ಸಾಧಕ (ಬ್ರಹ್ಮಚರ್ಯ) ದೀಕ್ಷೆ
ವ್ಯಕ್ತಿಯ ಜೀವನದಲ್ಲಿ ಇದು ಅತ್ಯಂತ ಮಹತ್ವಪೂರ್ಣವಾದುದು. ಎಲ್ಲರ ಜೀವನದಲ್ಲಿಯೂ ಒದಗುವಂತಹುದಲ್ಲ ಮತ್ತು ಎಲ್ಲರಿಗೂ ಕಡ್ಡಾಯವೂ ಅಲ್ಲ. ಅತ್ಯಂತ ಐಚ್ಛಿಕವಾದ ಸಂಸ್ಕಾರವಿದು.
ಮರೆವಿನ ಸೃಷ್ಟಿಯಲ್ಲಿ ಬರುವ ಮಾನವನು ಭವಿ ಎನ್ನಿಸಿಕೊಳ್ಳುವನು. ಧರ್ಮ ಸಂಸ್ಕಾರವನ್ನು ಪಡೆದು ಭಕ್ತನಾಗುವನು. ಮುಂದೆ ಅವನಲ್ಲಿ ಅಧ್ಯಾತ್ಮಿಕ ಹಂಬಲವು ಅತ್ಯಂತ ಉತ್ಕಟವಾದಾಗ ನಾನು ನನ್ನದೆಂಬ ಮೋಹ-ಮಮಕಾರ ತೊರೆದು ಹೆತ್ತ ತಾಯಿ ತಂದೆ, ಬಂಧು-ಬಳಗಗಳನ್ನು ತ್ಯಜಿಸಿ ವೈರಾಗ್ಯ ಜೀವನವನ್ನು ಸ್ವೀಕರಿಸುವನು.
ಜ್ಞಾನ ಸನ್ಯಾಸ - ಕ್ರಿಯಾ ಸನ್ಯಾಸ ಎಂದು ಎರಡು ಬಗೆ. ಮೊದಲು ಅಂತರಂಗದಲ್ಲಿ ಉತ್ಕಟವಾದ ವೈರಾಗ್ಯಭಾವವು ಮೂಡುವುದು. ಮಾನಸಿಕವಾಗಿ ವಿರಕ್ತಿ ಅಳವಟ್ಟು ಪೂರ್ವಾಶ್ರಮವನ್ನು ತೊರೆಯುವನು. ಮುಂದೆ ಜ್ಞಾನಿಯಾದ ಗುರುವನ್ನು ಪಡೆದು ವೈರಾಗ್ಯ ಲಾಂಛನಗಳನ್ನು ಅವರಿಂದ ಸ್ವೀಕರಿಸಿ ಕ್ರಿಯಾ ಸನ್ಯಾಸವನ್ನು ಪಡೆಯುವನು. ಬಸವ ಧರ್ಮದಲ್ಲಿ ಸನ್ಯಾಸ ಎಂಬ ಪದವು ಬಳಕೆಯಾಗದು. ಜಂಗಮ - ವಿರಕ್ತ ಎಂಬ ಪದಗಳನ್ನು ಬಳಸಲಾಗುವುದು. ವೈದಿಕ ಸಂಪ್ರದಾಯದಲ್ಲಿ ಕೆಲವು ಪಂಥಗಳಲ್ಲಿದ್ದಂತೆ ಗೃಹಸ್ಥನಾಗಿ ನಂತರ ವಿರಕ್ತಾಶ್ರಮ ಸ್ವೀಕರಿಸಬೇಕೆಂಬ ನಂಬಿಕೆ ಇಲ್ಲಿಲ್ಲ. ಬ್ರಹ್ಮಚರ್ಯ ಆಶ್ರಮದಿಂದಲೇ ನೇರವಾಗಿ ವಿರಕ್ತನಾಗಬಹುದು. ಹೆಣ್ಣು ಮಕ್ಕಳು ಸಹ ಜಂಗಮ ದೀಕ್ಷೆ ಪಡೆಯಬಹುದು. ಹುಟ್ಟಿನಿಂದ ಯಾವುದೇ ಜಾತಿಯವನಿದ್ದರೂ ಲಿಂಗದೀಕ್ಷೆ ಹೊಂದಿ, ವೈರಾಗ್ಯಭಾವ ಬಲಿದು ಜಂಗಮ ದೀಕ್ಷೆ ಹೊಂದಬಹುದು. ವರ್ಣ-ಜಾತಿ-ಮನೆತನದ ಉದ್ಯೋಗ ಲಿಂಗಭೇದ ಈ ಯಾವುವೂ ಜಂಗಮದೀಕ್ಷೆ ಪಡೆಯಲು ಅಡ್ಡಿಯಾಗವು. ಮುಮುಕ್ಷುಭಾವ - ವೈರಾಗ್ಯ ಈ ಎರಡೇ ಪ್ರವೇಶಕ್ಕೆ ಅರ್ಹತೆಗಳು ಎಂಬುದು ಗಮನಾರ್ಹ.
