ಭಾಗ-೧ ಮಂಗಳ ಮಜ್ಜನ
ಹಿಂದಿನ ದಿವಸ ಅಥವಾ ಮದುವೆ ದಿನ ಸುಪ್ರಭಾತದಲ್ಲಿ ಹೆಣ್ಣು-ಗಂಡು ಉಭಯತರ ಆತ್ಮೀಯರು ಅರಿಷಿಣ ಸ್ನಾನ ಮಾಡಿಸಿ, ವಿಶೇಷ ಉಡುಗೊರೆ ಪಡೆಯುವರು. ಅರಿಷಿಣ ಎಣ್ಣೆಯನ್ನು ಹಚ್ಚಿ ಸ್ನಾನ ಮಾಡಿಸಬೇಕು.
ಸೂಚನೆ :
(೧) ಚರ್ಮದ ಕಾಂತಿಯನ್ನು ಹೆಚ್ಚಿಸಲೋಸುಗ ಅರಿಷಿಣ ಎಣ್ಣೆ ಸ್ನಾನ ಬಳಕೆಗೆ ಬಂದಿದೆ. ಈಗಿನ ತರುಣ-ತರುಣಿಯರು ಸ್ನಾನ ಮಾಡಿದ ಬಳಿಕ ಹಾಗೇ ಬಣ್ಣ ಕಾಣುವಂತೆ ಅರಿಷಿಣ ಉಳಿಯುವ ಕಾರಣ, ಹಚ್ಚಿಕೊಳ್ಳಲು ನಿರಾಕರಿಸುವರು. ವಿನಾಕಾರಣ ಒತ್ತಾಯ ಮಾಡಬಾರದು. ಹಿರಿಯರು ಸಮಾಧಾನಕ್ಕಾಗಿ ಸ್ವಲ್ಪ ಹಚ್ಚಿ, ಬಿಡಬಹುದು.
(೨) ಕೆಲವು ಕಡೆ, ಮುಖ್ಯವಾಗಿ ಹಳ್ಳಿಗಳಲ್ಲಿ ಈ ಅರಿಷಿಣ ಎಣ್ಣೆ ಸ್ನಾನವನ್ನು ನೆರೆದ ಜನರೆದುರೇ ಮದುವೆಯ ಚಪ್ಪರದಲ್ಲೇ ಮಾಡಿಸುವುದುಂಟು. ಇದು ಬಹಳ ಅಸಂಸ್ಕೃತವಾಗಿ ಕಾಣುವುದು. ಹತ್ತಾರು ಜನಗಳ ಎದುರು ಸ್ನಾನ ಮಾಡಲು ಹುಡುಗಿಯರು ನಾಚಿ ನೀರಾಗುತ್ತಾರೆ. ಅವರನ್ನು ಗದರಿಸಿ, ಹಿರಿಯರು ಮಾಡಿಸುತ್ತಿರುತ್ತಾರೆ. ಇದನ್ನು ನಿಲ್ಲಿಸಬೇಕು.
ಹಿಂದಿನ ಕಾಲದಲ್ಲಿ ಸ್ವತಂತ್ರವಾದ ಬಚ್ಚಲುಗಳು ಇರುತ್ತಿರಲಿಲ್ಲ. ಆಗ ಇದು ಆಚರಣೆಗೆ ಬಂದಿರಬಹುದು. ಈಗಲಾದರೂ ಹಳ್ಳಿಗಳಲ್ಲಿ ಸ್ವತಂತ್ರವಾದ ಬಚ್ಚಲು ಮನೆ ಇರಲಿಕ್ಕಿಲ್ಲ. ಅಂಥ ಸಂದರ್ಭಗಳಲ್ಲಿ ಒಂದು ಚಪ್ಪರ ಹಾಕಿ, ಮರೆ ಮಾಡಿ ಹೆಣ್ಣು ಮಕ್ಕಳಿಗೆ ಈ ಮಂಗಳ ಮಜ್ಜನ ಮಾಡಿಸಬೇಕು. ಸ್ವತಂತ್ರವಾದ ಸ್ನಾನದ ಮನೆ ಇರುವಾಗ ಅಲ್ಲೇ ಮಾಡಿಸಬೇಕು.
(೩) ತಲೆಯ ಮೇಲೆ ಹಾಲು-ತುಪ್ಪ ಹಾಕಿ ಬಿಸಿ ನೀರಿನ ಸ್ನಾನ ಮಾಡಿಸುವುದುಂಟು. ಈ ವಸ್ತುಗಳಿಂದಾಗಿ ತಲೆಯು ಮುಗ್ಗು ವಾಸನೆ ಬರುವ ಸಂಭವ ಇರುತ್ತದೆ. ಆದ್ದರಿಂದ ಹಾಲು-ತುಪ್ಪ ಹಾಕದೆ, ಎಣ್ಣೆ ಹಚ್ಚಿ ಸೀಗೆಪುಡಿ ಹಚ್ಚಿ ತೊಳೆದರೆ ಸಾಕು.
