Previous ವೀರಶೈವರೇ ಲಿಂಗಾಯತ ಸಮಾಜವನ್ನು ನುಂಗಬೇಡಿರಿ ಲಿಂಗಾಯತ, ವೀರಶೈವ Next

ಕರ್ನಾಟಕದ ಶರಣ ಜಂಗಮರ ಮೇಲೆ ಆಂಧ್ರದ ಆರಾಧ್ಯ ಜಂಗಮರ ಸವಾರಿ

*

✍ ಡಾ. ಎಂ. ಎಂ. ಕಲಬುರ್ಗಿ.

ಕರ್ನಾಟಕದ ಶರಣ ಜಂಗಮರ ಮೇಲೆ ಆಂಧ್ರದ ಆರಾಧ್ಯ ಜಂಗಮರ ಸವಾರಿ

ಇತ್ತೀಚೆಗೆ ಶಿವಯೋಗ ಮಂದಿರದಲ್ಲಿ ಈ ಶತಮಾನದ ಬಹುದೊಡ್ಡ ಯಶಸ್ವಿ ಸಮಾರಂಭವೊಂದು ಜರುಗಿತು. ಇದರ ಫಲವಾಗಿ ಪ್ರಜಾವಾಣಿ ಪತ್ರಿಕೆಯಲ್ಲಿ ಉದ್ಭವಿಸಿದ ಸಂವಾದದಲ್ಲಿ ಪಂಚಾಚಾರ‍್ಯರನ್ನು ವಿರೋಧಿಸಿ ಎಲ್ಲ ಸಮಾಜದ ಎಲ್ಲ ಸ್ತರದವರು ಬರೆದರೆ, ಅವರ ಪರವಾಗಿ ಬರೆದವರು ಕೇವಲ ವೀರಶೈವ ವಿದ್ವಾಂಸ ಜಂಗಮರೆಂಬುದು ಗಮನಿಸಬೇಕಾದ ಅಂಶವಾಗಿದೆ.

೧೨ನೆಯ ಶತಮಾನದ ಶರಣ ಚಳುವಳಿಯೆಂಬ ಕುದಿಯುವ ಪಾತ್ರೆಯಲ್ಲಿ ಅನೇಕ ಮತ-ಪಂಥಗಳು ಕರಗಿ ಹೋದವು. ಬಳಿಕ ಅದರ ಒಡಲಿನಿಂದ ಶರಣಸಿದ್ಧಾಂತದ ಪ್ರಸಾರ ಪ್ರತಿನಿಧಿಗಳೆಂಬಂತೆ ಕರ್ನಾಟಕದ ಹಳ್ಳಿ-ಪಟ್ಟಣಗಳಲ್ಲಿ ಶರಣ ಜಂಗಮರು ತಲೆಯೆತ್ತಿ ನಿಂತರು. ಇಂದಿಗೂ ಇವರ ಮಠಗಳಲ್ಲಿರುವ ಕನ್ನಡ ಸಂಸ್ಕೃತ ತಾಳೆಗರಿ ಗ್ರಂಥ, ಕಾಗದಪತ್ರಗಳು, “ಶ್ರೀಗುರು ಬಸವಲಿಂಗಾಯ ನಮಃ” ಎಂಬ ಒಕ್ಕಣಿಕೆಯಿಂದಲೇ ಆರಂಭವಾಗುವುದು, ಷಡಕ್ಷರಿದೇವ-ಬಾಳೆಹಳ್ಳಿ ಪೀಠದ ಕುಮಾರ ಚೆನ್ನಬಸವ ಮೊದಲು ಮಾಡಿ ಎಲ್ಲ ಗುರುವರ್ಗದ ಮಠಾಧೀಶರು ಹೆಚ್ಚಾಗಿ ಶರಣರನ್ನೇ ಕುರಿತು ಸಾಹಿತ್ಯ ಬರೆದುದು ಇದಕ್ಕೆ ನಿದರ್ಶನ.

