Previous ಗೃಹ ನಿರ್ಮಾಣ ಮತ್ತು ಗುರು ಪ್ರವೇಶ. ಶರಣದೀಕ್ಷೆ - ಶರಣಮೇಳವ್ರತ ಸ್ವೀಕಾರ Next

ಶರಣವ್ರತ (ಪ್ರಸಾದ ದೀಕ್ಷೆ) ಸ್ವೀಕಾರ

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ಶರಣವ್ರತ (ಪ್ರಸಾದ ದೀಕ್ಷೆ) ಸ್ವೀಕಾರ ತಾತ್ಕಾಲಿಕ ಮತ್ತು ನಿರಂತರ

ಸಂಪ್ರದಾಯದಲ್ಲಿ 'ಪ್ರಸಾದ ದೀಕ್ಷೆ' ಎಂಬುದು ಆಚರಣೆಯಲ್ಲಿದೆ. ಇದು ಮುಖ್ಯವಾಗಿ ಪ್ರಸಾದ ಸ್ವೀಕಾರಕ್ಕೆ ಸಂಬಂಧಪಟ್ಟ ನಿಯಮವಾಗಿದೆ. ಸ್ನಾನ - ಇಷ್ಟಲಿಂಗಾರ್ಚನೆ ಮಾಡಿ ಲಿಂಗ ತೀರ್ಥಪ್ರಸಾದವನ್ನು ತೆಗೆದುಕೊಂಡು ನಂತರ ತಿಂಡಿ, ಪಾನೀಯ ಮುಂತಾಗಿ ತೆಗೆದುಕೊಳ್ಳುವುದು ಇಷ್ಟಲಿಂಗ ದೀಕ್ಷೆ ಪಡೆದವರಿಗೂ ಅನ್ವಯವಾಗುವುದಾದರೂ ಪ್ರಸಾದ ದೀಕ್ಷೆಯಲ್ಲಿ ನಿಯಮವೂ ಇನ್ನೂ ಕಠಿಣವಿದೆ. ಇಷ್ಟಲಿಂಗ ದೀಕ್ಷೆ ಪಡೆದವರು ಬೆಳಿಗ್ಗೆ ಸ್ನಾನ ಮಾಡಿ, ಪೂಜೆ ಪೂರೈಸಿದರೆ ನಂತರ. ಯಾವಾಗ ಬೇಕಾದರೂ ನೀರು-ಕಾಫಿ-ಚಹಾ ಕುಡಿಯಬಹುದು; ಊಟ ಮಾಡಬಹುದು. ಪ್ರಸಾದ ದೀಕ್ಷೆ ಹಾಗಲ್ಲ, ಪ್ರಸಾದಿಕರು ಸ್ನಾನ ಪೂಜೆ ಆದ ಮೇಲೆ ಅದೇ ಗದ್ದುಗೆಯ ಮೇಲೆ ಕುಳಿತೇ ಮಹಾಪ್ರಸಾದ (ಊಟ) ಸ್ವೀಕರಿಸುವರು. ಮಧ್ಯಂತರದಲ್ಲಿ ಬೇರೆ ಏನನ್ನೂ ಕುಡಿಯುವುದಿಲ್ಲ, ತಿನ್ನುವುದಿಲ್ಲ. ನೀರನ್ನು ಸಹ ಕುಡಿಯುವುದಿಲ್ಲ. ಪುನಃ ಸ್ನಾನ-ಪೂಜೆ ಮಾಡಿಯೇ ನೀರು ಪ್ರಸಾದ ಸ್ವೀಕರಿಸುವರು. ಬಾಯಾರಿಕೆ ತೀವ್ರವಾಗಿ ಆದರೆ ಆಗ ಸ್ನಾನ ಮಾಡಿ, ಪೂಜೆ (ಸಂಕ್ಷಿಪ್ತವಾಗಿ ಮಾಡಿ ನೀರು ಕುಡಿಯುವರು.

ಈ ದೀಕ್ಷೆ ಪಡೆಯುವವರು ಕಡಿಮೆಯಾಗುತ್ತಿದ್ದಾರೆ. ಪಡೆದುಕೊಂಡ ಸ್ವಾಮಿಗಳಂತೂ ಕಾಯಿಲೆ-ಕಸಾಯಿಲೆ ಆದಾಗ ಪೇಚಾಡುತ್ತಾರೆ. ನೀರು ಕುಡಿಯಬೇಕಾದರೆ, ಊಟ ಮಾಡಬೇಕಾದಾಗಲೆಲ್ಲಾ ಸ್ನಾನ-ಪೂಜೆ ಮಾಡಬೇಕಾಗುವುದರಿಂದ ಅನೇಕ ಸ್ವಾಮಿಗಳು ಮಠ ಬಿಟ್ಟು ಹೊರಗೆ ಹೊರಡುವುದೇ ಇಲ್ಲ. ಅವರ ಆಯುಷ್ಯವೆಲ್ಲ ಊಟಕ್ಕೆ ಅದರ ಹಿಂದಿನ ಸ್ನಾನ ಪೂಜೆಗಳಿಗೆ ವ್ಯಯವಾಗುತ್ತದೆ.
ಪ್ರಸಾದಿಕ ದೀಕ್ಷೆ ಪಡೆಯಬೇಕೆನ್ನುವವರು ಮೊದಲು ತತ್ತ್ವವನ್ನು ಸರಿಯಾಗಿ ತಿಳಿಯಬೇಕು. “ಪ್ರಸನ್ನ ಚಿತ್ತವೇ ಪ್ರಸಾದಿಕತೆ'' ಪರಮಾತ್ಮನಿಗೆ ಶರಣಾಗಿ ಅವನ ಅನುಗ್ರಹವನ್ನು ಪಡೆದುದೇ ನಿಜ ಪ್ರಸಾದಿಕತೆ. ಜೀವನದಲ್ಲಿ ಕಷ್ಟ-ಸುಖ, ನೋವು-ನಲಿವು, ನಿಂದೆ-ವಂದನೆ, ಏನೇ ಬರಲಿ ಎಲ್ಲವೂ ದೇವನ ಪ್ರಸಾದ ಎಂದು ಚಿತ್ರಸಮತೆಯಿಂದ ಸ್ವೀಕಾರ ಮಾಡುವುದೇ ನಿಜ ಪ್ರಸಾದಿಕತೆ, ಹೊರಗಿನ ನಿಯಮ ಒಳಗಣ ಜ್ಞಾನದ ಅಭಿವ್ಯಕ್ತಿ ಮಾತ್ರ ಆಗಬೇಕು. ಏನೇ ಕಷ್ಟ ಬರಲಿ ನಿಯಮವನ್ನು ಜೀವನ ಪರ್ಯಂತ ಪಾಲಿಸುತ್ತೇನೆ ಎಂಬ ದೃಢ ಸಂಕಲ್ಪವಿದ್ದರೆ ಪ್ರಸಾದಿಕ ದೀಕ್ಷೆಯನ್ನು ಪಡೆಯಬಹುದು.

ಅಲ್ಪಕಾಲಿಕ

ಕೆಲವೊಮ್ಮೆ ಒಮ್ಮೆಗೇ ಪ್ರತಿಜ್ಞೆ ಕೈಗೊಂಡು, ನಂತರ ಪರಿತಾಪ ಪಡುವ ಬದಲು, ಮತ್ತು ವ್ಯರ್ಥವಾದ ನೇಮಗಳಿಂದಾಗಿ ಕೇವಲ ಊಟಕ್ಕಾಗಿ ಆಯುಷ್ಯವನ್ನೆಲ್ಲ ವ್ಯರ್ಥಮಾಡಿಕೊಳ್ಳಬಯಸದ ಪ್ರಜ್ಞಾವಂತರು 'ಶರಣವ್ರತ' ಸ್ವೀಕರಿಸುವ ಮೂಲಕ ಪ್ರಸಾದಿಕ ದೀಕ್ಷೆಯನ್ನು ಅಲ್ಪಕಾಲಿಕವಾಗಿ ತೆಗೆದುಕೊಳ್ಳಬಹುದು.

ಶರಣವ್ರತವನ್ನು ವರ್ಷದಲ್ಲಿ ಎರಡು ಸಲ ಮಾಡಬಹುದು.

