ಉತ್ತರಾಧಿಕಾರಿಯ ಆಯ್ಕೆ
ಸಾಭಾರಿಯಾದ ಜಂಗಮನು ಸಮಾಜದ ಲೇಸಿಗಾಗಿ ಅನೇಕ ಹೊಣೆಗಾರಿಕೆ ಹೊರುವನು. ಅನುಯಾಯಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ, ದಾಸೋಹ ಕಾರ್ಯಕ್ಕಾಗಿ, ಮಠದ ನಿರ್ವಹಣೆಗಾಗಿ ಆಸ್ತಿ-ಪಾಸ್ತಿಗಳನ್ನು ಮಾಡಬಹುದು. ಮಠ ಅದರ ಆಸ್ತಿ ಮುಂತಾದವುಗಳ ಸಂರಕ್ಷಣೆಗಾಗಿ ಮತ್ತು ಮಠದ ಉದಾತ್ತ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಉತ್ತರಾಧಿಕಾರಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ನಂತರ ಪಟ್ಟಾಧಿಕಾರವನ್ನು ವಹಿಸಿಕೊಡಬೇಕಾಗುತ್ತದೆ.
ಸಂಪ್ರದಾಯದಲ್ಲಿ ಈ ಆಯ್ಕೆಯ ವಿಧಾನವು ಬಹಳ ದೋಷಪೂರಿತವಾಗಿದೆ. ಬಹುಪಾಲು ಸಂಪ್ರದಾಯ ಮಠಗಳು ಜಂಗಮತ್ವವನ್ನು ಜಾತಿಗೆ ಸೀಮಿತಗೊಳಿಸಿ, ಅಯ್ಯನವರ ಪಂಗಡದಿಂದ ಆರಿಸುವರು. ಕೆಲವು ಮಠಗಳು ಈ ಆಚರಣೆಗೆ ಹೊರತಾಗಿದ್ದರೂ ತಮ್ಮ ಒಳಜಾತಿಯಿಂದಲೇ ವಟುವನ್ನು ಆರಿಸುವ ಪ್ರತಿ ಸಂಪ್ರದಾಯ ರೂಪಿಸಿದ್ದಾರೆ. ಇವೆರಡೂ ಬಸವಧರ್ಮದ ಮೂಲಭೂತ ಸಿದ್ಧಾಂತಕ್ಕೆ ಹೊಂದಿಕೆಯಾಗವು ಎಂಬುದು ಗಮನಾರ್ಹ. ಜಾತಿ ಪ್ರಧಾನ ವ್ಯವಸ್ಥೆ ಹೋಗಿ ಅರ್ಹತಾ ಪ್ರಧಾನ ವ್ಯವಸ್ಥೆ ಇರಬೇಕೆಂಬುದೇ ಬಸವ ಧರ್ಮದ ಮೂಲ ಪ್ರಣಾಳಿಕೆ.
ಎರಡನೆಯದಾಗಿ, ಅಧಿಕಾರದಲ್ಲಿರುವ ಮಠಾಧಿಕಾರಿ ತಮ್ಮ ಸಮೀಪದ ಬಂಧುವರ್ಗದಿಂದಲೇ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವುದುಂಟು. ಮತ್ತೂ ಕೆಲವೊಮ್ಮೆ ಕೆಲವರು ಹಾಸ್ಯ ಮಾಡುವಂತೆ ತಮ್ಮದೇ ಮಕ್ಕಳನ್ನು ಎಲ್ಲೆಲ್ಲಿಯೋ ಬೆಳಸಿ ಪುನಃ ಕರೆತಂದು ಅಧಿಕಾರ ನೀಡುವುದುಂಟು. ಒಂದು ಮನೆತನದ ಆಸ್ತಿಯನ್ನು ವಹಿಸಿಕೊಡುವಂತೆ ಮಠದ ಸ್ವಾಮಿತ್ವ ಕೊಡುವರು. ಸ್ವೀಕರಿಸುವವರೂ ಅಷ್ಟೇ, ಅಧ್ಯಾತ್ಮ ಜೀವನದಲ್ಲಿ ವೈರಾಗ್ಯ ಪಥದಲ್ಲಿ ವಿಶ್ವಾಸವಿಲ್ಲದಿದ್ದರೂ ತಮ್ಮ ದೊಡ್ಡಪ್ಪ, ಚಿಕ್ಕಪ್ಪ (ಕೆಲವೊಮ್ಮೆ) ತಮ್ಮ ಅಪ್ಪನ ಆಸ್ತಿ ಕೈಬಿಟ್ಟು ಹೋಗಬಾರದೆಂದು ತೋರಿಕೆಗೆ ಸ್ವಾಮಿಯಾಗುತ್ತಾರೆ.
