Previous ಮದುವೆ ದಿವಸ : ಭಾಗ-೧ ಮಂಗಳ ಮಜ್ಜನ ಮದುವೆ ದಿವಸ : ಭಾಗ-೩ ಕ್ರಿಯಾಮೂರ್ತಿಗೆ ಹೊಣೆಗಾರಿಕೆ Next

ಮದುವೆ ದಿವಸ

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ಭಾಗ-೨ ಪೂಜಾವ್ರತ


ವಧು-ವರರು ಕುರ್ಚಿ ಮೇಲೆ ಕುಳಿತರೂ ಅಡ್ಡಲಾಗದಂತೆ ಎತ್ತರವಾದ ವೇದಿಕೆ ರಚಿಸಿ ಬಸವಣ್ಣನವರ ಒಂದು ದೊಡ್ಡ ಭಾವಚಿತ್ರ ಇಟ್ಟು ಅದಕ್ಕೆ ಸುಂದರವಾದ ಮಂಟಪ ಕಟ್ಟಿ ಅಲಂಕರಿಸಬೇಕು. ಅದಕ್ಕೆ ಒಳ್ಳೆಯ ಮಾಲೆ ಹಾಕಿ ಇಟ್ಟಿರಬೇಕು.

ಈಗ ಪೂಜಾವ್ರತ ನಿರ್ವಹಿಸಲು ಇನ್ನೊಂದು ಭಾವಚಿತ್ರ ಸಿದ್ಧಪಡಿಸಿಕೊಂಡಿರಬೇಕು.

ಒಂದು ಮಣೆ ತೆಗೆದುಕೊಂಡು ಅದರ ಮೇಲೆ ವರ್ತುಳವೊಂದನ್ನು ರಚಿಸಿ, ಷಟ್ಕೋನ ಚಿತ್ರವನ್ನು ಬರೆಯಬೇಕು. ಮಧ್ಯದ ಭಾಗದಲ್ಲಿ ಓಂ ಬರೆದು ಸುತ್ತಲಿನ ಕೋನಗಳಲ್ಲಿ ಶ್ರೀ ಗುರು ಬಸವ ಅಕ್ಷರಗಳನ್ನು ಸೀಮೆಸುಣ್ಣದಲ್ಲಿ ಬರೆಯಬೇಕು. ಇದರ ಮೇಲೆ ಭಾವಚಿತ್ರವನ್ನು ಇಡಬೇಕು.

ಮೊದಲು ಒಂದು ತಂಬಿಗೆಯಲ್ಲಿ ನೀರು ತುಂಬಿಟ್ಟು ಅದರ ಮೇಲೆ ವೀಳೆಯದೆಲೆ - ತೆಂಗಿನಕಾಯಿ ಜೋಡಿಸಿ ಕುಂಭ ಕಳಸವನ್ನು ಸಾಕ್ಷಿಯಾಗಿ ಇಡುತ್ತಿದ್ದರು. ಇದು ಎಲ್ಲ ದೇವತೆಗಳ ಪ್ರತೀಕವಾಗುತ್ತಿತ್ತು. ಈಗ ಧರ್ಮಗುರು ಬಸವಣ್ಣನವರ ಭಾವಚಿತ್ರ ಲಭ್ಯವಿರುವ ಕಾರಣ ಅದನ್ನೇ ಸಾಕ್ಷಿಯನ್ನಾಗಿ ಇಡುವುದು ಸೂಕ್ತ. ಷಟ್ ಪ್ರಮಥರ ಕುರುಹಾಗಿ ಆರು ಆರತಿ ಕಲಶಗಳನ್ನು ಹೊಂದಿಸಿಕೊಳ್ಳಬೇಕು. (ಅರು ಕಲಶ ಹಿಡಿಯುವವರಿಗೂ ಕೈಕಂಕಣ ಕಟ್ಟಲಾಗುವುದು).ಇನ್ನಿತರ ಪೂಜಾ ಸಾಮಗ್ರಿಗಳನ್ನು ಜೋಡಿಸಿಕೊಳ್ಳಬೇಕು.