೧. ಶ್ರಾವಣ ಮಾಸದಲ್ಲಿ ಶ್ರಾವಣ ಶುದ್ಧ ಪ್ರತಿಪದೆಯಿಂದ ಭಾದ್ರಪದ ತೃತೀಯಾದವರೆಗೆ ೨೨ ದಿವಸಗಳ ಕಾಲ.
೨. ಬಸವ ಕ್ರಾಂತಿ ದಿನ (ಸಂಕ್ರಾಂತಿ) ಕ್ಕೆ ೪೧ ದಿವಸಗಳು ಪೂರೈಸುವಂತೆ ಲೆಕ್ಕ ಮಾಡಿ ಶರಣ ವ್ರತವನ್ನು ಆರಂಭಿಸಬೇಕು. (ಡಿಸೆಂಬರ್ ೫ರಿಂದ ಎಂದು ಇಟ್ಟುಕೊಳ್ಳಬೇಕು. ಏಕೆಂದರೆ ಬಸವಕ್ರಾಂತಿ ದಿನದ ದಿನಾಂಕಗಳಲ್ಲಿ ಬದಲಾವಣೆಯೇ ಇರುವುದಿಲ್ಲವಷ್ಟೆ).
೩. ವರ್ಷದಲ್ಲಿ ಒಂದು ಸಲ ’ಶರಣ ವ್ರತ' ಸ್ವೀಕರಿಸಿದರೆ ಸಾಕು. ಎರಡು ಸಲವೂ ಆಚರಿಸುವುದು ಕಡ್ಡಾಯವಿಲ್ಲ.
೪. ತಮ್ಮ ಕಾಯಕ, ವ್ರತಕ್ಕೆ ಬೇಕಾದ ಬಿಡುವು ಮುಂತಾದುವನ್ನು ಲಕ್ಷದಲ್ಲಿಟ್ಟುಕೊಂಡು ಎರಡರಲ್ಲಿ ಒಂದು ಅವಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು.
೫. ಒಂದು ವೇಳೆ ವ್ರತ ಸ್ವೀಕರಿಸುವ ಸದ್ಭಕ್ತರಿಗೆ ಹೆಚ್ಚಿನ ಹೊಣೆಗಾರಿಕೆ ಇಲ್ಲದೆ, ಇವರ ವ್ರತ ಸ್ವೀಕಾರದಿಂದ ಬೇರೆ ಯಾವುದೇ ಕೆಲಸ-ಕಾರ್ಯಕ್ಕೆ ಚ್ಯುತಿ ಬರದೆ ಇದ್ದರೆ ಮತ್ತು ಸಮಯವನ್ನು ಒದಗಿಸಿಕೊಂಡು ಮಾಡುವ ದೃಢ ಸಂಕಲ್ಪವಿದ್ದರೆ ಆಗ ಎರಡೂ ಅವಧಿಯಲ್ಲಿ 'ಶರಣ ವ್ರತ' ಸ್ವೀಕರಿಸಿ, ಅನುಷ್ಠಾನ ಮಾಡಬಹುದು.
೬. ಶರಣ ಮೇಳ ವ್ರತ ಆಚರಣೆಗೆ ಮೊದಲು ಬಸವಾಯತ ದೀಕ್ಷೆ'ಯನ್ನು ಕಡ್ಡಾಯ ಪಡಿಸಲಾಗಿದೆ. ಶ್ರಾವಣ ಮಾಸಾಚರಣೆಗೆ ದೀಕ್ಷೆಯನ್ನು ಕಡ್ಡಾಯಪಡಿಸಿಲ್ಲ.

ಶರಣ ವ್ರತ ಸ್ವೀಕಾರ
೧. ಪವಿತ್ರ ಶ್ರಾವಣ ಮಾಸಾಚರಣೆ.


ಬಸವ ಧರ್ಮದ ಪ್ರಕಾರ ಯಾವ ದಿನವೂ ಶ್ರೇಷ್ಠ ಅಥವಾ ಕನಿಷ್ಠವಲ್ಲ; ಯಾವ ವಾರವೂ ಮಂಗಲ ಅಥವಾ ಅಮಂಗಲವಲ್ಲ, ಯಾವ ಮಾಸವೂ ಪವಿತ್ರ ಅಥವಾ ಅಪವಿತ್ರವಲ್ಲ, ಯಾವ ದಿವಸ, ಯಾವ ಮಾಸದಲ್ಲಿ ಅರ್ಚಣೆ-ಅರ್ಪಣೆ-ಅನುಭಾವ ಮಾಡುತ್ತೇವೋ, ಅದೆಲ್ಲವೂ ಪವಿತ್ರವೆನಿಸುತ್ತದೆ. ಧನ್ಯತೆ, ಪಾವಿತ್ರ್ಯತೆ ಯಾವುದೇ ವಸ್ತುವಿಗೆ ಪ್ರಾಪ್ತವಾಗುವುದು ಗುರು-ಲಿಂಗ-ಜಂಗಮದ ಅರ್ಚನೆಯಿಂದ ಮತ್ತು ಅವರ ಪ್ರಸಾದ (ಅನುಗ್ರಹ) ದಿಂದ.

ಶ್ರಾವಣ ಮಾಸವು ತನ್ನಿಂದ ತಾನೇ ಪವಿತ್ರವಲ್ಲ; ತಾನೇ ಪವಿತ್ರವಲ್ಲ; ಅದನ್ನು ಪವಿತ್ರವಾಗಿ ಇರಿಸಿಕೊಳ್ಳಬೇಕು. ಶ್ರಾವಣ ಮಾಸವನ್ನೇ ಏಕೆ ಅದಕ್ಕಾಗಿ ಆಯ್ದುಕೊಳ್ಳಬೇಕು ? ಉಳಿದ ಮಾಸಗಳನ್ನೇಕೆ ಆಯ್ದುಕೊಳ್ಳಬಾರದು ? ಆದಿ ಪ್ರಮಥ ಬಸವಣ್ಣನವರ ಪ್ರಕಾರ ಯಾವ ಮಾಸವಾದರೂ ಅಷ್ಟೆ, ಶ್ರಾವಣ ಮಾಸವನ್ನು ನಾವು ಪವಿತ್ರ ಮಾಸಾಚರಣೆಗೆ ಆಯ್ದುಕೊಳ್ಳುವುದರಲ್ಲಿ ಕೆಲವು ಕಾರಣಗಳಿವೆ.

೧. ಧರ್ಮಗುರು, ಮಂತ್ರಪುರುಷ, ಬಸವಣ್ಣನವರು ಲಿಂಗೈಕ್ಯರಾದುದು ಶ್ರಾವಣ ಶುದ್ಧ ಪಂಚಮಿಯಂದು, ನೀಲಾಂಬಿಕಾ ತಾಯಿ ಲಿಂಗೈಕ್ಯಳಾದುದು ಶ್ರಾವಣ ಶುದ್ಧ ಷಷ್ಠಿಯಂದು. ಹೀಗೆ ಧರ್ಮಕರ್ತರು ಲಿಂಗೈಕ್ಯರಾದ ಮಾಸ ನಮಗೆ ಮಹತ್ವಪೂರ್ಣವಾದುದು.

೨. ಸಾಂಪ್ರದಾಯಿಕ ಹಿಂದೂಗಳು ಶ್ರಾವಣ ಮಾಸವನ್ನು ಧಾರ್ಮಿಕ ಮಾಸವೆಂದು ಇಡೀ ತಿಂಗಳು ಪರ್ಯಂತರ ಏನೇನೋ ಮೂಢ ವ್ರತಾಚರಣೆ ಮಾಡುತ್ತಾರೆ. ಬಹುದೇವತಾರ್ಚನೆ ಈ ಮಾಸದ ವಿಶೇಷ. ಭೀಮನ ಅಮಾವಾಸ್ಯೆ, ನಾಗ ಚೌತಿ-ಪಂಚಮಿ, ಮಂಗಳ ಗೌರಿ, ವರಮಹಾಲಕ್ಷ್ಮಿ, ಸ್ವರ್ಣಗೌರಿ - ಹೀಗೆ ಹಬ್ಬ-ಪೂಜೆಗಳ ಸಂತೆಯೋ ಸಂತೆ. ಏಕದೇವೋಪಾಸಕರಾಗಬೇಕಾದ ಲಿಂಗವಂತರನ್ನು ಮೂಢಾಚರಣೆಗಳ ಬಲೆಯಿಂದ ಹೊರತರಬೇಕಾದರೆ ಅವರಿಗೆ ಪರ್ಯಾಯ ಪೂಜಾ ಕಾರ್ಯಕ್ರಮ ಬೇಕು. ಆದ್ದರಿಂದ (೧) ಇಷ್ಟಲಿಂಗಾರ್ಚನೆ, (೨) ಬಸವೇಶ್ವರ ಪೂಜಾವ್ರತ, (೩) ಧರ್ಮಗ್ರಂಥ ಪಠಣ, (೪) ದಾಸೋಹ, (೫) ಯೋಗಸಾಧನೆ, (೬) ಶರಣ ಗೋಷ್ಠಿ ಎಂಬ ಆರು ವಿಧಿಗಳನ್ನು ಸಂಯೋಜಿಸಲಾಗಿದೆ. ರಾಕ್ಷಸರು, ಪ್ರಾಣಿಗಳು, ದೇವತೆಗಳು ಮುಂತಾಗಿ ಸಂಬಂಧಿಸಿದ ಹಬ್ಬಗಳನ್ನು ನಿಷೇಧಿಸಲಾಗಿದೆ.

೩. ಈ ದೇಶವು ಒಕ್ಕಲುತನ ಪ್ರಧಾನವಾದ ದೇಶ. ರೈತ ಸಮುದಾಯವು ಮಳೆಯಾಗುವ ಪ್ರದೇಶಗಳಲ್ಲಿ ಬೀಜಗಳನ್ನು ಬಿತ್ತಿ ಬಿಡುವಾಗಿರುತ್ತದೆ. ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ಹಿಂಗಾರಿ ಬೆಳೆಗಿನ್ನೂ ಬಿತ್ತುವ ಕಾಲವಲ್ಲದ್ದರಿಂದ ಅಲ್ಲೂ ಬಿಡುವಾಗಿರುತ್ತಾರೆ. ದವಸ-ಧಾನ್ಯಗಳು ಮಾರುಕಟ್ಟೆಗೆ ಬರುವ ಸಮಯವಲ್ಲದ್ದರಿಂದ ವ್ಯಾಪಾರಸ್ಥರೂ ತುಸು ಬಿಡುವಾಗಿರುತ್ತಾರೆ. ಶಾಲೆಗಳ ಪ್ರಾರಂಭದ ದಿನವಾದ್ದರಿಂದ ಮಕ್ಕಳು ಮತ್ತವರ ಪಾಲಕರು ಇನ್ನೂ ಹೆಚ್ಚಿನ ಮಾನಸಿಕ ಒತ್ತಡಕ್ಕೆ ಒಳಗಾಗಿರುವುದಿಲ್ಲ. ಸಾಮಾನ್ಯವಾಗಿ ಮಳೆಗಾಲವಾದ್ದರಿಂದ ಹೊರಗೆ ಹೆಚ್ಚು ತಿರುಗಾಡುವುದಾಗಲೀ, ಹೆಚ್ಚಿನ ಚಟುವಟಿಕೆಯಾಗಲೀ ಸಾಧ್ಯವಿರುವುದಿಲ್ಲ. ಹೀಗಾಗಿ ಪೂಜೆ-ಅಧ್ಯಯನ-ಮತ್ತು ಶ್ರವಣಕ್ಕೆ ಶ್ರಾವಣ ಮಾಸವು ಅತ್ಯಂತ ಸೂಕ್ತ. ಬಹುಶಃ ಶ್ರವಣ ಮಾಡಲು ಸೂಕ್ತ ಕಾಲವೆಂದೇ. ಇದಕ್ಕೆ ಶ್ರಾವಣ ಎಂದು ಹೆಸರು ಬಂದಿರಬಹುದು.