ಧರ್ಮಪಿತರು ಪೂರ್ವಾಶ್ರಮದ ನಂಟನ್ನು ಜಂಗಮನು ತೊರೆಯಬೇಕು ಎಂದು ಕಡ್ಡಾಯವಾಗಿ ಹೇಳಿದ್ದರೂ ತಮ್ಮ ಸುತ್ತಲೂ ಬಂಧುಬಳಗವನ್ನು ತುಂಬಿಕೊಂಡು, ನಿಜ ಮುಮುಕ್ಷುಗಳನ್ನು ಹತ್ತಿರ ಸಹ ಸೇರಿಸದ ಮಠಾಧಿಕಾರಿಗಳೇ ಹೇರಳವಾಗಿರುವುದನ್ನು ಕಾಣಬಹುದು. ಧರ್ಮಪಿತ ಬಸವಣ್ಣನವರು ಗೃಹಸ್ಥರಿದ್ದರೂ ಅವರು ಶರಣರ ಪರಿವಾರವನ್ನೂ ಸುತ್ತಲೂ ಇಟ್ಟುಕೊಂಡಿದ್ದರು; ಬಹುಪಾಲು ಮಠಾಧಿಪತಿಗಳು ವಿರಕ್ತ (ಸಂಪ್ರದಾಯದವ)ರಿದ್ದರೂ ಬೇರೆ ಮುಮುಕ್ಷುಗಳನ್ನು ಹತ್ತಿರ ಸೇರಿಸದೆ, ಪೂರ್ವಾಶ್ರಮದ ಬಂಧುಗಳ ಪರಿವಾರವನ್ನೇ ಸಾಕುವುದನ್ನು ಕಾಣುತ್ತೇವೆ.
ಒಂದು ವೇಳೆ ಪೂರ್ವಾಶ್ರಮದ ಪರಿವಾರದಲ್ಲಿ ವೈರಾಗ್ಯಮೂರ್ತಿಗಳು, ಜ್ಞಾನಿಗಳು, ಅಧ್ಯಾತ್ಮಿಕ ಆಸಕ್ತಿ-ಹಂಬಲ ಉಳ್ಳವರು ಇದ್ದರೆ ಅವರನ್ನು ಆದರಿಸಲು, ಅನುಗ್ರಹಿಸಲು ಅಧಿಕಾರಕ್ಕೆ ತರಲು ಯಾವ ಅಡ್ಡಿಯೂ ಇಲ್ಲ. ಉದಾಹರಣೆಗೆ ಚನ್ನಬಸವಣ್ಣ, “ಇಂದೇ ಹುಟ್ಟಿದ ಕೂಸಿಗೆ ಇಂದೇ ಜವ್ವನವಾಯಿತ್ತು.” ಎಂಬಂತಹ ಸಾಧನೆ ಅವರದು. ಅಂಥವರನ್ನು ಪೂರ್ವಾಶ್ರಮದ ಬಂಧು ಎಂದು ಕಡೆಗಣಿಸಿದರೂ ತಪ್ಪಾಗುವುದು.
ಯೋಗ್ಯವೆನಿಸಿದ ಮುಮುಕ್ಷುವನ್ನು ಉತ್ತರಾಧಿಕಾರಿಯನ್ನಾಗಿ ಆಯ್ದುಕೊಳ್ಳಬೇಕು. ಆತನಿಗೆ ಲೌಕಿಕ ಶಿಕ್ಷಣದ ಜೊತೆಗೆ, ಅದಕ್ಕಿಂತ ಹೆಚ್ಚಾಗಿ ಪಾರಮಾರ್ಥಿಕ ತರಬೇತಿ ಕೊಡಬೇಕು. ನಮ್ಮಲ್ಲಿ ಬಹುಪಾಲು ಮಠಾಧೀಶರು ಆಯ್ದ ವಟುಗಳನ್ನು ಕಾಶಿಗೆ ಅಧ್ಯಯನಕ್ಕೆ ಕಳಿಸುತ್ತಾರೆ. ಇವರುಗಳಿಗೆ ಅಲ್ಲಿ ವೈದಿಕ ಮತ್ತು ಶೈವದ ತರಬೇತಿ ಸಿಗುವುದೇ ವಿನಾ ತನ್ನ ಧರ್ಮದ್ದು ಸಿಗದು. ವಚನ ವಾಜ್ಞಯದ ತರಬೇತಿ ಕೊಟ್ಟು, ಸಮಾಜದೊಡನೆ ಹೇಗೆ ವ್ಯವಹರಿಸಬೇಕು, ಜನ ಜಾಗೃತಿ ಮಾಡಬೇಕು ಎಂಬ ಬಗ್ಗೆ ವಾಸ್ತವಿಕ ತರಬೇತಿ ಸಿಗಬೇಕು. ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿಕೊಂಡವನಿಗೆ ಒಂದು ವಿಶಿಷ್ಟ ದಿನವನ್ನು ಆಯ್ದುಕೊಂಡು, ಅಂದು ದೀಕ್ಷೆ ಕೊಡಬೇಕು.