ಲಿಂಗೋದಕ ಅಥವಾ ಮಂತ್ರೋದಕ
ಸತ್ವಗುಣ ಸಂಪನ್ನರಾದ, ಸದಾಚಾರಿಗಳಾದ ಗುರುಮೂರ್ತಿ, ಕ್ರಿಯಾಮೂರ್ತಿಗಳು ಅಷ್ಟು ಬೇಗನೆ ಲಭ್ಯವಾಗುತ್ತಿದ್ದರೆ ಅವರು ಲಿಂಗಾರ್ಚನೆ ಮಾಡಿ, ಲಿಂಗತೀರ್ಥವನ್ನೇ ತೆಗೆದುಕೊಡಲಿ, ಅದನ್ನು ಸ್ನಾನದ ನೀರಿಗೆ ಬೆರೆಸಿರಿ. ಇಲ್ಲದಿದ್ದರೆ ಮನೆಯಲ್ಲಿ ಹಿರಿಯರು, ಜ್ಞಾನಿಗಳು ಯಾರು ಇರುತ್ತಾರೋ ಅವರೇ ಲಿಂಗಾರ್ಚನೆ ಮಾಡಿ, ಲಿಂಗತೀರ್ಥ ತೆಗೆದು, ಕೊಡಲಿ. ಇಲ್ಲವೇ ಒಂದು ಲೋಟದಲ್ಲಿ ನೀರು ಹಾಕಿ ಕೈ ಬೆರಳುಗಳಿಗೆ ವಿಭೂತಿ ಧರಿಸಿ “ಓಂ ಶ್ರೀ ಗುರುಬಸವಲಿಂಗಾಯ ನಮಃ” ಎಂದು ಒಂದೊಂದು ಗಣ್ಣಿಗೆ ಒಂದು ಸಲದಂತೆ ೧೨ ಬಾರಿ ಎಣಿಸಿ, ಕೈ ಬೆರಳನ್ನು ಅದ್ದಿ ಈ ಮಂತ್ರೋದಕವನ್ನೇ ಸ್ನಾನದ ನೀರಿಗೆ ಬೆರೆಸಲಿ, ಇದರಿಂದ “ಗುರುಪಾದ ತೀರ್ಥವೇ ಮಂಗಳ ಮಜ್ಜನವೆನಗೆ' ಎಂಬ ಮಾತು ಪೂರ್ಣವಾಗುತ್ತದೆ.
ಸ್ನಾನಾನಂತರ ವಧುವರರಿಗೆ ಮಡಿ ವಸ್ತ್ರ ಅಥವಾ ಹೊಸ ಬಟ್ಟೆಗಳನ್ನುಡಿಸಿ ಗುರುಮೂರ್ತಿ ಅಥವಾ ಕ್ರಿಯಾಮೂರ್ತಿ ಇರುವಲ್ಲಿಗೆ ಕರೆತರಬೇಕು. ಅವರೂ ಈ ಒಳಗೆ ಸ್ನಾನ ಮಾಡಿ, ಮಡಿಯುಟ್ಟು ಆಸೀನರಾಗಿರಬೇಕು. ಕ್ರಿಯಾಮೂರ್ತಿಯು [2] ಷಟ್ಕೋನ ಚಿತ್ರವಿರುವ ಪೂಜಾ ವಸ್ತ್ರ ಧರಿಸಬೇಕು.