ಶ್ರಾವಣ ಮಾಸದ ಪ್ರತಿಪದೆಯಿಂದ ನಿತ್ಯವೂ ಇಷ್ಟಲಿಂಗಾರ್ಚನೆ ಪೂರೈಸಿಕೊಂಡು ಬಸವೇಶ್ವರ ಪೂಜಾವ್ರತ ಮಾಡಬೇಕು. ಐದು ದಿವಸಗಳ ಕಾಲ ಪೂಜಾವ್ರತ ಮಾಡಬೇಕು. ಏನಾದರೂ ಸಿಹಿ ಪ್ರಸಾದ ಸಿದ್ಧಪಡಿಸಿ ಮಹಾಮಂಗಲವಾಗುತ್ತಲೇ ಎಲ್ಲರಿಗೂ ತೀರ್ಥಪ್ರಸಾದ ವಿತರಿಸಬೇಕು. ತಮ್ಮ ಮನೆಮಂದಿ ಎಲ್ಲ ಮಂಗಲಕ್ಕೆ ಸೇರಬೇಕು. ಪಕ್ಕ ಮತ್ತು ಸುತ್ತಲಿನ ಮನೆಗಳವರನ್ನೂ ಪೂಜೆ ಮಂಗಲಕ್ಕೆ ಆಹ್ವಾನಿಸಬೇಕು. ಎಲ್ಲರೂ 'ಕಡ್ಡಾಯವಾಗಿ ಇಷ್ಟಲಿಂಗಾರ್ಚನೆ ಮಾಡಬೇಕು. ಬಸವೇಶ್ವರ ಪೂಜಾವ್ರತವನ್ನು ಮನೆಯವರಲ್ಲಿ ಒಬ್ಬರು ನಿರ್ವಹಿಸಿ ಮಹಾಮಂಗಲಕ್ಕೆ ಎಲ್ಲರೂ ಸಮಾವೇಶವಾಗಬೇಕು.

ಶ್ರಾವಣ ಮಾಸದ ದಿನಚರಿ - ಉಪವಾಸ ವ್ರತ

ನೀಲಮ್ಮ ಷಷ್ಠಿಯಿಂದ ಶ್ರಾವಣ ಮಾಸದ ದಾಸೋಹ ಆರಂಭವಾಗಬೇಕು. ಶ್ರಾವಣ ಮಾಸದ ದಿನಚರಿ ಹೀಗೆ ಇರಬೇಕು :

ಸುಪ್ರಭಾತದಲ್ಲಿ ಎದ್ದು ಮನೆಯವರೆಲ್ಲರೂ ಸ್ನಾನ ಮಾಡಿ, ಇಷ್ಟಲಿಂಗ ಪೂಜೆ ಮಾಡಿ, ಬಸವೇಶ್ವರ ಪೂಜೆಯನ್ನು ಸಂಕ್ಷಿಪ್ತವಾಗಿ ಮಾಡಿ, ಧರ್ಮಗ್ರಂಥ ಪಾರಾಯಣ ಮಾಡಬೇಕು. ಕನಿಷ್ಠ ಪಕ್ಷ ೧೦೮ ವಚನಗಳನ್ನು ಪಾರಾಯಣ ಮಾಡಬೇಕು. ನಂತರ ಅಲ್ಪ ಉಪಹಾರ, ಫಲಾಹಾರ ಮಾಡಿ ತಮ್ಮ ಕಾಯಕಗಳಿಗೆ ನಿರ್ಗಮಿಸಬೇಕು. ಪ್ರತಿಯೊಂದು ಕುಟುಂಬದಲ್ಲಿ ಯಾರಿಗೆ ಸಾಧ್ಯವೋ ಅವರು ಶ್ರಾವಣ ಪ್ರತಿಪದೆಯಿಂದ ಬಸವ ಪಂಚಮಿಯವರೆಗೆ ಶ್ರೀ ಬಸವೇಶ್ವರ ಪೂಜಾವ್ರತ ಮಾಡಬೇಕು.

ನೀಲಮ್ಮ ಷಷ್ಠಿಯಿಂದ ವಚನ ಸಾಹಿತ್ಯ ಗ್ರಂಥ ಪಾರಾಯಣವನ್ನು ಆರಂಭಿಸಬೇಕು. ಭಾದ್ರಪದ ಚೌತಿಯ ಹಿಂದಿನ ದಿನ ಧರ್ಮಗ್ರಂಥ ಪಾರಾಯಣವು ಮುಕ್ತಾಯಗೊಳ್ಳಬೇಕು. ಧರ್ಮಗ್ರಂಥ ಪಾರಾಯಣ ಈ ಅವಧಿಯಲ್ಲಿ ಪೂರ್ಣಗೊಳ್ಳುವಂತೆ ಯೋಜಿಸಬೇಕು. ಮೊದಲು ಪೂಜಾವ್ರತ, ನಂತರ ಪಾರಾಯಣ ವ್ರತ ಕೈಗೊಳ್ಳುವವರು ಉಪವಾಸವನ್ನು ಪಾಲಿಸಬೇಕು. ಸ್ನಾನ - ಇಷ್ಟ ಲಿಂಗಪೂಜೆ ಆದ ಮೇಲೆ ಕರುಣ-ಪ್ರಸಾದವನ್ನು ಪಡೆದಾದ ಮೇಲೆ ಅಲ್ಪ ಫಲಾಹಾರ ಅಥವಾ ಫಲಾಹಾರ ಸ್ವೀಕರಿಸಿ, ಪುನಃ ಧರ್ಮಗ್ರಂಥ ಪಾರಾಯಣ ವ್ರತವನ್ನು ಮುಂದುವರಿಸಬೇಕು. ಪೂಜಾವ್ರತ ಮತ್ತು ಪಾರಾಯಣ ವ್ರತಕ್ಕೆ ಆತ್ಮೀಯರನ್ನು, ಸುತ್ತಲಿನವರನ್ನು ಆಹ್ವಾನಿಸಿ ಅವರೂ ಬಂದು ಶ್ರವಣ ಮಾಡುವಂತೆ ಪ್ರೇರಣೆ ನೀಡಬೇಕು. ಪೂರ್ಣ ಉಪವಾಸ ಮಾಡುವ ಶರಣ ಬಂಧುಗಳು ಸ್ನಾನ-ಇಷ್ಟಲಿಂಗಾರ್ಚನೆ ಪೂರೈಸಿ ಕರುಣ-ಪ್ರಸಾದ ಸ್ವೀಕರಿಸಿ, ಹಾಗೆಯೇ ಧರ್ಮಗ್ರಂಥ ಪಾರಾಯಣ ಮುಂದುವರಿಸಬೇಕು. ಆದರೆ ಮಧ್ಯೆ ನೀರು, ನಿಂಬೆಹುಳಿ ಬೆರೆಸಿದ ನೀರನ್ನು ಕುಡಿಯುತ್ತಲಿರಬೇಕು. ಗಂಟಲು, ನಾಲಿಗೆ ತುಟಿ ಒಣಗಿ ತೊಂದರೆಯಾಗುತ್ತಿದ್ದರೂ ಹಾಗೆಯೇ ಇರಬಾರದು. ಪಾರಾಯಣ ಪೂರೈಸಿ ಶರಣ ಬಂಧುಗಳಿಗೆ ಪ್ರಸಾದ ವಿತರಣೆ ಮಾಡಬೇಕು. ಎಷ್ಟು ಜನರಿಗೆ ಪ್ರಸಾದ ದಾಸೋಹ ಮಾಡಬೇಕೆಂದು ಉದ್ದೇಶಿಸಿರುವರೋ ಅಷ್ಟು ಜನರಿಗೆ ಆಹ್ವಾನ ನೀಡಿ ಪ್ರಸಾದ ಎಡೆಮಾಡಿ, ನಂತರ ತಾವು ಪ್ರಸಾದ ಸ್ವೀಕರಿಸಬೇಕು. ಸಂಜೆಗೆ ಇಷ್ಟಲಿಂಗಾರ್ಚನೆ ಮಾಡಿ, ಪ್ರವಚನ ಲಭ್ಯವಿದ್ದರೆ ಶ್ರವಣ ಮಾಡಿ, ರಾತ್ರಿ ಅಲ್ಪ ಉಪಾಹಾರ (ಫಲಾಹಾರ) ಮಾಡಬೇಕು. ಹೀಗೆ ಒಂದು ಊಟ ಒಂದು ಉಪಾಹಾರ (ಅಥವಾ ಫಲಾಹಾರ) ಮಾಡಬೇಕು. ಹೀಗೆ ಒಂದು ಊಟ, ಒಂದು ಉಪಾಹಾರ (ಅಥವಾ ಫಲಾಹಾರ) ಕೆಲವರಿಗೆ ಸಾಧ್ಯವಾಗುತ್ತವೆ. ಇದು ಅವರ ಆರೋಗ್ಯ, ವಯಸ್ಸಿನ ಮೇಲೆ ನಿರ್ಧರಿಸಲ್ಪಡಬೇಕು. ಸದ್ಭಕ್ತರು ತಮ್ಮ ಅಂತಃಸಾಕ್ಷಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಬೇಕು. ಯಾರೂ ಯಾರನ್ನೂ ಒತ್ತಾಯಿಸಕೂಡದು. ಒತ್ತಾಯದಿಂದ ಹೇರಿದ ನೇಮದಿಂದ ಅವರು ವಂಚನೆ ಸಹಾ ಮಾಡಬಹುದು. ಸುತ್ತಲಿನವರ ಒತ್ತಾಯಕ್ಕೆ ಉಪವಾಸ ಮಾಡಿದರೂ, ಕದ್ದು ತಿಂದರೆ ಉಪವಾಸ ಮಾಡಿದ್ದಕ್ಕಿಂತಲೂ ದೊಡ್ಡ ವಂಚನೆಯಾಗುತ್ತದೆ. ಉಪಾಹಾರ ಅಥವಾ ಫಲಾಹಾರದ ಮೊತ್ತವು ಸಹ ಮಿತವಾಗಿ ಇರಬೇಕು.