ಬಸವ ಭಾವಚಿತ್ರ-ಮಂತ್ರ ಸಹಿತವಾಗಿ ಕರಪತ್ರವನ್ನು ಮುದ್ರಿಸಬೇಕು. ಪೂರ್ವಾಶ್ರಮದ ಹೆಸರನ್ನು ಬದಲಿಸಿ ಹೊಸದಾದ ಶರಣ ಸಂಸ್ಕೃತಿಯ ಹೆಸರು ಇಡಬೇಕು. ಸಾಧ್ಯವಾದಷ್ಟೂ ಶರಣರ ಜಯಂತಿ, ಲಿಂಗೈಕ್ಯ ದಿನ ಮುಂತಾದ ವಿಶೇಷ ದಿನಗಳನ್ನು ಆಯ್ದುಕೊಳ್ಳಬೇಕೇ ವಿನಾ ಮುಹೂರ್ತ ನೋಡಬಾರದು.
ಪ್ರಾರಂಭದಲ್ಲಿ ಸ್ನಾನ ಮಾಡಿ ಮಡಿಯನ್ನುಟ್ಟು ವಟುವು ಬರುತ್ತಾನಷ್ಟೆ. ಆಗ ಗುರುಗಳಿಗೆ ಸಾಷ್ಟಾಂಗವೆರಗುತ್ತಾನೆ. ಎದ್ದು ನಮ್ರನಾಗಿ ಕೈ ಮುಗಿದು ನಿಲ್ಲುತ್ತಾನೆ. ಆಗ ಗುರುವು ಹೇಳುತ್ತಾನೆ :
“ಗುರುವಿನ ಮಾನಸಪುತ್ರನೇ ಶಿಷ್ಯ. ಈ ಸಂಬಂಧ ರಕ್ತ ಸಂಬಂಧಕ್ಕೆ ಸೀಮಿತವಾಗದೆ ಭಕ್ತಿ ಸಂಬಂಧದಿಂದ ಕೂಡಿದೆ. ನಿನ್ನನ್ನು ನನ್ನ ಅಧ್ಯಾತ್ಮಿಕ ಪುತ್ರನನ್ನಾಗಿ ಸ್ವೀಕರಿಸುವ ಸಂಕಲ್ಪ, ಹೊಂದಿ, ನನ್ನ ಜ್ಞಾನ ಸಂಪತ್ತಿಗೆ ಮಾತ್ರವಲ್ಲ ಸಮಾಜದ ಲೇಸಿಗಾಗಿ ಸಂಗ್ರಹಗೊಂಡಿರುವ ಈ ಸ್ಥಾವರ - ಜಂಗಮಾತ್ಮಕ ಆಸ್ತಿಗೂ ಗಣಸಾಕ್ಷಿಯಾಗಿ ಉತ್ತರಾಧಿಕಾರಿಯನ್ನಾಗಿ ಮಾಡಲು ಬಯಸಿದ್ದೇನೆ. ನಿನಗೆ ಒಪ್ಪಿಗೆಯೆ ??
'ಧರ್ಮಗುರು ಬಸವಣ್ಣನವರ ಸತ್ ಸಂಕಲ್ಪದಂತೆ ನಾನು ತಮ್ಮ ಪಾದಕ್ಕೆ ಶರಣಾಗಿದ್ದೇನೆ. ನನ್ನ ಬಾಳನ್ನು ರೂಪಿಸುವುದು ತಮಗೆ ಸೇರಿದ್ದು.” ಎಂದು ಶಿಷ್ಯನು ಉತ್ತರಿಸಬೇಕು.
ಶರಣರಾದ ...... .................................. ಅವರೇ ಈತನ ತಾಯಿ ತಂದೆಯರಾದ ನಿಮಗೆ ಒಪ್ಪಿಗೆ ಇದೆಯೆ ?” ಗುರುಗಳು ವಟುವಿನ ತಾಯಿ-ತಂದೆಯರನ್ನು ಕೇಳುವರು.
“ಗುರು-ಲಿಂಗ-ಜಂಗಮ ಸಾಕ್ಷಿಯಾಗಿ ಇಂದಿನಿಂದ ............................ .... ತಮ್ಮ ಮಗನೆಂದು ಘೋಷಿಸಿ, ಧರ್ಮಗುರುವಿನ ಸೇವೆಗೆ ನಮ್ಮ ಮಗನನ್ನು ಒಪ್ಪಿಸುತ್ತಿದ್ದೇವೆ.” ಆಗ ದೀಕ್ಷಾರ್ಥಿಯು ತಾಯಿ ತಂದೆಗಳಿಗೆ ನಮಸ್ಕರಿಸುವನು. ತಾಯಿ ತಂದೆ ಕರೆದೊಯ್ದು ಗುರುಗಳ ಮುಂದೆ ಕುಳ್ಳಿರಿಸುವರು. ತಾಯಿ-ತಂದೆ-ಬಂಧು-ಬಳಗದ ಒಪ್ಪಿಗೆ ಇಲ್ಲದಿದ್ದಾಗ ಈ ಪ್ರಸಂಗ ಇರುವುದಿಲ್ಲ.