ಸಾಧಕ (ಬ್ರಹ್ಮಚರ್ಯ) ದೀಕ್ಷೆ
ವೈರಾಗ್ಯ ಜೀವನವನ್ನು ಬಯಸಿ ಬರುವ ಸಾಧಕರಲ್ಲಿ ಕೆಲವರು ಬಹಳ ಪರಿಪಕ್ವ ಚೇತನಗಳಾಗಿದ್ದು, ಅವರ ಹಿಂದಿನ ಜನ್ಮದ ಸಂಸ್ಕಾರವೇ ಬಹಳ ಗಾಢವಾಗಿ ಇರುತ್ತದೆ ಎನಿಸುತ್ತದೆ. ಪ್ರಾಯಶಃ ಹಿಂದಿನ ಜನ್ಮದಲ್ಲೇ ಸಾಕಷ್ಟು ಪ್ರಗತಿ ಸಾಧಿಸಿದ್ದು ಗುರಿ ತಲುಪಲು ಸ್ವಲ್ಪ ಮಾತ್ರ ದೂರವಿರುವಾಗಲೇ ಅವರು ತೀರಿಕೊಂಡಿರುವರೆನ್ನಿಸುತ್ತದೆ. ಇದಕ್ಕೆ ಯೋಗಭ್ರಷ್ಟ ಜನ್ಮ ಎನ್ನುತ್ತಾರೆ. ಅಂಥವರಿಗೆ ಮರುಜನ್ಮದಲ್ಲಿ ಬಹಳ ಬೇಗ ಜ್ಞಾನ ಉಂಟಾಗಿ ವೈರಾಗ್ಯದ ಹಂಬಲಿಗರಾಗುತ್ತಾರೆ. ಇಂಥವರಿಗೆ ಮಧ್ಯಂತರದ ಯಾವ ದೀಕ್ಷೆಯೂ ಬೇಕಾಗದು. ಇವರಿಗೆ ನೇರವಾಗಿ ಸನ್ಯಾಸ (ಜಂಗಮ) ದೀಕ್ಷೆಯನ್ನೇ ಕೊಡಬಹುದು, ಅವರ ವ್ಯಕ್ತಿತ್ವವನ್ನು ಅಳೆದುನೋಡಿ.
ಆದರೆ ಮತ್ತೆ ಕೆಲವರು ತಾತ್ಕಾಲಿಕ ಆವೇಶದಿಂದ ಬಂದಿರಬಹುದು ಅಥವಾ ಉದ್ದೇಶ ಘನವಾಗಿದ್ದರೂ ದುರ್ಬಲ ಮನಸ್ಸಿನವರು ಇರಬಹುದು. ಇಂಥವರಿಗೆ ಸ್ವಲ್ಪ ಪಕ್ವತೆ ಬರಲು ಮಧ್ಯಂತರದ ಒಂದು ದೀಕ್ಷೆಯನ್ನು ಕೊಡಬೇಕು. ಅಧ್ಯಯನ ಮಾಡಿ ಜ್ಞಾನವನ್ನು ಸಂಪಾದಿಸಿಕೊಳ್ಳಲು ಸಾಧನೆ ಮಾಡಿ ಪಕ್ಷತೆ ಸಾಧಿಸಲು ಈ ದೀಕ್ಷೆ ನೆರವಾಗುತ್ತದೆ, ಬಿಳಿಯ ಬಟ್ಟೆಗಳನ್ನು ಧರಿಸಿ, ಇಷ್ಟಲಿಂಗ - ವಿಭೂತಿ - ರುದ್ರಾಕ್ಷಿ ಲಾಂಛನಗಳನ್ನು ಧರಿಸಿ ಈ ಸಾಧಕರು ತಮ್ಮ ಸಾಧನೆಯನ್ನು ಆರಂಭಿಸಬೇಕು. ಈ ದೀಕ್ಷೆಯನ್ನು ದಯಪಾಲಿಸುವಾಗ ಗುರುವು ಹೆಸರನ್ನು ಬದಲಾಯಿಸಬೇಕು. ಪೂರ್ವಾಶ್ರಮವು ನಿರಸನವಾಗಿ, ಹಳೆಯ ಜನ್ಮವು ಸತ್ತು ಹೊಸ ಜನ್ಮವು ಪ್ರಾಪ್ತಿಯಾಗುವ ವಿಶೇಷ ದೀಕ್ಷೆ ಇದು. ವೈದಿಕ ಧರ್ಮದಲ್ಲಿ ಬ್ರಹ್ಮಚರ್ಯ ದೀಕ್ಷೆ ಎನ್ನುತ್ತಾರೆ. ಇದಕ್ಕೆ ಶ್ರೀ ಚೆನ್ನಬಸವಣ್ಣನವರ ವಚನದಲ್ಲಿ ಸಾಧಕ ಗುರು, ಸಿದ್ಧಗುರು, ಅವತಾರಿಕ ಗುರು ಎಂಬ ವರ್ಗಿಕರಣವಿದೆ. ಆದ್ದರಿಂದ ಈ ದೀಕ್ಷೆಯನ್ನು ಸಾಧಕ ದೀಕ್ಷೆ ಎನ್ನಬಹುದು.
