Previous ಬಯಲು ಭಕ್ತಿ Next

ಭಕ್ತಂಗೆ ಪೃಥ್ವಿಯಂಗ

ಭಕ್ತಂಗೆ ಪೃಥ್ವಿಯಂಗ

ವಚನಗಳ ಪ್ರಕಾರ ಮಾನವನ ಬೆನ್ನು ಹುರಿಯಲ್ಲಿ, ಕುತ್ತಿಗೆಯಲ್ಲಿ, ಭೂಮಧ್ಯದಲ್ಲಿ, ಮತ್ತು ನೆತ್ತಿಯಲ್ಲಿ ಪರಶಿವ ನೆಲೆಸುತ್ತಾನೆ. ಎಲ್ಲಕ್ಕಿಂತ ಕೆಳಗೆ, ಅಂದರೆ ಮೂಲಾಧಾರದಲ್ಲಿರುವ ಶಿವನಿಗೆ ಆಚಾರಲಿಂಗವೆಂದು ಹೆಸರು. ಶಿವನು ಚಿತ್‌ಸ್ವರೂಪನಾದುದರಿಂದ, ಅವನು ನೆಲೆಸಲು ಅಥವಾ ವ್ಯಕ್ತವಾಗಲು ಒಂದು ಮಾಧ್ಯಮ ಬೇಕು. ಕ್ರಿಯಾಶಕ್ತಿಯೇ ಆ ಮಾಧ್ಯಮ. ಕ್ರಿಯಾಶಕ್ತಿ ಪೃಥ್ವಿ ಭೂತದ ಮತ್ತೊಂದು ಹೆಸರು. ಅಂದರೆ ಆಚಾರಲಿಂಗವು ಕ್ರಿಯಾಶಕ್ತಿಯಲ್ಲಿ ನೆಲೆಸಿರುತ್ತದೆ ಹಾಗೂ ಅದರ ಅಧಿದೇವತೆ.

ಆಚಾರ ಲಿಂಗವನ್ನು ಸಾಧಿಸುವ ಸಾಧಕನಿಗೆ ಭಕ್ತನೆಂದು ಹೆಸರು. ಆಚಾರಲಿಂಗವು ನಮ್ಮಲ್ಲಿಯೇ ಇದ್ದರೂ ನಮಗೆ ವ್ಯಕ್ತವಾಗದು. ಅದನ್ನು ಸಾಧಿಸಲು ಭಕ್ತನು ಕ್ರಿಯಾಶಕ್ತಿಯ ದುಷ್ಪರಿಣಾಮಗಳನ್ನು ಕಡಿಮೆ ಮಾಡಿ, ಅದನ್ನು ಶುದ್ಧ ಮಾಡಬೇಕಾಗುತ್ತದೆ. ಶುದ್ದವಾದ ಕ್ರಿಯಾಶಕ್ತಿಯೇ ಶ್ರದ್ಧಾ ಭಕ್ತಿ.

ಇಲ್ಲಿ ಕ್ರಿಯಾಶಕ್ತಿಯನ್ನು ಶುದ್ದೀಕರಿಸುವುದು ಹೇಗೆ ಎಂಬ ಪ್ರಶ್ನೆ ಏಳುತ್ತದೆ. ಹಸಿವು, ನೀರಡಿಕೆ, ಶೋಕ, ಮೋಹ, ಮುಪ್ಪು ಮತ್ತು ಮರಣ ಎಂಬ ಷಡೂರ್ಮಿಗಳು ಪೃಥ್ವಿ ತತ್ವದ ದುಷ್ಪರಿಣಾಗಳು. ಅಂಗದಾಪ್ಯಾಯನದ ಬದಲು ಲಿಂಗದಾಪ್ಯಾಯನವ ಬೆಳೆಸಿಕೊಂಡರೆ, ಹಸಿವು ಇಲ್ಲವಾಗುತ್ತದೆ. ಹೀಗೆ ಉಳಿದ ಐದನ್ನೂ ಗೆಲ್ಲಲು ವಚನಕಾರರು ವಿವಿಧ ಉಪಾಯಗಳನ್ನು ಸೂಚಿಸಿದ್ದಾರೆ.

ಹಾಗೆಯೇ ಕ್ರಿಯಾಶಕ್ತಿಯಿಂದ ಉತ್ಪತ್ತಿಯಾದ ಕರ್ಮೇಂದ್ರಿಯಗಳನ್ನು ಆಧ್ಯಾತ್ಮಿಕ ಕಾರ್ಯಗಳಿಗೆ ಉಪಯೋಗಿಸಿದರೆ, ಆಗಲೂ ಕ್ರಿಯಾಶಕ್ತಿ ಶುದ್ಧವಾದಂತೆಯೇ. ಅದೇ ರೀತಿ ಓಂ ಲಿಂಗಾಯ ನಮಃ ಎಂದು ಪದೇ ಪದೇ ಮಂತ್ರವನ್ನುಚ್ಚರಿಸುವ ಮೂಲಕ ವಾಗಿಂದ್ರಿಯವನ್ನು ಶುದ್ಧಗೊಳಸಬಹುದು. ಪರಶಿವನಿಗೆ ಹೇಗೆ ಇಡೀ ವಿಶ್ವವೇ ಒಂದು ಅಂಗವೋ ಹಾಗೆ, ಭಕ್ತನಿಗೆ ಪೃಥ್ವಿ ತತ್ವವು ಅಂಗವಾಗುತ್ತದೆ. (೮:೧೯೬೯)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಬಯಲು ಭಕ್ತಿ Next