Previous ಯತೋ ವಾಚೋ ನಿವರ್ತಂತೇ ಶ್ರುತಿ ಬಸವ ಉರಿವ ಕಮಲ Next

ಅಂತ್ಯ ಪ್ರಸಾದಿ

ರಚನೆ: ಚೆನ್ನಬಸವಣ್ಣ

ರಾಗ: ವರಾಳಿ


ಶರಣನು ಸನ್ನಹಿತನು ಅಲ್ಲಲ್ಲಿಗೆ
ನಡುಕಡೆ ಇಲ್ಲವಯ್ಯ ಅಚ್ಚಶರಣನು ||ಪಲ್ಲವಿ||

ಉಪಮೆವಿಡಿದು ಉಪಾಧಿಕನಲ್ಲ,
ಉಪಾಯನು ಅಲ್ಲ ಶರಣನು:
ಬೆರಸಿ ತೋರಿಸಿ ಮನಹರುಷದಿಂದ
ಪರುಷವೆ ದೊರೆಕೊಂಡಂತಾಯಿತ್ತಾಗಿ ||೧||

ರಚನೆವಿಡಿದು ರಂಜಕನಲ್ಲ,
ಬೋಧೆವಿಡಿದು ಬೋಧಕನಲ್ಲ,
ಆದಿವಿಡಿದು ಆಗಮಿಕನಲ್ಲ,
ಆಗಮರಹಿತ ಪ್ರಸಾದಿಯಯ್ಯ ||೨||

ಒಡಲುವಿಡಿದು ನಡೆವವನಲ್ಲ
ನುಡಿಯೆರಡರ ಹಂಗಿಗನಲ್ಲವಯ್ಯ!
ಹುರುಡುವಿಡಿದು ಬರಡವನಲ್ಲ
ಎರಡಾಗಿನಲಾದ ಪ್ರಸಾದಿಯಯ್ಯ! ||೩||

ಭ್ರಾಂತೆಂಬುದ ನೀಕರಿಸಿ, ಸ್ವೀಕರಿಸನು;
ಅನ್ಯವಿಷಯಂಗಳೊಳಗೆ ಅಹಂಕರಿಸನು:
ಬೇರೆ ಮದವೆಂಬುದಿಲ್ಲವಾಗಿ,
ನಿಸ್ಸಾರಾಯಮಯವಾದ ಶರಣನು ||೪||

ನಡೆಯು ಪ್ರಸಾದ, ನುಡಿಯು ಪ್ರಸಾದ;
ನೋಟವು ಪ್ರಸಾದವಲ್ಲದೆ,
ಪ್ರಸಾದಿಯ ಪ್ರಸಾದದಿಂದ
ಕೂಡಲ ಚೆನ್ನಸಂಗ ನಿಮ್ಮ ಲಿಂಗೈಕ್ಯವು! ||೫||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಯತೋ ವಾಚೋ ನಿವರ್ತಂತೇ ಶ್ರುತಿ ಬಸವ ಉರಿವ ಕಮಲ Next