ಬಸವ (ಲಿಂಗಾಯತ) ಧರ್ಮದ ಜಂಗಮ (ಎರಕ್ತ) ದೀಕ್ಷೆಯ ಪ್ರತಿಜ್ಞಾ ವಿಧಿ
ಓಂ ಶ್ರೀ ಗುರು ಬಸವಲಿಂಗಾಯ ನಮಃ ಧರ್ಮಗುರು ಬಸವಣ್ಣನವರ ಸಾಕ್ಷಿಯಾಗಿ, ಜಗತ್ಕರ್ತ ಪರಮಾತ್ಮನ ಸಾಕ್ಷಿಯಾಗಿ,ಸರ್ವ ಶರಣರ ಸಾಕ್ಷಿಯಾಗಿ ನಾನಿಂತು ಪ್ರತಿಜ್ಞೆಯನ್ನು ಸ್ವೀಕರಿಸುತ್ತೇನೆ.
ಶ್ರೀ ಗುರುಬಸವಂಗೆ ಶರಣಾಗಿಹೆ
ಲಿಂಗದೇವನಿಗೆ ಶರಣಾಗಿಹೆ
ಶರಣ ಗಣಕ್ಕೆ ಶರಣಾಗಿಹೆ
ಗಣಪದವಿಯನ್ನು ನಾ ಹೊಂದಿಹೆ.
|
|
|
1 | ಓಂ | ಜಗತ್ತನ್ನು ನಿರ್ಮಾಣ ಮಾಡಿದ ಸೃಷ್ಟಿಕರ್ತನ ಅಸ್ತಿತ್ವದಲ್ಲಿ ನಂಬಿಕೆ ಇಡುತ್ತೇನೆ. ಅವನು ಒಬ್ಬನೇ ಮತ್ತು ಪರಮೋನ್ನತ ಶಕ್ತಿ ಎಂದು ನಂಬಿ ಶರಣಾಗುತ್ತೇನೆ. |
2 | ಶ್ರೀ | ವಿಶ್ವಗುರು ಬಸವಣ್ಣನವರು ದೇವರು ಲೋಕೋದ್ಧಾರಕ್ಕಾಗಿ ಕಳುಹಿಸಿ ಕೊಟ್ಟ. ಪ್ರತಿನಿಧಿ, ಕಾರಣಿಕ, ದೇವರ ಕರುಣೆಯ ಕಂದ, ನಮ್ಮೆಲ್ಲರ ರಕ್ಷಕ ಎಂದು ನಂಬಿ ಶರಣಾಗುತ್ತೇನೆ. |
3 | ಗು | ಗುರು ಬಸವಣ್ಣನವರೇ ಆದಿ ಪ್ರಮಥರಾಗಿ, ಅವರ ಸಮಕಾಲೀನರು ಮತ್ತು ಅವರ ಪರಂಪರೆಯ ಶರಣರು ಕೊಟ್ಟ ವಚನ ಸಾಹಿತ್ಯವೇ ನನ್ನ ಧರ್ಮ ಸಂಹಿತೆ ಎಂದು ತಿಳಿದು ಶರಣ ಪಥದಲ್ಲಿ ನಡೆಯುತ್ತೇನೆ. |
4 | ರು | ಧರ್ಮಪಿತರು ವಿಶ್ವದಾಕಾರದಲ್ಲಿ ರೂಪಿಸಿಕೊಟ್ಟ ವಿಶ್ವಾತ್ಮನ ಕುರುಹಾದ ಇಷ್ಟಲಿಂಗವನ್ನು ಶ್ರದ್ಧೆಯಿಂದ ಧರಿಸಿ, ನಿಷ್ಠೆಯಿಂದ ನಿತ್ಯವೂ ಪೂಜಿಸುತ್ತೇನೆ. |
5 | ಬ | ಧರ್ಮಪಿತ ಬಸವಣ್ಣನವರು ಬಯಲಾದ ದಿವ್ಯಕ್ಷೇತ್ರ ಕೂಡಲ ಸಂಗಮವನ್ನು ನಮ್ಮ ಧರ್ಮಕ್ಷೇತ್ರವೆಂದು ನಂಬಿ ಸಂದರ್ಶಿಸುತ್ತೇನೆ. |
6 | ಸ | ಏಳು ದಿವಸಗಳ ವಾರದಲ್ಲಿ ಒಂದು ದಿವಸವಾದರೂ ಶರಣರ ಸಂಗದಲ್ಲಿ ಸೇರಿ ಕರ್ತನನ್ನು ಸ್ಮರಿಸಿ, ಧರ್ಮಪಿತರನ್ನು ಕೊಂಡಾಡಿ, ಗಣ ಮೇಳಾಪ-ಅನುಭವ ಗೋಷ್ಠಿಯಲ್ಲಿ ಭಾಗಿಯಾಗುತ್ತೇನೆ. ಪ್ರತಿವರ್ಷವೂ ಶಿವರಾತ್ರಿಯಂದು ಸ್ಥಳೀಯವಾಗಿ ನಡೆಯುವ ಗಣಮೇಳದಲ್ಲಿ ತಪ್ಪದೆ ಭಾಗಿಯಾಗುತ್ತೇನೆ. ಮತ್ತು ಗಣಮೇಳವನ್ನು ನಡೆಸುತ್ತೇನೆ. |