ವರ-ವಧುವಿನ ತಾಯಿ ತಂದೆಗಳಾಗಲೀ, ಅಥವಾ ಅವರ ಸಮೀಪದ ಬಂಧುಗಳಾಗಲಿ ಪೂಜೆಗೆ ಕುಳಿತುಕೊಳ್ಳಬೇಕು. ಮೊದಲ ಮೂರು ಪೂಜೆಗಳನ್ನು ಕ್ರಮವಾಗಿ ಮಾಡಿಸಿದ ಮೇಲೆ “ಶ್ರೀ ಮಹಾಕಾರಣಿಕ ಪ್ರಣವರೂಪಿ ಬಸವ ಗುರುವೆ' ಎಂಬುದನ್ನು ಕ್ರಿಯಾಮೂರ್ತಿ ಹೇಳುತ್ತ ೧೦೮ ಪುಷ್ಪ-ಪತ್ರೆಗಳನ್ನು ಬಸವ ಭಾವಚಿತ್ರಕ್ಕೆ ಪೂಜೆಮಾಡುವವರ ಕೈಯಿಂದ ಏರಿಸಬೇಕು.

ಆಮಂತ್ರಿತರು ಈಗ ಒಬ್ಬೊಬ್ಬರೇ ಬರುತ್ತಲಿರುತ್ತಾರೆ. ಮದುವೆಯವರ ಪರವಾಗಿ ಒಬ್ಬರು ನಿಂತು, ಷಟ್ಕೋನ ಸಹಿತ ಮೇಲ್ವಸ್ತ್ರ ಹೊದ್ದು, ''ಶರಣು ಬನ್ನಿ”, ಎಂದು ಸ್ವಾಗತಿಸಬೇಕು. ಆಗ ಇಬ್ಬರು, ಒಬ್ಬ ಶರಣೆ ಒಬ್ಬ ಶರಣ ಎರಡು ಬಟ್ಟಲು ಅಥವಾ ತಟ್ಟೆಗಳಲ್ಲಿ ವಿಭೂತಿ ಗಟ್ಟಿ ಇಟ್ಟುಕೊಂಡು ನಿಲ್ಲಬೇಕು. ಬಂದವರು ಆ ವಿಭೂತಿ, ಮೂರು ಎಳೆಯನ್ನಾದರೂ ಧರಿಸಿಕೊಳ್ಳಲಿ ಇಲ್ಲವೇ ಒಂದು ಬೊಟ್ಟಿನಷ್ಟಾದರೂ ಹಣೆಯ ಮೇಲೆ ಧರಿಸಿಕೊಳ್ಳಲಿ (ಇತ್ತೀಚೆಗಂತೂ ಯಾರದ್ದಾದರೂ ಮದುವೆ ಇದ್ದರೆ ಅಥವಾ ಏನಾದರೂ ಸಮಾರಂಭಗಳು ಇದ್ದರೆ ಹೆಣ್ಣು ಮಕ್ಕಳು ಬ್ಯೂಟಿ ಪಾರ್ಲ್ರಗೆ ಹೋಗಿ ಗಂಟೆಗಟ್ಟಳೆ ಅಲಂಕರಿಸಿಕೊಂಡು ಬರುವುದರಿಂದ ೩ ಎಳೆ ವಿಭೂತಿ ಹಚ್ಚಲಿಕ್ಕಿಲ್ಲ)

