Previous ಗುರುಪಾದ ಸೇವಾತುರ ತಾನೇ ತಾನಾಗಿ ರಚನೆ: ಆದಯ್ಯ Next

ಎಲ್ಲ ಶರಣರ ನೆನೆದು

*

ರಚನೆ: -ಶ್ರೀ ಮುಪ್ಪಿನ ಷಡಕ್ಷರಿ



ಎಲ್ಲ ಶರಣರ ನೆನೆದು
ಇಲ್ಲಿ ನಾನತನಾಗಿ
ಎಲ್ಲರನು ಒಂದೊಂದು ಬೇಡಿಕೊಂಬೆ |ಪ|

ಭಕ್ತಿಯಿಲ್ಲದ ಧರ್ಮ
ವ್ಯರ್ಥವಾಗುವುದೆಂದು
ಭಕ್ತಿತ್ರಯವ ಕಲಿಸಿ ಮುಕ್ತನೆನಿಸಿ
ಮುಕ್ತಿಪದವಿಗೆ ಸಂದ
ಕರ್ತೃ ಬಸವೇಶನತಿ
ಭಕ್ತಿ ಭಿಕ್ಷೆಯ ನೀಡಿ ಸಲಹೆನ್ನು |1|

ಶಿವನೊಳಗೆ ಪ್ರಾಣವನು
ತವೆಬೆರಸಿ ಹೊರಗಳಿದು
ಶಿವ ಬೆಳಗಿನೊಳು ಪರಮ ತಪವನೈದಿ
ಶಿವನು ತಾನಾಗಿರ್ದ
ಶಿವಸಿದ್ಧರಾಮಯ್ಯ
ಶಿವಯೋಗ ಭಿಕ್ಷೆಯನು ನೀಡು ಎನಗೆ |2|

ಉರ್ವಿ ಪತಿಯಿಂ ಬಿಟ್ಟು
ನಿರ್ವಾಣಯುತೆಯಾಗಿ
ಸರ್ವ ಕರಣೇಂದ್ರಿಯ ಗುಣಗಳಳಿದು
ಪರ್ವತೇಶನ ಬೆರೆದ
ಸರ್ವಸುಖಿ ಮಹಾದೇವಿ
ನಿರ್ವಾಣಭಿಕ್ಷೆಯನು ನೀಡು ಎನಗೆ |3|

ಇಂಬುದಿದು ಶಿವನೊಳಗೆ
ಸಂಭ್ರಮದ ನುಡಿಗಲಿತು
ಕುಂಭಿನಿಯ ಜನರೊಳಗೆ ನುಡಿಗಳರಿತು
ಗಂಭೀರನಾಗಿ ಸ್ವ
ಯೆಂಭುವಹ ಅಜಗಣ್ಣ
ಗಂಭಿರಭಿಕ್ಷವನು ನೀಡು ಎನಗೆ |4|

ನಮ್ಮ ಶರಣರು ಬಹಳ
ಧರ್ಮಿಗಳು ನಿರ್ಮಳರು
ಒಮ್ಮಯು ಭಿಕ್ಷವನು ಇಲ್ಲೆನ್ನರು
ಸಮ್ಮಾನ ಸರ್ವಗುಣ
ಧರ್ಮ ಭಿಕ್ಷವನುಂಡು
ನೆಮ್ಮುವೆನು ಶಿವಷಡಕ್ಷರಿಲಿಂಗವ |5|

ಪರಿವಿಡಿ (index)
Previous ಗುರುಪಾದ ಸೇವಾತುರ ತಾನೇ ತಾನಾಗಿ ರಚನೆ: ಆದಯ್ಯ Next