ಉಪವಾಸ ಅಗತ್ಯವೇ ?

ಆದಿ ಪ್ರಮಥ ಬಸವಣ್ಣನವರ ಪ್ರಕಾರ ಉಪವಾಸ ಕಡ್ಡಾಯವಲ್ಲ, ಅತಿ ಆಹಾರವೂ ಸಲ್ಲದು, ಎಲ್ಲವೂ ಮಿತವಾಗಿರಬೇಕು. ಏಕೆಂದರೆ ಶರಣನು ಉಂಡು ಉಪವಾಸಿಯಾಗಿರಬೇಕು. ಧರ್ಮಪಿತರ ಆದೇಶ ಹೀಗಿದೆ:

ಒಲ್ಲೆನೆಂಬುದು ವೈರಾಗ, ಒಲಿವೆನೆಂಬುದು ಕಾಯಗುಣ
ಆವ ಪದಾರ್ಥವಾದಡೇನು ?
ತಾನಿದ್ದೆಡೆಗೆ ಬಂದುದ ಲಿಂಗಾರ್ಪಿತವ ಮಾಡಿ
ಭೋಗಿಸುವುದೇ ಆಚಾರ
ಕೂಡಲ ಸಂಗಮದೇವರನೊಲಿಸಬಂದ
ಪ್ರಸಾದ ಕಾಯವ ಕೆಡಿಸಲಾಗದು.

ತಾವು ಉಪವಾಸ ಮಾಡುವವರೆಂದು ಹೆಮ್ಮೆಯಿಂದ ಬೀಗುವವರನ್ನು ಕಂಡು, ತಾವು ಉಪವಾಸದಲ್ಲಿದ್ದೇವೆಂದು ಪರಿಪರಿಯಾಗಿ . ತೋರಿಸಿಕೊಳ್ಳುವವರನ್ನು ಕಂಡು ಹೀಗೆ ಹೇಳುತ್ತಾರೆ:

ಒಪ್ಪವ ನುಡಿವಿರಯ್ಯಾ, ತುಪ್ಪವ ತೊಡೆದಂತೆ
ಶರಣ ತನ್ನ ಮೆರೆವನೆ ಬಿನ್ನಾಣಿಯಂತೆ ?
ಕೂಡಲ ಸಂಗನ ಪ್ರಸಾದದಿಂದ ಬದುಕುವನಲ್ಲದೆ
ತನ್ನ ಮೆರೆವನೆ ?

ನಿಜ ಶರಣನಿಗೆ ಉಪವಾಸವಿರುವುದಕ್ಕಿಂತಲೂ ಲಿಂಗಾರ್ಚನೆ ಮಾಡಿ ಪ್ರಸಾದ ಸೇವಿಸುವುದೆ ಆನಂದದಾಯಕ. ಹಾಗಾದರೆ ಈ ಉಪವಾಸವನ್ನು ಏಕೆ ಈ ಧಾರ್ಮಿಕ ಗ್ರಂಥದ ಮೂಲಕ ಆದೇಶಿಸಲಾಗುತ್ತಿದೆ.

ಉಪವಾಸವು ಶರೀರಕ್ಕೆ ಅತ್ಯಗತ್ಯವಾದ ಕ್ರಿಯೆ, ಹೇಗೆ ವ್ಯಕ್ತಿಯು ಇಡಿಯ ದಿವಸ ಶ್ರಮ ಮಾಡಿ, ದಣಿದು, ರಾತ್ರಿ ಮಲಗಿ ವಿಶ್ರಾಂತಿ ಪಡೆವನೋ, ಹೇಗೆ ದುಡಿಮೆಗಾರನು ವಾರದಲ್ಲಿ ಆರು ದಿವಸಗಳು ದುಡಿದು ಒಂದು ದಿನ ವಾರದ ರಜೆ ಪಡೆದು, ವಿಶ್ರಾಂತಿ ಹೊಂದಿ ನಿರುಮ್ಮಳದಿಂದಿರುವನೋ, ತನ್ಮೂಲಕ ಮರುದಿನದಿಂದ ಕೆಲಸ ಮಾಡಲು ಉತ್ಸುಕ ಚೇತನನಾಗುವನೋ ಅಥವಾ ತನ್ನ ಇನ್ನಿತರ ಕೆಲಸಗಳನ್ನು ಮಾಡಿಕೊಳ್ಳುವನೋ ಹಾಗೆ ಜಠರಾಂಗವು ಸಹಾ ವಿಶ್ರಾಂತಿಯನ್ನು ಬಯಸುತ್ತದೆ. ವಾರಕ್ಕೆ ಒಂದು ದಿವಸವಾದರೂ ಅಂಥ ವಿಶ್ರಾಂತಿಯನ್ನು ಉಪವಾಸದ ಮೂಲಕ ಜಠರಾಂಗಕ್ಕೆ ಕೊಟ್ಟರೆ ಅದು ಸಂಪೂರ್ಣವಾಗಿ ಪುನಃಶ್ವೇತನಗೊಳ್ಳುತ್ತದೆ. ಇದರಿಂದ ಆರೋಗ್ಯವು ಸುಧಾರಿಸುತ್ತದೆ. ಆಹಾರವನ್ನು ಪಚನ ಮಾಡುವ ಕಾರ್ಯದ ಒತ್ತಡ ಕಮ್ಮಿಯಾಗಿ, ಶರೀರದ ಇತರ ಅಂಗಗಳು ಪುನಃಶ್ಚತನ ಹೊಂದುತ್ತವೆ. ಇಂಥ ಉಪವಾಸ ಮೂಢಶ್ರದ್ದೆಯ ಮೇಲೆ ಇರದೇ ವೈದ್ಯಕೀಯ ವಿಜ್ಞಾನದ ಮೇಲೆ ಆಧಾರಿತವಾಗಿರುತ್ತದೆ.

ಶುದ್ಧ ಬಸವ ತತ್ತ್ವವಾದಿಗಳು ಯಾವುದಾದರೂ ದೇವರ (?) ಹೆಸರಲ್ಲಿ, ಯಾವುದಾದರೂ ವಾರವನ್ನು ಸಂಬಂಧಿಸಿ ಉಪವಾಸ ಮಾಡುವುದನ್ನು ಕಠೋರವಾಗಿ ನಿಷೇಧಿಸಲಾಗಿದೆ. ಕಾಯಕವೇ ಕೈಲಾಸವಾದ ಕಾರಣ, ಶರಣರು ವ್ರತ ತಪ್ಪಿದರೆ ಸೈರಿಸುವರು, ಕಾಯಕ ತಪ್ಪಲು ಸೈರಿಸರು ಆದ್ದರಿಂದ ಬಸವ ಮಾರ್ಗಿಗಳು ತಮಗೆ ಅನುಕೂಲವಾದ ಒಂದು ದಿನವನ್ನು ಆಯ್ಕೆ ಮಾಡಿಕೊಂಡು, ವಾರಕ್ಕೊಮ್ಮೆ ಆ ದಿನದಂದು ವೈಜ್ಞಾನಿಕವಾಗಿ, ಉಪವಾಸ ಮಾಡಬೇಕು. ಸಂಪೂರ್ಣ ನಿರಾಹಾರ ಮಾಡದೇ ಶುದ್ಧ ಜಲವನ್ನು ಅಥವಾ ವೈಧಾನಿಕವಾಗಿ ನಿಂಬೆರಸ-ಜೇನು ತುಪ್ಪವನ್ನು ಸೇರಿಸಿದ ನೀರನ್ನು ಆಗಾಗ ಕುಡಿಯಬೇಕು. ಇದರಿಂದ ಇಡೀ ಶರೀರವೇ ಆಂತರಿಕವಾಗಿ ಅಭ್ಯಂಗನ ಮಾಡಿದಷ್ಟು ನಿರ್ಮಲಗೊಳ್ಳುತ್ತದೆ. ಈ ಬಗೆಯ ಉಪವಾಸವನ್ನು, ವಾಹನವನ್ನು ಮೊದಲು ಕೊಳವೆಯ ಸ್ವಚ್ಛ ನೀರಿನಿಂದ ತೊಳೆದು ನಂತರ ಗ್ರೀಸ್ ಹಚ್ಚುವ ವಾಹನ ಸ್ವಚ್ಛಕರಣ ಕ್ರಿಯೆಗೆ ಹೋಲಿಸಬಹುದು. ಮೂಢಾತ್ಮಕವಾಗಿ ಮಾಡುವ ಉಪವಾಸ ಖಂಡನಾರ್ಹವೇ ವಿನಃ ವೈಧಾನಿಕ ಉಪವಾಸವಲ್ಲ. ಮನೆಯವರೆಲ್ಲರೂ ಒಂದು ದಿವಸ ಇಂಥ ವೈಧಾನಿಕ ಉಪವಾಸದ ಪ್ರಥ ಬೆಳೆಸಿಕೊಂಡರೆ ಅದರ ಪ್ರಯೋಜನ ಬಹಳ.

