Previous ಎಂದಿಗಪ್ಪುದೋ ತಾನೇ ತಾನಾಗಿ ರಚನೆ: ಆದಯ್ಯ Next

ಎಲ್ಲ ಶರಣರ ನೆನೆದು ಎಲ್ಲರಲಿ ಒಂದೊಂದ ಬೇಡಿಕೊಂಬೆ

ಕುಸುಮಷಟ್ಪದಿ



ಎಲ್ಲ ಶರಣರ ನೆನೆದು
ಇಲ್ಲಿ ನಾ ನತನಾಗಿ
ಎಲ್ಲರನು ಒಂದೊಂದು ಬೇಡಿಕೊಂಬೆ || ಪ ||

ಭಕ್ತಿಯಿಲ್ಲದ ಧರ್ಮ
ವ್ಯರ್ಥವಾಗುವದೆಂದು
ಭಕ್ತಿತ್ರಯವ ಕಲಿಸಿ ಮುಕ್ತನೆನಿಸಿ
ಮುಕ್ತಿಪದವಿಗೆ ಸಂದ
ಕರ್ತೃ ಬಸವೇಶನತಿ
ಭಕ್ತಿಭಿಕ್ಷೆಯ ನೀಡಿ ಸಲಹೆನ್ನನು || ೧ ||

ಶಿವನೊಳಗೆ ಪ್ರಾಣವನು
ತವೆಬೆರಸಿ ಹೊರಗಳಿದು
ಶಿವಬೆಳಗಿನೊಳು ಪರಮತಪವನೈದಿ
ಶಿವನು ತಾನಾಗಿರ್ದ
ಶಿವಸಿದ್ದರಾಮಯ್ಯ
ಶಿವಯೋಗ ಭಿಕ್ಷೆಯನು ನೀಡು ಎನಗೆ || ೨ ||

ಉರ್ವಿಪತಿಯಂ ಬಿಟ್ಟು
ನಿರ್ವಾಣಯುತೆಯಾಗಿ
ಸರ್ವಕರಣೇಂದ್ರಿಯದ ಗುಣಗಳಳಿದು
ಪರ್ವತೇಶನ ಬೆರೆದ‍
ಸರ್ವಸುಖಿ ಮಹದೇವಿ
ನಿರ್ವಾಣಭಿಕ್ಷವನು ನೀಡು ಎನಗೆ || ೩ ||

ಇಂಬರಿದು ಶಿವನೊಳಗೆ
ಸಂಭ್ರಮದ ನುಡಿಗಲಿತು
ಕುಂಭಿನಿಯ ಜನರೊಳಗೆ ನುಡಿಗಳರಿತು
ಗಂಭೀರನಾಗಿ ಸ್ವ
ಯಂಭುವಹ ಅಜಗಣ್ಣ
ಗಂಭೀರಭಿಕ್ಷವನು ನೀಡು ಎನಗೆ || ೪ ||

ನಮ್ಮ ಶರಣರು ಬಹಳ
ಧರ್ಮಿಗಳು ನಿರ್ಮಳರು
ಒಮ್ಮೆಯುಂ ಭಿಕ್ಷವನು ಇಲ್ಲೆನ್ನರು
ಸಮ್ಮಾನ ಸರ್ವಗುಣ
ಧರ್ಮಭಿಕ್ಷವನುಂಡು
ನೆಮ್ಮುವೆನು ಶಿವಷಡಕ್ಷರಿಲಿಂಗವ || ೫ ||

ರಚನೆ: -ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಎಂದಿಗಪ್ಪುದೋ ತಾನೇ ತಾನಾಗಿ ರಚನೆ: ಆದಯ್ಯ Next