Previous ಕಲೆಗಳು ಕಾಯಕ Next

ಕಲೆಗಳು ಮತ್ತು ಶಕ್ತಿಗಳು

ಕಲೆಗಳು ಮತ್ತು ಶಕ್ತಿಗಳು

ವಿವಿಧ ವಚನಗಳ ಪರಿಶೀಲನೆಯಿಂದ ಕಲೆಗಳು ಮತ್ತು ಶಕ್ತಿಗಳು ಭಿನ್ನವೋ ಅಲ್ಲವೋ ಎಂಬ ಪ್ರಶ್ನೆ ಏಳುತ್ತದೆ. ತೋಂಟದ ಸಿದ್ದಲಿಂಗೇಶ್ವರರು ತಮ್ಮ ವಚನವೊಂದರಲ್ಲಿ ಕಲೆ ಮತ್ತು ಶಕ್ತಿ” ಒಂದೇ ವಸ್ತುವಿನ ಎರಡು ಹೆಸರುಗಳೆನ್ನುತ್ತಾರೆ. “ಶಾಂತ್ಯತೀತೋತ್ತರೆಯೆಂಬ ಕಲಾ ಪರಿಯಾಯವನ್ನುಳ್ಳ ಚಿಚ್ಛಕ್ತಿ, ಶಾಂತ್ಯತೀತೆಯೆಂಬ ಕಲಾಪರಿಯಾಯವನ್ನುಳ್ಳ ಪರಾಶಕ್ತಿ, ಶಾಂತಿಯೆಂಬ ಕಲಾಪರಿಯಾಯವನ್ನುಳ್ಳ ಆದಿಶಕ್ತಿ, ವಿದ್ಯಾಕಲಾಪರಿಯಾಯವನ್ನುಳ್ಳ ಇಚ್ಛಾಶಕ್ತಿ, ಪ್ರತಿಷ್ಠಾಕಲಾಪರಿಯಾಯವನ್ನುಳ್ಳ ಕ್ರಿಯಾಶಕ್ತಿ ನಿವೃತ್ತಿ ಕಲಾಪರಿಯಾಯವನ್ನುಳ್ಳ ಚಿಚ್ಛಕ್ತಿ ಹೀಂಗೆ ಒಂದೇ ಶಕ್ತಿ ಆರು ತೆರನಾಗಿ ಷಟ್ ಪ್ರಕಾರವಹಂಥಾ ಲಿಂಗಕ್ಕೆ ಅಂಗರೂಪವಾಗಿತ್ತು” ಎಂಬ ಅವರ ವಚನವು (೧೧:೩೯) ಈ ಮಾತನ್ನು ಸಮರ್ಥಿಸುತ್ತದೆ. ಆದರೆ, ಇದೇ ವಚನಕಾರರು, “ಪಂಚಶಕ್ತಿಯನು, ಪಂಚಸಾದಾಖ್ಯವನು, ಪಂಚಕಲೆಗಳನು, ಪಂಚಾಕ್ಷರಗಳನ್ನು .... ತನ್ನಲ್ಲಿ ಗರ್ಭೀಕರಿಸಿಕೊಂಡು.....” (೧೧:೩೬) ಎಂದು ಹೇಳುವಾಗಲೂ, .... ಆ ಚಿಚ್ಛಕ್ತಿಯ ಸಂಗದಿಂದ ನೀನು ಮಹಾಲಿಂಗವಾದಲ್ಲಿ, ಆ ಶಾಂತ್ಯತೀತ್ತೊತ್ತರೆಯೆಂಬ ಕಲೆಯಿಂದ ನಾನು ಉದಯವಾಗಿ ಆ ಚಿಚ್ಛಕ್ತಿಯ ಸಂಗದಿಂದ ನೀನು ಪ್ರಸಾದಲಿಂಗವಾದಲ್ಲಿ, ... ಆ ಶಾಂತ್ಯತೀತೆಯೆಂಬ ಕಲೆಯಲ್ಲಿ ನಾನು ಉದಯವಾಗಿ.... (ಇತ್ಯಾದಿ)” ಎಂದು ಹೇಳುವಾಗಲೂ ಕಲೆಗಳೇ ಬೇರೆ, ಶಕ್ತಿಗಳೇ ಬೇರೆ ಎಂಬ ನಮ್ಮ ಮತ ದೃಢವಾಗುತ್ತದೆ.

