*
ಅಂಕಿತ:
|
ಸದ್ಗುರುಸಂಗನಿರಂಗಲಿಂಗ
|
ಕಾಯಕ:
|
ಕ್ಷೌರಿಕ (ಕನ್ನಡಿ ಕಾಯಕ)
|
೭೪೮
ಕೈಯಲ್ಲಿ ಕನ್ನಡಿಯಿರಲು ತನ್ನ ತಾ ನೋಡಬಾರದೆ ?
ಲಿಂಗಜಂಗಮದ ಪ್ರಸಾದಕ್ಕೆ ತಪ್ಪಿದಲ್ಲಿ ಕೊಲ್ಲಬಾರದೆ ?
ಕೊಂದಡೆ ಮುಕ್ತಿಯಿಲ್ಲವೆಂಬವರ ಬಾಯಲ್ಲಿ
ಪಡಿಹಾರನ ಪಾದರಕ್ಷೆಯನಿಕ್ಕುವೆ.
ಮುಂಡಿಗೆಯನೆತ್ತಿರೊ ಭ್ರಷ್ಟ ಭವಿಗಳಿರಾ ?
ಎತ್ತಲಾರದಡೆ ಸತ್ತ ಕುನ್ನಿನಾಯ ಬಾಲವ
ನಾಲಗೆ ಮುರುಟಿರೋ ಸದ್ಗುರುಸಂಗ ನಿರಂಗಲಿಂಗದಲ್ಲಿ.
ಈಕೆಗೆ ರೇಮಮ್ಮ, ರೆಮ್ಮವ್ವೆ ಎಂಬ ಪರ್ಯಾಯ ನಾಮಗಳೂ ಕಂಡುಬರುತ್ತವೆ. ಹೆಸರಿನ ಹಿಂದೆ ಸೇರಿದ ವಿಶೇಷಣದಿಂದ
ಈಕೆ ಕ್ಷೌರಿಕ ಕುಟುಂಬಕ್ಕೆ ಸೇರಿದವಳೆಂದು ತಿಳಿಯುತ್ತದೆ. 'ಕನ್ನಡಿ ಕಾಯಕದ ಅಮ್ಮಿದೇವಯ್ಯ ಎಂಬ ಒಬ್ಬ
ವಚನಕಾರನೂ ಇದ್ದು, ಈಕೆಗೂ ಅವನಿಗೂ ಸಂಬಂಧವಿರಬಹುದು. ಕಾಲ-೧೧೬೦. 'ಸದ್ಗುರು ಸಂಗ ನಿರಂಗಲಿಂಗ' ಅಂಕಿತದಲ್ಲಿ
ಒಂದು ವಚನ ಮಾತ್ರ ದೊರೆತಿದೆ. ಅದರಲ್ಲಿ ವ್ರತಾಚಾರನಿಷ್ಠೆ, ಪ್ರಸಾದಪ್ರೀತಿ, ಗಣಾಚಾರದ ಗಡುಸು ಕಂಡುಬರುತ್ತದೆ.
*