ಈ ಬಸವನಿಷ್ಠ ಧೋರಣೆ ಮುಂದುವರಿಯುತ್ತಿದ್ದಂತೆಯೇ ವಿಜಯನಗರ ಸಾಮ್ರಾಜ್ಯ ಸಂದರ್ಭದಲ್ಲಿ ನೆರೆಯ ಆಂಧ್ರದ ಆರಾಧ್ಯ ಜಂಗಮರು ರಾಜಧಾನಿ ಹಂಪಿಯ ಮೂಲಕ ದೊಡ್ಡ ಪ್ರಮಾಣದಲ್ಲಿ ಕರ್ನಾಟಕವನ್ನು ಪ್ರವೇಶಿಸಿ, ಬಳಿಕ ವಿಜಯನಗರದ ಮುಂದುವರಿಕೆಯಾದ ಕೆಳದಿ, ಮೈಸೂರು ರಾಜ್ಯಗಳಲ್ಲಿ ಶಾಶ್ವತ ನೆಲೆನಿಂತರು. ಇದರಿಂದಾಗಿ ನಮ್ಮ ನಾಡಿನಲ್ಲಿ ಶರಣ ಜಂಗಮರು, ಆರಾಧ್ಯ ಜಂಗಮರೆಂಬ ಎರಡು ಸಮಾಜಗಳು ಅಸ್ತಿತ್ವಕ್ಕೆ ಬಂದವು. ಇವರಿಬ್ಬರ ಎದೆಯ ಮೇಲಿರುವ ಲಿಂಗ, ಇವೆರಡೂ ಪಕ್ಷಗಳು ಒಂದೇ ಎಂಬ ಭ್ರಮೆ ಹುಟ್ಟಿಸಿತು. ನಿಜಸ್ಥಿತಿಯೆಂದರೆ, ಶರಣ ಜಂಗಮರ ಎದೆಯ ಮೇಲಿನದು ತನ್ನೊಳಗಿನ ಆತ್ಮಲಿಂಗದ ಪ್ರತೀಕವಾದರೆ, ಆರಾಧ್ಯ ಜಂಗಮರ ಎದೆಯ ಮೇಲಿನದು ದೇವಾಲಯದೊಳಗಿನ ದೊಡ್ಡ ಸ್ಥಾವರಲಿಂಗದ ಸಣ್ಣ ಪ್ರತೀಕ. ಪ್ರವಾಸ ಪ್ರಸಂಗದಲ್ಲಿ ಮಾರ್ಗಮಧ್ಯದ ಪೂಜೆಗಾಗಿ ಅದನ್ನು ಕೊರಳಿಗೋ, ತೋಳಿಗೋ ಕಟ್ಟಿಕೊಂಡು ಹೋಗುತ್ತಿದ್ದ ಆರಾಧ್ಯರು, ಪ್ರವಾಸ ಮುಗಿದೊಡನೆ ಬಿಚ್ಚಿ ಮತ್ತೆ ಮನೆಯ ಜಗುಲಿಯ ಮೇಲಿಡುತ್ತಿದ್ದರು. ಅಂದರೆ ಇವರಿಗೆ ಕೊರಳಲ್ಲಿ ಜನಿವಾರ ಕಡ್ಡಾಯ, ಲಿಂಗ ಐಚ್ಛಿಕವಾಗಿದ್ದಿತು.