ವಾಸ್ತವವಾಗಿ, ಕಲೆಗಳು ಶಕ್ತಿಗಳಿಂದ ಭಿನ್ನವಲ್ಲ. ಈ ವಾದಕ್ಕೆ ನಾವು ಎರಡು ಆಧಾರಗಳನ್ನು ಕೊಡಬಹುದು : (೧) ಮೂವತ್ತಾರು ತತ್ವಗಳ ಬಗ್ಗೆ ಹೇಳುವಾಗ ಯಾವ ವಚನಕಾರನೂ ಕಲೆಗಳನ್ನು ಪ್ರಸ್ತಾಪಿಸುವುದಿಲ್ಲ. ಶಕ್ತಿಗಳೆದು, ಕಲೆಗಳೊದು ಎಂದು ಹೇಳಿದರೆ ಆಗ ತತ್ವಗಳ ಸಂಖ್ಯೆ ಮೂವತ್ತಾರಕ್ಕಿಂತ ಹೆಚ್ಚಾಗುತ್ತದೆ. (೨) ಪ್ರತಿಯೊಂದು ವಸ್ತುವೂ ಶಕ್ತಿಯ ರೂಪವೆಂದೂ, ಆ ಶಕ್ತಿಯು ಶಿವನ ಅಂಗ (ಭಾಗ ಅಥವಾ ದೇಹ)ವೆಂದೂ ಹೇಳುವಾಗ, ಉಳಿದ ಏನೇ ಇದ್ದರೂ ಅದು ಶಕ್ತಿಯ ರೂಪೇ ಆಗಿರಬೇಕಾಗುತ್ತದೆ. ಅಲ್ಲದೆ, ಹೀಗೆ ಒಂದೇ ಶಕ್ತಿ ಆರು ತೆರನಾಗಿ ಷಟ್ ಪ್ರಕಾರವಹಂಥಾ ಲಿಂಗಕ್ಕೆ ರೂಪಾಯಿತ್ತು” ಎಂಬ ವಚನವೂ ಲಿಂಗಕ್ಕೆ ಕಲೆಯೇ ಅಂಗವೆಂದೂ, ಕಲೆ ಶಕ್ತಿಯ ಇನ್ನೊಂದು ಹೆಸರೆಂದೂ ಹೇಳುತ್ತದೆ.

ಇನ್ನೊಂದು ಅರ್ಥದಲ್ಲಿ ಶಕ್ತಿ ಮತ್ತು ಕಲೆಗಳು ಕೇವಲ ಹೆಸರುಗಳು ಅಷ್ಟೇ ಅಲ್ಲ, ಸ್ವರೂಪದಲ್ಲಿಯೂ ಭಿನ್ನ ಎಂಬುದನ್ನು ತೋರಿಸಬಹುದು. ಕಲೆಗಳೆಂದರೆ ನಿವೃತ್ತಿಕಲಾ, ವಿದ್ಯಾಕಲಾ (ಇತ್ಯಾದಿ) ಎಂದು ಅರ್ಥ ಮಾಡುವುದಾದರೆ ಕಲೆಗಳು ನಿವೃತ್ತಿ ಶಕ್ತಿಗಳೆಂದೂ, ಶಕ್ತಿಗಳು ಪ್ರವೃತ್ತಿ ಶಕ್ತಿಗಳೆಂದೂ ಹೇಳಬಹುದು. ಅಥವಾ ಕಲೆಗಳು ಪರಶಿವನ ಶಕ್ತಿಯ ಶುದ್ಧ ರೂಪಗಳು, ಶಕ್ತಿಗಳು ಅದೇ ಶಕ್ತಿಯ ಅಶುದ್ಧ ರೂಪಗಳು. ಆಗ ನಿವೃತ್ತಕಲೆ, ಪ್ರತಿಷ್ಠಾಕಲೆ, ಮುಂತಾದ ಕಲೆಗಳು ಶಕ್ತಿಯ ಬೇರೆ ರೂಪಗಳೂ ಹೌದು, ಬೇರೆ ಹೆಸರುಗಳೂ ಹೌದು.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಕಲೆಗಳು ಕಾಯಕ Next