಪೇಳಿ
ಪಂಚಾಂಗವ ತೋರಬೇಕಲ್ಲದೆ
ಭವಿಗಳಿಗೆ ಮುಹೂರ್ತವ ಪೇಳಿ ಪಂಚಾಂಗವ ತೋರಲಾಗದು.
ಅದೇನು ಕಾರಣವೆಂದಡೆ:
ಕೈಯೊಳಗಿನ ಪಂಚಾಂಗ ಹೃದಯದೊಳಗಣ ಮುಹೂರ್ತ
ತನಗೆ ಸಾಧ್ಯವಾಗದಾಗಿ.
ಪೇಳಿದರೆ ಪೇಳಬಹುದು.
ಹಣವ ಕೊಡವುಳ್ಳವರ ಕಂಡರೆ
ಪಂಚಾಂಗದ ಮುಹೂರ್ತವ ನೋಡೆಂದನಯ್ಯಾ ಗೋವಿಂದಭಟ್ಟ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ. -6/354 [1]

ಅಂಬಿಗರ ಚೌಡಯ್ಯ

ಜಂಗಮವ ಕರತಂದು ಮನೆಯಲ್ಲಿ ಕುಳ್ಳಿರಿಸಿ,
ಅಂಗದ ಮೇಲಣ ಜಪವನೆಣಿಸುವ ಭಕ್ತನ ಜಪದ ಬಾಯಲ್ಲಿ ಕೆರಹನಿಕ್ಕಲಿ!
ಅವನ ಲಿಂಗಾರ್ಚನೆಯ ಬಾಯಲ್ಲಿ ಹುಡಿಯ ಹೊಯ್ಯಲಿ!
ಜಂಗಮದ ತೃಪ್ತಿಯನರಿಯದೆ ಲಿಂಗವಂತನೆಂತಾದನೊ ? ಮರುಳೆ!
ಅವ ಪಿಸುಣ, ಹೊಲೆಯನೆಂದಾತನಂಬಿಗರ ಚೌಡಯ್ಯ. -೬/೧೪೩

ಅವಸರದ ರೇಕಣ್ಣ

ಗುರುವೆಂಬುದ ಪ್ರಮಾಣಿಸಿದ ಶಿಷ್ಯನಾದಡೆ
ತನ್ನಯ ಉಭಯದ ಗುರುವ ತಿಂದು ತೇಗಬೇಕು.
ಲಿಂಗ ಭಕ್ತನಾದಡೆ ಅಂಗ ಲಿಂಗವೆಂಬ ಉಭಯವನೊಡೆದು
ಉಭಯದ ಸಂದಿಯಲ್ಲಿ ಸಿಕ್ಕದೆ ನಿಜಲಿಂಗವಂತನಾಗಬೇಕು.
ಜಂಗಮ ಅಳಿದು ವಿರಕ್ತನಾಗಬಲ್ಲಡೆ ಆ ಗುರು, ಆ ಶಿಷ್ಯ, ಆ ಲಿಂಗ, ಆ ಭಕ್ತನ,
ಈ ಜಂಗಮ, ಈ ವಿರಕ್ತನ ಕೊಂದು ತಿಂದು
ಅಂಗ ನಿರಂಗವಾಗಬಲ್ಲಡೆ ಸದ್ಭಾವಸಂಗಿ, ಷಟ್ಸ್ಥಲಬ್ರಹ್ಮಿ.
ಸರ್ವಾರ್ಪಣ ಅಂತಸ್ಥಲೇಪ, ತದ್ಭಾವ ನಾಶ.
ಈ ಸಂದನಳಿದಲ್ಲಿ ಸದ್ಯೋಜಾತಲಿಂಗದಲ್ಲಿ ವಿನಾಶವಾದ ನಿರ್ಲೆಪ -೬/೭೨೪

ಗುರುಭಕ್ತ ಗುರುವಿಲ್ಲದೆ ಶಿಷ್ಯನಾಗಿ,
ಲಿಂಗಭಕ್ತ ಲಿಂಗವಿಲ್ಲದೆ ಲಿಂಗವಂತನಾಗಿ,
ಜಂಗಮಭಕ್ತ ಜಂಗಮವಿಲ್ಲದೆ ಜಂಗಮಕ್ಕಿಕ್ಕಿ ಮುಕ್ತನಾದ.
ಇಂತೀ ಮೂವರ ಮುದ್ದು ಎನಗೆ ಸತ್ತುಹೋಯಿತ್ತಲ್ಲಾ ಎಂದು,
ಬಿಕ್ಕದೆ ಕಣ್ಣನೀರಿಲ್ಲದೆ ಒಂದೆ ಸ್ವರದಲ್ಲಿ ಅಳುತ್ತಿದ್ದ
ಸದ್ಯೋಜಾತಲಿಂಗ ಕೇಳಬೇಕೆಂದು. -೬/೭೪೨

ಷಣ್ಮುಖ ಸ್ವಾಮಿ

ಲಿಂಗದೊಡನೆ ಸಹಭೋಜನ ಮಾಡುವ
ಲಿಂಗವಂತರೆಲ್ಲ ನೀವು ಕೇಳಿರೊ !
ನಿಮ್ಮ ತನು ಸಂಸಾರವಿಷಯಪ್ರಪಂಚಿನಲ್ಲಿ ಮುಳುಗಿರ್ಪುದು.
ನಿಮ್ಮ ಮನ ಮಾಯಾ ಮಲತ್ರಯಂಗಳಲ್ಲಿ ಸುತ್ತಿರ್ಪುದು.
ನಿಮ್ಮ ಜೀವ ಭವಭವದಲ್ಲಿ ತೊಳಲುತಿರ್ಪುದು.
ನೀವಿಂತು ಮಲಮಾಯಾಸ್ವರೂಪರಾಗಿರ್ದು
ಭಯವಿಲ್ಲದೆ ಅಮಲಲಿಂಗದೊಡನೆ ಸಹಭೋಜನವ ಮಾಡಿದಡೆ
ಅಘೋರ ನರಕದಲ್ಲಿಕ್ಕದೆ ಮಾಣ್ಬನೆ ನಮ್ಮ ಅಖಂಡೇಶ್ವರನು ? /೯೧೧

ಉರಿಲಿಂಗಪೆದ್ದಿ

ಲಿಂಗವಂತ ಲಿಂಗವಂತ ಎಂಬಿರಿ,
ಎಂತು ಲಿಂಗವಂತರಾದಿರೋ, ಅನ್ಯದೈವದ ಭಜನೆ ಮಾಣದನ್ನಕ್ಕ ?
ಭವಿಗಳ ಸಂಗವ ಮಾಣದನ್ನಕ್ಕ, ಎಂತು ಲಿಂಗವಂತರಾದಿರೋ ನೀವು ?
ಅದೆಂತೆಂದಡೆ,
ಶಿವಾಚಾರಸಮಾಯುಕ್ತಃ ಅನ್ಯದೈವಸ್ಯ ಪೂಜನಾತ್
ಶ್ವಾನಯೋನಿಶತಂ ಗತ್ವಾ ಚಂಡಾಲಗೃಹಮಾವಿಶೇತ್
ಅಶನೇ ಶಯನೇ ಯಾನೇ ಸಂಪರ್ಕೆ ಸಹಭೋಜನೇ
ಸಂಚರಂತಿ ಮಹಾಘೋರೇ ನರಕೇ ಕಾಲಮಕ್ಷಯಂ
ಇಂತೆಂದುದಾಗಿ,
ಅನ್ಯದೈವ ಭವಿವುಳ್ಳನಕ,
ನೀವು ಲಿಂಗವಂತರೆಂದಿರೋ, ಮರುಳುಗಳಿರಾ ?
ಇದನರಿತು ಭಕ್ತಿಪಥವ ಸೇರದಿರ್ದಡೆ,
ನೀವೆಂದೆಂದಿಗೂ ಭವಭವದ ಲೆಂಕರು.
ಇದು ಕಾರಣ, ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗ
ಮುನ್ನವೇ ದೂರವಯ್ಯ. -6/1514 [1]

