ಬಲ್ಲಿರಾ ಬಲ್ಲಿದರೆ ಲೋಕ ಬಲ್ಲಿದನಾದ
|
|
*
ಗುರು ಬಸವ ಲಿಂಗ ಮಂತ್ರ ಪಠಣ
ಬಲ್ಲಿರಾ ಬಲ್ಲಿದರೆ ಲೋಕ ಬಲ್ಲಿದನಾದ
ಗುರುಬಸವರಾಜನ ಚನ್ನ ನಿಲುವ ? ||ಪಲ್ಲವಿ ||
ದೇವ ಕರುಣೆಯ ಹೊತ್ತು ಈ ಭುವಿಗೆ ತಾ ಬಂದು
ದಿವ್ಯ ಮಣಿಹವ ತಾನು ಪೂರೈಸಿದ
ಭವದ ಬನ್ನವ ತೊಡೆದು ಶಿವಗುರುವು ತಾನಾದ
ಕಾವ ದೇವನೆ ಆದ ಮಂತ್ರಪುರುಷ || ೧ ||
ಮನುಜ ಜನ್ಮದ ಘನವ ಲೋಕಕ್ಕೆ ತಾನರುಹಿ
ಮನದೊಳಗೆ ಇರುವಂಥ ಭ್ರಾಂತಿ ತೊಡೆದು
ಮನುಜ ಕುಲದೊಳು ಬೆಳೆದ ಮೇಲು-ಕೀಳೆಂಬುವ
ಭಿನ್ನ ಭೇದವ ತೊಡೆದ ಕ್ರಾಂತಿ ಯೋಗಿ || ೨ ||
ಇವನಾರು ಇವನಾರು ಎಂದು ಭೇದವನೆಣಿಪ
ಭಾವ ಕುಲ್ಲಕತನವ ಜರಿದು ತಾನು,
ಎಲ್ಲ ತನ್ನವರೆಂದು ಸರ್ವರನು ಆದರಿಪ
ಭಾವ ವೈಶಾಲ್ಯದ ಮಾತೃಹೃದಯಿ || ೩ ||
ಸರ್ವಸಮತೆಯ ಸಾರಿ, ಕರುಣೆ ಪ್ರೀತಿಯ ತೋರಿ
ಶರ್ವನ ಪಾದಕ್ಕೆ ತೊಡುಗೆ ತಾನಾಗಿ
ಅವ್ವ ಅಪ್ಪನು ಆಗಿ ದೀನ ದಲಿತರಿಗೆಲ್ಲ
ಹೂವ್ವ ಸೂರಿದ ಬಸವ ವಿಶ್ವಜ್ಯೋತಿ || ೪ ||
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
*