*
ಅಂಕಿತ:
|
ಕದಿರರೆಮ್ಮಿಯೊಡೆಯ ಗುಮ್ಮೇಶ್ವರ
|
ಕಾಯಕ:
|
ರಾಟೆಯಿಂದ ನೂಲು ತೆಗೆಯುವುದು
|
೭೪೪
ಎನ್ನ ಸ್ಥೂಲತನುವೆ ಬಸವಣ್ಣನಯ್ಯಾ.
ಎನ್ನ ಸೂಕ್ಷ್ಮತನುವೆ ಚೆನ್ನಬಸವಣ್ಣನಯ್ಯಾ.
ಎನ್ನ ಕಾರಣತನುವೆ ಪ್ರಭುದೇವರಯ್ಯಾ,
ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ
ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
ಈಕೆಗೆ ರೆಬ್ಬವ್ವೆ ಎಂದೂ ಕರೆಯಲಾಗುತ್ತದೆ. ಕಾಲ-೧೧೬೦. ಕವಿ ಚರಿತೆಕಾರರು ಈಕೆ ಕದಿರ ರೇಮಯ್ಯನ ಸತಿಯಾಗಿರಬೇಕೆಂದು
ಊಹಿಸಿದ್ದಾರೆ. ಕಾಯಕ-ರಾಟಿಯಿಂದ ನೂಲು ತೆಗೆಯುವುದು. ಸದ್ಯ ಈಕೆಯ ನಾಲ್ಕು ವಚನಗಳು ಮಾತೃ ದೊರೆತಿವೆ.
ಅ೦ಕಿತ ’ಕದಿರ ರೆಮ್ಮಿಯೊಡೆಯ ಗುಮ್ಮೇಶ್ವರ’ ಎರಡು ವಚನಗಳಲ್ಲಿ ಸತಿಪತಿಭಾವ ವ್ಯಕ್ತವಾಗಿದ್ದರೆ, ಉಳಿದ
ಒಂದರಲ್ಲಿ ಶರಣರ ಸ್ತುತಿ, ಇನ್ನೂಂದರಲ್ಲಿ ಕಾಯಕದ ಮಹತಿ ಅಡಕವಾಗಿದೆ. ನಾಲ್ಕರಲ್ಲಿ ಮೂರು ಬೆಡಗಿನ
ವಚನಗಳಾಗಿದ್ದರೆ, ಒಂದು ಸರಳ ವಚನವೆನಿಸಿದೆ. ಬೆಡಗಿನ ವಚನಗಳಿಗೆ ಸಿಂಗಳದ ಸಿದ್ಧ ಬಸವರಾಜ ಟೀಕೆ ಬರೆದಿದ್ದಾನೆ.
ವೃತ್ತಿಪರಿಭಾಷೆ ಈಕೆಯ ವಚನಗಳಲ್ಲಿ ಸಾರ್ಥಕವಾಗಿ ಬಳಕೆಯಾಗಿದೆ.
೭೪೭
ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ
ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು,
ನಿಂದ ಬೊಂಬೆ ಮಹಾರುದ್ರ;
ರುದ್ರನ ಬೆಂಬಳಿಯವೆರಡು ಸೂತ್ರಕರ್ಣ.
ಅರಿವೆಂಬ ಕದಿರು, ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ,
ಸುತ್ತಿತ್ತು ನೂಲು ಕದಿರು ತುಂಬಿತ್ತು.
ರಾಟೆಯ ತಿರುಹಲಾರೆ ಎನ್ನ ಗಂಡ ಕುಟ್ಟಿಹ
ಇನ್ನೇವೆ ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ ?
೭೪೬
ಎಲ್ಲರ ಹೆಂಡಿರು ತೊಳಸಿಕ್ಕುವರು
ಎನ್ನ ಗಂಡಂಗೆ ತೊಳಸುವುದಿಲ್ಲ.
ಎಲ್ಲರ ಗಂಡಂದಿರಿಗೆ ಬಸಿವರು;
ಎನ್ನ ಗಂಡಂಗೆ ಬಸಿವುದಿಲ್ಲ.
ಎಲ್ಲರ ಗಂಡಂದಿರಿಗೆ ಬೀಜವುಂಟು
ಎನ್ನ ಗಂಡಂಗೆ ಅಂಡದ ಬೀಜವಿಲ್ಲ.
ಎಲ್ಲರ ಗಂಡಂದಿರು ಮೇಲೆ;
ಎನ್ನ ಗಂಡ ಕೆಳಗೆ, ನಾ ಮೇಲೆ.
ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
೭೪೫
ಎಲ್ಲರ ಗಂಡಂದಿರು ಪರದಳವಿಭಾಡರು
ಎನ್ನ ಗಂಡ ಮನದಳವಿಭಾಡ.
ಎಲ್ಲರ ಗಂಡಂದಿರು ಗಜವೇಂಟೆಕಾರರು
ಎನ್ನ ಗಂಡ ಮನವೇಂಟೆಕಾರ.
ಎಲ್ಲರ ಗಂಡಂದಿರು ತಂದಿಕ್ಕಿಸಿಕೊಂಬರು
ಎನ್ನ ಗಂಡ ತಾರದೆ ಇಕ್ಕಿಸಿಕೊಂಬ.
ಎಲ್ಲರ ಗಂಡಂದಿರಿಗೆ ಮೂರು,
ಎನ್ನ ಗಂಡಂಗೆ ಅದೊಂದೆ
ಅದೊಂದೂ ಸಂದೇಹ, ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
*