ಇನ್ನು ಕೆಲವರು ಪರಿಪಕ್ವ ಚೇತನಗಳಾಗಿ ಜಂಗಮ (ಸನ್ಯಾಸ) ದೀಕ್ಷೆ ಪಡೆಯುವ ಎಲ್ಲ ಅರ್ಹತೆ ಪಡೆದಿದ್ದರೂ ಸಹ ಕೆಲವೊಂದು ಕಾರ್ಯಭಾರದ ನಿಮಿತ್ತ ಬಿಳಿಯ ವಸ್ತ್ರಗಳಲ್ಲೇ ಇರಬಯಸುತ್ತಾರೆ. ಕಾವಿ ಬಟ್ಟೆ ಧರಿಸಿ ಊರುಗಳಲ್ಲಿ ಸಂಚರಿಸುತ್ತಿದ್ದರೆ, ಸರ್ಕಾರಿ ಕಛೇರಿಗಳಿಗೆ ಹೋಗಬೇಕಾಗಿ ಬಂದರೆ ಜನರ ವ್ಯಂಗ್ಯ ನೋಟ, ಕಟೊಕ್ತಿಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಆಂತರಂಗಿಕವಾಗಿ ವೈರಾಗ್ಯನಿಧಿಯಾಗಿ ಇದ್ದರೂ ಬಹಿರಂಗದಲ್ಲಿ ಎಲ್ಲರಂತೆ ಇರಲು ಬಿಳಿಯ ಬಟ್ಟೆಗಳನ್ನು ಧರಿಸಿ, ಹತ್ತರೊಳಗೆ ಹನ್ನೊಂದಾಗಿ ಇರಲು ಇಷ್ಟಪಡುತ್ತಾರೆ. ಇಂಥವರೂ ಸಾಧಕ (ಬ್ರಹ್ಮಚರ್ಯ) ದೀಕ್ಷೆಯನ್ನು ಪಡೆಯುವುದು ಒಳ್ಳೆಯದು. ಭಾರತ ದೇಶದಲ್ಲಿ ಎಲ್ಲ ಒಳ್ಳೆಯ ಮೌಲ್ಯಗಳು ಕುಸಿದಿರುವಂತೆ ಕಾವಿಯ ಮೌಲ್ಯವೂ ಕುಸಿದಿದೆ. ಕೆಲವರು ಮೂಢರನ್ನು ಮರುಳುಗೊಳಿಸಲು ಕಾವಿಯನ್ನು ಒಂದು ಸಾಧನವನ್ನಾಗಿ ಮಾಡಿಕೊಂಡಿದ್ದಾರೆ. ಅಂಥವರು ಕಾವಿಯನ್ನು ಹಾಕುವುದರಲ್ಲೂ ಪೂರ್ವಾಲೊಚನೆ ಮಾಡಿರುವುದಿಲ್ಲ; ತೆಗೆಯುವುದರಲ್ಲೂ ಹಿಂಜರಿಯುವುದಿಲ್ಲ. ನಾಟಕದ ವೇಷದಷ್ಟೆ ಸುಲಭವಾಗಿ ಹಾಕುತ್ತಾರೆ, ತೆಗೆಯುತ್ತಾರೆ. ಆದರೆ ಕೆಲವು ತತ್ತ್ವಗಳಿಗೆ ಬದ್ಧರಾದ ಗಂಭೀರವಂತರು ಹಾಗೆ ಹೊಣೆಯಿಲ್ಲದೆ ವರ್ತಿಸಲಾಗದು. ಇಂಥವರಿಗೆ ಕಾವಿ ಕೇವಲ ಒಂದು ಬಟ್ಟೆಯಲ್ಲ, ಅದು ತ್ಯಾಗದ ಸಂಕೇತ. ಚರ್ಮದಂತೆ; ಬಿಚ್ಚಿ ಎಸೆಯಲು ಬಾರದು ಎಂಬ ನಂಬಿಕೆ ಅಳವಡಿಸಬೇಕು. ಇಂಥವರು ತಮ್ಮನ್ನು ಪರೀಕ್ಷೆಗೆ ಒಳಪಡಿಸಿಕೊಳ್ಳಲು, ಗಟ್ಟಿಗೊಳ್ಳಲು ಮೊದಲು ಸಾಧಕ ದೀಕ್ಷೆಯನ್ನು ಪಡೆದುಕೊಂಡು ಬಿಳಿಯ ಬಟ್ಟೆಗಳನ್ನು ಧರಿಸಿಕೊಳ್ಳತ್ತಲಿದ್ದು, ನಂತರ ಜಂಗಮದೀಕ್ಷೆ ಪಡೆದು ಕಾವಿಯನ್ನು ಧರಿಸಿಕೊಳ್ಳಬೇಕು.
ಇದು ಮಧ್ಯಂತರದ ಅವಧಿ; ಗುರುವಿಗೂ ಶಿಷ್ಯನ ಜ್ಞಾನ-ಭಕ್ತಿ-ವೈರಾಗ್ಯಗಳನ್ನು ಪರೀಕ್ಷೆಗೊಳಪಡಿಸಲು ಸಮಯವು ಸಿಗುತ್ತದೆ. ಶಿಷ್ಯನ ಮನಸ್ಸು ದುರ್ಬಲವಾಗಿದ್ದರೆ ಅವನಿಗೆ ಪೂರ್ವಾಶ್ರಮಕ್ಕೆ, ಲೌಕಿಕ ಜೀವನಕ್ಕೆ ಮರಳಲು ಒಪ್ಪಿಗೆ ನೀಡಲೂ ಅವಕಾಶ ಇರುತ್ತದೆ. ಷಟ್ ಪ್ರಮಥರಲ್ಲಿ ಒಬ್ಬರಾದ ಶ್ರೀ ಸಿದ್ದರಾಮೇಶ್ವರು ಹೇಳುತ್ತಾರೆ:
ಭಕ್ತನ ಮನ ಹೆಣ್ಣಿನೊಳಗಾದಡೆ, ವಿವಾಹವಾಗಿ ಕೊಡುವುದು.
ಭಕ್ತನ ಮನ ಮಣ್ಣಿನೊಳಗಾದಡೆ, ಕೊಂಡು ಆಲಯವ ಮಾಡುವುದು
ಭಕ್ತನ ಮನ ಹೊನ್ನಿನೊಳಗಾದಡೆ, ಬಳಲಿ ದೊರಕಿಸುವುದು ನೋಡಾ
ಕಪಿಲಸಿದ್ದಮಲ್ಲಿಕಾರ್ಜುನಾ.