ಉಪವಾಸ ಎಂದರೆ ಒಂದು ಅರ್ಥ “ನಿರಾಹಾರ' ಎಂದು; ಎರಡನೆಯದು “ಸಮೀಪದಲ್ಲಿ ವಾಸ” ಎಂದು. ನಿಜವಾದ ಉಪವಾಸದಲ್ಲಿ ಕೇವಲ ನಾಲಿಗೆಯೊಂದೇ ನಿರಾಹಾರ ವ್ರತವನ್ನು ಕೈಗೊಂಡರೆ ಸಾಲದು. ಉಳಿದೆಲ್ಲ ಜ್ಞಾನೇಂದ್ರಿಯ ಕರ್ಮೇಂದ್ರಿಯಗಳೂ ತಮ್ಮ ತಮ್ಮ ಆಹಾರ ತ್ಯಜಿಸಿ ಉಪವಾಸ ಮಾಡಬೇಕು. ಎರಡನೆ ಅರ್ಥ ದೇವನ ಸಮೀಪದಲ್ಲಿ ವಾಸ ಎಂದು ಹೇಳಲಾಗಿದೆ ತಾನೆ ? ಮನಸ್ಸನ್ನು ಪರಮಾತ್ಮನ ಧ್ಯಾನ, ಅವನಿಗೆ ಸಂಬಂಧಪಟ್ಟ ಚಿಂತನೆಯಲ್ಲಿ ತೊಡಗಿಸಿದರೆ ಆಗ ಅವನ ಸಮೀಪದಲ್ಲೇ ವಾಸಿಸಿದಂತೆ ಆಗುತ್ತದೆ. ಕುಟುಂಬ ವರ್ಗದವರೆಲ್ಲರೂ ಒಂದೇ ದಿವಸ ಈ ಉಪವಾಸ ಕಾರ್ಯಕ್ರಮ ಇರಿಸಿಕೊಂಡರೆ ಅಂದು ಅಡಿಗೆಯನ್ನು ಸಿದ್ಧಪಡಿಸುವ ಕೆಲಸದಿಂದ ಬಿಡುಗಡೆ ಹೊಂದಿದ ಶರಣೆಯರೂ ತಮ್ಮ ದಿನವನ್ನು ಅಧ್ಯಯನ - ಸತ್ ಚಿಂತನೆಯಲ್ಲಿ ತೊಡಗಿಸಬಹುದು.

ಶ್ರಾವಣ ಮಾಸದ ಉಪವಾಸ

ವಾರಕ್ಕೊಮ್ಮೆ ಮಾಡುವ ಉಪವಾಸವು ಸಂಪೂರ್ಣ ಘನಾಹಾರ ಮುಕ್ತವಾಗಿದ್ದರೆ, ಶ್ರಾವಣ ಮಾಸ ಪರ್ಯಂತರ ಮಾಡುವ ಉಪವಾಸ ಮಿತಾಹಾರದಿಂದ ಕೂಡಿರುತ್ತದೆ. ಸಾಮಾನ್ಯರಾಗಿ ಹಿಂದಿನ ಕಾಲದಲ್ಲಿ ಬೆಳಗಿನ ಉಪಾಹಾರವಿಲ್ಲದೆ ಮಧ್ಯಾಹ್ನ ಮತ್ತು ರಾತ್ರಿಯ ಊಟಗಳಿಂದ ಜೀವನ ವಿಧಾನವು ಕೂಡಿರುತ್ತಿತ್ತು. ಈಗ ಬೆಳಗಿನ ಉಪಾಹಾರ ಮಧ್ಯಾಹ್ನ - ರಾತ್ರಿಯ ಊಟಗಳಲ್ಲದೇ ಮಧ್ಯೆ ಮಧ್ಯೆ ಚಹಾ-ಕಾಫಿಗಳ ಸೇವನೆಯೂ ಸೇರಿ ಶರೀರಕ್ಕೆ ಸಾಕಷ್ಟು ಹಿಂಸೆಯಾಗುವುದು. ಶ್ರಾವಣ ಮಾಸದ ಉಪವಾಸ ನೇಮದಲ್ಲಿ ಒಂದು ಊಟ, ಒಂದು ಫಲಾಹಾರ (ಅಥವಾ ಲಘು ಉಪಾಹಾರಕ್ಕೆ ಆಹಾರವು ಮಿತಗೊಂಡು ಬಿಟ್ಟರೆ ಒಂದು ತಿಂಗಳಿನ ಅವಧಿಯವರೆಗೆ ಶರೀರಕ್ಕೆ ಕಾಯಕಲ್ಪ ಚಿಕಿತ್ಸೆಯಾಗುವುದು. ಇದರಿಂದ ಆರೋಗ್ಯ ಸುಧಾರಿಸುವುದು, ಉಪವಾಸದೊಡನೆ ಧರ್ಮಗ್ರಂಥ ಪಾರಾಯಣ, ಪ್ರವಚನ ಶ್ರವಣ, ಅರ್ಚನೆ ಸಚ್ಚಿಂತನೆ ಎಲ್ಲ ಮೇಳವಿಸಿ ಮನಸ್ಸು ಶಾಂತಗೊಳ್ಳುವುದು. ಒಂದು ದಿನದ ಉಪವಾಸ - ಧ್ಯಾನಗಳು ಉಳಿದ ಆರು ದಿನಗಳಿಗೆ ಅಗತ್ಯವಾದ ಮಾನಸಿಕ ಇಂಧನವನ್ನು ಒದಗಿಸುವಂತೆ, ಶ್ರಾವಣ ಮಾಸದ ಉಪವಾಸ, ಅರ್ಚನೆ ಅರ್ಪಣೆ ಅನುಭಾವಗಳು ವರ್ಷದ ಮಿಕ್ಕ ಹನ್ನೊಂದು ತಿಂಗಳಿಗೆ ಬೇಕಾದ ಆಧ್ಯಾತ್ಮಿಕ ಚೈತನ್ಯ ನೀಡುತ್ತವೆ.

ಉಪವಾಸ ಪಾಲನೆಯಲ್ಲಿ ಧರ್ಮಾನುಯಾಯಿಗಳು ಸ್ವಯಂ ಪ್ರೇರಣೆಯ ನೇಮದಿಂದ ಬಂಧಿತರಾಗಬೇಕು. ಜಗನ್ಮಾತಾ ಅಕ್ಕಮಹಾದೇವಿಯವರು ಹೇಳುವಂತೆ, “ದೇವಾ, ನೀ ಕಟ್ಟಿ ಕೆಡಿದ ಬಂಧನವೇ ನಿರ್ಬಂಧನವೆಂದಿಪ್ಪೆನು”, ಸ್ವಯಂ ಪ್ರೇರಣೆಯ ಬಂಧನವೂ ಸ್ವಾತಂತ್ರ್ಯದ ಸವಿ ನೀಡುವಂತೆ ವ್ಯಕ್ತಿ ಸ್ವಸಂತೋಷದಿಂದ ನೇಮಗಳನ್ನು ಕೈಗೊಳ್ಳಬೇಕು. ಇವುಗಳ ಪಾಲನೆಯಲ್ಲಿ ಯಾಂತ್ರಿಕತೆಯೂ ಪ್ರಯೋಜನವಿಲ್ಲ, ಮತ್ತೊಬ್ಬರ ಹೇರಿಕೆಯೂ ಅರ್ಥರಹಿತವಾದುದು, ಕೆಲವರು ಧರ್ಮ ಗ್ರಂಥಗಳಲ್ಲಿ ವಿಧಿಸಿದಂತೆ ಉಪವಾಸ ಮಾಡದೇ ಇದ್ದರೆ ಸಾಮಾಜಿಕ ಬಹಿಷ್ಕಾರ ಸಹಾ ಹಾಕುವರು. ಇಂಥ ಹೇರಿಕೆಯಿಂದ ವ್ಯಕ್ತಿಗೂ ಲಾಭವಿಲ್ಲ ಸಮುದಾಯಕ್ಕೂ ಲಾಭವಿರದು. ಇಷ್ಟವಿಲ್ಲದ, ಆತ್ಮ ಸಂಯಮವಿಲ್ಲದ ವ್ಯಕ್ತಿಯು ಕಳ್ಳತನದಲ್ಲಿ ತಿಂದರೆ ಅಂಥ ಕಪಟ ಉಪವಾಸಕ್ಕೆ ಯಾವ ಬೆಲೆಯೂ ಸಿಗದು.