ವರ-ಕನ್ಯೆ ಬಂದು ಗುರುಗಳಿಗೆ ಅಥವಾ ಕ್ರಿಯಾಮೂರ್ತಿಗಳಿಗೆ ಶರಣು ಸಲ್ಲಿಸಿ ಕುಳಿತುಕೊಳ್ಳಬೇಕು. (ಸಾಮಾನ್ಯವಾಗಿ ಅಂತರಪಟ ಸರಿಸುವವರೆಗೂ ವರ-ಕನ್ಯೆ ಜೊತೆಗೆ ಕೂರಬಾರದು ಎಂದೆಲ್ಲ ನಂಬಿಕೆ ಇದೆ. ಇದು ಹಳೇ ಕಾಲದ ನಂಬಿಕೆ. ಹಿಂದೆಲ್ಲ ತಾಯಿ ತಂದೆಗಳು ವಧುವನ್ನು ನೋಡಿರುತ್ತಿದ್ದರು, ವರ-ಕನ್ಯೆ ಒಬ್ಬರನ್ನೊಬ್ಬರು ನೋಡಿಯೇ ಇರುತ್ತಿರಲಿಲ್ಲ. ಅಂತರಪಟ ಸರಿಸಿದಾಗಲೇ ಮೊದಲ ಬಾರಿ ನೋಡುತ್ತಿದ್ದರು. ಈಗಲೋ ಮೊದಲೇ ನೋಡಿರುವರು, ಸುತ್ತಾಡಿರುವರು. ಆದ್ದರಿಂದ ಅಂತರಪಟದ ಹಿಡಿಯುವಿಕೆ, ಸರಿಸುವಿಕೆಗೆ ಯಾವ ಅರ್ಥವೂ ಇಲ್ಲ.)
ಗುರುಗಳು ಕ್ರಮಬದ್ಧವಾಗಿ ಇಷ್ಟಲಿಂಗ ಪೂಜೆ ಮಾಡಿಸಬೇಕು. ತಾವು ತಮ್ಮ ಇಷ್ಟಲಿಂಗವನ್ನು ತೆಗೆದುಕೊಂಡು ಪೂಜೆ ಮಾಡುವಾಗ ವಧೂ ವರರು ತಮ್ಮ ತಮ್ಮ ಇಷ್ಟಲಿಂಗ ಕೈಯಲ್ಲಿ ಹಿಡಿದು ಪೂಜೆ ಮಾಡಬೇಕು.
ಲಿಂಗ ದೀಕ್ಷೆ :
ಒಂದು ವೇಳೆ ಲಿಂಗದೀಕ್ಷೆ ಈವರೆಗೂ ಆಗಿಲ್ಲದಿದ್ದರೆ ಈಗ ಲಿಂಗದೀಕ್ಷೆ ಮಾಡಲೇಬೇಕು. ಈ ಮೊದಲೇ ಲಿಂಗದೀಕ್ಷೆ ಆಗಿದ್ದರೆ, ಈಗ ಪೂಜಾ ನಂತರ ಕರುಣ ಪ್ರಸಾದ ಕೊಟ್ಟರೆ ಸಾಕು.
(ಲಿಂಗಾಯತೇತರ ಹಿಂದುಗಳು ಮಂತ್ರೋಪದೇಶವನ್ನು ವಧೂ-ವರರಿಗೆ ಮಾಡಿಸಬೇಕು).
ಲಿಂಗ ದೀಕ್ಷಾ ಕ್ರಮ :
ಗುರುಮೂರ್ತಿ-ಕ್ರಿಯಾಮೂರ್ತಿಯು ಯಾರಿಗೆ ದೀಕ್ಷೆ ಮಾಡಬೇಕಾಗಿದೆಯೋ ಅವರ ಇಷ್ಟ ಲಿಂಗವನ್ನು ಕೈಗೆ ತೆಗೆದುಕೊಂಡು, ತಾನು ಪೂಜೆ ಮಾಡಬೇಕು. ಪೂಜಾ ನಂತರ ತ್ರಾಟಕಯೋಗದ ಮೂಲಕ ಆ ಇಷ್ಟಲಿಂಗಗಳನ್ನು ದಿಟ್ಟಿಸಿ ನೋಡಿ, ಚಿತ್ಕಳೆಯನ್ನು ತುಂಬಬೇಕು. “ಪರಮಾತ್ಮಾ, ಜಗತ್ಕರ್ತ ನಿನ್ನ ಕೃಪೆ ಈ ಕುರುಹಿನಲ್ಲಿ ಹರಿದು ಬರಲಿ, ನಿನ್ನ ಮೂರು ಸಾಕಾರ ರೂಪಗಳೇ ಗುರು-ಲಿಂಗ-ಜಂಗಮ. ವಿಶ್ವದಾಕಾರದಲ್ಲಿ ಚುಳುಕಾಗಿರುವ ಇಷ್ಟಲಿಂಗದಲ್ಲಿ ಇದರ ದಾತ ಗುರು ಬಸವಣ್ಣನವರ ಕೃಪೆ (ಗುರು), ನಿನ್ನ ಕೃಪೆ (ಲಿಂಗ), ನನ್ನ ಸಂಕಲ್ಪ ಶಕ್ತಿ (ಜಂಗಮ) ಮೂರೂ ಘನೀ ಭೂತವಾಗಲಿ. ಇವರ ಲೌಕಿಕ ಬದುಕು ಆಯುರಾರೋಗ್ಯ ಭಾಗ್ಯ ಸಂತಾನ ಮುಂತಾದ ಐಹಿಕ ಸಂಪತ್ತನ್ನು ಹೊಂದಿ, ಪಾರಮಾರ್ಥಿಕ ಸಂಪತ್ತಾದ ಮೋಕ್ಷವನ್ನೂ ಹೊಂದಲಿ.” ಎಂದು ಸದುಹೃದಯ, ಸತ್ಸಂಕಲ್ಪದಿಂದ ಮನಸ್ಸಿನಲ್ಲಿ ಅಂದುಕೊಂಡು ಇಷ್ಟಲಿಂಗದ ಮೇಲೆ ದೃಷ್ಟಿ ನೆಟ್ಟಂತೆ ಮನಸ್ಸಿನಲ್ಲಿ “ಓಂ ಲಿಂಗಾಯ ನಮಃ ” ಜಪಿಸಬೇಕು.