ಕರ್ನಾಟಕಕ್ಕೆ ಕಾಲಿಟ್ಟ ಇವರಲ್ಲಿ ಕೆಲವರು ಇಲ್ಲಿಯ ಶರಣ ಜಂಗಮರೊಂದಿಗೆ ಹೊಂದಿಕೊಂಡು ಬಾಳುವ ಸಲುವಾಗಿ ತಮ್ಮ ಕಡ್ಡಾಯ ಜನಿವಾರದ ಜೊತೆ ಐಚ್ಛಿಕ ಲಿಂಗವನ್ನೂ ಕಡ್ಡಾಯವಾಗಿ ಕಟ್ಟಿಕೊಂಡರೆ, ಮುಂದಿನ ದಿನಗಳಲ್ಲಿ ಇನ್ನೂ ಹೊಂದಿಕೊಂಡು ಬಾಳುವ ಸಲುವಾಗಿ ಕೆಲವರು ಜನಿವಾರ ತ್ಯಜಿಸಿ, ಎದೆಯ ಮೇಲೆ ಲಿಂಗವೊಂದನ್ನೇ ಉಳಿಸಿಕೊಂಡರು. ಇಂಥ ಎರಡೂ ಬಗೆಯ ಅಂದರೆ ಜನಿವಾರದ ಜೊತೆ ಲಿಂಗವನ್ನು ಮತ್ತು ಕೇವಲ ಲಿಂಗವನ್ನು ಧರಿಸುವ ಆರಾಧ್ಯ ಜಂಗಮರು (ಇವರಿಬ್ಬರ ಮನೆಯಲ್ಲಿ ತೆಲುಗು ಜೀವಂತವಿದೆ) ಮೈಸೂರು ಪ್ರದೇಶದಲ್ಲಿ ಈಗಲೂ ಇದ್ದಾರೆ. ಇವರಲ್ಲಿ ಕೊರಳ ಲಿಂಗವನ್ನು ಮಾತ್ರ ಉಳಿಸಿಕೊಂಡ ಆರಾಧ್ಯ ಜಂಗಮರು ತಮ್ಮ ಸಾಂಪ್ರದಾಯಿಕ ವೇದಘೋಷ, ಹೋಮ, ಹವನ, ಸಂಸ್ಕೃತ ಧರ್ಮಗ್ರಂಥ, ಪರಂಪರೆಯ ಸುಳ್ಳು ಪ್ರಾಚೀನತೆ ಇತ್ಯಾದಿಗಳನ್ನು ಮುಂದೊಡ್ಡಿ, ಶರಣ ಜಂಗಮರಲ್ಲಿ ಹುಸಿಪ್ರತಿಷ್ಠೆಯ ಭ್ರಮೆ ಹುಟ್ಟಿಸಿದರು. ೧೨ನೆಯ ಶತಮಾನದಲ್ಲಿ ಕಳೆದುಕೊಂಡಿದ್ದ ನಕುಲೀಶ, ಪಾಶುಪತ, ಮಹಾವ್ರತಿ, ಶುದ್ಧ ಶೈವಗಳೆಂಬ ನಾಲ್ಕು ಶೈವಗಳ ಮರುಹುಟ್ಟು ಎಂಬಂತೆ ೧೬ನೆಯ ಶತಮಾನದಲ್ಲಿ ಹೊಸದಾಗಿ ನಾಲ್ಕು ಆಚಾರ್ಯ ಪೀಠಗಳನ್ನು ಕಲ್ಪಿಸಿ, ಶರಣ ಜಂಗಮರ ಮಠಗಳನ್ನು ಹಂಚಿಕೊಂಡು, ಹೊಸ ಬಗೆಯ ಮತೀಯ ವ್ಯವಸ್ಥೆಯನ್ನು ರೂಢಿಸಿದರು.

ಇವರು ನಿತ್ಯ ಪಠಿಸುವ ರೇಣುಕಾರಾಧ್ಯನ ನೂರೆಂಟು ನಾಮಾವಳಿಯಲ್ಲಿರುವ “ಲಿಂಗಯಜ್ಯೋಪವೀತಯೇ ನಮಃ” ಎಂಬ, ಮರುಳಾರಾಧ್ಯನ ನೂರೆಂಟು ನಾಮಾವಳಿಯಲ್ಲಿರುವ “ಶಿಖಾಯಜ್ಯೋಪವೀತಿನೇ ನಮಃ” ಎಂಬ ವಾಕ್ಯಗಳನ್ನು ನೋಡಿದರೆ ಯಜ್ಯೋಪವೀತ, ಲಿಂಗ, ಜುಟ್ಟು ಮನ್ನಿಸುವ ಇವರಿಗೂ, ಕೇವಲ ಇಷ್ಟಲಿಂಗಧಾರಿಗಳಾದ ಶರಣ ಜಂಗಮರಿಗೂ ಸಂಬಂಧವಿಲ್ಲವೆಂದು ಸ್ಪಷ್ಟವಾಗುತ್ತದೆ.