ಲಿಂಗವಂತಂಗೆ ಲಿಂಗವು ಮಾಡಿದ ಪದವನು ಲಿಂಗವಂತರೆ ಬಲ್ಲರು.
ಕೇವಲ ಸಾಕ್ಷಾತ್ಪರವಸ್ತುವನು ಕರಸ್ಥಲದಲ್ಲಿ ಮೂರ್ತಿಯಾಗಿ
ಬಿಜಯಂಗೈಸಿ ಕೊಟ್ಟನಾಗಿ ಸಾಲೋಕ್ಯಪದ,
ಅಂಗದ ಮೇಲೆ ನಿರಂತರ ಪೂಜೆಗೊಳ್ಳುತ್ತಿಹನಾಗಿ ಸಾಮೀಪ್ಯಪದ,
ಸದ್ಭಕ್ತರೂಪ ಮಾಡಿದವನಾಗಿ ಸಾರೂಪ್ಯಪದ,
ಪ್ರಾಣಲಿಂಗವ ಮಾಡಿ ಅವಿನಾಭಾವವ ಮಾಡಿದನಾಗಿ ಸಾಯುಜ್ಯಪದ,
ಇಂತೀ ಚತುರ್ವಿಧ ಪದವಾಯಿತ್ತು.
`ಲಿಂಗಮಧ್ಯೇ ಶರಣಂ ಶರಣಮಧ್ಯೇ ಲಿಂಗಂ' ಎಂಬುದಾಗಿ
ಸರ್ವಭೋಗಂಗಳನೂ ಸಹವಾಗಿ ಭೋಗಿಸಿ
ಪ್ರಸಾದವನಿಕ್ಕಿ ಸಲಹಿದನಾಗಿ ಸದ್ಯೋನ್ಮುಕ್ತನು, ಸರ್ವಾಂಗಲಿಂಗವು.
ಈ ತಾತ್ಪರ್ಯದ ಮರ್ಮವನು ಲೋಕದ ಜಡಜೀವಿಗಳೆತ್ತ ಬಲ್ಲರಯ್ಯಾ ?
ಬಲ್ಲಡೆ, ಲಿಂಗಾನುಭಾವಿಗಳೇ ಬಲ್ಲರಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. -6/1507 [1]

ಲಿಂಗವಂತರ ಲಿಂಗವೆಂಬುದೇ ಶೀಲ,
ಲಿಂಗವಂತರ ರಾಣಿವಾಸವ ಲಿಂಗದ ರಾಣಿವಾಸವೆಂಬುದೇ ಶೀಲ,
ಲಿಂಗವಂತರ ಅರ್ಥ ಪ್ರಾಣ ಅಭಿಮಾನಕ್ಕೆ ತಪ್ಪದಿಪ್ಪುದೇ ಶೀಲ,
ಲಿಂಗವಂತರ ಪಾದೋದಕ ಪ್ರಸಾದ ಸೇವನೆಯ ಮಾಡುವುದೇ
ಮಹಾಶೀಲವಯ್ಯಾ,
ಇಂತಪ್ಪ ಶೀಲ ಸುಶೀಲದೊಳಗಾದ ಶೀಲವೇ ಶೀಲ.
ಈ ಕ್ರೀಯನರಿದು ನಂಬಿ ಭಯಭಕ್ತಿಯಿಂ
ತನು ಮನ ಧನದಲ್ಲಿ ದುರ್ಭಾವ ಹುಟ್ಟದೆ
ಸ್ವಭಾವ ಸದ್ಭಾವದಿಂ ಏಕಭಾವವಾದಡೆ, ಆತನೇ ಸದ್ಭಕ್ತನು.
ಅಂತಹ ಸದ್ಭಕ್ತದೇಹಿಕದೇವನಾಗಿಪ್ಪನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. -6/1513 [1]

ಲಿಂಗವಂತನು ಕೇವಲ ಲಿಂಗಮೂರ್ತಿ.
ಲಿಂಗಾರ್ಚನೆಯಂ ಮಾಡಿ, ಲಿಂಗಪ್ರಸಾದವ ಧರಿಸಿ,
ಲಿಂಗವಂತರಲ್ಲಿ ವರ್ತಿಸಿ, ಸರ್ವವೂ ಲಿಂಗಕ್ರೀಯಾಗಿದ್ದು
ಲಿಂಗವಿಲ್ಲದವರಲ್ಲಿ ಧನದ ಕೊಳುಕೊಡೆ ಮನದ ಕೊಳುಕೊಡೆ
ತನುವಿನ ಕೊಳುಕೊಡೆಯನೂ ಮಾಡಿದಡೆ
ನಾಚದೆ ಶಿವಾಚಾರ? ನಾಚದೇ ಪ್ರಸಾದ? ನಾಚರೆ ಲಿಂಗವಂತರು.
ಸುಡು, ಸುಡು, ಕಡು ಕಷ್ಟ, ಅವರನು ಬಿಡು ಬಿಡು.
ಆ ತನುವನು ಲಿಂಗವಂತರಲ್ಲಿಯೇ ಸರ್ವಕ್ರೀಯ ಅರ್ತಿಸುವುದು.
ತನಗೆ ಇಚ್ಛೈಸಿತ್ತ ಕೊಂಡು ಕೊಂಬುದು,
ಅವರು ಇಚ್ಛೈಸಿತ್ತ ಕೊಡುವುದು,
ಅವರಲ್ಲಿಯೆ ಅನುಭವವನಾಸೆಗೈವುದು.
ಅ[ನ್ಯ]ರ ವಿಚಾರದಲ್ಲಿ ನಡೆದು ನರಕಕ್ಕಿಳಿಯಲಾಗದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. -6/1508 [1]

ಲಿಂಗವಂತನು ಲಿಂಗವಂತಂಗೆ
ಅಣುಮಾತ್ರ ಅವಮಾನವ ಮಾಡಿದಡೆ ಮನ ನೋವುದಯ್ಯಾ.
ಲಿಂಗವಂತನು ಶುಚಿ ಸತ್ಯನು ಶಾಂತನು ಲಿಂಗಸುಖಿ,
ಲಿಂಗದಲ್ಲಿ ತನುಮನಧನ ಬೆರಸಿಪ್ಪುದಾಗಿ, ಲಿಂಗವೂ ಒಲಿವುದಯ್ಯಾ.
ಬಳಿಕ ಮಹಾಪರ್ವತಪ್ರಮಾಣ ಸತ್ಕಾರವ ಮಾಡಿದರೂ
ನೋವು ಮಾಣದು, ಶಿವನೊಲವು ತಪ್ಪದು.
ಹಿಂದೆ ವಿಷ್ಣು, ಬ್ರಹ್ಮ, ಇಂದ್ರ, ದಕ್ಷನು
ಇದನರಿದು ತನು ಮನ ಧನದಲ್ಲಿ ವಂಚನೆಯಿಲ್ಲದೆ
ಭಯಭಕ್ತಿಯಿಂದರಿದು ನಡೆದು ಸುಖಸಂಗತಾತ್ಪರ್ಯ
ಸಹಜವಿಡಿದಿಪ್ಪುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. -6/1509 [1]