ವ್ಯಕ್ತಿಯು ವೈರಾಗ್ಯದ ಲಾಂಛನಗಳನ್ನು ಧರಿಸಿಕೊಂಡು ಸಮಾಜಕ್ಕೆ ವಂಚನೆ ಮಾಡುವ ಬದಲಿಗೆ, ಆ ಲಾಂಛನ ಧರಿಸದೆಯೇ ಪ್ರಾಮಾಣಿಕವಾಗಿ ಲೌಕಿಕ ಜೀವನ ನಡೆಸುವುದು ಲೇಸು ಎಂಬುದು ಶರಣರ ಧೋರಣೆಯಾಗಿರುವುದರಿಂದ, ಸಾಧಕ ದೀಕ್ಷೆ ಪಡೆದವನು ಜಂಗಮ ದೀಕ್ಷೆ ಪಡೆದು ಅದನ್ನು ತ್ಯಜಿಸಿ ಪಥ ಭ್ರಷ್ಟನಾಗುವುದಕ್ಕಿಂದಲೂ ಮಧ್ಯಂತರದ 'ಸಾಧಕ' ವೃತ್ತಿಯಿಂದ ಹಿಂದೆ ಸರಿದರೆ ಅಷ್ಟೊಂದು ಅಕ್ಷಮ್ಯ ಅಪರಾಧ ಎನಿಸದು; ಕ್ಷಮಾರ್ಹ ಅಪರಾಧವೆನಿಸುತ್ತದೆ. ಆದ್ದರಿಂದ ಅಧ್ಯಾತ್ಮಜೀವಿ ಗುರುವು ಸಾಧಕ (ಬ್ರಹ್ಮಚರ್ಯ) ದೀಕ್ಷೆ ಕೊಟ್ಟು ಮುಮುಕ್ಷುಗಳನ್ನು ತರಬೇತಿಗೊಳಿಸುವುದು ಶ್ರೇಯಸ್ಕರ.
ದೀಕ್ಷಾ ವಿಧಾನ.
ದೀಕ್ಷೆಯನ್ನು ನೀಡಲಿರುವ ಗುರುವು ತಾನು ಸ್ನಾನ-ಇಷ್ಟಲಿಂಗಪೂಜೆ ಮುಗಿಸಿ ಇಷ್ಟಲಿಂಗ ತೀರ್ಥವನ್ನು ಸಂಗ್ರಹಿಸಬೇಕು. ಗುರುಬಸವ ಮಂತ್ರದೊಡನೆ ಹಸ್ತೋದಕ (ಬಸವ ತೀರ್ಥ)ವನ್ನು ಸಿದ್ಧಪಡಿಸಬೇಕು. ಸಾಧಕ ದೀಕ್ಷೆಯನ್ನು ಪಡೆಯಲಿರುವ ಮುಮುಕ್ಷುವು ಇಷ್ಟರಲ್ಲಿ ಸ್ನಾನ-ಇಷ್ಟಲಿಂಗಾರ್ಜನೆ ಪೂರೈಸಿಕೊಂಡು ಬಂದು ಗುರುವಿನ ಸಮ್ಮುಖದಲ್ಲಿ ಕುಳಿತಿರುತ್ತಾನೆ. (ಸಾಧಕ ದೀಕ್ಷೆಯನ್ನು ಕೊಡುವ ಮೊದಲಿಗೇ ಇಷ್ಟಲಿಂಗ ದೀಕ್ಷೆಯನ್ನು ಕೊಟ್ಟಾಗಿರುವುದು ವ್ಯಕ್ತಿಯ ಇಷ್ಟಲಿಂಗ ನಿಷ್ಠೆ, ಅಧ್ಯಾತ್ಮದ ಹಂಬಲ, ಸಾಧನೆಯ ಆಸಕ್ತ ಗಮನಿಸಿ ಸ್ವಲ್ಪ ಕಾಲಾನಂತರವೇ ಗುರುವು ಸಾಧಕ ದೀಕ್ಷೆಯನ್ನು ಕೊಡಬೇಕು.) ತಟ್ಟೆಯಲ್ಲಿ ಪೂಜಾ ಸಾಮಗ್ರಿಗಳನ್ನು ಜೋಡಿಸಿಕೊಂಡಿರಬೇಕು. ಹಣ್ಣು, ಊದಿನಕಡ್ಡಿ, ಕರ್ಪೂರ, ರುದ್ರಾಕ್ಷಿ, ಕಲ್ಲುಸಕ್ಕರೆ ಇವು ತಟ್ಟೆಯಲ್ಲಿ ಹೊಂದಿಸಲ್ಪಟ್ಟಿರಬೇಕು. ಗುರುಗಳಿಗೆ ಶ್ರದ್ಧಾ-ಭಕ್ತಿಯಿಂದ ಪಾದಕ್ಕೆ ನಮಸ್ಕರಿಸಿ ಮೇಲೆದ್ದು ಕೈಮುಗಿದು ನಿಂತು ಹೀಗೆ ನುಡಿಯಬೇಕು.
ಸಂಸಾರವೆಂಬುದೊಂದು ಹಗೆಯಯ್ಯ ತಂದೆ
ಎನ್ನವಂಶವಂಶದಪ್ಪದೆ ಅರಸಿಕೊಂಡು ಬರುತ್ತಿದೆಯಯ್ಯಾ
ಎನ್ನುವನು ಅರಸಿಯರಸಿ ಹಿಡಿದುಕೊಲ್ಲುತ್ತಿದೆಯಯ್ಯಾ
ನಿಮ್ಮ ಮೊರೆಹೊಕ್ಕ ಕಾಯಯ್ಯಾ
ಎನ್ನ ಬಿನ್ನಪವನವಧಾರು ಚೆನ್ನಮಲ್ಲಿಕಾರ್ಜುನಾ.