೧೬೦೬ರ ಗುಮ್ಮಳಾಪುರ ಶಾಸನವು “ಭಾರದ್ವಾಜಗೋತ್ರದ ಪಡಿವಿಡಿ ವರ್ಗದ ಕೊಲ್ಲಿಪಾಕಿ ರೇವಣಸಿದ್ಧೇಶ್ವರ ಸಂಪ್ರದಾಯದವರಾದ ಗುಮ್ಮಳಾಪುರ ಸಿಂಹಾಸನ ಕರ್ತರಾದ” ಎಂದು ನಂಜಯ್ಯದೇವರನ್ನು ವರ್ಣಿಸಿದೆ. ಹೀಗೆಯೇ ಈ ಆರಾಧ್ಯ ಜಂಗಮರಿಗೆ ಭಾರದ್ವಾಜ, ಅತ್ರಿ ಮೊದಲಾದ ಗೋತ್ರಗಳು ಶಾಸನಗಳಲ್ಲಿ ೧೮ನೆಯ ಶತಮಾನದ ವರೆಗೂ ಕಂಡುಬರುತ್ತಿದ್ದು, ಇತ್ತೀಚೆಗೆ ಇವುಗಳಿಗೆ ಬದಲು ವೀರ, ನಂದಿ, ಶೃಂಗಿ, ವೃಷಭ, ಸ್ಕಂದ ಗೋತ್ರಗಳನ್ನು ಕಲ್ಪಿಸಿಕೊಂಡಿದ್ದಾರೆ. ಇಂಥ ವೈದಿಕಗೋತ್ರವಾದಿಗಳನ್ನು “ಗೋತ್ರ ಮಾದರ ಚೆನ್ನಯ್ಯನೆಂದು ಹೇಳಿರಯ್ಯ” ಎಂಬ ನಿಲುವಿನ ಲಿಂಗಾಯತರೆನ್ನಬಹುದೇ? ಈ ಬ್ರಾಹ್ಮಣ್ಯ ಕಾರಣವಾಗಿಯೇ ಇವರು ಸೊಲ್ಲಾಪುರ ವಾರದ ಮಲ್ಲಪ್ಪನವರ ಹಣ ಬಳಸಿಕೊಂಡು ತಮ್ಮ ಪ್ರಕಟಣೆಗಳಿಗೆ “ಲಿಂಗಿ ಬ್ರಾಹ್ಮಣ ಗ್ರಂಥಮಾಲೆ” ಎಂಬ ಹೆಸರಿಟ್ಟಿದ್ದರು.