7 | ವ | ಜಂಗಮ ದೀಕ್ಷೆಯನ್ನು ಪಡೆದು ವೈರಾಗ್ಯ ಮಾರ್ಗದಲ್ಲಿ ನಡೆಯಲು ಬಯಸಿರುವ ನಾನು, ನಾನು ನನ್ನದು ಎಂಬ – ವ್ಯಾಮೋಹವನ್ನು, ಪೂರ್ವಾಶ್ರಮದ ಸಂಕೋಲೆಯನ್ನು ಹರಿದುಕೊಂಡು ತ್ಯಾಗಿಯಾಗಿ ಶ್ರೀಗುರುವು ನನಗೆ ವಿಧಿಸಿರುವ ಸತ್ಯಶುದ್ಧ ಕಾಯಕದಿಂದ ಧನವನ್ನು ಸಂಪಾದಿಸಿ, ದಾಸೋಹ ತತ್ತ್ವದ ಮೂಲಕ ಧರ್ಮ-ಸಮಷ್ಟಿಗಳ ಉದ್ಧಾರಕ್ಕೆ, ಧರ್ಮ ಪ್ರಚಾರಕ್ಕೆ ಗಳಿಕೆಯನ್ನು ವಿನಿಯೋಗಿಸುತ್ತೇನೆ. |
8 | ಲಿಂ | ವಿಶ್ವಗುರು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರ ಕೂಡಲ ಸಂಗಮದಲ್ಲಿ ಪ್ರತಿ ವರ್ಷವೂ ಬಸವ ಕ್ರಾಂತಿ ದಿನದಂದು ನಡೆಯುವ ಶರಣ ಮೇಳಕ್ಕೆ ಬರುತ್ತೇನೆ. ಜೀವಮಾನದಲ್ಲಿ ಒಮ್ಮೆಯಾದರೂ ಎಷ್ಟೇ ಅನಾನುಕೂಲತೆಗಳಿದ್ದರೂ ಬಂದು ಭಾಗಿಯಾಗಿ, ನನ್ನ ಧಾರ್ಮಿಕ ಅನುಯಾಯಿತ್ವವನ್ನು ಸ್ಥಿರೀಕರಿಸುತ್ತೇನೆ. |
9 | ಗಾ | ಪರಧನ, ಪರಸ್ತ್ರೀ / ಪರಪುರುಷ, ಪರದೈವಂಗಳಿಗೆ ಎಳಸುವುದಿಲ್ಲ. |
10 | ಯ | ಮಾಂಸಾಹಾರವನ್ನು, ಮದ್ಯಪಾನವನ್ನು ಮಾಡುವುದಿಲ್ಲ. |
11 | ನ | ಬಸವ ತತ್ತ್ವ ಪಥದಲ್ಲಿ ನಡೆಯಬಯಸಿರುವ ನಾನು, ಅಲ್ಲಮ ಪ್ರಭು ಅಕ್ಕಮಹಾದೇವಿ, ಚನ್ನಬಸವಣ್ಣ - ಸಿದ್ಧರಾಮೇಶ್ವರರಂತೆ ವಿರಕ್ತ ಜೀವನವನ್ನು ಸ್ವೀಕರಿಸಿ ನನ್ನ ತನು-ಮನ-ಧನ-ಸಮಯ ಅಭಿಮಾನ ಪ್ರಾಣ ಎಂಬ ಷಡಂಗಗಳನ್ನೂ ಬಸವಧರ್ಮದ ಏಳಿಗೆಗಾಗಿ ಮೀಸಲಿಡುತ್ತೇನೆ. |
12 | ಮಃ | ಧರ್ಮಪಿತರ ಸಂಕಲ್ಪದಂತೆ ಮರ್ತ್ಯಲೋಕದ ಈ ಕರ್ತನ ಕಮ್ಮಟದಲ್ಲಿ ಜಾತಿವರ್ಣವರ್ಗರಹಿತ ಧರ್ಮ ಸಹಿತ ಕಲ್ಯಾಣ(ದೈವೀ) ರಾಜ್ಯದ ನಿರ್ಮಾಣಕ್ಕೆ ನಿಷ್ಠೆಯಿಂದ ಪ್ರಯತ್ನ ಮಾಡುತ್ತೇನೆ. |
ಜಯ ಗುರು ಬಸವೇಶ ಹರಹರ ಮಹಾದೇವ ಎಂದು ಪ್ರತಿಜ್ಞಾ ಸ್ವೀಕಾರದ ಹಂತರ ಜಯಘೋಷ ಮಾಡಬೇಕು. ಜಯಘೋಷದ ನಂತರ ಗುರುಗಳ ಪಾದಕ್ಕೆ ವಂದಿಸುವನು;
ಪ್ರತಿಜ್ಞಾವಿಧಿಯ ನಂತರ ಜಂಗಮ ದೀಕ್ಷೆಯಲ್ಲಿ ಇರುವ ಕ್ರಮಗಳಂತೆ ಮುಂದುವರಿದು, ಕಡೆಯಲ್ಲಿ ಅಧಿಕಾರ ಪತ್ರವನ್ನು ಅಧಿಕೃತವಾಗಿ ಬರೆಸಿ ಅದಕ್ಕೆ ಉಭಯತರೂ ಸಹಿ ಮಾಡಿ ಬಸವಣ್ಣನವರ ಭಾವಚಿತ್ರದ ಮುಂದಿಟ್ಟು ಮಹಾಮಂಗಲ ಮಾಡಬೇಕು. ಅಂದೇ ಆಗಲಿ, ಮರುದಿನವಾಗಲಿ ನೋಂದಣಿ ಮಾಡಿಸಬಹುದು.