ಲಿಂಗವಂತನು ಲಿಂಗವಂತರಲ್ಲಿಯೇ ಸಂಗವ ಮಾಡುವುದು,
ಲಿಂಗಬಾಹ್ಯರ ಸಂಗವ ಮಾಡಲಾಗದು.
ಸ್ತ್ರೀ ಪುತ್ರರು ಮೊದಲಾದವರ ಕೂಡ
ಲಿಂಗವಿಲ್ಲದವರೊಡನೆ ಸಂಗವ ಮಾಡಲಾಗದು.
ಅದೆಂತೆಂದೆಡೆ :
ಶಿವಲಿಂಗಾಂಗಸಂಪನ್ನೋ ಲಿಂಗಬಾಹ್ಯಸತೀಸುತಾನ್
ಆಲಿಂಗ್ಯ ಚುಂಬನಂ ಕೃತ್ವಾ ರೌರವಂ ನರಕಂ ವ್ರಜೇತ್
ಎಂದುದಾಗಿ ಮತ್ತೆಯೂ_
ಲಿಂಗೀ ಲಿಂಗಿ ಸಹಾವಾಸೀ ಲಿಂಗಿನಾ ಸಹ ವರ್ತಯೇತ್
ಲಿಂಗಿನಾ ಸಹ ಭುಂಜಿತ ಲಿಂಗಯೋಗೋ ನ ಸಂಶಯಃ
ಎಂದುದಾಗಿ ಲಿಂಗವಂತನು ಲಿಂಗವಂತರಲ್ಲಿಯೇ
ಸಂಗವ ಮಾಡುವುದು ಶಿವಪಥವಯ್ಯಾ.
ಲಿಂಗವಿಲ್ಲದವರೊಡನೆ ಸಂಗವ ಮಾಡುವುದು ಮಹಾಪಾತಕವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ. -6/1510 [1]

ಲಿಂಗವಂತನು ಲಿಂಗವಂತರೊಡನೆ ಸತ್ಯವ ನುಡಿವುದು, ಸಹಜದಲ್ಲಿ ನಡೆವುದು,
ಪ್ರೇಮದಲ್ಲಿ ಸಂಗವ ಮಾಡುವುದು.
ಈ ಕ್ರೀ ಇಹಪರ ಸಿದ್ಧಿ, ಲಿಂಗವನರಿವುದಕ್ಕೆ ದೃಷ್ಟ.
ಲಿಂಗಾರ್ಚನೆಯೇ ಕ್ರೀ, ಲಿಂಗ ಒಲಿದುದಕ್ಕೆ ಚಿಹ್ನ, ಇದು ನಿತ್ಯ.
ಲಿಂಗವಂತನು ಲಿಂಗವಂತರೊಡನೆ
ಹೇಮದಾಸೆಗೆ ಪ್ರೇಮಗುಂದಿ ನುಡಿಯಲಾಗದು,
ಅಸತ್ಯವ ನುಡಿಯಲಾಗದು,
ಕ್ರೋಧಿಸಿ ನುಡಿಯಲಾಗದು, ವಂಚಿಸಿ ನುಡಿಯಲಾಗದು.
ವೇದಶಾಸ್ತ್ರ ಆಗಮ ಪುರಾಣ ಪುರಾತನರ ಚರಿತ್ರವನರಿಯದೆ
ಆದಿ ಮಧ್ಯ ಪರಿಪಕ್ವತೆಯನರಿಯದೆ,
ತರ್ಕಿಸಿ ನುಡಿಯಲಾಗದು, ದುಶ್ಚರಿತ್ರದಲ್ಲಿ ನಡೆಯಲಾಗದು.
ಆಜ್ಞಾನಕ್ರೀಯಲ್ಲಿ ವರ್ತಿಸಿ ನಡೆಯಲು
ಇಹಪರವಿಲ್ಲ, ಲಿಂಗವನರಿಯಬಾರದು,
ಲಿಂಗವಂತರನೆಂತೂ ಅರಿಯಬಾರದು.
ಅರಿಯದವಂಗೆ ಪೂಜಿಸಲೆಂತಹುದು ?
ಪೂಜೆ ಇಲ್ಲದವಂಗೆ ಭಕ್ತಿ ಎಂತಹುದು ?
ಭಕ್ತಿ ಇಲ್ಲದವಂಗೆ ಪ್ರಸಾದವೆಂತಹುದು ?
ಪ್ರಸಾದವಿಲ್ಲದವಂಗೆ ಮುಕ್ತಿ ಎಂತಹುದು ?
ಇದನರಿದು, ಲಿಂಗವಂತನು ಲಿಂಗವಂತರಲ್ಲಿ
ಸತ್ಯಸಂಭಾಷಣೆ ಯೋಗವಾದಡೆ ಕೇವಲ ಮುಕ್ತಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ. -6/1511 [1]

ಆಯುಷ್ಯಭಾಷೆಯನು ಲಿಂಗವೆ ಕೊಡುವನಯ್ಯಾ.
ಇನ್ನಾರಿಗೂ ಕಕ್ಕುಲತೆ ಬಡದಿರಿ.
ಲಿಂಗವು ಕೊಡುವ ಕಂಡಾ !
ಆದಡಿನ್ನು ಮತ್ತಾರಿಂಗೂ ಕಕ್ಕುಲತೆಯ ಬಡದಿರಿ.
ಲಿಂಗವಂತಂಗೆ ಕಕ್ಕುಲತೆಯಾದಡೆ ಲಿಂಗವಂತನೆನಿಸನು.
ಕಕ್ಕುಲತೆಯಲ್ಲಿ ಅನ್ಯರನಾಸೆಗೈದಡೆ ಲಿಂಗವು ರಕ್ಷಿಸನು, ಶಿವನಾಣೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. -೬/೧೩೧೦