ಮಹಾಮಹಿಮರಾದ ಗುರುಗಳೇ ಸಂಸಾರ, ಲೌಕಿಕ ಬಂಧನವು ದುಃಖಕಾರಕವೆಂದು ಇದನ್ನು ತ್ಯಜಿಸಿ ವೈರಾಗ್ಯ ಪಥವನ್ನು ಹಿಡಿಯಬೇಕೆಂದು ಸಂಕಲ್ಪಿಸಿದ್ದೇನೆ. ತಾವು ನನಗೆ ಸಾಧಕ ಲಾಂಛನಗಳನ್ನು ಕರುಣಿಸಬೇಕೆಂದು ಕೋರುತ್ತೇನೆ.
“ಬಸವ ಗುರುವಿನ ಇಚ್ಛೆಯಂತೆ ಹಾಗೆ ಆಗಲಿ” ಎಂದು ಕುಳಿತುಕೊಳ್ಳಲು ಸೂಚಿಸುವರು. ಗುರುಗಳು ಈಗ ಇಷ್ಟಲಿಂಗಾರ್ಚನೆಯನ್ನು ಮಾಡುವರು. ಆ ಕ್ರಮವನ್ನು ಸಾಧಕ ದೀಕ್ಷಾರ್ಥಿಯು ಗಮನಿಸಬೇಕು. ಈಗಾಗಲೇ ಸಾಧಕನಿಗೆ ಲಿಂಗ ದೀಕ್ಷೆಯು ಆಗಲಿರುವುದು. ತಾನು ಇನ್ನಿತರರಿಗೆ ಮಾಡುವ ಉದ್ದೇಶದಿಂದ ಈಗ ದೀಕ್ಷಾ ಕ್ರಮವನ್ನು ಗಮನಿಸಬೇಕು. ಗುರುವು ಇಷ್ಟಲಿಂಗಾರ್ಚನೆಯನ್ನು ಸಾಧಕನನ್ನು ಎದುರಿಗೇ ಕೂಡ್ರಿಸಿಕೊಂಡು, ಆತನೂ ಅದೇ ಕ್ರಮದಲ್ಲಿ ಇಷ್ಟಲಿಂಗಾರ್ಚನೆ ಮಾಡುವಂತೆ ಬೋಧಿಸುತ್ತ ಮಾಡಲೂಬಹುದು. ಪೂಜಾನಂತರ ಇಷ್ಟಲಿಂಗ ತೀರ್ಥವನ್ನು ಸಂಗ್ರಹಿಸಬೇಕು. ನಂತರ ಬಸವ ಗುರುವಿನ ಶ್ರೀಮೂರ್ತಿಯನ್ನಾಗಲಿ, ಭಾವಚಿತ್ರವನ್ನಾಗಲಿ ಪೂಜಿಸಲು ೧೦೮ ಬಾರಿ ಓಂ ಶ್ರೀ ಗುರುಬಸವಲಿಂಹಗಾಯನಮಃ ಪಠಿಸಿ ಪತ್ರೆ-ಪುಷ್ಪಗಳನ್ನು ಏರಿಸಲು ಸಾಧಕನಿಗೆ ತಿಳಿಸಬೇಕು. ಬಸವ ಲಿಂಗ ಮಂತ್ರಪಠಣ ಮತ್ತು ಆರತಿಯ ನಂತರ ಜಯಘೋಷ ಮಾಡಿ ಬಸವ ತೀರ್ಥ (ಹಸ್ತೋದಕ)ವನ್ನು ಸಿದ್ಧಪಡಿಸಬೇಕು.
ದೀಕ್ಷಾರ್ಥಿಯು ಈಗ ಶ್ರೀಗುರುಗಳ ಪಾದಪೂಜೆ ಮಾಡಿ, ಪಾದೋದಕವನ್ನು ಸಂಗ್ರಹಿಸಬೇಕು. ಗುರು-ಲಿಂಗ-ಜಂಗಮ ತ್ರಿವಿಧೋದಕ ಸಂಗ್ರಹವಾದ ಮೇಲೆ ಈಗ ದೀಕ್ಷಾಬೋಧೆ, ಗುರುಗಳು ಇಷ್ಟಲಿಂಗವನ್ನು ಅಂಗೈಯಲ್ಲಿ ಇಟ್ಟುಕೊಂಡು ಕೂರಲು ಹೇಳುವರು; ಮೊದಲು ಭಸ್ಮ ಧರಿಸಿ ನಂತರ ತಲೆಯ ಮೇಲೆ ಹಸ್ತವನ್ನಿಟ್ಟು “ಓಂ ಶ್ರೀಗುರುಬಸವಲಿಂಗಾಯನಮಃ” ಮಂತ್ರವನ್ನು ಬೋಧಿಸುವರು. ಈ ದ್ವಾದಶ ಪ್ರಣವವನ್ನು ೧೨ ಬಾರಿ ಉಚ್ಚರಿಸಿ ಸಾಧಕನು ಪುನರುಚ್ಚರಿಸುವಂತೆ ಹೇಳುವರು. ಮಂತ್ರೋಪದೇಶದ ನಂತರ ೨ ಬಾರಿ ಗುರು-ಲಿಂಗ-ಜಂಗಮ ತೀರ್ಥವನ್ನು ಎರೆದು ಕರುಣ ಪ್ರಸಾದ ಕೊಡುವರು. ಇಷ್ಟು ದಿನ ಕರಡಿಗೆ ಅಥವಾ ಬಟ್ಟೆಯ ಚೀಲದಲ್ಲಿ ಇಷ್ಟಲಿಂಗ ಧರಿಸಿಕೊಂಡು ಸಾಧಕನಿಗೆ ಈಗ ಬಿಳಿಯ ಅಥವಾ ಕಾವಿಯ ಲಿಂಗವಸ್ತ್ರವನ್ನು ಗುರುವು ಕರುಣಿಸುವನು. ಹೊಸ ಹೆಸರನ್ನು ಸಹ ೨ ಬಾರಿ ಉಚ್ಚರಿಸಿ, ಸುತ್ತ ಕುಳಿತ ಶರಣ ಗಣಂಗಳಿಂದ ಹೇಳಿಸುವನು.