ಈ ಲಿಂಗಕ್ಕಿಟ್ಟ ನೈವೇದ್ಯವನ್ನು ದೀಕ್ಷಾರ್ಥಿಗಳಿಗೆ ಕೊಟ್ಟು ತಿನ್ನಲು ಹೇಳಬೇಕು. ಹಣೆಗೆ ಭಸ್ಮ ಧರಿಸಿ, ಎಡದ ಕೈಯ ಅಂಗೈಯಲ್ಲಿ ಪಂಚಕೋನ ಪ್ರಣವ ಬರೆದು, ಅದರ ಮೇಲೆ ಇಷ್ಟಲಿಂಗವನ್ನು ಇಡಬೇಕು. ಗೋಮುಖವನ್ನು ಸಂಕೇತಿಸುವ ಗುರುತು ಹೆಬ್ಬೆಟ್ಟಿನ ಕಡೆ ಬರುವಂತೆ ಇಡಬೇಕು. ಭಸ್ಮ ಧರಿಸಿ, ಗಂಧವನ್ನಿಟ್ಟು, ಪುಷ್ಪ ಮುಂತಾಗಿ ಅಷ್ಟವಿಧಾರ್ಚನೆ ಮಾಡಿ, ನಂತರ ಹಸ್ತವನ್ನು ಮಸ್ತಕದ ಮೇಲೆ ಇಟ್ಟು “ಓಂ ಲಿಂಗಾಯನ ನಮಃ ” ಎಂದು ಉಚ್ಚರಿಸುತ್ತ, ಅವರಿಂದ ಹೇಳಿಸಬೇಕು. ಕನಿಷ್ಟ ಪಕ್ಷ ೯ ಸಲ ಹಾಗೆ ಹೇಳಿ, ಹೇಳಿಸಬೇಕು. ಮನಸ್ಸಿನಲ್ಲಿ ಸಂಕಲ್ಪ ಮಾಡಬೇಕು. ಹಸ್ತ, ದೃಷ್ಟಿ, ಭಾವ ಈ ಮೂರರಿಂದಲೂ ಅನುಗ್ರಹಿಸಬೇಕು.
ಮಂತ್ರೋಪದೇಶದ ನಂತರ ಕುರಂಗ ಮುದ್ರೆಯಿಂದ ಇಷ್ಟಲಿಂಗಕ್ಕೆ ನಮಸ್ಕರಿಸಲು ಹೇಳಿ, ತಾನು ಹೇಳಿ ಕೊಟ್ಟು ದೀಕ್ಷಿತರಿಂದ ಪ್ರತಿಜ್ಞೆ ಮಾಡಿಸಬೇಕು.
ಓಂ ಶ್ರೀ ಗುರು ಬಸವಲಿಂಗಾಯ ನಮಃ
ಧರ್ಮಗುರು ಬಸವಣ್ಣನವರ ಸಾಕ್ಷಿಯಾಗಿ, ಜಗತ್ಕರ್ತ ಪರಮಾತ್ಮನ ಸಾಕ್ಷಿಯಾಗಿ, ಸರ್ವ ಶರಣರ ಸಾಕ್ಷಿಯಾಗಿ ನಾನಿಂತು ಪ್ರತಿಜ್ಞೆಯನ್ನು ಸ್ವೀಕರಿಸುತ್ತೇನೆ.