ಆಯುಷ್ಯವ ಹಿರಿದಾಗಿ ಕೊಟ್ಟಡೆ, ಲಿಂಗ ಒಲಿದುದಲ್ಲ.
ಭಾಷೆಯ ಹಿರಿದಾಗಿ ಕೊಟ್ಟಡೆ, ಲಿಂಗ ಒಲಿದುದಲ್ಲ.
ಅಷ್ಟಮಹದೈಶ್ವರ್ಯವ ಹಿರಿದಾಗಿ ಕೊಟ್ಟಡೆ ಲಿಂಗ ಒಲಿದುದಕ್ಕೆ ಕುರುಹಲ್ಲ.
ಕಾಯ ಬೆರಸಿ ಕೈಲಾಸಕ್ಕೆ ಕೊಂಡು ಹೋದರೂ ಲಿಂಗ ಒಲಿದುದಲ್ಲ.
ಇವೆಲ್ಲಾ ಪೂಜಾ ಫಲಂಗಳು, ಕೈಕೂಲಿಕಾರತನವೈಸೆ.
ಲಿಂಗ ಒಲಿದ ಪರಿ:
ಗುರುಲಿಂಗಜಂಗಮ ಒಂದೆಂದು ಅರಿದು
ನಿಶ್ಚಯ ಭಾವದಿಂ ತನು ಮನ ಧನವಲ್ಲಿಯೇ ಅರ್ಪಿಸುವುದು ಲಿಂಗ ಒಲಿದುದು.
ಕಾಯಭಾವವಳಿದು ಲಿಂಗವೆಂದು ಭಾವಿಸಿ ಭಾವಸಿದ್ಧಿಯಾದುದು ಲಿಂಗ ಒಲಿದುದು.
ಲಿಂಗವಲ್ಲದೆ ಇನ್ನಾವುದು ಘನ ? ಎದರಿದುವೆ ಲಿಂಗ ಒಲಿದುದು.
ಲಿಂಗವಂತನೆ ಲಿಂಗವೆಂದರಿದುದು ಲಿಂಗ ಒಲಿದುದು.
ಸದಾಚಾರ ಲಿಂಗ ಒಲಿದುದು.
ನಿರ್ವಂಚನೆ ಲಿಂಗ ಒಲಿದುದು.
ಸರ್ವಭೋಗವನು ಲಿಂಗವಂತರಿಗೆ ಭೋಗಿಸಲಿತ್ತು
ಸಮಭೋಗವಲ್ಲದೆ ಲಿಂಗವಂತಗೆ
ವಿಶೇಷ ಭೋಗ ತಾತ್ಪರ್ಯ ಮೋಹವಾಗದಡೆ ಲಿಂಗ ಒಲಿದುದು.
ಪರಧನ ಪರಸ್ತ್ರೀ ಪರದ್ರವ್ಯ ಪರದೈವದಲ್ಲಿ
ವರ್ತಿಸದಿದ್ದಡೆ ಲಿಂಗ ಒಲಿದುದು.
ಲಿಂಗದಲ್ಲಿ ಭಕ್ತನಲ್ಲಿ ಅವಿನಾಭಾವವಳವಟ್ಟು ಭಾವಶುದ್ಧವಾಗಿ
ಸರ್ವಕ್ರೀ ಲಿಂಗಕ್ರೀಯಾದಡೆ ಲಿಂಗ ಒಲಿದುದು ದೃಷ್ಟವಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. -೬/೧೩೧೧

ತೃಣಾದಿ ವಿಷ್ಣ್ವಂತ್ಯವಾಗಿ ಸರ್ವರ ಉತ್ಪತ್ತಿಸ್ಥಿತಿಲಯಂಗಳೂ ಶಿವಾಧೀನ.
ಇದನರಿದು ಸುಖಿಯಾಗಿ, ಲಿಂಗವಂತನು
ಲಿಂಗಾರ್ಚನೆಯ ಮಾಡಿ, ಪರಿಣಾಮಿಯಾದಡೆ
ಇಹಪರಸಿದ್ಧಿ, ಸದ್ಯೋನ್ಮುಕ್ತನು.
ಈ ವಿಚಾರಜ್ಞಾನವರಿಯದೆ ಮನಭ್ರಮಿಸಿ ಬಳಲಿದಡೆ ಕಾರ್ಯವಿಲ್ಲ.
ಲಿಂಗವು ಮೆಚ್ಚನು, ಲಿಂಗವಂತರೆಂತೂ ಮೆಚ್ಚರು.
ಇದನರಿದು, ಲಿಂಗವ ನಂಬಿ ಬದುಕಿರಯ್ಯಾ ಕೆಡಬೇಡ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. -೬/೧೪೦೩

ಭಕ್ತಕಾಯ ಮಮಕಾಯ ಕಂಡಾ ಲಿಂಗವು,
ಲಿಂಗವಂತಂಗೆ ಏಕಿನ್ನು ಬೇರೆ ಚಿಂತೆ ?
ಲಿಂಗವಂತಂಗೆ ಗುರು ಲಿಂಗ ಪ್ರಾಣ ಏಕವಾಗಿ, ಪ್ರಾಣಲಿಂಗವಾಗಿ
ಅಂತರಂಗ ಬಹಿರಂಗಭರಿತನಾಗಿ, ಪ್ರಾಣಲಿಂಗವಾಗಿ
ಅಂಗದ ಮೇಲೆ ಲಿಂಗಸ್ವಾಯತವಾಗಿ ನಿರಂತರ ಇಪ್ಪ ಕಂಡಾ.
ಏಕಿನ್ನು ಬೇರೆ ಅನ್ಯರಾಸೆ !
ಲಿಂಗವಂತರು ಲಿಂಗವನೇ ಚಿಂತಿಸುವುದು
ಲಿಂಗವನೇ ಆಸಗೈವುದು
ಲಿಂಗವನೇ ಕೊಂಬುದು, ಲಿಂಗವಂತರಿಗೆ ಕೊಡುವುದು.
ಲಿಂಗವಂತಂಗೆ ಅನುವಿದು, ಆಯತವಿದು
ಬುದ್ಧಿಯಿದು, ಸಿದ್ಧಿಯಿದು, ಮುಕ್ತಿಯಿದು, ಯುಕ್ತಿಯಿದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. -೬/೧೪೬೬

ಲಿಂಗವಂತಂಗೆ ಲಿಂಗವು ಮಾಡಿದ ಪದವನು ಲಿಂಗವಂತರೆ ಬಲ್ಲರು.
ಕೇವಲ ಸಾಕ್ಷಾತ್ಪರವಸ್ತುವನು ಕರಸ್ಥಲದಲ್ಲಿ ಮೂರ್ತಿಯಾಗಿ
ಬಿಜಯಂಗೈಸಿ ಕೊಟ್ಟನಾಗಿ ಸಾಲೋಕ್ಯಪದ,
ಅಂಗದ ಮೇಲೆ ನಿರಂತರ ಪೂಜೆಗೊಳ್ಳುತ್ತಿಹನಾಗಿ ಸಾಮೀಪ್ಯಪದ,
ಸದ್ಭಕ್ತರೂಪ ಮಾಡಿದವನಾಗಿ ಸಾರೂಪ್ಯಪದ,
ಪ್ರಾಣಲಿಂಗವ ಮಾಡಿ ಅವಿನಾಭಾವವ ಮಾಡಿದನಾಗಿ ಸಾಯುಜ್ಯಪದ,
ಇಂತೀ ಚತುರ್ವಿಧ ಪದವಾಯಿತ್ತು.
`ಲಿಂಗಮಧ್ಯೇ ಶರಣಂ ಶರಣಮಧ್ಯೇ ಲಿಂಗಂ' ಎಂಬುದಾಗಿ
ಸರ್ವಭೋಗಂಗಳನೂ ಸಹವಾಗಿ ಭೋಗಿಸಿ
ಪ್ರಸಾದವನಿಕ್ಕಿ ಸಲಹಿದನಾಗಿ ಸದ್ಯೋನ್ಮುಕ್ತನು, ಸರ್ವಾಂಗಲಿಂಗವು.
ಈ ತಾತ್ಪರ್ಯದ ಮರ್ಮವನು ಲೋಕದ ಜಡಜೀವಿಗಳೆತ್ತ ಬಲ್ಲರಯ್ಯಾ ?
ಬಲ್ಲಡೆ, ಲಿಂಗಾನುಭಾವಿಗಳೇ ಬಲ್ಲರಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. -೬/೧೫೦೭