ಬಿಳಿಯ ವಸ್ತ್ರಗಳನ್ನು ಕೊಟ್ಟು ಕೊರಳಿಗೆ ರುದ್ರಾಕ್ಷಿ ಮಾಲೆ ಹಾಕಿ ಈಗ ಪ್ರತಿಜ್ಞಾವಿಧಿ ಬೋಧಿಸುವನು.
ಬಸವ (ಲಿಂಗಾಯತ) ಧರ್ಮದ ಸಾಧಕ (ಬ್ರಹ್ಮಚರ್ಯ) ದೀಕ್ಷೆಯ ಪ್ರತಿಜ್ಞಾವಿಧಿ.
ಓಂ ಶ್ರೀಗುರುಬಸವಲಿಂಗಾಯನಮಃ
ಧರ್ಮಗುರು ಬಸವಣ್ಣನವರ ಸಾಕ್ಷಿಯಾಗಿ, ಜಗತ್ಕರ್ತ ಪರಮಾತ್ಮನ ಸಾಕ್ಷಿಯಾಗಿ ನಾನಿಂತು ಪ್ರತಿಜ್ಞೆಯನ್ನು ಸ್ವೀಕರಿಸುತ್ತೇನೆ.
ಶ್ರೀಗುರುಬಸವಂಗೆ ಶರಣಾಗಿಹೆ
ಲಿಂಗದೇವನಿಗೆ ಶರಣಾಗಿಹೆ
ಶರಣ ಗಣಕ್ಕೆ ಶರಣಾಗಿಹೆ
ಗಣಪದವಿಯನ್ನು ನಾ ಹೊಂದಿಹೆ.
|
|
|
1 | ಓಂ | ಜಗತ್ತನ್ನು ನಿರ್ಮಾಣ ಮಾಡಿದ ಸೃಷ್ಟಿಕರ್ತನ ಅಸ್ತಿತ್ವದಲ್ಲಿ ನಂಬಿಕೆ ಇಡುತ್ತೇನೆ. ಅವನು ಒಬ್ಬನೇ ಮತ್ತು ಪರಮೋನ್ನತ ಶಕ್ತಿ ಎಂದು ನಂಬಿ ಶರಣಾಗುತ್ತೇನೆ. |
2 | ಶ್ರೀ | ವಿಶ್ವಗುರು ಬಸವಣ್ಣನವರು ದೇವರು ಲೋಕೋದ್ಧಾರಕ್ಕಾಗಿ ಕಳುಹಿಸಿ ಕೊಟ್ಟ. ಪ್ರತಿನಿಧಿ, ಕಾರಣಿಕ, ದೇವರ ಕರುಣೆಯ ಕಂದ, ನಮ್ಮೆಲ್ಲರ ರಕ್ಷಕ ಎಂದು ನಂಬಿ ಶರಣಾಗುತ್ತೇನೆ. |
3 | ಗು | ಗುರು ಬಸವಣ್ಣನವರೇ ಆದಿ ಪ್ರಮಥರಾಗಿ, ಅವರ ಸಮಕಾಲೀನರು ಮತ್ತು ಅವರ ಪರಂಪರೆಯ ಶರಣರು ಕೊಟ್ಟ ವಚನ ಸಾಹಿತ್ಯವೇ ನನ್ನ ಧರ್ಮ ಸಂಹಿತೆ ಎಂದು ತಿಳಿದು ಶರಣ ಪಥದಲ್ಲಿ ನಡೆಯುತ್ತೇನೆ. |
4 | ರು | ಧರ್ಮಪಿತರು ವಿಶ್ವದಾಕಾರದಲ್ಲಿ ರೂಪಿಸಿಕೊಟ್ಟ ವಿಶ್ವಾತ್ಮನ ಕುರುಹಾದ ಇಷ್ಟಲಿಂಗವನ್ನು ಶ್ರದ್ಧೆಯಿಂದ ಧರಿಸಿ, ನಿಷ್ಠೆಯಿಂದ ನಿತ್ಯವೂ ಪೂಜಿಸುತ್ತೇನೆ. |
5 | ಬ | ಧರ್ಮಪಿತ ಬಸವಣ್ಣನವರು ಬಯಲಾದ ದಿವ್ಯಕ್ಷೇತ್ರ ಕೂಡಲ ಸಂಗಮವನ್ನು ನಮ್ಮ ಧರ್ಮಕ್ಷೇತ್ರವೆಂದು ನಂಬಿ ಸಂದರ್ಶಿಸುತ್ತೇನೆ. |
6 | ಸ | ಏಳು ದಿವಸಗಳ ವಾರದಲ್ಲಿ ಒಂದು ದಿವಸವಾದರೂ ಶರಣರ ಸಂಗದಲ್ಲಿ ಸೇರಿ ಕರ್ತನನ್ನು ಸ್ಮರಿಸಿ, ಧರ್ಮಪಿತರನ್ನು ಕೊಂಡಾಡಿ, ಗಣ ಮೇಳಾಪ-ಅನುಭವ ಗೋಷ್ಠಿಯಲ್ಲಿ ಭಾಗಿಯಾಗುತ್ತೇನೆ. ಪ್ರತಿವರ್ಷವೂ ಶಿವರಾತ್ರಿಯಂದು ಸ್ಥಳೀಯವಾಗಿ ನಡೆಯುವ ಗಣಮೇಳದಲ್ಲಿ ತಪ್ಪದೆ ಭಾಗಿಯಾಗುತ್ತೇನೆ. ಮತ್ತು ಗಣಮೇಳವನ್ನು ನಡೆಸುತ್ತೇನೆ. |