ಸ್ವಯಂ ಪ್ರೇರಣೆಯ ನಿಯಮಗಳು ವ್ಯಕ್ತಿಯನ್ನು ಸ್ವಯಂ ಪರೀಕ್ಷೆಗೆ ಒಳಗು ಮಾಡುತ್ತವೆ; ಅದರಲ್ಲಿ ಗೆದ್ದಾಗ ವ್ಯಕ್ತಿಯ ಆತ್ಮವಿಶ್ವಾಸವು ಮತ್ತಷ್ಟು ಬಲಿಯುತ್ತದೆ. ಶರೀರವು ಅಭ್ಯಾಸ ಬಲದಿಂದ ಎಂದಿನಂತೆ ಆಹಾರವನ್ನು ಬೇಡುತ್ತದೆ; ಮನಸ್ಸು ಸಹಾ ಬಗೆಬಗೆಯಲ್ಲಿ ಹಂಬಲಿಸುತ್ತದೆ. ಇವೆಲ್ಲವನ್ನೂ ನಿಯಂತ್ರಣ ಮಾಡಿಕೊಂಡಾಗ ವ್ಯಕ್ತಿ ತನ್ನ ಸಾಮರ್ಥ್ಯದ ಬಗ್ಗೆ ತಾನೇ ಹರ್ಷಿತನಾಗುತ್ತಾನೆ. ತಾನು ಎಂಥ ಕಠಿಣತಮವಾದುದನ್ನು ಜಯಿಸಬಲ್ಲೆನೆಂಬ ಸ್ಥೈರ್ಯ ಹೊಂದುತ್ತಾನೆ. ಈ ಉಪವಾಸಕ್ಕೆ ತಾತ್ವಿಕ ಬಲ ಕೊಡುವುದು ಧರ್ಮಗ್ರಂಥ ಪಾರಾಯಣ. ವರ್ಷದಲ್ಲಿ ಒಂದು ತಿಂಗಳು ಕಾಲ ಆತ್ಮ ಸಂಯಮ, ಆತ್ಮಜ್ಞಾನ ಸಂಪಾದನೆಗಳಲ್ಲಿ ಶರಣನು ತೊಡಗುವುದರಿಂದ ಅವನ ಚಿತ್ತ-ಮನ-ಬುದ್ದಿಗಳು ಮಾಗುತ್ತವೆ. ಹೀಗೆ ಒಂದು ತಿಂಗಳ ಅವಧಿಯಲ್ಲಿ ವ್ಯಕ್ತಿಯು ಪಡೆದ ಸಂಸ್ಕಾರ ಶ್ರಾವಣ ಮುಗಿಯುತ್ತಲೇ ಧೂಳೀಪಟವಾಗಿ ಹೋಗಬಾರದು ಹೀಗೆ ಮೆಲುಕಾಡಿಸುವ ಪ್ರಾಣಿಗಳು ಗಬಗಬನೆ ತಿಂದುದನ್ನು ಮೆಲುಕಾಡಿಸಿ ಜೀರ್ಣಿಸಿಕೊಳ್ಳುತ್ತವೋ ಹಾಗೇ ವ್ಯಕ್ತಿಯು ಗ್ರಂಥಪಾರಾಯಣದಿಂದ ಪಡೆದ ಜ್ಞಾನವನ್ನು ನಂತರ ಅಳವಡಿಸಿಕೊಳ್ಳುತ್ತಾ ಹೋಗಬೇಕು.

ಸಮುದಾಯ ಪ್ರಾರ್ಥನಾ ಕೂಟದಲ್ಲಿ ಉಪನ್ಯಾಸ ಶ್ರವಣದಲ್ಲಿ ವ್ಯಕ್ತಿಯು ಧರ್ಮದ ಬಗ್ಗೆ ಅಷ್ಟಷ್ಟು, ಅಲ್ಲಿಷ್ಟು ಇಲ್ಲಿಷ್ಟು ಹೀಗೆ ತಿಳಿದುಕೊಳ್ಳುವನು. ಶ್ರಾವಣ ಮಾಸ ಪರ್ಯಂತರ ಅಖಂಡವಾಗಿ ಆರಂಭದಿಂದ ಅಂತ್ಯದವರೆಗೆ ಸಮಗ್ರ ಧರ್ಮಗ್ರಂಥ ಪಾರಾಯಣ ಮಾಡುವುದರಿಂದ ಸದ್ಭಕ್ತರಿಗೆ ಧರ್ಮದ ಬಗ್ಗೆ ಸಂಪೂರ್ಣ ಪರಿಜ್ಞಾನವು ಉಂಟಾಗುವುದು.

ಕೆಲವು ನಿಯಮಗಳು

೧. ಸ್ನಾನ ಮಾಡಿ, ವಿಧಿವತ್ತಾಗಿ ಲಿಂಗಪೂಜೆ ಮಾಡಿ ಧರ್ಮಗ್ರಂಥ ಪಾರಾಯಣ ಮಾಡಬೇಕು.
೨. ಒಂದು ನಿಗದಿತ ಸ್ಥಳದಲ್ಲಿ ಮಾಡಬೇಕು. ಎಲ್ಲೋ ಮಲಗಿದಲ್ಲಿ ಕುಳಿತಲ್ಲಿ ಕಥೆ-ಕಾದಂಬರಿಗಳನ್ನು ಓದಿದಂತೆ ಓದಬಾರದು.
೩. ಮಧ್ಯೆ-ಮಧ್ಯೆ ಕರ್ತವ್ಯಕ್ಕಾಗಿ ಎದ್ದು ಹೋಗಬೇಕಾದರೂ ಪುನಃ ಬಂದು ನಿಗದಿತ ಸ್ಥಳದಲ್ಲೇ ಕುಳಿತು ಪಾರಾಯಣ ಮುಂದುವರಿಸಬೇಕು.
೪. ನಿಗದಿತ ಸ್ಥಳದಲ್ಲಿ ಒಂದು ಮಣೆ ಅಥವಾ ಮೇಜು ಇಟ್ಟು ಅದರ ಮೇಲೆ “ಬಸವಲಿಂಗ” ಮುದ್ರೆ ಬರೆದು, ಅದರ ಮೇಲೆ ಧರ್ಮಪಿತ ಬಸವಣ್ಣನವರ ಭಾವಚಿತ್ರವನ್ನಿಟ್ಟು ಪೂಜಿಸಿ ಧರ್ಮಗ್ರಂಥ ಪಾರಾಯಣ ಆರಂಭಿಸಬೇಕು.
೫. ದಿನನಿತ್ಯ, ಧರ್ಮಗುರುವಿಗೆ ಸಂಕ್ಷಿಪ್ತ ಪೂಜೆ ಮಾಡಿ ಪ್ರಾರಂಭ ಮಾಡಬೇಕು.
೬. ಮಧ್ಯದಲ್ಲಿ ಮಲಮೂತ್ರ ವಿಸರ್ಜನೆಯಂತಹ ನೈಸರ್ಗಿಕ ಕರೆಗೆ ಓಗೊಡಬೇಕಾಗಿ ಬಂದಾಗ, ನಂತರ ಕೈಕಾಲು ಮುಖ ತೊಳೆದುಕೊಂಡು ಬಂದು, ಭಸ್ಮಧಾರಣೆ ಮಾಡಿಕೊಂಡು ಧರ್ಮಗುರುವಿನ ಭಾವಚಿತ್ರಕ್ಕೆ, ಇಷ್ಟಲಿಂಗಕ್ಕೆ ನಮಸ್ಕರಿಸಿ ಪಾರಾಯಣ ಮುಂದುವರಿಸಬೇಕು.
೭. ಶ್ರಾವಣ ಶುದ್ಧ ಪ್ರತಿಪದೆಯಿಂದ ಬಸವೇಶ್ವರ ಪೂಜಾವ್ರತ ಮತ್ತು ನೀಲಮ್ಮ ಷಷ್ಟಿಯಿಂದ ಭಾದ್ರಪದ ತೃತೀಯಾದವರೆಗೆ ಧರ್ಮಗ್ರಂಥ ಪಾರಾಯಣ ನಡೆಸುವ ಸನ್ನಿವೇಶದಲ್ಲಿ ಪತಿ-ಪತ್ನಿ ಅಥವಾ ಉಭಯತರು ಪಾರಾಯಣವ್ರತ ಸ್ವೀಕರಿಸಿದಾಗ ಬ್ರಹ್ಮಚರ್ಯ ಪಾಲಿಸಬೇಕು ಅರ್ಥಾತ್ ದಾಂಪತ್ಯ ಸುಖವನ್ನು ಅನುಭವಿಸಬಾರದು.

ನಿತ್ಯ ದಾಸೋಹ ಗಣಪರ್ವ

ಪಾರಾಯಣ ಆರಂಭಿಸುತ್ತಲೇ ನಿತ್ಯವೂ ಕನಿಷ್ಟ ಒಬ್ಬರಿಗೆ, ಅಥವಾ ತಮಗೆ ಅನುಕೂಲವಿದ್ದಷ್ಟು ಜನ ಸಹಧರ್ಮಿಯರಿಗೆ ದಾಸೋಹಕ್ಕೆ ಆಹ್ವಾನಿಸಬೇಕೆಂದು ಈಗಾಗಲೇ ಸೂಚಿಸಲಾಗಿದೆಯಷ್ಟೆ. ಮುಕ್ತಾಯದ ದಿನ ಹೆಚ್ಚಿನ ಜನರನ್ನು ಆಹ್ವಾನಿಸಬಹುದು. ಅಥವಾ ಅದರ ಮರುದಿನವೇ ಗಣಮಹೋತ್ಸವ (ರಾಷ್ಟ್ರೀಯ ಬಸವ ದಳದ ಹುಟ್ಟು ಹಬ್ಬ) ವಿರುವುದರಿಂದ ಸಾಮೂಹಿಕ ಪ್ರಸಾದ ಮಾಡಿಸುವ ಗಣಪರ್ವಕ್ಕೆ ತಮ್ಮ ಕೈಲಾದ ಧನದಾಸೋಹ ಸಲ್ಲಿಸಬಹುದು. ವೈಯುಕ್ತಿಕವಾಗಿ ಅನ್ನದಾಸೋಹ, ವಸ್ತ್ರದಾಸೋಹ, ಧನದಾಸೋಹ, ಸಾಹಿತ್ಯದಾಸೋಹ ಮುಂತಾದುವನ್ನು ಸಹ ಮಾಡಬಹುದು. ವೈಯುಕ್ತಿಕವಾಗಿ ಸಾಧ್ಯವಾಗದಿದ್ದರೆ ಸಂಘ-ಸಂಸ್ಥೆಗಳ ಮೂಲಕ ಮಾಡಬಹುದು.