ಶ್ರೀಗುರುಬಸವಂಗೆ ಶರಣಾಗಿಹೆ, ಲಿಂಗದೇವನಿಗೆ ಶರಣಾಗಿಹೆ
ಶರಣ ಗಣಕ್ಕೆ ಶರಣಾಗಿಹೆ, ಗಣಪದವಿಯನ್ನು ನಾ ಹೊಂದಿಹೆ.
|
|
|
1 | ಓಂ | ಜಗತ್ತನ್ನು ನಿರ್ಮಾಣ ಮಾಡಿದ ಸೃಷ್ಟಿಕರ್ತನ ಅಸ್ತಿತ್ವದಲ್ಲಿ ನಂಬಿಕೆ ಇಡುತ್ತೇನೆ. ಅವನು ಒಬ್ಬನೇ ಮತ್ತು ಪರಮೋನ್ನತ ಶಕ್ತಿ ಎಂದು ನಂಬಿ ಶರಣಾಗುತ್ತೇನೆ. |
2 | ಶ್ರೀ | ವಿಶ್ವಗುರು ಬಸವಣ್ಣನವರು ದೇವರು ಲೋಕೋದ್ಧಾರಕ್ಕಾಗಿ ಕಳುಹಿಸಿ ಕೊಟ್ಟ. ಪ್ರತಿನಿಧಿ, ಕಾರಣಿಕ, ದೇವರ ಕರುಣೆಯ ಕಂದ, ನಮ್ಮೆಲ್ಲರ ರಕ್ಷಕ ಎಂದು ನಂಬಿ ಶರಣಾಗುತ್ತೇನೆ. |
3 | ಗು | ಗುರು ಬಸವಣ್ಣನವರೇ ಆದಿ ಪ್ರಮಥರಾಗಿ, ಅವರ ಸಮಕಾಲೀನರು ಮತ್ತು ಅವರ ಪರಂಪರೆಯ ಶರಣರು ಕೊಟ್ಟ ವಚನ ಸಾಹಿತ್ಯವೇ ನನ್ನ ಧರ್ಮ ಸಂಹಿತೆ ಎಂದು ತಿಳಿದು ಶರಣ ಪಥದಲ್ಲಿ ನಡೆಯುತ್ತೇನೆ. |
4 | ರು | ಧರ್ಮಪಿತರು ವಿಶ್ವದಾಕಾರದಲ್ಲಿ ರೂಪಿಸಿಕೊಟ್ಟ ವಿಶ್ವಾತ್ಮನ ಕುರುಹಾದ ಇಷ್ಟಲಿಂಗವನ್ನು ಶ್ರದ್ಧೆಯಿಂದ ಧರಿಸಿ, ನಿಷ್ಠೆಯಿಂದ ನಿತ್ಯವೂ ಪೂಜಿಸುತ್ತೇನೆ. |
5 | ಬ | ಧರ್ಮಪಿತ ಬಸವಣ್ಣನವರು ಬಯಲಾದ ದಿವ್ಯಕ್ಷೇತ್ರ ಕೂಡಲ ಸಂಗಮವನ್ನು ನಮ್ಮ ಧರ್ಮಕ್ಷೇತ್ರವೆಂದು ನಂಬಿ ಸಂದರ್ಶಿಸುತ್ತೇನೆ. |
6 | ಸ | ಏಳು ದಿವಸಗಳ ವಾರದಲ್ಲಿ ಒಂದು ದಿವಸವಾದರೂ ಶರಣರ ಸಂಗದಲ್ಲಿ ಸೇರಿ ಕರ್ತನನ್ನು ಸ್ಮರಿಸಿ, ಧರ್ಮಪಿತರನ್ನು ಕೊಂಡಾಡಿ, ಗಣ ಮೇಳಾಪ-ಅನುಭವ ಗೋಷ್ಠಿಯಲ್ಲಿ ಭಾಗಿಯಾಗುತ್ತೇನೆ. ಪ್ರತಿವರ್ಷವೂ ಶಿವರಾತ್ರಿಯಂದು ಸ್ಥಳೀಯವಾಗಿ ನಡೆಯುವ ಗಣಮೇಳದಲ್ಲಿ ತಪ್ಪದೆ ಭಾಗಿಯಾಗುತ್ತೇನೆ. |
7 | ವ | ಸತ್ಯ ಶುದ್ಧ ಕಾಯಕದಿಂದ ಧನವನ್ನು ಸಂಪಾದಿಸಿ ದಾಸೋಹ ತತ್ತ್ವದ ಮೂಲಕ ಧರ್ಮ-ಸಮಷ್ಟಿಗಳ ಉದ್ಧಾರಕ್ಕೆ ವಿನಿಯೋಗಿಸುತ್ತೇನೆ. |