7 | ವ | ಸಾಧಕ ದೀಕ್ಷೆಯನ್ನು ಪಡೆದು ವೈರಾಗ್ಯ ಮಾರ್ಗದಲ್ಲಿ ನಡೆಯಲು ಬಯಸಿರುವ ನಾನು, ನಾನು ನನ್ನದು ಎಂಬ – ವ್ಯಾಮೋಹವನ್ನು, ಪೂರ್ವಾಶ್ರಮದ ಸಂಕೋಲೆಯನ್ನು ಹರಿದುಕೊಂಡು ತ್ಯಾಗಿಯಾಗಿ ಶ್ರೀಗುರುವು ನನಗೆ ವಿಧಿಸಿರುವ ಸತ್ಯಶುದ್ಧ ಕಾಯಕದಿಂದ ಧನವನ್ನು ಸಂಪಾದಿಸಿ, ದಾಸೋಹ ತತ್ತ್ವದ ಮೂಲಕ ಧರ್ಮ-ಸಮಷ್ಟಿಗಳ ಉದ್ಧಾರಕ್ಕೆ, ಧರ್ಮ ಪ್ರಚಾರಕ್ಕೆ ಗಳಿಕೆಯನ್ನು ವಿನಿಯೋಗಿಸುತ್ತೇನೆ. |
8 | ಲಿಂ | ವಿಶ್ವಗುರು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರ ಕೂಡಲ ಸಂಗಮದಲ್ಲಿ ಪ್ರತಿ ವರ್ಷವೂ ಬಸವ ಕ್ರಾಂತಿ ದಿನದಂದು ನಡೆಯುವ ಶರಣ ಮೇಳಕ್ಕೆ ಬರುತ್ತೇನೆ. ಜೀವಮಾನದಲ್ಲಿ ಒಮ್ಮೆಯಾದರೂ ಎಷ್ಟೇ ಅನಾನುಕೂಲತೆಗಳಿದ್ದರೂ ಬಂದು ಭಾಗಿಯಾಗಿ, ನನ್ನ ಧಾರ್ಮಿಕ ಅನುಯಾಯಿತ್ವವನ್ನು ಸ್ಥಿರೀಕರಿಸುತ್ತೇನೆ. |
9 | ಗಾ | ಪರಧನ, ಪರಸ್ತ್ರೀ / ಪರಪುರುಷ, ಪರದೈವಂಗಳಿಗೆ ಎಳಸುವುದಿಲ್ಲ. |
10 | ಯ | ಮಾಂಸಾಹಾರವನ್ನು, ಮದ್ಯಪಾನವನ್ನು ಮಾಡುವುದಿಲ್ಲ. |
11 | ನ | ಬಸವ ತತ್ತ್ವದ ಪಥದಲ್ಲಿ ನಡೆಯ ಬಯಸಿರುವ ನಾನು, ಅಲ್ಲಮಪ್ರಭು ಅಕ್ಕಮಹಾದೇವಿ, ಚನ್ನಬಸವಣ್ಣ, ಸಿದ್ದರಾಮೇಶ್ವರರಂತೆ ವಿರಕ್ತ ಜೀವನವನ್ನು ಸ್ವೀಕರಿಸಿ ನನ್ನ ತನು-ಮನ-ಧನ-ಸಮಯ-ಅಭಿಮಾನ-ಪ್ರಾಣ ಎಂಬ ಷಡಂಗಗಳನ್ನೂ ಬಸವ ಧರ್ಮದ ಏಳಿಗೆಗಾಗಿ ಮೀಸಲಿಡುತ್ತೇನೆ. ಸ್ವಧರ್ಮಿಯರನ್ನು ಧರ್ಮ ಬಂಧುಗಳೆಂದು, ಪರಧರ್ಮಿಯರನ್ನು ಸ್ನೇಹಿತರೆಂದು ಭಾವಿಸಿ ಆದರಿಸುತ್ತೇನೆ. |
12 | ಮಃ | ಧರ್ಮಪಿತರ ಸಂಕಲ್ಪದಂತೆ ಮರ್ತ್ಯಲೋಕದ ಈ ಕರ್ತನ ಕಮ್ಮಟದಲ್ಲಿ ಜಾತಿವರ್ಣವರ್ಗರಹಿತ ಧರ್ಮ ಸಹಿತ ಕಲ್ಯಾಣ(ದೈವೀ) ರಾಜ್ಯದ ನಿರ್ಮಾಣಕ್ಕೆ ನಿಷ್ಠೆಯಿಂದ ಪ್ರಯತ್ನ ಮಾಡುತ್ತೇನೆ. |
ಜಯ ಗುರು ಬಸವೇಶ ಹರಹರ ಮಹಾದೇವ ಎಂದು ಪ್ರತಿಜ್ಞಾ ಸ್ವೀಕಾರದ ಹಂತರ ಜಯಘೋಷ ಮಾಡಬೇಕು. ನಂತರ ಗುರುಗಳು ಅನುಗ್ರಹಿಸಿಕೊಟ್ಟ ಬಿಳಿಯ ಬಟ್ಟೆಗಳನ್ನು ಒಂದು ಕಡೆಗೆ ಹೋಗಿ ಧರಿಸಿಕೊಂಡು ಬಂದು ಸಾಧಕನು ಬಸವ ಭಾವಚಿತ್ರಕ್ಕೆ ನಮಸ್ಕರಿಸಿ, ತದನಂತರ ಗುರುಗಳಿಗೆ ನಮಸ್ಕರಿಸುವನು.