ಲಿಂಗವಂತನು ಕೇವಲ ಲಿಂಗಮೂರ್ತಿ.
ಲಿಂಗಾರ್ಚನೆಯಂ ಮಾಡಿ, ಲಿಂಗಪ್ರಸಾದವ ಧರಿಸಿ,
ಲಿಂಗವಂತರಲ್ಲಿ ವರ್ತಿಸಿ, ಸರ್ವವೂ ಲಿಂಗಕ್ರೀಯಾಗಿದ್ದು
ಲಿಂಗವಿಲ್ಲದವರಲ್ಲಿ ಧನದ ಕೊಳುಕೊಡೆ ಮನದ ಕೊಳುಕೊಡೆ
ತನುವಿನ ಕೊಳುಕೊಡೆಯನೂ ಮಾಡಿದಡೆ
ನಾಚದೆ ಶಿವಾಚಾರ? ನಾಚದೇ ಪ್ರಸಾದ? ನಾಚರೆ ಲಿಂಗವಂತರು.
ಸುಡು, ಸುಡು, ಕಡು ಕಷ್ಟ, ಅವರನು ಬಿಡು ಬಿಡು.
ಆ ತನುವನು ಲಿಂಗವಂತರಲ್ಲಿಯೇ ಸರ್ವಕ್ರೀಯ ಅರ್ತಿಸುವುದು.
ತನಗೆ ಇಚ್ಛೈಸಿತ್ತ ಕೊಂಡು ಕೊಂಬುದು,
ಅವರು ಇಚ್ಛೈಸಿತ್ತ ಕೊಡುವುದು,
ಅವರಲ್ಲಿಯೆ ಅನುಭವವನಾಸೆಗೈವುದು.
ಅ[ನ್ಯ]ರ ವಿಚಾರದಲ್ಲಿ ನಡೆದು ನರಕಕ್ಕಿಳಿಯಲಾಗದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. -೬/೧೫೦೮

ಲಿಂಗವಂತನು ಲಿಂಗವಂತಂಗ
ಅಣುಮಾತ್ರ ಅವಮಾನವ ಮಾಡಿದಡೆ ಮನ ನೋವುದಯ್ಯಾ.
ಲಿಂಗವಂತನು ಶುಚಿ ಸತ್ಯನು ಶಾಂತನು ಲಿಂಗಸುಖಿ,
ಲಿಂಗದಲ್ಲಿ ತನುಮನಧನ ಬೆರಸಿಪ್ಪುದಾಗಿ, ಲಿಂಗವೂ ಒಲಿವುದಯ್ಯಾ.
ಬಳಿಕ ಮಹಾಪರ್ವತಪ್ರಮಾಣ ಸತ್ಕಾರವ ಮಾಡಿದರೂ
ನೋವು ಮಾಣದು, ಶಿವನೊಲವು ತಪ್ಪದು.
ಹಿಂದೆ ವಿಷ್ಣು, ಬ್ರಹ್ಮ, ಇಂದ್ರ, ದಕ್ಷನು
ಇದನರಿದು ತನು ಮನ ಧನದಲ್ಲಿ ವಂಚನೆಯಿಲ್ಲದೆ
ಭಯಭಕ್ತಿಯಿಂದರಿದು ನಡೆದು ಸುಖಸಂಗತಾತ್ಪರ್ಯ
ಸಹಜವಿಡಿದಿಪ್ಪುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. -೬/೧೫೦೯

ಲಿಂಗವಂತನು ಲಿಂಗವಂತರಲ್ಲಿಯೇ ಸಂಗವ ಮಾಡುವುದು,
ಲಿಂಗಬಾಹ್ಯರ ಸಂಗವ ಮಾಡಲಾಗದು.
ಸ್ತ್ರೀ ಪುತ್ರರು ಮೊದಲಾದವರ ಕೂಡ
ಲಿಂಗವಿಲ್ಲದವರೊಡನೆ ಸಂಗವ ಮಾಡಲಾಗದು.
ಅದೆಂತೆಂದೆಡೆ : ಶಿವಲಿಂಗಾಂಗಸಂಪನ್ನೋ ಲಿಂಗಬಾಹ್ಯಸತೀಸುತಾನ್
ಆಲಿಂಗ್ಯ ಚುಂಬನಂ ಕೃತ್ವಾ ರೌರವಂ ನರಕಂ ವ್ರಜೇತ್
ಎಂದುದಾಗಿ ಮತ್ತೆಯೂ_
ಲಿಂಗೀ ಲಿಂಗಿ ಸಹಾವಾಸೀ ಲಿಂಗಿನಾ ಸಹ ವರ್ತಯೇತ್
ಲಿಂಗಿನಾ ಸಹ ಭುಂಜಿತ ಲಿಂಗಯೋಗೋ ನ ಸಂಶಯಃ
ಎಂದುದಾಗಿ ಲಿಂಗವಂತನು ಲಿಂಗವಂತರಲ್ಲಿಯೇ
ಸಂಗವ ಮಾಡುವುದು ಶಿವಪಥವಯ್ಯಾ.
ಲಿಂಗವಿಲ್ಲದವರೊಡನೆ ಸಂಗವ ಮಾಡುವುದು ಮಹಾಪಾತಕವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ. -೬/೧೫೧೦

ಲಿಂಗವಂತನು ಲಿಂಗವಂತರೊಡನೆ ಸತ್ಯವ ನುಡಿವುದು, ಸಹಜದಲ್ಲಿ ನಡೆವುದು,
ಪ್ರೇಮದಲ್ಲಿ ಸಂಗವ ಮಾಡುವುದು.
ಈ ಕ್ರೀ ಇಹಪರ ಸಿದ್ಧಿ, ಲಿಂಗವನರಿವುದಕ್ಕೆ ದೃಷ್ಟ.
ಲಿಂಗಾರ್ಚನೆಯೇ ಕ್ರೀ, ಲಿಂಗ ಒಲಿದುದಕ್ಕೆ ಚಿಹ್ನ, ಇದು ನಿತ್ಯ.
ಲಿಂಗವಂತನು ಲಿಂಗವಂತರೊಡನೆ
ಹೇಮದಾಸೆಗೆ ಪ್ರೇಮಗುಂದಿ ನುಡಿಯಲಾಗದು,
ಅಸತ್ಯವ ನುಡಿಯಲಾಗದು,
ಕ್ರೋಧಿಸಿ ನುಡಿಯಲಾಗದು, ವಂಚಿಸಿ ನುಡಿಯಲಾಗದು.
ವೇದಶಾಸ್ತ್ರ ಆಗಮ ಪುರಾಣ ಪುರಾತನರ ಚರಿತ್ರವನರಿಯದೆ
ಆದಿ ಮಧ್ಯ ಪರಿಪಕ್ವತೆಯನರಿಯದೆ,
ತರ್ಕಿಸಿ ನುಡಿಯಲಾಗದು, ದುಶ್ಚರಿತ್ರದಲ್ಲಿ ನಡೆಯಲಾಗದು.
ಆಜ್ಞಾನಕ್ರೀಯಲ್ಲಿ ವರ್ತಿಸಿ ನಡೆಯಲು
ಇಹಪರವಿಲ್ಲ, ಲಿಂಗವನರಿಯಬಾರದು,
ಲಿಂಗವಂತರನೆಂತೂ ಅರಿಯಬಾರದು.
ಅರಿಯದವಂಗೆ ಪೂಜಿಸಲೆಂತಹುದು ?
ಪೂಜೆ ಇಲ್ಲದವಂಗೆ ಭಕ್ತಿ ಎಂತಹುದು ?
ಭಕ್ತಿ ಇಲ್ಲದವಂಗೆ ಪ್ರಸಾದವೆಂತಹುದು ?
ಪ್ರಸಾದವಿಲ್ಲದವಂಗೆ ಮುಕ್ತಿ ಎಂತಹುದು ?
ಇದನರಿದು, ಲಿಂಗವಂತನು ಲಿಂಗವಂತರಲ್ಲಿ
ಸತ್ಯಸಂಭಾಷಣೆ ಯೋಗವಾದಡೆ ಕೇವಲ ಮುಕ್ತಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ. -೬/೧೫೧೧

