Previous ಪಂಚಜ್ಞಾನ ಪಂಚಭೂತಗಳ ಪರಿಣಾಮಗಳು Next

ಪಂಚಪಾತಕ (ಪಂಚಮಹಾಪಾತಕ)

ಪಂಚಪಾತಕ (ಪಂಚಮಹಾಪಾತಕ)

ಸಾಂಪ್ರದಾಯಿಕ ಹಿಂದೂಗಳು ಭ್ರೂಣಹತ್ಯೆ, ಬ್ರಹ್ಮಹತ್ಯೆ, ಮುಂತಾದವುಗಳನ್ನು ಪಂಚಪಾತಕಗಳೆಂದು ಪರಿಗಣಿಸಿದರೆ ಚೆನ್ನಬಸವಣ್ಣನವರು (೩:೧೬೬) ಭವಿ ಮಾಡಿದ ಪಾಕವನ್ನು ಉಣ್ಣುವುದು ಮೊದಲನೆ ಪಾತಕ, ಪರಧನ, ಪರಸತಿಗೆ ಆಸೆ ಪಡುವುದು ಎರಡನೆ ಪಾತಕ, ಜಂಗಮನಿಂದೆ ಮೂರನೆ ಪಾತಕ, ಗುರುವಾಜ್ಞೆ ಮೀರುವುದು ನಾಲ್ಕನೆಯ ಪಾತಕ, ಶಿವನಿಂದ ಐದನೆ ಪಾತಕ ಎಂದು ಹೇಳುತ್ತಾರೆ. ಭವಿಗಳೊಡನಾಟ ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿ ಮಾಡುತ್ತದೆ; ಎರಡನೆಯದು ಅನೈತಿಕ: ಜಂಗಮನಿಂದೆ, ಶಿವನಿಂದೆ, ಗುರುವಾಜ್ಞೆ ಮೀರುವುದು ನಿಷ್ಠೆಯಿಲ್ಲದುದರ ಸಂಕೇತ. ಆದುದರಿಂದ ಇವೆಲ್ಲ ವರ್ಜ್ಯ. ಆದರೆ ಚೆನ್ನಬಸವಣ್ಣನವರೇ ಈ ಪಟ್ಟಿಯನ್ನು ಬದಲಾಯಿಸಿ: ಲಿಂಗದೀಕ್ಷೆಯಾದ ಬಳಿಕ ಲಿಂಗವನ್ನು ಕಳೆದುಕೊಳ್ಳುವುದು ಮೊದಲನೆ ಪಾತಕ, ಭವಿಪಾಕಭೋಜನ ಎರಡನೆ ಪಾತಕ ಪ್ರತಿಮೆಗಳಿಗೆ ನಮಸ್ಕರಿಸುವುದು ಮೂರನೆಯ ಪಾತಕ, ಪ್ರಸಾದಿಸ್ಥಲವನ್ನರಿಯದಿದ್ದರೆ, ನಾಲ್ಕನೆಯ ಪಾತಕ, ಲಿಂಗದಲ್ಲಿ ಲೀಯವಾಗದಿದ್ದರೆ ಐದನೆ ಪಾತಕ" ಎನ್ನುತ್ತಾರೆ (೩:೧೯೮), ಅವರೇ ಮತ್ತೊಮ್ಮೆ (೮೭೦೧) ಶಿವ ಭಕ್ತರ ಕಂಡು ಉದಾಸೀನ ಮಾಡುವುದು ಮೊದಲನೆ ಪಾತಕ, ಭಕ್ತರ ಸಮಯೋಚಿತವ ನಡೆಸದಿದ್ದರೆ ಎರಡನೆ ಪಾತಕ, ಭಕ್ತರಿಗೆ ಮಾರುತ್ತರ ಕೊಟ್ಟರೆ, ಮೂರನೆ ಪಾತಕ, ಭಕ್ತರ ಸಕಳಾರ್ಥಕ್ಕೆ ಸಲ್ಲದಿದ್ದರೆ ನಾಲ್ಕನೆ ಪಾತಕ, ಭಕ್ತರಿಗೆ ಮಾಡಿದೆನೆಂದು ಹೆಮ್ಮೆ ಪಟ್ಟುಕೊಂಡರೆ ಐದನೆ ಪಾತಕ ಎನ್ನುತ್ತಾರೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಪಂಚಜ್ಞಾನ ಪಂಚಭೂತಗಳ ಪರಿಣಾಮಗಳು Next