ಇವರು ಶರಣ ಜಂಗಮರೊಂದಿಗಿನ ಸಂಬಂಧವನ್ನು ಇನ್ನೂ ಗಟ್ಟಿಗೊಳಿಸಿ ಕೊಳ್ಳಲು, ತಮ್ಮ ಪ್ರಾಚೀನತೆಯನ್ನು ೧೨ನೆಯ ಶತಮಾನದಷ್ಟು ಹಿಂದೆ ಸಾಧಿಸಿಕೊಳ್ಳಲು, ನಾಲ್ಕು ಜನ ಅಪ್ರಸಿದ್ಧ ಶರಣರ ಹೆಸರಿನಲ್ಲಿ ಚತುರಾಚಾರರ ಹೆಸರು ಸೇರಿಸಿದ ೪-೫ ಕೃತಕ ವಚನ ಬರೆದರು. ಚತುರಾಚಾರರು ಅಷ್ಟು ಪೂರ್ವದಲ್ಲಿ ಪ್ರಸಿದ್ಧರೇ ಆಗಿದ್ದರೆ ೧೨ನೆಯ ಶತಮಾನದ ಮಿಕ್ಕ ಪ್ರಸಿದ್ಧ ಶರಣರಾದ ಬಸವ, ಅಲ್ಲಮ, ಚೆನ್ನಬಸವರೇಕೆ ಇವರನ್ನು ಹೆಸರಿಸಲಿಲ್ಲ? ೧೩ನೆಯ ಶತಮಾನದ ಹರಿಹರ ರಾಘವಾಂಕ, ೧೪ನೆಯ ಶತಮಾನದ ಭೀಮಕವಿ, ೧೫ನೆಯ ಶತಮಾನದ ಮಗ್ಗೆಯ ಮಾಯಿದೇವ, ಲಕ್ಕಣದಂಡೇಶ, ಮಹಾಲಿಂಗದೇವ, ಜಕ್ಕಣಾರ, ಕಲ್ಲುಮಠದ ಪ್ರಭುದೇವ, ಚಾಮರಸರು ಇವರನ್ನು ಕುರಿತು ಸ್ವತಂತ್ರಕೃತಿ ರಚಿಸುವುದು ಹೋಗಲಿ, ಪ್ರಾಸಂಗಿಕವಾಗಿಯೂ ಏಕೆ ಪ್ರಸ್ತಾಪ ಮಾಡುವುದಿಲ್ಲ? ಕೃತಿ ಪ್ರಾರಂಭದಲ್ಲಿ ಸ್ತುತಿಯನ್ನು ಏಕೆ ಮಾಡಿಲ್ಲ? ಹರಿಹರ ಬರೆದಿರುವ ರಗಳೆಯು ಚತುರಾಚಾರ ಒಕ್ಕೂಟದ ರೇವಣಾರಾಧ್ಯನನ್ನು ಕುರಿತುದಲ್ಲ; ಶೈವ ನಾಥಪಂಥೀಯ ರೇವಣಸಿದ್ಧನನ್ನು ಕುರಿತುದಾಗಿದೆ. ಹರಿಹರನ ಸಮಕಾಲೀನನಾದ ಪ್ರಸಿದ್ಧ ನಾಗನಾಥಾಚಾರ ತನ್ನ ಸುಪ್ರಸಿದ್ಧ “ವೀರಮಾಹೇಶ್ವರಾಚಾರ ಸಂಗ್ರಹ'ದ ಪೀಠಿಕೆಯಲ್ಲಿ ದೇವತಾಸ್ತುತಿ ಮುಗಿಸುತ್ತಲೇ “ನಮೋ ಬಸವರಾಜಾಯ” ಎಂದು ಮೊದಲಾಗಿ ೪-೫ ಜನ ಶರಣರನ್ನು ನೆನೆಯುವನೇ ಹೊರತು, ಚತುರಾಚಾರ‍್ಯರನ್ನಲ್ಲ. ಇದು, ಈ ಹೊತ್ತಿಗೆ ಚತುರಾಚಾರ‍್ಯರ ಪರಿಕಲ್ಪನೆ ಇನ್ನೂ ಹುಟ್ಟಿರಲಿಲ್ಲವೆಂದೇ ಸೂಚಿಸುತ್ತದೆ. ಇಷ್ಟೇ ಏಕೆ, ಸಂಪಾದನೆಯ ಪರ್ವತೇಶನು ತಾನು ಚತುರಾಚಾರ‍್ಯ ಪುರಾಣ ಬರೆಯುತ್ತಿದ್ದರೂ ಆರಂಭದ ದೇವತಾ ಸ್ತುತಿ ಮುಗಿಯುತ್ತಲೇ ಬಸವಾದಿ ಶರಣರನ್ನು ಸ್ಮರಿಸುವುದು, ಈ ಪುರಾಣ ರಚಿಸುವ ಕಾಲದಲ್ಲಿಯೂ (೧೬೯೮) ಮಿಕ್ಕ ಧಾರ್ಮಿಕ ಪುರುಷರಿಗಿಂತ ಶರಣರಿಗೇ ಪೂಜ್ಯಸ್ಥಾನ ಸಲ್ಲಿಸುತ್ತಿದ್ದುದನ್ನು ಸೂಚಿಸುತ್ತದೆ.