8 | ಲಿಂ | ವಿಶ್ವಗುರು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರ ಕೂಡಲ ಸಂಗಮದಲ್ಲಿ ಪ್ರತಿ ವರ್ಷವೂ ಬಸವ ಕ್ರಾಂತಿ ದಿನದಂದು ನಡೆಯುವ ಶರಣ ಮೇಳಕ್ಕೆ ಬರುತ್ತೇನೆ. ಜೀವಮಾನದಲ್ಲಿ ಒಮ್ಮೆಯಾದರೂ ಎಷ್ಟೇ ಅನಾನುಕೂಲತೆಗಳಿದ್ದರೂ ಬಂದು ಭಾಗಿಯಾಗಿ, ನನ್ನ ಧಾರ್ಮಿಕ ಅನುಯಾಯಿತ್ವವನ್ನು ಸ್ಥಿರೀಕರಿಸುತ್ತೇನೆ. |
9 | ಗಾ | ಪರಧನ, ಪರಸ್ತ್ರೀಯರನ್ನು ಬಯಸುವುದಿಲ್ಲ. |
10 | ಯ | ಮಾಂಸಾಹಾರವನ್ನು, ಮದ್ಯಪಾನವನ್ನು ಮಾಡುವುದಿಲ್ಲ. |
11 | ನ | ನೀತಿವಂತನಾಗಿ ಶರಣ ಮಾರ್ಗದಲ್ಲಿ ನಡೆಯುತ್ತೇನೆ; ನಮ್ಮ ಸಂತಾನವನ್ನೂ ಇದೇ ದಾರಿಯಲ್ಲಿ ನಡೆಸುತ್ತೇನೆ. |
12 | ಮಃ | ಧರ್ಮಪಿತರ ಸಂಕಲ್ಪದಂತೆ ಮರ್ತ್ಯಲೋಕದ ಈ ಕರ್ತನ ಕಮ್ಮಟದಲ್ಲಿ ಜಾತಿವರ್ಣವರ್ಗರಹಿತ ಧರ್ಮ ಸಹಿತ ಕಲ್ಯಾಣ(ದೈವೀ) ರಾಜ್ಯದ ನಿರ್ಮಾಣಕ್ಕೆ ನಿಷ್ಠೆಯಿಂದ ಪ್ರಯತ್ನ ಮಾಡುತ್ತೇನೆ. |
ಜಯ ಗುರು ಬಸವೇಶ ಹರಹರ ಮಹಾದೇವ
ಪ್ರತಿಜ್ಞಾ ಸ್ವೀಕಾರದ ನಂತರ ಕರುಣ-ಪ್ರಸಾದ ನೀಡಬೇಕು. ಐದೂ ಅಂಗುಲಿಗಳಿಗೆ ವಿಭೂತಿ ಧರಿಸಿ, ೧೨ ಬಾರಿ ಓಂ ಲಿಂಗಾಯ ನಮಃ ಪಠಿಸಿ, ನೀರಿನಲ್ಲಿ ಎದ್ದಿ ಇಷ್ಟಲಿಂಗದ ನೆತ್ತಿಯ ಮೇಲೆ ಐದು ಬೆರಳಿನಿಂದ ೩ ಸಲ ಎರೆಯಬೇಕು. ಹಾಗೆ ಎರೆಯುವಾಗ ಹೀಗೆ ಹೇಳಬೇಕು.. ಬಸವ ಕರುಣೋದಕ (ಅರ್ಥ-ಧರ್ಮಗುರು ಬಸವಣ್ಣನ ಕೃಪೆ ಹರಿದು ಬರಲಿ) ಲಿಂಗ ಕರುಣೋದಕ (ಅರ್ಥ-ಜಗತ್ಕರ್ತ ಪರಮಾತ್ಮನ ಕರುಣೆ ಹರಿದು ಬರಲಿ) ಶರಣ ಕರುಣೋದಕ (ಅರ್ಥ-ಎಲ್ಲ ಶರಣರ ಕರುಣೆ ಹರಿದು ಬರಲಿ) ಇಷ್ಟಲಿಂಗವನ್ನು ಬಲಗೈಯಲ್ಲಿ ಎತ್ತಿ, ಎಡಗೈ ತುದಿಯಲ್ಲಿ ಹಿಡಿದು ತೀರ್ಥ-ಪ್ರಸಾದ ಸ್ವೀಕರಿಸಬೇಕು.
ಪೂಜೆ-ದೀಕ್ಷೆ-ಕರುಣ ಪ್ರಸಾದದ ನಂತರ ಗುರುಮೂರ್ತಿ, ಕ್ರಿಯಾ ಮೂರ್ತಿಯು ಲಿಂಗತತ್ವೋಪದೇಶ, ಧರ್ಮೋಪದೇಶ ಮಾಡಬೇಕು.