ಕೆಲವು ಮಹತ್ವದ ಸೂಚನೆಗಳು ಮತ್ತು ತಿದ್ದುಪಡಿಗಳು
೧. ಸಂಪ್ರದಾಯದಲ್ಲಿ ಅಯ್ಯಾಚಾರ ಹೊಂದಿದ ಅಯ್ಯನವರ ವಟುವನ್ನು ಮಾತ್ರ ಉತ್ತರಾಧಿಕಾರಕ್ಕೆ ಆಯ್ಕೆ ಮಾಡಲಾಗುವುದು. ಬಸವ ಧರ್ಮದಲ್ಲಿ ಇದು ಸಂವಿಧಾನಾತ್ಮಕವಲ್ಲ. ವೈರಾಗ್ಯಭಾವ ಬಲಿತ ಯಾರೇ ಆಗಲಿ ಅವನಿಗೆ ಮೊದಲು ಲಿಂಗದೀಕ್ಷೆ ನೀಡಿ, ಕೆಲವು ಕಾಲಾನಂತರ ಜಂಗಮ ದೀಕ್ಷೆ ಉತ್ತರಾಧಿಕಾರ ನೀಡಬಹುದು.
೨. ಸಂಪ್ರದಾಯದಲ್ಲಿ ಪಂಚಾಮೃತ ಸಹಿತ ಅಭ್ಯಂಗನ ಸ್ನಾನ ಮಾಡಿಸಲಾಗುವುದು. ಬಸವ ಧರ್ಮದ ತತ್ತ್ವದ ಪ್ರಕಾರ ಆಪ್ಯಾಯನ ಪ್ರಸಾದವನ್ನು ಕೆಡಿಸಬಾರದೆಂದು ಇಷ್ಟಲಿಂಗಕ್ಕೆ ಸಹ ಪಂಚಾಮೃತಾಭಿಷೇಕ ಮಾಡದಿರುವುದರಿಂದ ಸ್ನಾನಕ್ಕೆ ಬಳಸಲೇ ಕೂಡದು. ಎಣ್ಣೆ ಮಾತ್ರ ಹಚ್ಚಿ ಸಿಗೇಕಾಯಿ ಪುಡಿ, ಸಾಬೂನು ಹಚ್ಚಿ, ಶುದ್ಧಜಲದಿಂದ ಮಾತ್ರ ಮೈತೊಳೆದುಕೊಳ್ಳಬೇಕು.
೩. ಗುರುವರ್ಗದ ಸಂಪ್ರದಾಯದಲ್ಲಿ ಪಂಚ ಕಳಸ ಹೂಡಲಾಗುವುದು. ಬಸವ ಧರ್ಮದಲ್ಲಿ ಧರ್ಮಗುರು ಬಸವಣ್ಣನ ಭಾವಚಿತ್ರದ ದಿವ್ಯ ಸನ್ನಿಧಿಯಲ್ಲಿ ಆರು ಕಲಶ ಸಹಿತ ದೀಪಾರತಿಗಳನ್ನು ಅಥವಾ ದೀಪ ಸ್ತಂಭಗಳನ್ನು ಇಡಬೇಕು. ಈ ಆರತಿಗಳು ಷಟ್ ಪ್ರಮಥರನ್ನು ಸಂಕೇತಿಸುತ್ತವೆ.
ಧರ್ಮಗುರು ಬಸವಣ್ಣನವರು, ಶೂನ್ಯ ಪೀಠಾಧೀಶ ಅಲ್ಲಮಪ್ರಭು ದೇವರು, ಚಿನ್ಮಯಜ್ಞಾನಿ ಚನ್ನ ಬಸವಣ್ಣ, ವೀರವೈರಾಗ್ಯ ನಿಧಿ ಅಕ್ಕಮಹಾದೇವಿ, ಶಿವಯೋಗಿ ಸಿದ್ದರಾಮೇಶ್ವರರು, ತತ್ತ್ವವೀರ ಮಡಿವಾಳ ಮಾಚಿದೇವರು, ಇವರೇ ಷಟ್ ಪ್ರಮಥರು.