ಶರಣ ಆಯ್ದಕ್ಕಿ ಮಾರಯ್ಯ ತಮ್ಮ ಮನೆಗೆ ಪ್ರಸಾದದಾರೋಗಣೆಗೆ ಶರಣರನ್ನು ಆಹ್ವಾನಿಸುವಾಗ, “ಸತ್ಯವೆಂಬ ತಟ್ಟೆಯಲ್ಲಿ ಚಿತ್ತಶುದ್ಧವೆಂಬ ವಿಭೂತಿಯ ಬೈಚಿಟ್ಟು, ಸಕಲ ಸಂಪದ ಪ್ರಮಥರು ಮುಂತಾಗಿ ಅಮರೇಶ್ವರ ಲಿಂಗದ ಆಶ್ರಯದಲ್ಲಿ ಪ್ರಸಾದವ ಕೊಂಬುದಕ್ಕೆ ಬಾರಾ ಸಂಗನ ಬಸವಣ್ಣಾ' ಎಂದು ಕರೆಯುವರು. ಹೀಗೆ ವಿಭೂತಿ ವೀಳೆಯವ ಕೊಟ್ಟು ಬರ ಮಾಡಿಕೊಳ್ಳುವುದೇ ಶರಣ ಪದ್ಧತಿ. ಮತ್ತೆ ಕೆಲವರು ಸ್ವಾಗತಕ್ಕೆ ನಿಂತು ಪನ್ನೀರು ಚಿಮುಕಿಸಿ, ಹೂವು ಕೊಟ್ಟು, ಅರಿಷಿಣ-ಕುಂಕುಮ ಕೊಟ್ಟು ಆದರಿಸಬಹುದು.

ಶ್ರೀ ಮಹಾಕಾರಣಿಕ ಹೇಳುತ್ತ ಈ ಪುಷ್ಪಾರ್ಚನೆ ಪೂರೈಸುವ ವೇಳೆಗೆ ವರ-ಕನ್ಯೆಯನ್ನು ಅವರವರ ಕೋಣೆಗಳಿಂದ ಕರೆತರಬೇಕು. ಅವರು ಬಂದು ಈಗ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಮಾಡಬೇಕು ಮತ್ತು ೧೦೮ ಪತ್ರೆ ಪುಷ್ಪ ಧರಿಸಿ ಮಂತ್ರಜಪ ಮಾಡಬೇಕು.

ಕ್ರಿಯಾ ಮೂರ್ತಿಯು “ಓಂ ಪ್ರಣವ ಸ್ವರೂಪಿಯೇ ಬಸವ ಲಿಂಗಾಯ ನಮಃ” ಎಂದರೆ, ವರ-ಕನ್ಯೆ ಇನ್ನಿತರ ಸಭಿಕರೆಲ್ಲ ಒಕ್ಕೊರಲಿನಿಂದ “ಶ್ರೀ ಗುರು ಬಸವ ಲಿಂಗಾಯ ನಮಃ” ಎಂದು ಹೇಳಬೇಕು. ಆಗ ವಧು-ವರ ಪತ್ರ-ಪುಷ್ಪ ಏರಿಸಬೇಕು. ಈ ಪುಷ್ಪಾರ್ಚನೆಯ ನಂತರ ಕಡೆಯ ಪೂಜೆ, ಮಹಾಮಂಗಳಾರತಿ.

ಶ್ರೀ ಬಸವ ಮಂಗಲ

ಓಂ ಗುರು ಓಂ ಗುರು ಓಂ ಗುರು ಬಸವಾ
ಸದ್ಗುರು ಬಸವಾ ತವ ಶರಣಂ
ಮಂಗಳರೂಪಿನ್ ಜಂಗಮ ಮೂರ್ತೆ
ಮದ್ಗುರು ಬಸವಾ ತವ ಶರಣಂ

ನಮಾಮಿ ಸದ್ಗುರು ಪ್ರಣವ ಸ್ವರೂಪಿನ್
ಮಂತ್ರ ಪುರುಷ ಹೇ ತವ ಶರಣಂ
ಜಗದೋದ್ಧಾರಕ ಪತಿತೋದ್ಧಾರಕ
ವರಗುರು ಬಸವಾ ತವ ಶರಣಂ

ಶರಣರಕ್ಷಕ ಕರುಣಾಮೂರ್ತೆ
ಮರಣವಿದೂರ ತವ ಶರಣಂ
ಸಮತಾವಾದಿನ್ ಮನುಕುಲಕೀರ್ತೆ
ಚಿನ್ಮಯ ಮೂರ್ತೆ ತವ ಶರಣಂ

