ಬಾ ಭಕ್ತ ಶರಣಾಗು ಹೊಂದು ಬಸವನ ಒಲುಮೆ
|
|
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
ಬಸವ ಧರ್ಮದ ಕಿರಣವಾಗಲು ಬಾ
ಬಾ ಭಕ್ತ ಶರಣಾಗು ಹೊಂದು ಬಸವನ ಒಲುಮೆ
ಈ ಬಸವ ಮಹಾಮನೆಯು ದಿವ್ಯ ಸ್ಪೂರ್ತಿಯ ಚಿಲುಮೆ || ಪ ||
ಕೂಡಲ ಸಂಗಮನ ದಿವ್ಯ ಸನ್ನಿಧಿಯೊಳು
ಮಂತ್ರಧ್ಯಾನವ ಗೈದು ಹರಿಯುತಿಹಳೀ ಕೃಷ್ಣೆ
ಗುರು ಬಸವನ ಚರಣ ಭಕ್ತಿಯಿಂ ತೊಳೆಯುತ
ಮಲಪ್ರಭೆಯು ಸಾಗಿಹಳು ಓಂಕಾರ ಶ್ರುತಿ ಹಿಡಿದು || ೧ ||
ಅಂಗವೆನೆ ಜೀವಾತ್ಮ ಲಿಂಗವೆನೆ ಪರಮಾತ್ಮ
ಲಿಂಗಾಂಗ ಸಮರಸವೇ ಜೀವನದ ಗುರಿಯು
ಬಸವ ಗೀತೆಯ ಸಾರ ಇದುವೆ ಆಗಿಹುದು
ಲಿಂಗದೇವನ ಎಡೆಗೆ ಕರೆದೊಯ್ಯುತಿಹುದು || ೨ ||
ಕಲ್ಯಾಣ ಪ್ರಣತೆಯಲಿ ಭಕ್ತಿ ತೈಲವ ಉಂಡು
ಬಸವ ಜ್ಯೋತಿಯು ಅಂದು ಜನಮನವ ಬೆಳಗಿತು
ಸಂಗಮದ ಹಣತೆಯಲಿ ತ್ಯಾಗತೈಲವ ಎರೆದು
ಬಸವ ಜ್ಯೋತಿಯ ಬೆಳಕ ಜಗಕೆಲ್ಲ ಹಸರಿಸುವ || ೩ ||
ಬಸವ ಕ್ರಾಂತಿಯ ದಿನದಿ ಸಂಗಮಕೆ ನೀ ಬಂದು
ಬಸವ ಸಾಗರದೊಳಗೆ ಮಿಂದು ಪುಳಕಿತನಾಗು
ಶರಣ ಮೇಳಕೆ ಬಂದು ಶರಣರೊಡನೆ ಆಡಿ
ಬಸವ ಧರ್ಮದ ಕಿರಣ ನೀನಾಗಿ ಸಾಗು || ೪ ||