ಮದು ಮಕ್ಕಳೇ,
ನೀವೀಗ ದಾಂಪತ್ಯ ಜೀವನವನ್ನು ಪ್ರವೇಶಿಸುತ್ತಿದ್ದೀರಿ, ಪರಮಾತ್ಮನ ಸಂಕಲ್ಪದಂತೆ ಒಂದುಗೂಡುತ್ತಿದ್ದೀರಿ. ಈ ನಿಮ್ಮ ಸಂಬಂಧ ಇದೇ ಜನ್ಮದ್ದಲ್ಲ. ಇದು ಎಂದಿನಿಂದಲೂ ಬಂದಿರುವ ಋಣಾನುಬಂಧ. ಆದ್ದರಿಂದ ಪರಸ್ಪರರಲ್ಲಿ ಸಾಮರಸ್ಯ, ತಿಳುವಳಿಕೆ, ತಾಳ್ಮೆ ಅತ್ಯಗತ್ಯ.
ನಾವು ಶ್ರೇಷ್ಠ ಧರ್ಮವಾದ ಲಿಂಗಾಯತ ಧರ್ಮದ ಅನುಯಾಯಿಗಳಾಗಿದ್ದೇವೆ. ನಮ್ಮ ಧರ್ಮದ ಮುಖ್ಯ ಸೂತ್ರಗಳು ಯಾವು ಎಂಬುದನ್ನು ಪ್ರತಿಜ್ಞಾಪೂರ್ವಕವಾಗಿ ಹೇಳಿಸಿದ್ದೇನೆ. ವಿಶ್ವಗುರು ಬಸವಣ್ಣನವರು ಒಂದು ಸ್ವತಂತ್ರ ಧರ್ಮವನ್ನು ರೂಪಿಸಿ, ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ, ಪೂಜೆಯ ಸದವಕಾಶ ಕೊಟ್ಟರು. ಆದಿ ಗುರು ಬಸವಣ್ಣನವರಿಂದ ಇಲ್ಲಿಯವರೆಗೂ ಸಾಗಿ ಬಂದಿರುವ ಶರಣ ಪರಂಪರೆಯೊಂದರ ವಾರಸುದಾರರು ನಾವು ಆದ್ದರಿಂದ ನಮ್ಮ ಧರ್ಮಾಚರಣೆಯಲ್ಲಿ ಅನನ್ಯ ನಿಷ್ಠೆ ನಮ್ಮದಾಗಬೇಕು. ಗುರು ಬಸವ ಸ್ಮರಣೆ, ನಿತ್ಯ ಲಿಂಗಾರ್ಚನೆ, ಜಂಗಮ ದಾಸೋಹ, ಶರಣ ಸತ್ಸಂಗ ಈ ನಾಲ್ಕು ಆಚರಣೆಗಳು ನಿಮ್ಮ ನಿತ್ಯಜೀವನದ ಅವಿಭಾಜ್ಯ ಅಂಗವಾಗಬೇಕು.
ಶ್ರೇಷ್ಠ ಶರಣ ಸಂಸ್ಕೃತಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಅದನ್ನು ಇನ್ನಿತರರಿಗೂ ಕಲಿಸುವ ರಾಯಭಾರಿಗಳು ನೀವು ಆಗಬೇಕು. ನಿಮ್ಮ ಸಾಂಸ್ಕೃತಿಕ ಸಂಪತ್ತನ್ನು ಮುಂದಿನ ಜನಾಂಗಕ್ಕೂ ಕೊಟ್ಟು ಹೋಗುವ ವಾತಾವರಣವನ್ನು ರೂಪಿಸಬೇಕು. ಚಲಿಸುವ ಮೋಡಗಳಂತಿರುವ ಐಹಿಕ ಜೀವನವನ್ನು ಭಕ್ತಿ-ಜ್ಞಾನ-ಕ್ರಿಯೆಗಳ ಸಂಗಮವಾಗಿ ಮಾಡಿಕೊಂಡು, ಕರ್ತಾರನ ಕಮ್ಮಟದಂತಿರುವ ಈ ಜಗತ್ತಿನಲ್ಲಿ ಸಾರ್ಥಕದ ಬಾಳನ್ನು ಬಾಳಿರಿ; “ಜೈ ಗುರು ಬಸವೇಶ ಹರಹರ ಮಹಾದೇವ'.