ತನುದಾಸೋಹ : ಯಾರು ಆರ್ಥಿಕವಾಗಿ ಅಶಕ್ತರಿದ್ದು ಇದೇನನ್ನೂ ಮಾಡಲು ಸಾಧ್ಯವಿಲ್ಲವೋ ಅಂಥವರು ತನು ದಾಸೋಹದಲ್ಲಿ ತೊಡಗಬೇಕು ಅಂದರೆ ಪ್ರವಚನ ಸಾಮೂಹಿಕ ಪ್ರಾರ್ಥನೆ - ಧರ್ಮಗ್ರಂಥ ಪಾರಾಯಣ ನಡೆಯುವುದೋ ಅಲ್ಲಿ ಹೋಗಿ ಸೇವೆ ಮಾಡಬೇಕು.

ಆರ್ಥಿಕವಾಗಿ ಅಶಕ್ತರಿದ್ದವರಷ್ಟೇ ಅಲ್ಲ, ಸಶಕ್ತರು, ಶ್ರೀಮಂತರು ಸಹ ತಮ್ಮ ದಾಸೋಹ ಪೂರ್ಣಗೊಳ್ಳಬೇಕಾದರೆ ತನು ದಾಸೋಹ ಮಾಡಬೇಕು. ಪ್ರಸಾದ ಸ್ವೀಕರಿಸದವರ ತಟ್ಟೆ-ಲೋಟ ಎತ್ತುವುದು, ತೊಳೆಯುವುದು, ಆ ಸ್ಥಳವನ್ನು ಒರೆಸುವುದು ಮುಂತಾಗಿ ಮಾಡಬೇಕು. ಶ್ರೀಮಂತರು ತಮಗಿಂತ ಆರ್ಥಿಕವಾಗಿ ಕೆಳಗಿರುವವರನ್ನು ಅಂತಸ್ತಿನಲ್ಲಿ ಹಿಂದಿರುವವರನ್ನು ಆಹ್ವಾನಿಸಿದಾಗ (ಮತ್ತು ಅದೇ ನಿಜವಾದ ದಾಸೋಹ, ಸಮಾನಸ್ಕರನ್ನು ಕರೆದು ಉಣ್ಣಿಸಿದಾಗ ಅದು ಪ್ರಸಾದ ದಾಸೋಹಕ್ಕಿಂತಲೂ, ಪ್ರೀತಿಯ ಭೋಜನವಾಗುವುದು) ಉಂಡವರ ಕೈಯಿಂದಲೇ ತಟ್ಟೆ ಎತ್ತಿಸುವುದರಿಂದ, ತೊಳೆಸುವುದರಿಂದ ಅವರ ಕಡೆಯಿಂದಲೇ ಸ್ಥಳವನ್ನು ಸ್ವಚ್ಛ ಮಾಡಿಸುವುದರಿಂದ ದಾಸೋಹದ ಪ್ರತಿಫಲವು ಇಲ್ಲವಾಗುತ್ತದೆ).

ವಚನ ಪ್ರಸಾದ (ತಾಂಬೂಲ)

ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಧಾರ್ಮಿಕ ಆಚಾರಗಳನ್ನು ನಿರ್ವಹಿಸುವ ಗೃಹಸ್ಥರು ಬಗೆಬಗೆಯ ಕೊಡುಗೆಗಳನ್ನು ಬಂಧು-ಬಳಗ, ಮಿತ್ರ ವೃಂದಕ್ಕೆ ಕೊಡುವುದುಂಟು. ಬಾಗಿನಗಳನ್ನು, ಸೀರೆ ಕುಬುಸಗಳನ್ನು ಪ್ರಸಾದ ಸ್ವೀಕರಿಸಿದವರಿಗೆ ಕಾಣಿಕೆ ಕೊಡುವರು, ಬಸವಾಯಿತರು ನಶ್ವರ ವಸ್ತುಗಳ ಮೇಲೆ ಹಣ ವ್ಯಯಿಸಬಾರದು. ಬಡವರೆಂದು ಯಾರಿಗಾದರೂ ಅನ್ನ, ವಸ್ತ್ರ, ಹಣ ದಾನವಾಗಿ ಕೊಡುವಾಗ ಅವನ್ನು ಕೊಡಲಿ, ಆದರೆ, ಸಮಾನಸ್ಕ ಶರಣ ಬಂಧುಗಳನ್ನು ಆಹ್ವಾನಿಸಿದಾಗ ಇವರ ಕೊಡುಗೆ ಅವರಿಗೆ ಅನಿವಾರ್ಯ ಅವಶ್ಯಕತೆ ಆಗಿಲ್ಲದೇ ಇರುವಾಗ ಇಂಥ ನಶ್ವರ ವಸ್ತುಗಳನ್ನು ಕೊಡದೇ ಆಗ ಚಿಕ್ಕ ಚಿಕ್ಕ ಅಥವಾ ತಮ್ಮ ಶಕ್ತಾನುಸಾರ ವಚನಗ್ರಂಥಗಳನ್ನು ಕೊಡಬೇಕು. ಬಸವಾದಿ ಪ್ರಮಥರ ಮಹಾನ್ ತ್ಯಾಗಕ್ಕೆ ಇದು ಅವರ ಅನುಯಾಯಿಗಳ ಚಿಕ್ಕದೊಂದು ಕೊಡುಗೆ ಅಷ್ಟೆ. ಚಿನ್ಮಯ ಜ್ಞಾನಿ ಚನ್ನ ಬಸವಣ್ಣ, ವೀರಮಾತೆ ಅಕ್ಕ ನಾಗಲಾಂಬಿಕೆ, ವೀರ ಶರಣ ಮಡಿವಾಳ ಮಾಚಿದೇವ ಮುಂತಾದ ಗಣವೀರರು ಪ್ರಾಣವನ್ನು ಪಣಕ್ಕಿಟ್ಟು ರಕ್ಷಿಸಿದ ಸಾಹಿತ್ಯವನ್ನು ಕೇವಲ ಅಭಿಮಾನದಿಂದ ಹಣ ಕೊಟ್ಟು ರಕ್ಷಿಸುವ, ಬೆಳೆಸುವ ವಿಧಾನ ಇದೊಂದೆ.

ಶ್ರಾವಣ ಮಾಸ ವ್ರತಾಚರಣೆಯ ಸತ್‌ಪರಿಣಾಮ

೧. ಪ್ರತೀ ಮನೆಯಲ್ಲಿಯೂ ಪಾರಾಯಣವು ಜರುಗುವುದರಿಂದ, ಅದರ ಶ್ರವಣದಿಂದ ಧರ್ಮಜ್ಞಾನ ಉಂಟಾಗುವುದು.
೨. ವ್ಯಕ್ತಿಯ ಅಂತರಂಗ ಶುದ್ದಿಯಾಗುವುದು, ಕುಟುಂಬದಲ್ಲಿ ಸಾತ್ವಿಕ - ಭಾಕ್ತಿಕ ವಾತಾವರಣ ಹಬ್ಬಿ ಹಸರಿಸುವುದು, ಇದರ ಪ್ರಭಾವ ತಾತ್ಕಾಲಿಕವಾಗಿ ಆಗದೇ ಶಾಶ್ವತವಾಗಿ ಎಲ್ಲರ ಜೀವನದ ಮೇಲೆ ಆಗುವುದು.
೩. ಎಲ್ಲರ ಮನೆಗಳಲ್ಲೂ ಇದೇ ನಿಯಮವೂ ಪಾಲನೆಯಾಗುವುದರಿಂದ ಸಹಧರ್ಮಿಯ ಶರಣ ಸಮುದಾಯವೇ ಆಧ್ಯಾತ್ಮಿಕ ಚೈತನ್ಯದಿಂದ ಉತ್ತೇಜನಗೊಳ್ಳುವುದು.
೪. ಮನೆಯಲ್ಲಿ ಎಲ್ಲರೂ ಉಪವಾಸ ಮತ್ತು ಕೈಲಾದಷ್ಟು ಧರ್ಮಗ್ರಂಥ ಪಾರಾಯಣ ಮಾಡಿ ತಮ್ಮ ಕರ್ತವ್ಯ - ಕಾಯಕಕ್ಕೆ ಹೊರಡುವುದರಿಂದ ಕೆಟ್ಟ ಕೆಲಸಗಳನ್ನು, ದುರ್ಜನರ ಸಹವಾಸವನ್ನು ಮಾಡಲು ಅಂತರಾತ್ಮ ಹಿಂಜರಿಯುವುದು.

ಹೀಗೆ ಒಂದು ತಿಂಗಳ ಪರ್ಯಂತರ ನೈತಿಕ - ಅಧ್ಯಾತ್ಮಿಕ ಮೌಲ್ಯಗಳ ಅಭ್ಯಾಸ - ಅನುಷ್ಠಾನ ವ್ಯಕ್ತಿಯು ಶಾಶ್ವತವಾಗಿ - ಅದೇ ದಾರಿಯಲ್ಲಿ ಮುಂದುವರಿಯುವಂತೆ ಪ್ರೇರೇಪಿಸುವುದು, ನನ್ನ ಕೈಲಿ ಆಗುತ್ತೋ ಇಲ್ಲವೋ ಎಂಬ ಅಳುಕಿನಿಂದಲೇ ಬಹುಪಾಲು ಜನರು ಒಳ್ಳೆಯ ಮಾರ್ಗಕ್ಕೆ ಬರಲು ಹೆದರುವರು. ಒಂದು ತಿಂಗಳ ತರಬೇತಿಯು ಸದ್ಭಕ್ತರ ಆತ್ಮವಿಶ್ವಾಸವನ್ನು ಕುದುರಿಸಿ ಅವರು ಶಾಶ್ವತವಾಗಿ ಸನ್ಮಾರ್ಗಗಾಮಿಗಳಾಗುವಂತೆ ಪ್ರೇರೇಪಿಸುವುದು.