ಸನ್ಮಯಗಾತ್ರಾ ಪರಮ ಪವಿತ್ರಾ
ಮಮತಾಮೂರ್ತೆ ತವ ಶರಣಂ
ಮಾತೃಸ್ವರೂಪಿನ್ ಪಿತೃಸ್ವರೂಪಿನ್
ಜ್ಯೋತಿಸ್ವರೂಪಿನ್ ತವ ಶರಣಂ

ಭವತಾಪಹಾರಕ ಶಿವಸುಖದಾಯಕ
ಪಾವನ ಪುರುಷ ತವ ಶರಣಂ
ವರಗುಣಸಹಿತ ನಿರುಪಮ ಚರಿತ
ಪರಶಿವಭರಿತ ತವ ಶರಣಂ

ನಿತ್ಯಾನಂದಿನ್ ಸತ್ಯಸ್ವರೂಪಿನ್
ಭ್ರಾಂತಿವಿನಾಶಕ ತವ ಶರಣಂ
ಆನಂದರೂಪಿನ್ ಚಿದಾನಂದರೂಪಿನ್
ಸಚ್ಚಿದಾನಂದ ಸುತ ತವ ಶರಣಂ

ಜಯಬಸವರಾಜ ಭಕ್ತಜನ ಸುರಭೂಜ
ಜಯತು ಮಹಕಾರಣಿಕ ಪರಶಿವನ ಘನ ತೇಜ
ಜಯತು ಕರೂಣಾಸಿಂಧು ಭಜಕ ಜನ ಬಂಧು
ಜಯ ಇಷ್ಟದಾಯಕ ರಕ್ಷಿಸು ಶ್ರೀಗುರುಬಸವಾ,

ಜಯಗುರು ಬಸವೇಶ ಹರಹರ ಮಹಾದೇವ ಎಂದು ಜಯಘೋಷ ಮಾಡಬೇಕು. ಶ್ರೀ ಬಸವಣ್ಣನವರ ಮುಂದೆ ಒಂದೆರಡು ತಟ್ಟೆಗಳಲ್ಲಿ ಈ ಸಾಮಗ್ರಿ ಹೊಂದಿಸಿ ಇಟ್ಟಿರಬೇಕು.

೧. ಅಕ್ಕಿ ಹರಡಿ, ಕೊಬ್ಬರಿ ಬಟ್ಟಲಿನಲ್ಲಿ ರುದ್ರಾಕ್ಷಿಯೊಡನೆ ತಾಳಿಯನ್ನು ಪೋಣಿಸಿರುವ ಕರಿಮಣಿಸರ, ಅರ್ಥಾತ್ ಮಾಂಗಲ್ಯ ಸರ, ಕಾಲುಂಗುರ ಒಂದು ತಟ್ಟೆಯಲ್ಲಿ.
೨. ಇನ್ನೊಂದು ತಟ್ಟೆಯಲ್ಲಿ ಅರಿಷಿಣ ಮಿಶ್ರಣಗೊಂಡ ಅಕ್ಕಿ ಅರ್ಥಾತ್ ಮಂಗಲಾಕ್ಷತೆ. (ಮಾಡುವ ವಿಧಾನ ಮೊದಲೇ ಕೊಡಲಾಗಿದೆ.)
೩. ವಚನ ಗ್ರಂಥ, ಬಸವ ಮುದ್ರೆ, ವೀಳೆಯದೆಲೆ-ಅಡಿಕೆ, ಬಾಸಿಂಗ-೨ ಬಸವ ರಕ್ಷೆ (ಕೈಕಂಕಣ)-೨.