ಲಿಂಗವಂತನು ಲಿಂಗವಿಲ್ಲದರ ಬಯಸಿದಡೆ ಆತಂಗೆ ಲಿಂಗವಿಲ್ಲ,
ಲಿಂಗವಿಲ್ಲದವನು ಆರಿಗೂ ಬಾತೆ ಅಲ್ಲ.
ಬಾತೆ ಅಲ್ಲದವಂಗೆ ಆರೂ ಸ್ನೇಹಿಸರು, ಆರು ಏನನೂ ಕೊಡರು.
ಇದು ಕಾರಣ,
ದುರಾಶೆಯಂ ಬಿಟ್ಟು ನಿರಾಶೆಯಾಗಿ ಲಿಂಗವನಾಶ್ರೈಸಿದಡೆ ಪ್ರಸಾದವಪ್ಪುದು
ಪ್ರಸಾದದಿಂದಿಹಪರ ಸಿದ್ಧಿ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. -೬/೧೫೧೨

ಲಿಂಗವಂತರ ಲಿಂಗವೆಂಬುದೇ ಶೀಲ,
ಲಿಂಗವಂತರ ರಾಣಿವಾಸವ ಲಿಂಗದ ರಾಣಿವಾಸವೆಂಬುದೇ ಶೀಲ,
ಲಿಂಗವಂತರ ಅರ್ಥ ಪ್ರಾಣ ಅಭಿಮಾನಕ್ಕೆ ತಪ್ಪದಿಪ್ಪುದೇ ಶೀಲ,
ಲಿಂಗವಂತರ ಪಾದೋದಕ ಪ್ರಸಾದ ಸೇವನೆಯ ಮಾಡುವುದೇ
ಮಹಾಶೀಲವಯ್ಯಾ,
ಇಂತಪ್ಪ ಶೀಲ ಸುಶೀಲದೊಳಗಾದ ಶೀಲವೇ ಶೀಲ.
ಈ ಕ್ರೀಯನರಿದು ನಂಬಿ ಭಯಭಕ್ತಿಯಿಂ
ತನು ಮನ ಧನದಲ್ಲಿ ದುರ್ಭಾವ ಹುಟ್ಟದೆ
ಸ್ವಭಾವ ಸದ್ಭಾವದಿಂ ಏಕಭಾವವಾದಡೆ, ಆತನೇ ಸದ್ಭಕ್ತನು.
ಅಂತಹ ಸದ್ಭಕ್ತದೇಹಿಕದೇವನಾಗಿಪ್ಪನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. -೬/೧೫೧೩

ಲಿಂಗವಂತ ಲಿಂಗವಂತ ಎಂಬಿರಿ,
ಎಂತು ಲಿಂಗವಂತರಾದಿರೋ, ಅನ್ಯದೈವದ ಭಜನೆ ಮಾಣದನ್ನಕ್ಕ ?
ಭವಿಗಳ ಸಂಗವ ಮಾಣದನ್ನಕ್ಕ, ಎಂತು ಲಿಂಗವಂತರಾದಿರೋ ನೀವು ?
ಅದೆಂತೆಂದಡೆ,
ಶಿವಾಚಾರಸಮಾಯುಕ್ತಃ ಅನ್ಯದೈವಸ್ಯ ಪೂಜನಾತ್
ಶ್ವಾನಯೋನಿಶತಂ ಗತ್ವಾ ಚಂಡಾಲಗೃಹಮಾವಿಶೇತ್
ಅಶನೇ ಶಯನೇ ಯಾನೇ ಸಂಪರ್ಕೆ ಸಹಭೋಜನೇ
ಸಂಚರಂತಿ ಮಹಾಘೋರೇ ನರಕೇ ಕಾಲಮಕ್ಷಯಂ
ಇಂತೆಂದುದಾಗಿ,
ಅನ್ಯದೈವ ಭವಿವುಳ್ಳನಕ,
ನೀವು ಲಿಂಗವಂತರೆಂದಿರೋ, ಮರುಳುಗಳಿರಾ ?
ಇದನರಿತು ಭಕ್ತಿಪಥವ ಸೇರದಿರ್ದಡೆ,
ನೀವೆಂದೆಂದಿಗೂ ಭವಭವದ ಲೆಂಕರು.
ಇದು ಕಾರಣ, ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗ
ಮುನ್ನವೇ ದೂರವಯ್ಯ. -೬/೧೫೧೪

ಲಿಂಗವಂತನು ಲಿಂಗಾಚಾರಿ ಸದಾಚಾರಿ ಭೃತ್ಯಾಚಾರಿಯೆನಿಸಿದಡೆ
ಲಿಂಗವನೊಲಿಸಬಹುದು.
ಲಿಂಗದ ನಚ್ಚು, ಲಿಂಗವಂತರ ಮೆಚ್ಚು.
ಇದು ಸತ್ಯ ಮುಕ್ತಿ ಕೇಳಿರಣ್ಣಾ.
ಲಿಂಗವಂತನು ಪರಧನ, ಪರಸ್ತ್ರೀ, ಪರದೈವಕ್ಕಳುಪಿ
ಅಲ್ಲಿಯೇ [ವರ್ತಿಸಿ]
ಮಾಹೇಶ್ವರಶೋಭೆಯಂ ಮಾಡಿಹೆನೆಂಬ,
ಮತ್ತೆ ಲಿಂಗಾರ್ಚನೆಯಂ ಮಾಡಿಹೆನೆಂಬ,
ಲಿಂಗವನೊಲಿಸಿಹೆನೆಂಬ,
ಲಿಂಗವಂತರಲ್ಲಿ ಸಲುವೆನೆಂಬ,
ಲಿಂಗವೇನು ತೊತ್ತಿನ ಮುನಿಸೆ ?
ವೇಶ್ಯೆಯ ಸರಸವೇ ?
ವೈತಾಳಿಕನ ಕಲಹವೆ ?
ತಪ್ಪಿ ನಡೆದು, ತಪ್ಪಿ ನುಡಿದು, ತಪ್ಪಿ ಕೂಡಿ
ಮರಳಿ ಮರಳಿ ಪ್ರಯೋಗಿಸುವಂತಾಗಿ, ಅಂತಲ್ಲ ಕೇಳಿರಣ್ಣಾ.
ಪತಿವ್ರತೆಯು ಸತ್ಪುರುಷನ ಕೂಡಿದಂತೆ,
ಸಜ್ಜನಮಿತ್ರರ ಸಂಗದಂತೆ,
ಮಹಾಜ್ಞಾನಿಗಳ ಅರಿವಿನಂತೆ,
ಶುದ್ಧವಾದುದನೇ ಕೂಡಿಕೊಂಡಿಪ್ಪ, ಶುದ್ಧವಿಲ್ಲದುದನೇ ಬಿಡುವ.
ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು
ಅಣುಮಾತ್ರ ತಪ್ಪ, ಕ್ಷಣಮಾತ್ರ ಸೈರಿಸ. -೬/೧೫೧೫