ಈ ಚತುರಾಚಾರ‍್ಯರನ್ನು ಕುರಿತು ಸಣ್ಣ ಪ್ರಸ್ತಾಪ ಮೊದಲ ಬಾರಿ ಬರುವುದು ೧೫೩೦ರ ಗುಬ್ಬಿ ಮಲ್ಲಣ್ಣನ ವೀರಶೈವಾಮೃತ ಮಹಾಪುರಾಣದಲ್ಲಿ. ಆಮೇಲೆ ಈ ನಾಲ್ವರನ್ನು ಕುರಿತ ಮೊದಲ ಸ್ವತಂತ್ರ ಕೃತಿಯೆಂದರೆ ೧೬೯೮ರಲ್ಲಿ ಸಂಪಾದನೆಯ
ಪರ್ವತೇಶ ಬರೆದ ಚತುರಾಚಾರ್ಯ ಪುರಾಣ. ಆಶ್ಚರ್ಯದ ಸಂಗತಿಯೆಂದರೆ ಇಂದು ಚತುರಾಚಾರ‍್ಯರಲ್ಲಿ ಪರಿಗಣಿತನಾಗಿರುವ ಶ್ರೀಶೈಲಪೀಠದ ಮಲ್ಲಿಕಾರ್ಜುನ ಪಂಡಿತಾರಾಧ್ಯನನ್ನು ಬಿಟ್ಟು, ಶಿವಲೆಂಕ ಮಂಚಣ್ಣ ಪಂಡಿತಾರಾಧ್ಯನನ್ನು ಸೇರಿಸಿದ್ದಾನೆ. ಈ ಗೊಂದಲವನ್ನು ನೋಡಿದರೆ ಇವನ ಕಾಲದ (೧೭ನೆಯ ಶತಮಾನದವರೆಗೂ ಚತುರಾಚಾರ‍್ಯ ಒಕ್ಕೂಟದಲ್ಲಿ ಯಾರ ಹೆಸರು ಸೇರಿಸಬೇಕೆಂಬ ಬಗ್ಗೆ ಇವರಲ್ಲಿಯೇ ಒಂದು ನಿಶ್ಚಿತ ನಿಲುವು ಇರಲಿಲ್ಲವೆನಿಸುತ್ತದೆ. ಇಷ್ಟೇ ಏಕೆ? ಮಿಕ್ಕ ಕೃತಿಗಳಲ್ಲಿಯೂ ಈ ಗೊಂದಲ ಕಂಡುಬರುತ್ತದೆ. ಮುಂದಿನ ದಿನಗಳಲ್ಲಿ ಕಾಶಿಪೀಠವನ್ನು ಸೇರಿಸಿ, ಪಂಚಾಚಾರ್ಯ ವರ್ತುಲವನ್ನು ಪೂರ್ಣಗೊಳಿಸಿ, ಅಧಿಕೃತತೆಯ ಸಲುವಾಗಿ ಈ ಕಲ್ಪಿತಪೀಠ ಸಂಗತಿಗಳನ್ನು ಆಗಮಗಳಲ್ಲಿ ಸೇರಿಸಿದರು. ಕರ್ನಾಟಕದ ಹೊರಗೆ ಸಿಗುವ ಆಗಮ ಹಸ್ತಪ್ರತಿಗಳಲ್ಲಿ ಈ ಸಂಗತಿಗಳಿಲ್ಲವೆಂದು ತಿಳಿದುಬಂದಿದೆ. ಸಾಲದುದಕ್ಕೆ ಸಿದ್ಧಾಂತ ಶಿಖಾಮಣಿಯೆಂಬ ಪೂರಕ ಗ್ರಂಥ ರಚಿಸಿ, ಒಂದು ಧರ್ಮಕ್ಕೆ ಬೇಕಾಗುವ ಧರ್ಮಾಧಿಕಾರಿ, ಧರ್ಮಗ್ರಂಥ, ಧಾರ್ಮಿಕ ಕೇಂದ್ರಗಳೆಂಬ ಮಠ, ಶರಣಜಂಗಮರ ಅನುಯಾಯಿತ್ವ ಇತ್ಯಾದಿಗಳನೆಲ್ಲ ಜೋಡಿಸಿಕೊಂಡರು. ಹೀಗೆ ಒಳಗಿನ ಶರಣಜಂಗಮರು ಪ್ರಜಾಧರ್ಮವಾಗಿರುವ ತಮ್ಮ ಶರಣ ಪರಂಪರೆಯನ್ನು ಬಲಿಕೊಟ್ಟು, ಹೊರಗಿನ ಈ ಪುರೋಹಿತಶಾಹಿ ಜಂಗಮರನ್ನು ಸ್ವಾಗತಿಸಿದರು.

ಈ ಎಲ್ಲ ಚಟುವಟಿಕೆಗಳ ಪರಿಣಾಮವಾಗಿ ಉಜ್ಜಯಿನಿಯ ಸಾದಲಿಂಗಾಯತರ ಒಡೆತನದ ಮಲ್ಲಿಕಾರ್ಜುನ ಕ್ಷೇತ್ರವು ಮರುಳಾರಾಧ್ಯ ಪೀಠವಾದುದೂ, ಮುಕ್ತಿಮುನಿನಾಥ ಪರಂಪರೆಯ ಬಾಳೆ ಹಳ್ಳಿಯ ನಾಥ ಕ್ಷೇತ್ರವು ರೇವಣಾರಾಧ್ಯಪೀಠವಾದುದೂ ಇತಿಹಾಸವನ್ನು ಮುಚ್ಚಿ ಹಾಕಿದ ಸಂಗತಿಗಳಾಗಿವೆ. ಕಾಶಿಯ ಗೋಸಾವಿಮಠ ಕಿತ್ತುಕೊಂಡು, ನರೇಶ ಜಯನಂದನ ಮಹಾರಾಜನ ದತ್ತಿ ಇತ್ಯಾದಿ ದಾಖಲೆಗಳನ್ನು ಸೃಷ್ಟಿಸಿದುದು, ಮಲ್ಲಿಕಾರ್ಜುನ ಜಂಗಮ ಗೋಸಾವಿ ಇತ್ಯಾದಿ ಗುರುಗಳ ಹೆಸರನ್ನು ಮಲ್ಲಿಕಾರ್ಜುನ ಶಿವಾಚಾರ್ಯರೆಂದು ಬದಲಾಯಿಸಿರುವುದು, ಈ ಪೀಠವು ವೀರಶೈವರ ಕೈಗೆ ಬಂದು ಕೇವಲ ೯ ತಲೆಮಾರು ಗತಿಸಿದ್ದರೂ ೮೬ ತಲೆಮಾರುಗಳ ಪಟ್ಟಿ ಪ್ರಕಟಿಸಿದುದು, ಸುಳ್ಳಿನ
ಕಂತೆಗಳೇ ಸರಿ.

ಶರಣರು ಗುರುಮಾರ್ಗಿಗಳು, ಪಂಚಾಚಾರ್ಯರು ಆಚಾರ್ಯಮಾರ್ಗಿಗಳು. ಹೀಗಾಗಿ ಅವರು ಜಗದ್ಗುರುಗಳು, ಇವರು ಜಗದಾಚಾರ‍್ಯರು. ಹೀಗಿದ್ದೂ ೧೯ನೆಯ ಶತಮಾನದಿಂದ ಇವರು ತಮ್ಮನ್ನು ಜಗದ್ಗುರುಗಳೆಂದು ಕರೆದುಕೊಂಡುದು ತಾತ್ವಿಕ ವಿರೋಧವಾಗಿದೆ. ಇವರು ಜಗದ್ಗುರು ವಿಶೇಷಣ ಬಳಸಬಾರದೆಂದು ಕಳೆದ ಶತಮಾನದಲ್ಲಿ ಸುಪ್ರಸಿದ್ಧ ವಕೀಲರಾಗಿದ್ದ ಸಿದ್ಧರಾಮಪ್ಪ ಪಾವಟೆಯವರು ಕೋರ್ಟಿನಲ್ಲಿ ವಾದಿಸಿದುದನ್ನು ಇಲ್ಲಿ ನೆನೆಯಬಹುದು. ಇಂಥ ಇನ್ನೊಂದು ತಾತ್ವಿಕ ವಿರೋಧವೆಂದರೆ ಶರಣ ಜಂಗಮರದು ಅದ್ವೈತವಾದರೆ, ಕೈಲಾಸ-ಶಿವ-ಪಾರ್ವತಿ, ಸಾಲೋಕ್ಯ ಇತ್ಯಾದಿಗಳನ್ನು ನಂಬುವ ಆರಾಧ್ಯ ಜಂಗಮರದು ದ್ವೈತವಾಗಿದೆ. ಇಂಥ ವೈರುಧ್ಯಗಳ ನಡುವೆಯೂ ಕೆಲವು ಸಾಮ್ಯಗಳನ್ನು ಸೃಷ್ಟಿಸಿ, ಆ ಆಂಧ್ರಮೂಲದ ಆರಾಧ್ಯ ಜಂಗಮರು ಕರ್ನಾಟಕ ಮೂಲದ ಈ ಶರಣ ಜಂಗಮರನ್ನು ನಂಬಿಸಿ, ಅವರ ಮೇಲೆ ಸವಾರಿ ಮಾಡಿದರು. ಮುಗ್ಧಭಕ್ತರೂ ಇದಕ್ಕೆ ಕೈಜೋಡಿಸಿದರು.

ಗ್ರಂಥ ಋಣ: ಪ್ರಜಾವಾಣಿ, ೭-೫. ೨೦೧೦

*
ಪರಿವಿಡಿ (index)
Previous ವೀರಶೈವರೇ ಲಿಂಗಾಯತ ಸಮಾಜವನ್ನು ನುಂಗಬೇಡಿರಿ ಲಿಂಗಾಯತ, ವೀರಶೈವ Next