ಕ್ರಿಯಾಮೂರ್ತಿಯು ಒಂದು ತಂಬಿಗೆಯಲ್ಲಿ ಶುದ್ಧ ಜಲವನ್ನು ತೆಗೆದುಕೊಂಡು, ಬಲಗೈ ಬೆರಳುಗಳಿಗೆ ವಿಭೂತಿ ಧರಿಸಿ “ಓಂ ಶ್ರೀ ಗುರು ಬಸವ ಲಿಂಗಾಯ ನಮಃ” ಎಂದು ೧೨ ಬಾರಿ ಪಠಿಸಿ, ಆ ಬೆರಳುಗಳನ್ನು ನೀರಿನಲ್ಲಿ ಎದ್ದಿ, ಸ್ವಲ್ಪವೇ ಹಾಲನ್ನು ಹಾಕಿ, ಧಾರಾಮೃತವನ್ನು ಸಿದ್ಧಪಡಿಸಿಕೊಳ್ಳಬೇಕು. ಏರಿಸಿರುವ ಪುಷ್ಪಗಳಲ್ಲಿ ಕೆಲವನ್ನು ಎತ್ತಿ, ಪ್ರಸಾದ ಭಾವದಿಂದ ತಟ್ಟೆಗಳಲ್ಲಿರುವ ಸಾಮಗ್ರಿಯ ಮೇಲೆ ಸ್ಪರ್ಶಿಸಬೇಕು.

ಗುರುಮೂರ್ತಿ ಅಥವಾ ಜಂಗಮ ಮೂರ್ತಿಯ ಆಯ್ಕೆ

ಯಾರಾದರೂ ಪೂಜ್ಯರು, ಮಹಾತ್ಮರು, ಧರ್ಮಗುರುಗಳು, ಮಠಾಧಿಪತಿಗಳು ಲಭ್ಯವಿದ್ದರೆ ಅವರನ್ನು ಮೊದಲೇ ಆಹ್ವಾನಿಸಿರಬೇಕು. ಲಗ್ನಪತ್ರಿಕೆಯಲ್ಲಿ ಅವರ ಹೆಸರನ್ನೂ ಮುದ್ರಿಸಿರಬಹುದು. ಹಾಗೆ ಜಂಗಮಪುಂಗವರು ಯಾರೂ ಸಿಕ್ಕಿರದಿದ್ದರೆ ಆಗ ಬಂದಿರುವ ನೆಂಟರು, ಸಭಿಕರಲ್ಲೇ ಹಿರಿಯರು, ಜ್ಞಾನಿಗಳೂ, ಸಾತ್ವಿಕರೂ ಆದವರನ್ನು ಆಯ್ಕೆ ಮಾಡಬೇಕು. ಅವರ ಬಳಿಗೆ ಹೋಗಿ ಶರಣು ಸಲ್ಲಿಸಿ ವೇದಿಕೆಗೆ ಬರಲು ಆಹ್ವಾನಿಸಬೇಕು. ಶರಣರು-ಶರಣೆಯರು ಯಾರು ಬೇಕಾದರೂ ಆಗಿರಬಹುದು. ವಿಧುರ-ವಿಧವೆ ಎಂಬ ಭೇದವೂ ಬೇಕಾಗಿಲ್ಲ. ಅವರು ಅಷ್ಟಾವರಣ ಸಂಪನ್ನರಾಗಿರಬೇಕಾದುದು ಕಡ್ಡಾಯ.

ಗ್ರಂಥ ಋಣ:
[1] "ಬಸವ ಧರ್ಮದ ಸಂಸ್ಕಾರಗಳು", ಲೇ:ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ, ಪ್ರ: ವಿಶ್ವಕಲ್ಯಾಣ ಮಿಷನ್‌, ಬೆಂಗಳೂರು, ೧೯೯೫.

ಪರಿವಿಡಿ (index)
Previous ಮದುವೆ ದಿವಸ : ಭಾಗ-೧ ಮಂಗಳ ಮಜ್ಜನ ಮದುವೆ ದಿವಸ : ಭಾಗ-೩ ಕ್ರಿಯಾಮೂರ್ತಿಗೆ ಹೊಣೆಗಾರಿಕೆ Next