೪. ಸಂಪ್ರದಾಯದಲ್ಲಿ ಒಂದೊಂದು ಕಳಸದ ಹಿಂದೆ ಆಯಾ ಗೋತ್ರಗಳ ಮಠಾಧೀಶರು ಕುಳಿತಿರುತ್ತಾರೆ. ಬಸವ ಧರ್ಮದಲ್ಲಿ ಸದ್ಯದ ಮಠಾಧೀಶನು ಮಾತ್ರ ದೀಕ್ಷೆ ನೀಡುತ್ತಾನೆ. ಒಂದು ವೇಳೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಮುನ್ನವೇ ಮಠಾಧ್ಯಕ್ಷನು ಲಿಂಗೈಕ್ಯನಾಗಿದ್ದರೆ ಆಗ ಬಸವ ತತ್ತ್ವ ನಿಷ್ಠರಾದ ಬೇರೆ ಮಠಾಧ್ಯಕ್ಷರಿಂದ ಉತ್ತರಾಧಿಕಾರಿಗೆ ದೀಕ್ಷೆ ಕೊಡಿಸಬಹುದು. ಉತ್ತರಾಧಿಕಾರಿಯನ್ನು ಮಠದ ಭಕ್ತರು, ಅಭಿಮಾನಿಗಳೂ ಆಗ ಆಯ್ಕೆ ಮಾಡುವರು.
೫. ಸಂಪ್ರದಾಯದಲ್ಲಿ ಮೊದಲು ಗುರುವು ಶಿಷ್ಯನಿಗೆ ಪಾದೋದಕ ಪ್ರಸಾದ ಕರುಣಿಸುತ್ತಾನೆ. ನಂತರ ಶಿಷ್ಯನೂ ಪ್ರತಿಯಾಗಿ ಗುರುವಿಗೆ ಪಾದೋದಕ ಪ್ರಸಾದ ಕರುಣಿಸುತ್ತಾನೆ. ಗುರು-ಶಿಷ್ಯರಲ್ಲಿ ಸಮಾನತೆ ಕಲ್ಪಿಸುವ ಸಂಕೇತವಾಗಿ ಪಾದೋದಕ ಪ್ರಸಾದ ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂದು ಈ ಸಾಂಪ್ರದಾಯಿಕ ಆಚರಣೆಯನ್ನು ಕೆಲವರು ಅರ್ಥೈಸುತ್ತಾರೆ. ಆದರೆ ಇದು ಸೂಕ್ತವಲ್ಲ: ಯಾವಾಗಿನಿಂದ ಬಂದಿತೋ ಅರಿಯುವುದು ಕಷ್ಟಕರ. ಶಿವಯೋಗಿ ಸಿದ್ದರಾಮೇಶ್ವರರು ಮಹಾಜ್ಞಾನಿಗಳು, ಸಿದ್ಧಪುರುಷರು. ಅಂಥವರು ತಮ್ಮ ದೀಕ್ಷಾಗುರು ಚನ್ನಬಸವಣ್ಣ ಮತ್ತು ಗುರುವಿನ ಗುರು ಧರ್ಮಗುರು ಬಸವಣ್ಣನವರ ಎದುರಿಗೆ ಗದ್ದುಗೆಯನ್ನೇರಿ ಪೂಜೆ ಮಾಡಿಸಿಕೊಳ್ಳಲಿಕ್ಕೆ ಸಂಕೋಚಪಡುವುದನ್ನು ಕಾಣುತ್ತೇವೆ. ಅಂದಾಗ ಗುರುವಿನ ಕೈಯಿಂದ ಪಾದಪೂಜೆ ಮಾಡಿಸಿಕೊಳ್ಳುವುದಾಗಲೀ ಗುರುವಿಗೆ ಪಾದೋದಕ, ಪ್ರಸಾದ ಕೊಡುವುದಾಗಲಿ ಶಿಷ್ಯನಿಗೆ ಮುಜುಗರ ಉಂಟು ಮಾಡುವ ಪ್ರಸಂಗಗಳು * ಲೌಕಿಕ ಜೀವನದಲ್ಲಿ ತಾಯಿ ಎಷ್ಟೇ ದಡ್ಡಳು, ದೀನಳು, ದುರ್ಬಲಳು ಇದ್ದರೂ ಮಕ್ಕಳು ಎಷ್ಟೇ ಬುದ್ಧಿವಂತರು, ಬಲಿಷ್ಠರು, ಕೀರ್ತಿವಂತರಿದ್ದರೂ ತಾಯಿಯನ್ನು ಹೇಗೆ ಅಗೌರವಿಸರೋ ಹಾಗೆ ಗುರುವಿಗಿಂತಲೂ ಶಿಷ್ಯ ಮೇಧಾವಿಯೂ, ಜ್ಞಾನಿಯೂ, ವಿದ್ಯಾವಂತನು ಇದ್ದರೂ ಗುರುವಿಗೆ ಪಾದೋದಕ-ಪ್ರಸಾದ ನೀಡುವುದು ಅಷ್ಟೊಂದು ಸೂಕ್ತವಲ್ಲ. ಈ ಬದಲಾವಣೆ ಅತ್ಯಗತ್ಯ. ದೀಕ್ಷಾಗುರು ಒಬ್ಬರನ್ನು ಬಿಟ್ಟು ಉಳಿದವರು ಬೇಕಾದಷ್ಟು ಗೌರವಿಸಲಿ. ಉತ್ತರಾಧಿಕಾರವನ್ನು ನೀಡಿದ ಬಳಿಕ ಗುರುವು ಉತ್ತರಾಧಿಕಾರಿಯನ್ನು ತನ್ನ ಜೊತೆಗೆ ಇರಿಸಿಕೊಂಡು ಪ್ರಾಯೋಗಿಕ ತರಬೇತಿ ಕೊಡಬೇಕು. ಶಿಷ್ಯನಿಗೂ ಗುರುಗಳ ಸೇವೆ ಮಾಡಬೇಕೆಂಬ ಹಂಬಲವಿರಬೇಕು. ಗುರು-ಶಿಷ್ಯ ಸಂಬಂಧ ಯಾಂತ್ರಿಕವೂ, ಕೃತಕವೂ ಆಗಿರದೆ ತಂದೆ-ಮಗನ ಸಂಬಂಧದಂತೆ ಇರಬೇಕು. ಧರ್ಮಪಿತ ಬಸವಣ್ಣನವರು ಮತ್ತು ಅವರ ಕರಕಮಲ ಸಂಜಾತ ಚನ್ನಬಸವಣ್ಣನವರು, ರಾಮಕೃಷ್ಣ ಪರಮಹಂಸರು ವಿವೇಕಾನಂದರು ಆದರ್ಶ ಗುರು-ಶಿಷ್ಯ ಸಂಬಂಧಕ್ಕೆ ಜ್ವಲಂತ ಉದಾಹರಣೆ. ಒಮ್ಮೆ ವಿಶೇಷವಾದ ಪ್ರಸಾದವನ್ನು ಬಸವಣ್ಣನವರಿಗೆ ಎಡೆಮಾಡಿದಾಗ ಮಡದಿಯ ಮೇಲೆ ಮುನಿಸಿಕೊಂಡು ಚನ್ನಬಸವಣ್ಣನಿಗೆಂದು ತೆಗೆದಿರಿಸುವುದನ್ನು ಕಾಣುತ್ತೇವೆ. ಶ್ರೀ ರಾಮಕೃಷ್ಣ ಪರಮಹಂಸರು ಉಂಡೆಯನ್ನು ಇಟ್ಟುಕೊಂಡು ವಿವೇಕಾನಂದರ ಬರವನ್ನು ಕಾಯುವುದನ್ನು ಕಾಣುತ್ತೇವೆ.
ಆದರೆ, ಸಾಮಾನ್ಯ ಜನರ ನಡಾವಳಿಯಲ್ಲಿ ಇದು ಅಗತ್ಯವಿಲ್ಲ. ಅಪಕ್ವಮತಿಗಳಾದ ಶಿಷ್ಯರಿದ್ದರೆ ಗುರುಗಳು ಕೊಟ್ಟ ಗೌರವದಿಂದ ಇದೊಂದು ಧಾರ್ಮಿಕ ಸಂಪ್ರದಾಯ ಎಂದು ವಿನಯದಿಂದ ಸ್ವೀಕರಿಸದೆ, ಅಹಂಕಾರದಿಂದ ಬೀಗುವ ಅಪಾಯವಿರುತ್ತದೆ.
ಕಾರಣಾಂತರದಿಂದ ಉತ್ತರಾಧಿಕಾರ ಕೈತಪ್ಪಿ ಹೋದರೆ, ಉತ್ತರಾಧಿಕಾರಿಯಾಗಿ ನೇಮಕವಾಗಿದ್ದವರು ಗುರುಗಳ ವಿರುದ್ಧ ಮಠದ ವಿರುದ್ಧ ನ್ಯಾಯಾಲಯದ ಕಟ್ಟೆ ಹತ್ತುವುದನ್ನು, ಗುಂಪುಗಳನ್ನೂ ಕಟ್ಟಿ ಪರಸ್ಪರ ಹೊಡೆದಾಡುವುದನ್ನು ಕಾಣುತ್ತೇವೆ. ಇದು ಅಧ್ಯಾತ್ಮ ಜೀವಿಗಳ ಪ್ರವೃತ್ತಿಯಲ್ಲ. ಜಗತ್ತನ್ನೇ ಸಾಕಿ ಸಲಹುವ ಪರಮಾತ್ಮನು ತನ್ನನ್ನು ರಕ್ಷಿಸನೆ ? ಸಮಾಜ-ಜಗತ್ತು ವಿಶಾಲವಾಗಿದೆ ಎಂದು ಭಾವಿಸಿ ಸ್ವಾವಲಂಬಿಗಳಾಗಿ ಬದುಕಿ ತೋರಿಸಬೇಕೇ ವಿನಾ ಲೌಕಿಕರು ಆಸ್ತಿಪಾಸ್ತಿಗೆ ಬಡಿದಾಡಿದಂತೆ ಅಧ್ಯಾತ್ಮ ಜೀವಿಗಳು ಬಡಿದಾಡಬಾರದು.