ಗುರುಮೂರ್ತಿ ಕ್ರಿಯಾಮೂರ್ತಿ ತನ್ನ ಪ್ರತಿಭೆಗೆ ತಕ್ಕಂತೆ . ವಿಷಯಗಳನ್ನು ವಿಸ್ತರಿಸಬಹುದು. ಇಲ್ಲವೇ ಈ ಆಯ್ದ ಭಾಗವನ್ನು ಓದಿ ಹೇಳಬಹುದು.. ಇಲ್ಲಿ ಸಮಯದ ತೀವ್ರ ಅಭಾವ ಇರುತ್ತದೆಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.
ವಧೂವರರು ಮಾಂಗಲ್ಯಧಾರಣೆ ಆಗುವವರೆಗೆ ಉಪವಾಸವಿರಬೇಕೆ ?ಎಂದು ಒಬ್ಬರು ಕೇಳಿದರು. ಬೇರೆ ಬೇರೆ ಕಡೆ ಏನು ರೂಢಿಯಲ್ಲಿದೆಯೋ ನಾನರಿಯೆ. ಆದರೆ ತಾತ್ವಿಕವಾಗಿ ಹೇಳಬೇಕೆಂದರೆ ಉಪವಾಸ ಅಗತ್ಯವಿಲ್ಲ.
೧. ಸ್ನಾನ, ಲಿಂಗ ಪೂಜೆ, ತೀರ್ಥ ಪ್ರಸಾದ ಸ್ವೀಕಾರ ಆದಮೇಲೆ ಉಪಾಹಾರ ಸ್ವೀಕರಿಸಬಹುದು.
೨. ಮುಂದೆ ಸಾಕಷ್ಟು ಕೆಲಸವಿರುವಾಗ ವರ-ಕನ್ಯೆ ಬಳಲುವುದು ಸರಿಯಲ್ಲ.
೩. ಹೊಟ್ಟೆ ಹಸಿದಿದ್ದರೆ ಅವರಿಗೂ ಧಾರ್ಮಿಕ ವಿಧಿ-ವಿಧಾನದಲ್ಲಿ ಆಸಕ್ತಿ ಇರುವುದಿಲ್ಲ.
೪. ಊಟ (ಪ್ರಸಾದ ಸ್ವೀಕಾರ) ಮಾಡುವುದು ಮೈಲಿಗೆ* ಎಂಬ ಭಾವ ಶರಣ ಧರ್ಮಕ್ಕೆ ಸಮ್ಮತವಲ್ಲ.
ಉಪಾಹಾರ ಸ್ವೀಕರಿಸಿ ಕ್ರಿಯಾಮೂರ್ತಿ ಮದುವೆ ಮಂಟಪದ ಕಡೆಗೆ ಸಾಗಬೇಕು.
ವಿವಾಹ ಮಂಟಪ ರಚನೆ :
ಕಲ್ಯಾಣ ಮಂಟಪಗಳಲ್ಲಿ ವೇದಿಕೆಯನ್ನು ಕಟ್ಟಿಸಿರುತ್ತಾರೆ. ವೇದಿಕೆಯ ಮೇಲೊಂದು ಕಟ್ಟೆಯು ಇರುತ್ತದೆ. ಅದಕ್ಕೆ ಕಬ್ಬಿನ ಜಲ್ಲೆ, ತೆಂಗಿನ ಗರಿ, ಬಾಳೆಯ ಕಂಭ ಮುಂತಾಗಿ ಕಟ್ಟುವರು. ಕೆಲವೊಮ್ಮೆ ಅಲಂಕೃತ ಮಂಟಪಗಳೇ ಸಿಗುತ್ತವೆ. ಸಂಪ್ರದಾಯದಲ್ಲಿ ಗೋಧಿ, ಅಕ್ಕಿ, ಜೋಳ, ಹರಡಿ ಪುನಃ ಅದರಲ್ಲಿ ಉದ್ದು, ಜೀರಿಗೆ, ಕಡಲೆಬೇಳೆ ಬೆರೆಸುತ್ತಾರೆ. ಇಂಥ ತಿನ್ನುಣ್ಣುವ ವಸ್ತುಗಳನ್ನು ನೆಲದ ಮೇಲೆ ಹಾಕಿ ತುಳಿಯುವ ಪದ್ಧತಿ ಬಿಟ್ಟು, ಒಳ್ಳೆಯ ನೆಲಹಾಸು, ಜಮಖಾನಾ ಹಾಕಿದರೆ ಸಾಕು, ಮಂಟಪದ ಮೇಲ್ಬಾಗದಲ್ಲಿ ನೈಸರ್ಗಿಕ ಹೂವು, ದೀಪಗಳ ಮಾಲೆ, ಕೃತಕ ಹೂಮಾಲೆ ಮುಂತಾಗಿ ಇಳಿಯಬಿಟ್ಟು ಅಲಂಕರಿಸಬಹುದು.