ಶೀಲ ಸಮಾನವಿಲ್ಲೆಂದು ಅಲಿಂಗವಂತರ ಮಗಳಿಗೆ
ಉದ್ದೇಶದಿಂದ ಲಿಂಗಸ್ವಾಯತವ ಮಾಡಲು ಆಚಾರವಲ್ಲ.
ಅದೇನು ಕಾರಣವೆಂದಡೆ, ಅದು ಶಿವಾಚಾರಕ್ಕೆ ಸಲ್ಲದಾಗಿ,
ಮುಂದೆ ಗುರೂಪದೇಶಕ್ಕೆ ದೂರವಾಗಿ.
ಚಿತ್ತಶುದ್ಧದಿಂದ ಸತ್ಯಸದಾಚಾರವ ಬಯಸಿ ಬಂದು ಕೇಳಿದಡೆ
ತನ್ನ ಕೈಯ ಧನವ ವೆಚ್ಚಿಸಿ
ಗುರುದೀಕ್ಷೆ ಲಿಂಗಸ್ವಾಯತವ ಮಾಡಿಸುವುದು ಸದಾಚಾರ.
ಈ ಗುಣವುಳ್ಳಾತನೇ ಲಿಂಗದ ವರ್ಮಿಗನು,
ಆತನೇ ಲಿಂಗದಾತೃ, ಆತನೇ ಲಿಂಗಸನ್ನಹಿತನಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. -೬/೧೫೭೫

ಲಿಂಗವಂತನು ಲಿಂಗವಿಲ್ಲದರ ಬಯಸಿದಡೆ ಆತಂಗೆ ಲಿಂಗವಿಲ್ಲ,
ಲಿಂಗವಿಲ್ಲದವನು ಆರಿಗೂ ಬಾತೆ ಅಲ್ಲ.
ಬಾತೆ ಅಲ್ಲದವಂಗೆ ಆರೂ ಸ್ನೇಹಿಸರು, ಆರು ಏನನೂ ಕೊಡರು.
ಇದು ಕಾರಣ,
ದುರಾಶೆಯಂ ಬಿಟ್ಟು ನಿರಾಶೆಯಾಗಿ ಲಿಂಗವನಾಶ್ರೈಸಿದಡೆ ಪ್ರಸಾದವಪ್ಪುದು
ಪ್ರಸಾದದಿಂದಿಹಪರ ಸಿದ್ಧಿ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. -6/1512 [1]

ಶಿವ ಶಿವಾ, ಲಿಂಗವಂತರ ಚಿತ್ತಕ್ಕೆ, ಲಿಂಗದ ಚಿತ್ತಕ್ಕೆ
ಬಹಹಾಂಗೆ ನುಡಿದು ನಡೆದು
ಸದ್ಭಕ್ತಿಯ ಮಾಡಿ ಸದ್ಭಕ್ತರೆನಿಸಿಕೊಳ್ಳಿರೆ, ಮೂಕರಾಗಿಯಿರದೆ.
ಹಿಡಿವುದ ಹಿಡಿಯದೆ, ಬಿಡುವುದ ಬಿಡದೆ ನಗೆಗೆಡೆಯಾದಿರಿ,
ಅಭಕ್ತರಾದಿರಿ, ನರಕಕ್ಕೆ ಹೋದಿರಿ.
ಹಿಡಿವುದಾವುದೆಂದಡೆ:
ಗುರು ಲಿಂಗ ಜಂಗಮ ಒಂದೆಂದು ನಂಬಿ
ಲಿಂಗವಿದ್ದುದೆಲ್ಲಾ ಲಿಂಗವೆಂದು ನಂಬಿ
ತನು ಮನ ಧನ ವಂಚನೆಯಿಲ್ಲದೆ ಅರ್ಪಿಸಿ
ಶ್ರೀಗುರುಲಿಂಗಜಂಗಮದ ಶ್ರೀಪಾದವನು
ತನು ಮನ ಧನದಲ್ಲಿ ಹಿಡಿವುದು.
ಪರಸ್ತ್ರೀ ಪರಧನ ಪರದೈವವನು, ಮನೋವಾಕ್ಕಾಯದಲ್ಲಿ
ಅಣುರೇಣು ಮಾತ್ರ ಆಸೆದೋರದೆ ಬಿಡುವುದು.
ಇವ ಬಿಟ್ಟು ನಡೆದುದೆ ನಡೆ, ಇವ ಬಿಟ್ಟೆನೆಂಬ ಸತ್ಯದ ನುಡಿಯೇ ನುಡಿ.
ಇದೇ ಆಚಾರ, ಇದೇ ವ್ರತ, ಇದೇ ಶೀಲ
ಇದೇ ಭಕ್ತಿಯ ಕುಳ, ಇದೇ ಶಿವಭಕ್ತಿಸ್ಥಳ
ಇದೇ ಸತ್ಕ್ರಿಯಾ, ಈ ಸತ್ಕ್ರಿಯೆಯಲ್ಲಿ ನಡೆದಾತನೇ ಭಕ್ತನು.
ಆತನೇ ಮುಕ್ತನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. -6/1572 [1]

ಶೀಲ ಸಮಾನವಿಲ್ಲೆಂದು ಅಲಿಂಗವಂತರ ಮಗಳಿಗೆ
ಉದ್ದೇಶದಿಂದ ಲಿಂಗಸ್ವಾಯತವ ಮಾಡಲು ಆಚಾರವಲ್ಲ.
ಅದೇನು ಕಾರಣವೆಂದಡೆ, ಅದು ಶಿವಾಚಾರಕ್ಕೆ ಸಲ್ಲದಾಗಿ,
ಮುಂದೆ ಗುರೂಪದೇಶಕ್ಕೆ ದೂರವಾಗಿ.
ಚಿತ್ತಶುದ್ಧದಿಂದ ಸತ್ಯಸದಾಚಾರವ ಬಯಸಿ ಬಂದು ಕೇಳಿದಡೆ
ತನ್ನ ಕೈಯ ಧನವ ವೆಚ್ಚಿಸಿ
ಗುರುದೀಕ್ಷೆ ಲಿಂಗಸ್ವಾಯತವ ಮಾಡಿಸುವುದು ಸದಾಚಾರ.
ಈ ಗುಣವುಳ್ಳಾತನೇ ಲಿಂಗದ ವರ್ಮಿಗನು,
ಆತನೇ ಲಿಂಗದಾತೃ, ಆತನೇ ಲಿಂಗಸನ್ನಹಿತನಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. -6/1575 [1]

