Previous ಮಹಾಲಿಂಗದಲ್ಲಿ ಮಿಶ್ರಾರ್ಪಣ ಮಾಯೆ Next

ಮಹೇಶ್ವರನಿಗೆ ಅಪ್ಪು ಅಂಗ

ಮಹೇಶ್ವರನಿಗೆ ಅಪ್ಪು ಅಂಗ

ಮೂಲಾಧಾರದ ಮೇಲಿರುವ ಸ್ವಾಧಿಷ್ಠಾನ ಚಕ್ರದಲ್ಲಿ ನೆಲೆಸಿರುವ ಶಿವನಿಗೆ ಗುರುಲಿಂಗವೆಂದು ಹೆಸರು: ಶಿವನು ಮಾನವನಲ್ಲಿ ವ್ಯಕ್ತವಾಗಲು ಒಂದು ಮಾಧ್ಯಮ ಬೇಕು. ಜ್ಞಾನಶಕ್ತಿಯೇ ಆ ಮಾಧ್ಯಮ. ಜ್ಞಾನಶಕ್ತಿಯು ಅಪ್ (ನೀರು) ತತ್ವದ ಮತ್ತೊಂದು ಹೆಸರು. ಅಂದರೆ, ಗುರುಲಿಂಗವು ಜ್ಞಾನಶಕ್ತಿಯ ಅಧಿದೇವತೆ.

ಗುರುಲಿಂಗವನ್ನು ಸಾಕ್ಷಾತ್ಕರಿಸಿಕೊಳ್ಳುವ ಸಾಧಕನಿಗೆ ಮಹೇಶ್ವರನೆಂದು ಹೆಸರು. ಗುರುಲಿಂಗವು ನಮ್ಮ ಬೆನ್ನುಹುರಿಯಲ್ಲೇ ಇದ್ದರೂ, ಅದನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧಕನು ಅಪ್ ತತ್ವದ ದುಷ್ಪರಿಣಾಮಗಳನ್ನು ಕಡಿಮೆ ಮಾಡಿ, ಅದನ್ನು ಶುದ್ಧ ಮಾಡಬೇಕಾಗುತ್ತದೆ. ಶುದ್ಧವಾದ ಜ್ಞಾನಶಕ್ತಿಗೆ ನಿಷ್ಠಾಭಕ್ತಿ ಎಂದು ಹೆಸರು.

ಜ್ಞಾನಶಕ್ತಿಯನ್ನು (ಅಪ್‌ತತ್ವವನ್ನು) ಶುದ್ಧ ಮಾಡುವುದು ಹೇಗೆ? ಜ್ಞಾನಶಕ್ತಿಯ ಉತ್ಪನ್ನಗಳಾದ ತನ್ಮಾತ್ರೆ (ರೂಪರಸಗಂಧಾದಿ)ಗಳನ್ನು ಹತೋಟಿಯಲ್ಲಿಡುವುದೇ ಜ್ಞಾನಶಕ್ತಿಯನ್ನು ಶುದ್ದೀಕರಿಸುವ ವಿಧಾನ. ಅಂದರೆ ಸಾಧಕನು ಯಾವ ರೀತಿಯ ತನ್ಮಾತ್ರೆಗಳು ಆಧ್ಯಾತ್ಮಿಕ ಜೀವನಕ್ಕೆ ಅಡ್ಡಿಯಾಗುತ್ತವೆ, ಯಾವ ರೀತಿಯ ತನ್ಮಾತ್ರೆಗಳು ಆಧ್ಯಾತ್ಮಿಕ ಜೀವನಕ್ಕೆ ಸಹಾಯವಾಗುತ್ತವೆ ಎಂಬುದರ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕಾಗುತ್ತದೆ.

ಜ್ಞಾನಶಕ್ತಿಯ ದುಷ್ಪರಿಣಾಮಗಳನ್ನು ಕಡಿಮೆ ಮಾಡಿ, ನಿಷ್ಠಾ ಭಕ್ತಿಯನ್ನು ಬೆಳೆಸಿಕೊಳ್ಳುವ ಸಾಧಕನಿಗೆ ಮಹೇಶ್ವರ ಎಂಬ ಹೆಸರಿದ್ದು, ಅವನು ಇಂದ್ರಿಯ ನಿಗ್ರಹ ಮಾಡುವ ಮೂಲಕ ಜ್ಞಾನವನ್ನು ಪಡೆಯಬೇಕು ಎಂಬುದು ಇದರ ತಾತ್ಪರ್ಯ. (೮:೧೯೬೯)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಮಹಾಲಿಂಗದಲ್ಲಿ ಮಿಶ್ರಾರ್ಪಣ ಮಾಯೆ Next