“ನನ್ನ ಗುರಿ ಪೂರ್ಣಗೊಳ್ಳುವಂತೆ ಆಶೀರ್ವದಿಸಿರಿ.” ಎನ್ನುವನು. ದೇವನ ಇಚ್ಛೆ..” ಎಂದು ಗುರುಗಳು ಮರುನುಡಿಯುವರು. ಕ್ರಿಯಾ ಮೂರ್ತಿ ದೀಕ್ಷೆಗಿಂತಲೂ, ಇಲ್ಲಿ ಹೆಚ್ಚಿನ ತ್ಯಾಗ, ಭಕ್ತಿ, ವೈರಾಗ್ಯ, ಸಮರ್ಪಣೆ ಇರುವುದರಿಂದ ಸಾಧಕ ಜೀವಿಯು ಲಿಂಗದೀಕ್ಷೆ, ಲಿಂಗಧಾರಣೆ, ಗೃಹಪ್ರವೇಶ ಮುಂತಾದ ವಿಧಿ ವಿಧಾನಗಳನ್ನು ನಡೆಸಲು ಹಕ್ಕುಳ್ಳವನಾಗಿರುವನು.
ಲಿಂಗಾಯತ ಸಂಸ್ಕಾರಗಳು ಎಂಬ ಡಾ. ಶಿವಾನಂದ ಗುಬ್ಬಣ್ಣನವರ ಪುಸ್ತಕದಲ್ಲಿ ಅಯ್ಯಾಚಾರ, ಉತ್ತರಾಧಿಕಾರ, ಪಟ್ಟಾಧಿಕಾರ ಎಂಬ ಮೂರು ವಿಧಿಗಳನ್ನು ಮಾತ್ರ ಕಾಣಿಸಿರುವುದನ್ನು ನೋಡಬಹುದು. ಸಂಪ್ರದಾಯದಲ್ಲಿ ಇರುವುದನ್ನು ಮಾತ್ರ ಇವರು ಬರೆದುದರಿಂದ ನಾವು ಈ ಕೃತಿಯಲ್ಲಿ ಜಂಗಮದೀಕ್ಷೆ ಬಗ್ಗೆ ಪ್ರಸ್ತಾಪಿಸದೆ ಇರುವುದನ್ನು ಪುಸ್ತಕದ ಅಥವಾ ಲೇಖಕರ ಅಧ್ಯಯನದ ಕೊರತೆ ಎಂದು ಭಾವಿಸಬೇಕಾಗಿಲ್ಲ. ರೂಢಿಗೊಂಡಿರುವ ಸಂಪ್ರದಾಯವು ಪ್ರತಿಶತ ೯೦% ಬಸವಾದಿ ಪ್ರಮಥರ ಸಿದ್ಧಾಂತಕ್ಕೆ ವಿರುದ್ಧವಾಗಿದೆ. “ಅಯ್ಯಾಚಾರವು ಜಂಗಮರ ಗಂಡು ಮಕ್ಕಳಿಗೆ ಮಾತ್ರ, ವಿರಕ್ತಿ ಯಾವುದಾದರೂ ಮಠಕ್ಕೆ ಪಟ್ಟಕ್ಕೆ ಬರುವವನಿಗೆ ಮಾತ್ರ, ಇನ್ನೊಬ್ಬರ ಉತ್ತರಾಧಿಕಾರಿಯಾದವನಿಗೆ ಮಾತ್ರ” ಎಂಬ ನಂಬಿಕೆ ಅನೇಕರಲ್ಲಿ ರೂಢಿಗೊಂಡಿದೆ.
ಆದರೆ ಸ್ವಯಂ ಪ್ರೇರಣೆಯಿಂದ ವೈರಾಗ್ಯ ಜೀವನಕ್ಕೆ ಬರುವವರಿಗೆ ಸಂಪ್ರದಾಯದಲ್ಲಿ ಅವಕಾಶವೇ ಇಲ್ಲದಿರುವುದನ್ನು ಗಮನಿಸಬೇಕು. ಹೀಗಾಗಿಯೇ ಚಿಕ್ಕದಾದರೂ ಸರಿಯೆ ಯಾವುದಾದರೊಂದು ಮಠಕ್ಕೆ ಅಧಿಕಾರಿಯಾದ ಕಾವಿಧಾರಿಗಳನ್ನು ಲಿಂಗವಂತ ಸಮಾಜದಲ್ಲಿ ಕಾಣುತ್ತೇವೆಯೇ ವಿನಾ ಸ್ವಯಂ ಪ್ರೇರಣೆಯ ಜಂಗಮರನ್ನಲ್ಲ. ಆದರೆ ಯಾವುದೇ ಮಠ-ಆಸ್ತಿಪಾಸ್ತಿಗಳ ಆಮಿಷಕ್ಕೊಳಗಾಗಿ ಬರದೆ, ದೇವರಿಗಾಗಿ ಧರ್ಮಗುರುವಿಗಾಗಿ ತ್ಯಾಗಮಾಡಿ ಬಂದ ನಿಜ ಜಂಗಮರು, ತತ್ತ್ವದ ಜಂಗಮರಿಂದಲೇ ಅದ್ಭುತವಾದ ಕಾರ್ಯಗಳು ಆಗುತ್ತಿವೆ ಎಂಬುದನ್ನೀಗ ಸಮಾಜವೂ ಅರಿಯತೊಡಗಿದೆ.