ಲಿಂಗವಂತನು ಲಿಂಗಾಚಾರಿ ಸದಾಚಾರಿ ಭೃತ್ಯಾಚಾರಿಯೆನಿಸಿದಡೆ
ಲಿಂಗವನೊಲಿಸಬಹುದು.
ಲಿಂಗದ ನಚ್ಚು, ಲಿಂಗವಂತರ ಮೆಚ್ಚು.
ಇದು ಸತ್ಯ ಮುಕ್ತಿ ಕೇಳಿರಣ್ಣಾ.
ಲಿಂಗವಂತನು ಪರಧನ, ಪರಸ್ತ್ರೀ, ಪರದೈವಕ್ಕಳುಪಿ
ಅಲ್ಲಿಯೇ ವರ್ತಿಸಿ
ಮಾಹೇಶ್ವರಶೋಭೆಯಂ ಮಾಡಿಹೆನೆಂಬ,
ಮತ್ತೆ ಲಿಂಗಾರ್ಚನೆಯಂ ಮಾಡಿಹೆನೆಂಬ,
ಲಿಂಗವನೊಲಿಸಿಹೆನೆಂಬ,
ಲಿಂಗವಂತರಲ್ಲಿ ಸಲುವೆನೆಂಬ,
ಲಿಂಗವೇನು ತೊತ್ತಿನ ಮುನಿಸೆ ?
ವೇಶ್ಯೆಯ ಸರಸವೇ ?
ವೈತಾಳಿಕನ ಕಲಹವೆ ?
ತಪ್ಪಿ ನಡೆದು, ತಪ್ಪಿ ನುಡಿದು, ತಪ್ಪಿ ಕೂಡಿ
ಮರಳಿ ಮರಳಿ ಪ್ರಯೋಗಿಸುವಂತಾಗಿ, ಅಂತಲ್ಲ ಕೇಳಿರಣ್ಣಾ.
ಪತಿವ್ರತೆಯು ಸತ್ಪುರುಷನ ಕೂಡಿದಂತೆ,
ಸಜ್ಜನಮಿತ್ರರ ಸಂಗದಂತೆ,
ಮಹಾಜ್ಞಾನಿಗಳ ಅರಿವಿನಂತೆ,
ಶುದ್ಧವಾದುದನೇ ಕೂಡಿಕೊಂಡಿಪ್ಪ, ಶುದ್ಧವಿಲ್ಲದುದನೇ ಬಿಡುವ.
ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು
ಅಣುಮಾತ್ರ ತಪ್ಪ, ಕ್ಷಣಮಾತ್ರ ಸೈರಿಸ. -6/1515 [1]

ಲಿಂಗವನರಿದ ಲಿಂಗವಂತನು ಸರ್ವಾಂಗಲಿಂಗಮೂರ್ತಿ.
ಆತನ ನುಡಿಯೆ ವೇದ, ಆತನ ನಡೆಯೆ ಶಾಸ್ತ್ರ ಪುರಾಣ ಆಗಮ ಚರಿತ್ರವು.
ಆ ಮಹಾಮಹಿಮನ ನುಡಿಯಲ್ಲಿ ತರ್ಕವ ಮಾಡಲಾಗದು.
ನಡೆಯಲ್ಲಿ ನಾಸ್ತಿಕವ ಮಾಡಿದಡೆ ನರಕ ತಪ್ಪದಯ್ಯಾ.
ಲಿಂಗವನರಿದ ಮಹಾಮಹಿಮಂಗೆ ನಮೋ ನಮೋ ಎಂಬೆನು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. -6/1519 [1] ವೇದಮಾರ್ಗವ ಮೀರಿದರು ಮಹಾವೇದಿಗಳು ಲಿಂಗವಂತರು,
ಲಿಂಗವಂತರ ಮಹಾವೇದಮಾರ್ಗವ ಲಿಂಗವೇ ಬಲ್ಲನಯ್ಯಾ.
ಶಾಸ್ತ್ರಮಾರ್ಗವ ಮೀರಿದರು ಮಹಾಶಾಸ್ತ್ರಜ್ಞರು ಲಿಂಗವಂತರು,
ಲಿಂಗವಂತರ ಮಹಾಶಾಸ್ತ್ರಮಾರ್ಗವಲಿಂಗವೇ ಬಲ್ಲನಯ್ಯಾ.
ಆಗಮಕ್ರೀಯ ಮೀರಿದರು ಮಹಾ ಆಗಮಿಕರು ಲಿಂಗವಂತರು,
ಲಿಂಗವಂತರ ಮಹಾ ಆಗಮಕ್ರೀಯ ಲಿಂಗವೇ ಬಲ್ಲನಯ್ಯಾ.
ಪುರಾಣದ ಪರಿಯ ಮೀರಿದರು ಮಹಾಪುರಾಣಿಕರು ಲಿಂಗವಂತರು,
ಲಿಂಗವಂತರ ಪುರಾಣದ ಪರಿಯ ಆ ಲಿಂಗವೇ ಬಲ್ಲನಯ್ಯಾ.
ದೇವ ದಾನಮಾನವರಿಗೆಯೂ ಅರಿಯಬಾರದು.
ವೇದಶಾಸ್ತ್ರಪುರಾಣಾನಿ ಸ್ಪಷ್ಟಂ ವೇಶ್ಯಾಂಗನಾ ಇವ
ಯಾ ಪುನಶ್ಯಾಂಕರೀ ವಿದ್ಯಾ ಗುಪ್ತಾ ಕುಲವಧೂರಿವ
ಎಂದುದಾಗಿ,
ಆರಿಗೆಯೂ ಅರಿಯಬಾರದು.
ಲಿಂಗವಂತರು ಉಪಮಾತೀತರು, ವಾಙ್ಮನೋತೀತರು, ಆರ ಪರಿಯೂ ಇಲ್ಲ.
ಸ್ವೇಚ್ಛಾವಿಗ್ರಹೇಣೈವ ಸ್ವೇಚ್ಛಾಚಾರಗಣೇಶ್ವರಾ:
ಶಿವೇನ ಸಹ ತೇ ಭುಙ್ತ್ವಾ ಭಕ್ತಾ ಯಾಂತಿ ಶಿವಂ ಪದಂ
ಲೋಕಚಾರನಿಬಂಧೇನ ಲೋಕಾಲೋಕಾವಿವರ್ಜಿತಾ:
ಲೋಕಾಚಾರಂ ಪರಿತ್ಯಜ್ಯ ಪ್ರಾಣಲಿಂಗಪ್ರಸಾದಿನ:
ಎಂದುದಾಗಿ,
ಈ ಲೋಕದ ಮಾರ್ಗವ ನಡೆಯರು, ಲೋಕದ ಮಾರ್ಗವ ನುಡಿಯರು.
ಲಿಂಗವಂತರ ನಡೆ ನುಡಿ ಆಚಾರ ಅನುಭವ ಆಯತ ಬೇರೆ ಕಾಣಿರಣ್ಣಾ.
ಶ್ರೀಗುರು ಲಿಂಗದಿಂದಲುದಯಿಸಿ ಪ್ರಾಣಲಿಂಗಸಂಭಂಧಿಗಳಾದ ಮಹಾಲಿಂಗವಂತರಿಗೆ
ಪ್ರಾಣಲಿಂಗ, ಕಾಯಲಿಂಗ ಭಕ್ತಕಾಯ ಮಮಕಾಯವಾಗಿ ದೇಹಾದಿ ತತ್ತ್ವವೆಲ್ಲಾ ಶಿವತತ್ತ್ವ,
ಇದು ಕಾರಣ.
ಸರ್ವಾಂಗಲಿಂಗಮಹಾಮಹಿಮ ಲಿಂಗವಂತರ ಕ್ರೀಯೆಲ್ಲವೂ ಲಿಂಗಕ್ರೀ.
ಮುಟ್ಟಿದುದೆಲ್ಲಾ ಅರ್ಪಿತ, ಕೊಂಡುದುದೆಲ್ಲಾ ಪ್ರಸಾದ.
ಸದ್ಯೋನ್ಮುಕ್ತರು, ಸರ್ವಾಂಗಲಿಂಗವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. -6/1539

[1] ಈ ತರಹದ ಸಂಖ್ಯೆಯ ವಿವರ: ಸವಸ-1/653 :- ಸಮಗ್ರ ವಚನ ಸಂಪುಟದ ಸಂಖ್ಯೆ -1, ವಚನ ಸಂಖ್ಯೆ-1653 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous *ಲಿಂಗದೇವ* ಲಿಂಗಾಯತರ ದೇವರ ಹೆಸರು. ಲಿಂಗಾಯತರಲ್ಲಿ ದೇಹವೇ ದೇವಾಲಯ Next