ಯಾಂತ್ರಿಕತೆ ಬೇಡ

ಧರ್ಮಪಿತರು ಹೀಗೆ ಹೇಳುತ್ತಾರೆ :

ಅಭ್ಯಾಸವೆನ್ನ ವರ್ತಿಸಿತ್ತಯ್ಯ,
ಭಕ್ತಿ ಸಾಧ್ಯವಾಗದು ನಾನೇವೆನಯ್ಯಾ
ಆ ನಿಮ್ಮ ಮನಂಬೊಗುವನ್ನಕ್ಕ
ನೀವೆನ್ನ ಮನಂಬೊಗುವನ್ನಕ್ಕ ?
ಕಾಯಗುಣಂಗಳ ಕಳೆದವರಿಗೆ ಶರಣೆಂಬೆ
ಕೂಡಲ ಸಂಗಮದೇವಾ

ಈ ಎಲ್ಲ ನಿಯಮ - ವ್ರತ - ಪಾರಾಯಣ ಇವುಗಳ ಉದ್ದೇಶ ಕಾಯಗುಣಗಳನ್ನು ಕಳೆದುಕೊಳ್ಳುವುದೇ ಆಗಿದೆ. ಅವು ಹೋಗಬೇಕಾದರೆ ಭಕ್ತನ ಮನ ದೇವನಲ್ಲಿ ಒಳಹೋಗಬೇಕು; ದೇವನ ಕೃಪೆಯು ಭಕ್ತನೊಳಗೆ ಅವತೀರ್ಣವಾಗಬೇಕು. ಇಲ್ಲದಿದ್ದರೆ ಅದು ಯಾಂತ್ರಿಕ ಕ್ರಿಯೆ ಮಾತ್ರವಾಗುವುದು. ಒಬ್ಬ ವ್ಯಕ್ತಿಯು ಆರೋಗ್ಯವಂತನಾಗಿರಬೇಕಾದರೆ ಆಹಾರ ತಗೊಳ್ಳಬೇಕು. ಸರಿಯಾದ ಆಹಾರ ಸ್ವೀಕರಿಸಬೇಕು, ಸರಿಯಾದ ಕ್ರಮದಲ್ಲಿ ತಗೊಳ್ಳಬೇಕು. ಈ ಮೂರರಲ್ಲಿ ಯಾವುದೊಂದು ಕ್ರಮವಾಗಿ ಆಗದಿದ್ದರೂ ವ್ಯಕ್ತಿ ಪರಿಪುಷ್ಟನಾಗನು, ಹಾಗೆ ಸರಿಯಾದ ಜ್ಞಾನ ಪಡೆಯಬೇಕು; ಕ್ರಮಬದ್ಧ ವಿಧಾನದ ಮೂಲಕ ಪಡೆಯಬೇಕು, ಪಡೆದುಕೊಂಡ ಜ್ಞಾನವನ್ನು ಸರಿಯಾಗಿ ಅನುಷ್ಠಾನಕ್ಕೆ ತರಬೇಕು. ಆಗಲೇ ಯಾವ ವ್ರತ - ನೇಮಗಳಾಗಲೀ ಸರಿಯಾದ ಫಲವನ್ನು ನೀಡುವವು. ಕೇವಲ ಯಾಂತ್ರಿಕ ಆಚರಣೆಗಳು ಸತ್ಪಲ ಕೊಡವು.

ಸತ್ಸಂಕಲ್ಪ

ಭಾದ್ರಪದ ತೃತೀಯಾದಂದು ಉಪವಾಸ ಪೂರ್ತಿಗೊಳಿಸಿ, ಧರ್ಮ ಗ್ರಂಥ ಪಾರಾಯಣ ಪೂರ್ತಿ ಮಾಡುವ ದಿವಸ ಪ್ರತಿಯೊಬ್ಬ ವ್ಯಕ್ತಿಯೂ ಮೌನವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹೊರಜಗತ್ತಿಗೆ ಗೊತ್ತಾಗದಂತೆ ಏನಾದರೂ ತಪ್ಪು ಮಾಡಿದ್ದರೆ, ಲೋಪದೋಷ ಸಂಭವಿಸಿದ್ದರೆ ಪಶ್ಚಾತ್ತಾಪ ಪಟ್ಟುಕೊಳ್ಳಬೇಕು. ಆ ಪಶ್ಚಾತ್ತಾಪ ಆಳವಾಗಿ ಹೃದಯಾಂತರಾಳದಿಂದ ಬಂದುದಾಗಿರಬೇಕು.

ಮುಂದೆ ತಾನು ಧರ್ಮಮಾರ್ಗವು ನಿರೀಕ್ಷಿಸಿದಂತೆ ನಡೆಯುವುದಾಗಿ ಸಂಕಲ್ಪ ತೊಡಬೇಕು. ಒಂದು ತಿಂಗಳು ಕಾಲ ಗಳಿಸಿಕೊಂಡ ಪುಣ್ಯ-ಜ್ಞಾನಗಳೆಲ್ಲವೂ ವ್ರತವು ಮುಗಿದ ಮರುದಿವಸದಿಂದಲೇ ಕ್ಷೀಣವಾಗುವಂತೆ ಆಗದೇ, ಇವು ಬಿತ್ತಲ್ಪಟ್ಟ ಬೀಜಗಳಂತೆ ಬಾಳ ಹೊಲದಲ್ಲಿ ಮೊಳಕೆಯೊಡೆದು, ಬೆಳೆಯುವಂತೆ, ಸುಜ್ಞಾನ - ಅನುಭಾವಗಳ ಫಲ ನೀಡುವಂತೆ ಆಗಬೇಕು. ಸಾಧ್ಯವಾದಷ್ಟು ಎಲ್ಲರೂ ಪವಿತ್ರ ಮಾಸಾಚರಣೆಯ ವ್ರತವನ್ನು ಕೈಗೊಳ್ಳಬೇಕು. ಮುಖ್ಯವಾಗಿ ಇದು ಸ್ವಯಂ ಪ್ರೇರಣೆಯ ವ್ರತವಾಗಬೇಕು ಎಂಬ ಬಗ್ಗೆ ಒತ್ತಿ ಹೇಳಬಯಸುತ್ತೇನೆ. ಇನ್ನು ಈ ವ್ರತದಿಂದ ವಿನಾಯತಿ ಹೊಂದಲು ಪ್ರಸ್ತುತ ಕಾರಣಗಳನ್ನು ಗುರುತಿಸಬಹುದು.

೧. ಉಪವಾಸ ಪಾರಾಯಣ ಮಾಡುವಷ್ಟು ತಿಳುವಳಿಕೆ, ಬುದ್ದಿ ಬೆಳೆಯದ ವಯಸ್ಸಿನವರು ವ್ರತಭಂಗ ಮಾಡುವ ಸಂಭವವಿರುವುದರಿಂದ.
೨. ಶಾರೀರಿಕ - ಮಾನಸಿಕ ಕಾಯಿಲೆಗಳಿದ್ದು ಔಷಧಿ ಇಲ್ಲದೇ ಇರಲು ಸಾಧ್ಯವಿಲ್ಲದವರು, ಈ ಔಷಧಿಗಳನ್ನು ಸ್ವೀಕರಿಸುವ ಮೊದಲು ಆಹಾರ ತೆಗೆದುಕೊಳ್ಳಬೇಕು ಎಂಬ ಪರಿಸ್ಥಿತಿಯವರು.
೩. ಕರ್ತವ್ಯ - ಕಾಯಕ ನಿರ್ವಹಣೆಗೆ ಪ್ರವಾಸ ಕೈಗೊಳ್ಳಬೇಕಾದ ವ್ಯಕ್ತಿಗಳು, ಕಾಯಕದ ನಿಮಿತ್ತ ತರಬೇತಿ ಮುಂತಾದ ಕರ್ತವ್ಯ ಪೂರೈಸಲು ಆದೇಶ ಪಡೆದ ವ್ಯಕ್ತಿ.
೪. ೭ನೆಯ ತಿಂಗಳು ದಾಟಿದ ಗರ್ಭವತಿಯರು, ಎಳೆಯ ಕೂಸುಗಳಿರುವ ಬಾಣಂತಿಯರು ಮಾಡುವ ಅಗತ್ಯವಿಲ್ಲ.

ಶ್ರಾವಣ ಮಾಸಾಚರಣೆಯೇ ಆಗಲಿ, ಶರಣ ಮೇಳ, ವ್ರತಾಚರಣೆಯೇ ಆಗಲಿ ತನು-ವಾಕ್-ಮನಗಳೆಂಬ ತ್ರಿಕರಣಗಳನ್ನು ಶುದ್ಧಗೊಳಿಸಿ, ಅಲ್ಲಿ ದಿವ್ಯಜ್ಞಾನವನ್ನು, ದೇವಕರುಣೆಯನ್ನು ತುಂಬುವಂತೆ ಮಾಡಬೇಕು ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.

ಗ್ರಂಥ ಋಣ:
[1] "ಬಸವ ಧರ್ಮದ ಸಂಸ್ಕಾರಗಳು", ಲೇ:ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ, ಪ್ರ: ವಿಶ್ವಕಲ್ಯಾಣ ಮಿಷನ್‌, ಬೆಂಗಳೂರು, ೧೯೯೫.

ಪರಿವಿಡಿ (index)
Previous ಗೃಹ ನಿರ್ಮಾಣ ಮತ್ತು ಗುರು ಪ್ರವೇಶ. ಶರಣದೀಕ್ಷೆ - ಶರಣಮೇಳವ್ರತ ಸ್ವೀಕಾರ Next